Advertisement

ಮಿನಿ ಸಮರಕ್ಕೂ ಮೈತ್ರಿ ಮುಂದುವರಿಕೆ?

03:51 PM May 14, 2019 | Suhan S |

ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮುಂದುವರೆಯುವ ಬಗ್ಗೆ ಅನುಮಾನ ಸೃಷ್ಟಿಯಾಗಿದೆ. ಆದರೆ ಜಿಲ್ಲೆಯಲ್ಲಿ ದೋಸ್ತಿ ಪಕ್ಷಗಳು ಒಗ್ಗೂಡಿ ಚುನಾವಣೆ ಎದುರಿಸಲು ಪ್ರಯತ್ನ ನಡೆಸಿವೆ.

Advertisement

ಹಿರಿಯೂರು ನಗರಸಭೆಯ 31, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ಗಳ ತಲಾ 16 ವಾರ್ಡ್‌ಗಳಿಗೆ ಚುನಾವಣೆ ನಿಗದಿಯಾಗಿದೆ. ಈ ಮೂರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಮುಖಂಡರು ಜಿಲ್ಲಾ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಗೊಂದಲ, ಅಪಸ್ವರ ಇಲ್ಲದೆ ಎರಡು ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಮೈತ್ರಿಯನ್ನು ಇದನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ವಿಸ್ತರಿಸಬೇಕು ಎಂಬುದು ಉಭಯ ಪಕ್ಷಗಳ ಧುರೀಣರು ಮತ್ತು ಕಾರ್ಯಕರ್ತರ ಅಪೇಕ್ಷೆ.

ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಭೀಕರ ಬರ ಪರಿಸ್ಥಿತಿ ಇದೆ. ಹಾಗಾಗಿ ಒಟ್ಟಾಗಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸಿದಲ್ಲಿ ಎರಡು ಪಕ್ಷಗಳಿಗೂ ಅನುಕೂಲವಾಗಲಿದೆ ಎನ್ನುವ ಭಾವನೆ ಪಕ್ಷಗಳ ನಾಯಕರು ಮತ್ತು

ಸ್ಪರ್ಧಾಕಾಂಕ್ಷಿಗಳಲ್ಲೂ ಇದೆ;

Advertisement

ಹಾಗೆ ನೋಡಿದರೆ ಜೆಡಿಎಸ್‌ ಪಕ್ಷಕ್ಕೆ ಹಿರಿಯೂರು ಹೊರತುಪಡಿಸಿ ಮೊಳಕಾಲ್ಮೂರು ಮತ್ತು ಹೊಳಲ್ಕೆರೆಯಲ್ಲಿ ನೆಲೆ ಇಲ್ಲ. ಆದರೂ ಮೊಳಕಾಲ್ಮೂರು ಕ್ಷೇತ್ರದಲ್ಲಿ ಜೆಡಿಎಸ್‌ ಕಾರ್ಯಕರ್ತರ ಶ್ರಮದಿಂದಾಗಿ ಕಳೆದ 2013ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ ಒಂದು ಸ್ಥಾನ ಗಳಿಸಿತ್ತು. ಹೊಳಲ್ಕೆರೆ ಕ್ಷೇತ್ರದಲ್ಲಿ ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಹಾಗಾಗಿ ಈ ಎರಡು ಪಟ್ಟಣ ಪಂಚಾಯತ್‌ಗಳಲ್ಲಿ ಜೆಡಿಎಸ್‌ ಹೆಚ್ಚಿನ ಸೀಟು ಬೇಕೆಂದು ತಕರಾರು ಮಾಡುವುದಿಲ್ಲ, ಒಂದು ವೇಳೆ ತಕರಾರು ಮಾಡಿ ಹೆಚ್ಚಿನ ಸೀಟು ಪಡೆದರೂ ಆ ಪಕ್ಷದ ವತಿಯಿಂದ ಸ್ಪರ್ಧಿಸಲು ಹೇಳಿಕೊಳ್ಳುವಂತಹ ಅಭ್ಯರ್ಥಿಗಳೂ ಇಲ್ಲ. ಕೊನೆಗೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೇ ಜೆಡಿಎಸ್‌ ಚಿನ್ಹೆ ಅಡಿ ಸ್ಪರ್ಧಿಸಿದರೂ ಅಚ್ಚರಿ ಇಲ್ಲ. ಈ ಎರಡು ಪಪಂಗಳಿಗೆ ಜೆಡಿಎಸ್‌ ಪಕ್ಷಕ್ಕೆ ತಲಾ 2 ಅಥವಾ 3 ಸೀಟು ನೀಡಿದರೂ ಜೆಡಿಎಸ್‌ ಖುಷಿಯಿಂದ ಒಪ್ಪಿಕೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಆದರೆ ಇದೇ ಮಾತನ್ನ ಹಿರಿಯೂರು ನಗರಸಭೆ ಸೀಟು ಹಂಚಿಕೆಗೆ ಹೇಳುವಂತಿಲ್ಲ. ಏಕೆಂದರೆ ಹಿರಿಯೂರು ನಗರಸಭೆಯ 31 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸುವ ಸಾಮರ್ಥ್ಯ ಜೆಡಿಎಸ್‌ಗಿದ್ದು, ಕಾರ್ಯಕರ್ತರ ಪಡೆಯನ್ನೂ ಹೊಂದಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಸೀಟು ಹಂಚಿಕೆಗೆ ಪೈಪೋಟಿ ಏರ್ಪಡುವ ಲಕ್ಷಣಗಳಿವೆ. ಎರಡೂ ಪಕ್ಷಗಳಿಗೆ ಹಿರಿಯೂರು ಕ್ಷೇತ್ರದಲ್ಲಿ ಗಟ್ಟಿ ನೆಲೆ ಇರುವುದರಿಂದ ಸೀಟು ಹಂಚಿಕೆ ಕಗ್ಗಂಟಾಗಲಿದೆ.

ಈ ಹಿಂದಿನ ಸ್ಥಳೀಯ ಚುನಾವಣೆಗಳನ್ನು ಅವಲೋಕಿಸಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೇ ಎದುರಾಳಿಗಳಾಗಿ ಹೋರಾಟ ಮಾಡಿ ಅಧಿಕಾರ ಹಿಡಿದಿವೆ. ಬಿಜೆಪಿಗೆ ಇಂದಿಗೂ ನಗರಸಭೆಯಲ್ಲಿ ಒಂದು ಸ್ಥಾನ ಗಳಿಸಲೂ ಸಾಧ್ಯವಾಗಿಲ್ಲ. ಆದರೆ ಈ ಸಲ ಬಿಜೆಪಿ ಶಾಸಕರು ಇರುವುದರಿಂದ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿಯಲು ಶತಪ್ರಯತ್ನ ಮಾಡುವುದು ಖಚಿತ. ಬಿಜೆಪಿಯನ್ನು ಕಟ್ಟಿ ಹಾಕಬೇಕಾದರೆ ಹಿರಿಯೂರಿನಲ್ಲಿ ಜೆಡಿಎಸ್‌ನೊಂದಿಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಎರಡು ಪಕ್ಷಗಳ ಮುಖಂಡರು ಮೈತ್ರಿ ಮಾಡಿಕೊಳ್ಳಲು ತೆರೆಮರೆಯಲ್ಲಿ ಮಾತುಕತೆ ಆರಂಭಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಿಲ್ಲಾಧ್ಯಕ್ಷರು, ಮುಖಂಡರು, ಮಾಜಿ ಶಾಸಕರು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸೀಟು ಹಂಚಿಕೆಯೂ ಫೈನಲ್ ಆಗಲಿದೆ ಎಂದು ತಿಳಿದು ಬಂದಿದೆ.

•ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next