Advertisement

ವಿದ್ಯುತ್‌ ದರ ಏರಿಕೆಗೆ ಗ್ರಾಹಕರ ಆಕ್ಷೇಪ

06:20 PM Feb 26, 2021 | Team Udayavani |

ಕಲಬುರಗಿ: ವಿದ್ಯುತ್‌ ದರ ಏರಿಕೆ ಪ್ರಸ್ತಾವಕ್ಕೆ ಗ್ರಾಹಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೊರೊನಾದಿಂದ ಈಗಾಗಲೇ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್‌ ಬೆಲೆ ಹೆಚ್ಚಳ ಮಾಡಬಾರದು ಎನ್ನುವ ಆಗ್ರಹವನ್ನು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮುಂದೆ
ಮಂಡಿಸಿದರು.

Advertisement

ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ಕಂಪನಿ (ಜೆಸ್ಕಾಂ) ಕೈಗಾರಿಕೆಗಳು ಸೇರಿ ಎಲ್ಲ ವರ್ಗದ ವಿದ್ಯುತ್‌ ಗ್ರಾಹಕರಿಗೆ 2021-22ನೇ ಸಾಲಿಗೆ ಪ್ರತಿ ಯೂನಿಟ್‌ಗೆ 1.56 ಪೈಸೆ ದರ ಹೆಚ್ಚಳ ಕುರಿತಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆಇಆರ್‌ಸಿ ಅಧ್ಯಕ್ಷ ಶಂಭು ದಯಾಳ ಮೀನಾ ಅಧ್ಯಕ್ಷತೆಯಲ್ಲಿ ಗ್ರಾಹಕರ ಅಭಿಪ್ರಾಯ ಸಂಗ್ರಹ ಮತ್ತು ಸಾರ್ವಜನಿಕರ ಕುಂದುಕೊರತೆ ಆಲಿಸಲಾಯಿತು.

ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಹಲವು ಗ್ರಾಹಕರು ಮತ್ತು ಕೈಗಾರಿಕೋದ್ಯಮಿಗಳು, ಯಾವುದೇ ಕಾರಣಕ್ಕೂ ವಿದ್ಯುತ್‌ ದರ ಏರಿಕೆ  ಮಾಡಬಾರದು. ಮೇಲಾಗಿ ನಮ್ಮ ರಾಜ್ಯದಲ್ಲೇ ಅಗತ್ಯಕ್ಕಿಂತ ಅಧಿಕ ವಿದ್ಯುತ್‌ ಲಭ್ಯವಿದೆ. ಈಗಿರುವ
ದರವನ್ನೇ ಮುಂದುವರಿಸಿಕೊಂಡು ಹೋಗಬೇಕು. ಕೊರೊನಾ ಸಂಕಷ್ಟ ಮುಗಿದು ಇದೀಗ ಅನೇಕ ಉದ್ದಿಮೆಗಳು ಸ್ಟಾರ್ಟ್‌-ಅಪ್‌ ಹಂತದಲ್ಲಿದ್ದು, ದರ
ಪರಿಷ್ಕರಿಸಬಾರದು ಎಂದು ಒತ್ತಾಯಿಸಿದರು.

ಪ್ರತಿವರ್ಷ ವಿದ್ಯುತ್‌ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಗುತ್ತದೆ. ಆದರೆ ಒಂದು ವರ್ಷವೂ ವಿದ್ಯುತ್‌ ದರ ಇಳಿಕೆ ಮಾಡಿಲ್ಲ. ಹಾಗಾದರೆ ದರ ಪರಿಷ್ಕರಣೆ ಕುರಿತು ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಪಡೆಯುವುದೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್‌ ಬೆಲೆ ಏರಿಕೆ ಕುರಿತು ಕಾಟಾಚಾರಕ್ಕೆ ಎಂಬಂತೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಆದರೆ, ಗ್ರಾಹಕರ ಸಮಸ್ಯೆಗಳನ್ನು ಯಾರೂ ಪರಿಹರಿಸುವುದೇ
ಇಲ್ಲ. ವಿದ್ಯುತ್‌ ಉಚಿತ ಗ್ರಾಹಕರ ದೂರವಾಣಿ ಸಂಖ್ಯೆ 1912 ಸರಿಯಾಗಿ ನಿರ್ವಹಿಸುತ್ತಿಲ್ಲ, 24 ಗಂಟೆಗಳ ಸೇವೆ ಮರೀಚಿಕೆಯಾಗಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.

Advertisement

ಎನರ್ಜಿ ಆಡಿಟ್‌ ಆಗಬೇಕು. ವಿದ್ಯುತ್‌ ಸೋರಿಕೆ ಮತ್ತು ವಿದ್ಯುತ್‌ ಅವಘಡದಿಂದಾಗುವ ಮಾನವ ಮತ್ತು ಪ್ರಾಣಿ ಹಾನಿ ತಡೆಯಬೇಕು. ವಸತಿ ನಿಲಯಗಳಿಗೆ ಪ್ರಥಮಾದ್ಯತೆ ಮೇಲೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ರೈತರ ಹೊಲದಲ್ಲಿ ಟಿಸಿ ಸುಟ್ಟರೆ ಕೂಡಲೇ ಬದಲಾಯಿಸಬೇಕು, ಐ.ಪಿ ವಿದ್ಯುತ್‌ ಸಂಪರ್ಕಗಳಿಗೆ ಪ್ರತಿದಿನ ಕಡ್ಡಾಯವಾಗಿ 7 ಗಂಟೆ ವಿದ್ಯುತ್‌ ಪೂರೈಕೆ ಮತ್ತು ರಾತ್ರಿ ಹೊತ್ತಿನಲ್ಲಿ ಸಿಂಗಲ್‌ ಫೇಸ್‌ ವಿದ್ಯುತ್‌ ಪೂರೈಕೆ ಮಾಡಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಗಲು ಬೀದಿ ದೀಪ ಉರಿಯುವುದನ್ನು ತಡೆದು ಸಂಪತ್ತು ಉಳಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಸರ್ಕಾರ ಉದ್ಯಮ ನಡೆಸಲು ಕೈಗಾರಿಕಾ ಸ್ನೇಹಿ ಕಾಯ್ದೆ ಜಾರಿಗೆ ತಂದಿದೆ. ಎಚ್‌.ಟಿ. ಟ್ಯಾರಿಫ್‌ ಹೊರತಾಗಿ ಎಲ್‌.ಟಿ. ಟ್ಯಾರಿಫ್‌ ಗ್ರಾಹಕರಿಗೆ 150 ಕಿಲೋ ವ್ಯಾಟ್‌ ವರೆಗಿನ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲು ಆದೇಶ ಹೊರಡಿಸಿದೆ. ಆದರೂ, ಬಹುತೇಕ  ಕಚೇರಿಗಳಿಗೆ ಇದು ತಲುಪದೆ ಇರುವುದರಿಂದ ಯೋಜನೆ ಲಾಭ ಪಡೆಯಲು ತೊಂದರೆಯಾಗುತ್ತಿದೆ.

ಆದ್ದರಿಂದ ಈ ಸಮಸ್ಯೆ ಬಗೆಹರಿಸಬೇಕೆಂದು ಕಾಸಿಯಾ ಪ್ರತಿನಿಧಿ  ಭೀಮಾಶಂಕರ ಪಾಟೀಲ ಒತ್ತಾಯಿಸಿದರು. ಇದಕ್ಕೂ ಮುನ್ನ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಪಾಂಡ್ವೆ ಮಾತನಾಡಿ, ಸಂಸ್ಥೆ ಮೇಲಿನ ಆರ್ಥಿಕ ಹೊರೆ ತಪ್ಪಿಸಲು ಪ್ರತಿ ಯೂನಿಟ್‌ಗೆ 1.56ರೂ. ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ.

ಅಲ್ಲದೇ ವಿದ್ಯುತ್‌ ಗ್ರಾಹಕರ ಸಂವಾದ ಸಭೆ ಆಯೋಜನೆ, ಸರ್ಕಾರಿ ಯೋಜನೆಗಳ ಅನುಷ್ಠಾನ, ಕೈಗೊಂಡ ಸುರಕ್ಷತಾ ಕ್ರಮ ಸೇರಿದಂತೆ 2019-20ನೇ ಸಾಲಿನ ಕಾರ್ಯನಿರ್ವಹಣೆ ಸಮಗ್ರ ವರದಿಯನ್ನು ಆಯೋಗದ ಮುಂದೆ ಮಂಡಿಸಿದರು. ಆಯೋಗದ ಅಧ್ಯಕ್ಷ ಶಂಭುದಯಾಳ ಮೀನಾ ಮಾತನಾಡಿ, ಗ್ರಾಹಕರ ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಆಲಿಸುವ ಕೆಲಸ ಮಾಡಬೇಕು. ಗ್ರಾಹಕರ ಬೇಡಿಕೆ ಆಲಿಸಿದ ಶೇ.40ರಿಂದ 60ರಷ್ಟು ಸಮಸ್ಯೆ ಪರಿಹಾರವಾಗಲಿದೆ. ಉದ್ದಿಮೆಗಳು ದಿನದ ಎರಡನೇ ಶಿಫ್ಟ್‌ನಲ್ಲಿ ಕಾರ್ಯನಿರ್ವಹಣೆಗೆ ಮುಂದೆ ಬಂದಲ್ಲಿ ಕಾಸಿಯಾ ಬೇಡಿಕೆ ಪಡೆದು ವರದಿ ಸಲ್ಲಿಸಿದರೆ, ವಿದ್ಯುತ್‌ ದರದಲ್ಲಿನ ರಿಯಾಯಿತಿ ನೀಡಲು ಸೂಕ್ತವಾಗಿ ಪರಿಗಣಿಸಲಾಗುವುದು ಎಂದರು.

ಆಯೋಗದ ಸದಸ್ಯರಾದ ಎಂ.ಡಿ.ರವಿ., ಎಚ್‌. ಎಂ.ಮಂಜುನಾಥ, ಜೆಸ್ಕಾಂ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಆರ್‌. ಜಯಕುಮಾರ, ಮುಖ್ಯ ಆರ್ಥಿಕ
ಅಧಿಕಾರಿ ಅಬ್ದುಲ್‌ ವಾಜಿದ್‌, ಮುಖ್ಯ ಅಭಿಯಂತರ ಲಕ್ಷ್ಮಣ ಚವ್ಹಾಣ, ಆರ್‌.ಡಿ. ಚಂದ್ರಶೇಖರ, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ
ವ್ಯವಸ್ಥಾಪಕಿ ಎಂ.ಕೆ. ಪ್ರಮಿಳಾ, ಪ್ರಮುಖರಾದ ದೀಪಕ್‌ ಗಾಲಾ, ಚನ್ನಬಸವ ನಂದಿಕೋಲ, ಬಿ.ಎಂ. ರಾವೂರ, ಶ್ರೀಧರ್‌ ಬಳ್ಳಾರಿ, ವಿಜಯರಾವ
ಕುಲಕರ್ಣಿ, ಹನುಮಂತರಾವ ಮತ್ತಿತರರು ಪಾಲ್ಗೊಂಡಿದ್ದರು.

ವಿದ್ಯುತ್‌ ದರ ಏರಿಕೆಗೆ ಕಾರಣ?
ವಿದ್ಯುತ್‌ ದರ ಏರಿಕೆ ಅನಿವಾರ್ಯತೆಯನ್ನು ಜೆಸ್ಕಾಂ ಎಂಡಿ ರಾಹುಲ್‌ ಪಾಂಡ್ವೆ ಸಭೆಗೆ ವಿವರಿಸಿ, ವಿದ್ಯುತ್‌ ಖರೀದಿ, ನೌಕರರ ವೆಚ್ಚ, ದುರಸ್ತಿ ಮತ್ತು ನಿರ್ವಹಣೆ, ಬಡ್ಡಿ, ಸವಕಳಿ ಹಾಗೂ ಇತರ ವೆಚ್ಚಗಳ ಭರಿಸಲು 2021-22ನೇ ಸಾಲಿಗೆ ಅಂದಾಜು ಖರ್ಚು 6,165.34 ಕೋಟಿ ರೂ. ಇದೆ. ಆದರೆ, ಜೆಸ್ಕಾಂ ಆದಾಯ ಮಾತ್ರ 5950.74 ಕೋಟಿ ರೂ. ನಿರೀಕ್ಷಿಸಿದೆ. 2019-20ನೇ ಸಾಲಿನಲ್ಲಿ ಪ್ರತಿ ಯೂನಿಟ್‌ಗೆ 1.28ರೂ. ಕೊರತೆಯಾದರೆ, 2021-22ನೇ ಸಾಲಿನಲ್ಲಿ ಪ್ರತಿ ಯೂನಿಟ್‌ಗೆ 1.28 ರೂ. ಕೊರತೆಯಾಗಬಹುದು. ಆದ್ದರಿಂದ ಒಟ್ಟಾರೆ 2021-22ನೇ ಸಾಲಿಗೆ ಸಂಸ್ಥೆ ಮೇಲಿನ ಆರ್ಥಿಕ ಹೊರೆ ತಪ್ಪಿಸಲು ಪ್ರತಿ ಯೂನಿಟ್‌ಗೆ 1.56 ರೂ. ದರ ಹೆಚ್ಚಳ ಮಾಡುವುದು ಅಗತ್ಯವಾಗಿದೆ ಎಂದರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅನಗತ್ಯವಾಗಿ ಬೀದಿ ದೀಪ ಉರಿದು ವಿದ್ಯುತ್‌ ಪೋಲು ಆಗುವುದನ್ನು ತಡೆಯಬೇಕು. ಒಂದು ವೇಳೆ ಹಗಲಿನಲ್ಲಿ ಬೀದಿ ದೀಪ ಉರಿಯುತ್ತಿದ್ದರೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಯಾದ ನಿರ್ದೇಶನ ನೀಡಬೇಕು. ಜತೆಗೆ ಸ್ಥಳೀಯ ಸಂಸ್ಥೆಗಳಿಂದ ಜೆಸ್ಕಾಂಗೆ ಬರಬೇಕಾದ ಬಾಕಿ ಮೊತ್ತವನ್ನು ವಸೂಲಿ ಮಾಡಬೇಕು.
ಶಂಭುದಯಾಳ ಮೀನಾ, ಅಧ್ಯಕ್ಷ,
ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ

Advertisement

Udayavani is now on Telegram. Click here to join our channel and stay updated with the latest news.

Next