Advertisement

ವರ್ಷದಲ್ಲಿ ವೃಂದಾವನ ನಿರ್ಮಾಣ

10:05 AM Dec 31, 2019 | Lakshmi GovindaRaj |

ಬೆಂಗಳೂರು: ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ಎಲ್ಲ ವಿಷಯದಲ್ಲೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ತಮ್ಮ ಗುರುಕುಲದ ಕೊನೆಯ 2012-13ನೇ ವರ್ಷದ ವಿದ್ಯಾರ್ಥಿಗಳಿಗೆ ತಾವೇ ಖುದ್ದಾಗಿ ಪಾಠ, ಪ್ರವಚನ ಮಾಡುತ್ತಿದ್ದರು. ಶ್ರೀಗಳು ಎಂದಿಗೂ ವಿದ್ಯಾರ್ಥಿಗಳ ಪ್ರವಚನ ಮತ್ತು ಬೋಧನೆ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ.

Advertisement

ತುರ್ತಾಗಿ ದೆಹಲಿ, ಮುಂಬೈಗೆ ಒಂದು ದಿನ ಹೋದ ದಿನಗಳಲ್ಲೂ ಪಾಠ, ಪ್ರವಚನಗಳು ತಪ್ಪಿಸುತ್ತಿರಲಿಲ್ಲ. ಅವರ ಪ್ರವಾಸದ ಸಮಯದಲ್ಲೂ 62 ವಿದ್ಯಾರ್ಥಿಗಳನ್ನು ತಮ್ಮೊಂದಿಗೇ ಕರೆದುಕೊಂಡು ಹೋಗುತ್ತಿದ್ದರು! ಇದಕ್ಕೆಂದೇ ಎರಡು ಪ್ರತ್ಯೇಕ ವಾಹನಗಳನ್ನು ಖರೀದಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳ ಅಂತಿಮ ಬೋಧನೆಯನ್ನು ಶ್ರೀಗಳೇ ಮಾಡುತ್ತಿದ್ದರು. ಈ ಪರಿಪಾಠವನ್ನು ಶ್ರೀಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಪಾಲಿಸಿಕೊಂಡು ಬಂದರು.

ವಿದ್ಯಾರ್ಥಿಗಳ ಸುಧಾಮಂಗಲ (ವಿದ್ಯಾಭ್ಯಾಸದ ಸಮಾರೋಪ)ವನ್ನು ಶ್ರೀಗಳೇ ಮಾಡುತ್ತಿದ್ದರು. ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ 38 ಸುಧಾಮಂಗಲವನ್ನು ಯಶಸ್ವಿಯಾಗಿ ಪೂರೈಸಿದ್ದರು. ಶ್ರೀಗಳು ನಡೆಸಿಕೊಡಬೇಕಾಗಿದ್ದ 39ನೇ ಸುಧಾಮಂಗಲವು 2020ರ ಜ.25 ಮತ್ತು 26ಕ್ಕೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ನಿಗದಿಯಾಗಿತ್ತು ಎಂದು ಪೀಠದ ಹಿರಿಯ ಸ್ವಾಮೀಜಿಗಳು ತಿಳಿಸಿದ್ದಾರೆ.

48 ದಿನಗಳ ನಂತರ ವೃಂದಾವನ: ಪೇಜಾವರ ಶ್ರೀಗಳ ಅಂತ್ಯಕ್ರಿಯೆ ಮುಗಿದ 48 ದಿನಗಳ ನಂತರ ಮುಂದಿನ ಒಂದು ವರ್ಷದ ಒಳಗೆ ಪೂರ್ಣಪ್ರಜ್ಞಾ ಪೀಠದಲ್ಲಿ ಬೃಹದಾಕಾರದ ವೃಂದಾವನ ನಿರ್ಮಾಣವಾಗಲಿದೆ. ಉಡುಪಿ ಅಥವಾ ದಕ್ಷಿಣಕನ್ನಡ ಜಿಲ್ಲೆಯ ಶಿಲೆಯನ್ನು ತಂದು ಅಲ್ಲಿನ ಶೈಲಿಯ ಕೆತ್ತನೆಯ ಮೂಲಕವೇ ಇಲ್ಲಿ ವೃಂದಾವನ ನಿರ್ಮಾಣವಾಗಲಿದೆ. ವೃಂದಾವನದ ಸುರಕ್ಷತೆ ಹಾಗೂ ಪೂಜೆಗೆ ಸಂಬಂಧಿಸಿದಂತೆ ಆಗಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಪೂರ್ಣಪ್ರಜ್ಞಾನ ಪೀಠದ ವ್ಯವಸ್ಥಾಪಕ ಮಂಡಳಿಯ ಸದಸ್ಯರು ನಿರತರಾಗಿದ್ದಾರೆ.

ಪವಿತ್ರ ಜಲ ಬಳಕೆ: ಪೇಜಾವರ ಶ್ರೀಗಳ ಅಂತಿಮ ಕ್ರಿಯೆ ಮಾಧ್ವ ಸಂಪ್ರದಾಯದಂತೆ ನಡೆದರೂ, ದಕ್ಷಿಣದ ಕಾವೇರಿ, ಉತ್ತರದ ಗಂಗೆ ಮತ್ತು ತುಂಗಾ ನದಿ, ನೇತ್ರಾವತಿ, ಕುಮಾರಧಾರ, ಗೋದಾವರಿ, ಕೃಷ್ಣಾ , ಸ್ವರ್ಣ, ಹೇಮಾಲತಾ ನದಿ ಸೇರಿ ಹಲವು ನದಿಗಳ ಪವಿತ್ರ ಜಲವನ್ನು ಅಂತ್ಯಕ್ರಿಯೆ ಸಂದರ್ಭದಲ್ಲಿ ಬಳಸಲಾಗಿದೆ.

Advertisement

ಬೆಂಗಳೂರಿನಲ್ಲಿ 2ನೇ ವೃಂದಾವನ: ಉಡುಪಿ ಸ್ವಾಮೀಜಿಯವರಲ್ಲಿ ಬಹುತೇಕರ ವೃಂದಾವನಗಳು ಸಿಗುವುದು ಸುಮಾರು 500 ವರ್ಷಗಳ ಈಚಿನದು. ಅದಕ್ಕಿಂತ ಹಿಂದಿನವರಲ್ಲಿ ಕೆಲವರು ಜಲಸಮಾಧಿಯಾಗಿರಬಹುದು ಎಂಬ ಮಾತು ಇದೆ. ಅಷ್ಟಮಠಗಳ ಸ್ವಾಮೀಜಿಯವರಲ್ಲಿ ಬಹುತೇಕರ ವೃಂದಾವನಗಳಿರುವುದು ಅವಿಭಜಿತ ದ.ಕ. ಜಿಲ್ಲೆಯಲ್ಲಿ. ಬೆಂಗಳೂರು ಮಹಾನಗರದಲ್ಲಿ ಇದುವರೆಗೆ ಶ್ರೀ ಕೃಷ್ಣಾಪುರ ಮಠದ ಮೂರು ತಲೆಮಾರು ಹಿಂದಿನ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ವೃಂದಾವನ ಮಾತ್ರ ಇತ್ತು. ಈ ವೃಂದಾವನ ಸ್ಥಾಪನೆಯಾದುದು 1881ರಲ್ಲಿ. ಇದಾಗಿ 139 ವರ್ಷಗಳ ಬಳಿಕ ಪೇಜಾವರ ಶ್ರೀಗಳ ವೃಂದಾವನ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.

ಶ್ರೀ ಕೃಷ್ಣಾಪುರ ಮಠದ ಈಗಿನ ಸ್ವಾಮೀಜಿಯವರ ಪರಮಗುರುಗಳ ಗುರು ಶ್ರೀ ವಿದ್ಯಾಧೀಶತೀರ್ಥರು ತಮ್ಮ ನಾಲ್ಕನೆಯ ಪರ್ಯಾಯವನ್ನು 1878-79ರಲ್ಲಿ ಪೂರೈಸಿ 1880ರಲ್ಲಿ ತಿರುಪತಿ ಶ್ರೀನಿವಾಸನ ದರ್ಶನಕ್ಕೆ ಹೋದರು. ಅದೇ ಹೊತ್ತಿಗೆ ಇವರ ಶಿಷ್ಯರೂ ಆ ಕಾಲದಲ್ಲಿ ವಿದ್ವತ್‌ಪ್ರತಿಭೆ, ಪವಾಡಗಳನ್ನು ನಡೆಸುತ್ತಿದ್ದ ಜಮಖಂಡಿ ವಾದಿರಾಜ ಆಚಾರ್ಯರು ಕಾಶ್ಮೀರಕ್ಕೆ ತೆರಳಿ ಅಲ್ಲಿನ ವಿದ್ವಾಂಸರ ಬಳಿ ವಿದ್ವತ್ಸಭೆಯಲ್ಲಿ ಪಾಲ್ಗೊಂಡು ಜಯಪತಾಕೆ ಗಳಿಸಿ ತಿರುಪತಿಗೆ ಬಂದಿದ್ದರು. ಜಯಪತಾಕೆ ಎಂದಾಕ್ಷಣ ಈಗಿನಂತೆ ಪದಕ, ಪ್ರಮಾಣಪತ್ರವಲ್ಲ, ಸ್ಮರಣಿಕೆಗಳಲ್ಲ.

ಅವರು ಕಾಶ್ಮೀರದ ರಾಜನಿಂದ ಜಯಪತಾಕೆ ಉಡುಗೊರೆಯಾಗಿ ಸ್ವೀಕರಿಸಿದ್ದು ಸುವರ್ಣಾಲಂಕೃತ ಗಜದಂತದ ಪಲ್ಲಕ್ಕಿಯನ್ನು. ಇದನ್ನು ತಿರುಪತಿಯಲ್ಲಿ ವಿದ್ಯಾಗುರುಗಳಿಗೆ ಸಮರ್ಪಿಸಿದರು. ದೇವರ ದರ್ಶನ ಪಡೆದ ಅನಂತರ ಸ್ವಾಮೀಜಿಯವರು ಉಡುಪಿಗೆ ಹಿಂದಿರುಗುವವರಿದ್ದರು. ಆದರೆ ಬೆಂಗಳೂರಿನಲ್ಲಿ ಅವರು ನಿರ್ಯಾಣ ಹೊಂದಿದರು. ಅವರ ವೃಂದಾವನವನ್ನು ಸೆಂಟ್ರಲ್‌ ಮಾರ್ಕೆಟ್‌ ಹಿಂಬದಿ ಗುಂಡೋಪಂತ ಛತ್ರದ ಬಳಿ ನಿರ್ಮಿಸಲಾಯಿತು.

ಅಲ್ಲಿ ಅನಂತರ ಕೃಷ್ಣಮಂದಿರವನ್ನು ನಿರ್ಮಿಸಲಾಯಿತು. ವಾದಿರಾಜ ಆಚಾರ್ಯರು ಕೊಟ್ಟ ಪಲ್ಲಕ್ಕಿ ಶ್ರೀ ವಿದ್ಯಾಧೀಶತೀರ್ಥರ ಶಿಷ್ಯ ಶ್ರೀ ವಿದ್ಯಾಪೂರ್ಣತೀರ್ಥರಿಗೆ ಬಂತು. ಅವರು ಪಲ್ಲಕ್ಕಿಯಲ್ಲಿದ್ದ ಚಿನ್ನ ಮತ್ತು ತಮ್ಮ ಮಠದ ಚಿನ್ನವನ್ನೂ ಸೇರಿಸಿ ಶ್ರೀಕೃಷ್ಣನಿಗೆ ಸುವರ್ಣ ಪಲ್ಲಕ್ಕಿ ಮಾಡಿದರು. ಈ ಪಲ್ಲಕ್ಕಿಯಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರು 2006ರ ಅವರದೇ ಪರ್ಯಾಯದವರೆಗೂ ಪರ್ಯಾಯೋತ್ಸವದ ಮೆರವಣಿಗೆಯಲ್ಲಿ ಬರುತ್ತಿದ್ದರು. ಅದು ಶಿಥಿಲವಾದ ಕಾರಣ ಬಳಿಕ ಹೊಸ ಪಲ್ಲಕ್ಕಿ ಮಾಡಿಸಿದರು. ಹಳೆಯ ಐತಿಹಾಸಿಕ ಪಲ್ಲಕ್ಕಿ ಈಗಲೂ ಕೃಷ್ಣಾಪುರ ಮಠದಲ್ಲಿದೆ.

ಬೆಂಗಳೂರಿನಲ್ಲಿ ವೃಂದಾವನಸ್ಥರಾದ ಶ್ರೀ ವಿದ್ಯಾಧೀಶತೀರ್ಥರು ಆ ಕಾಲದಲ್ಲಿ ದಾಖಲೆಯಾದ 12 ಸುಧಾ ಮಂಗಲೋತ್ಸವವನ್ನು ನಡೆಸಿದವರು ಎಂಬ ಪ್ರಖ್ಯಾತಿ ಇತ್ತು. ಈಗ ಪೇಜಾವರ ಶ್ರೀ ವಿಶ್ವೇಶತೀರ್ಥರು 39ನೆಯ ಸುಧಾ ಮಂಗಲೋತ್ಸವ ನಡೆಸಲು ಅಣಿಯಾಗಿದ್ದರು. ಆಗ ಶ್ರೀ ವಿದ್ಯಾಧೀಶತೀರ್ಥರು ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಹಿಂದಿರುಗುವಾಗ ನಿರ್ಯಾಣ ಹೊಂದಿದರೆ, ಈಗ ಪೇಜಾವರ ಶ್ರೀಗಳು ಡಿ. 17ರಂದು ತಿರುಪತಿ ಶ್ರೀನಿವಾಸನ ದರ್ಶನ ಪಡೆದು ಹಿಂದಿರುಗುವಾಗ ಜ್ವರಬಾಧೆ ಬಂದು ಡಿ. 29ರಂದು ಇಹಲೋಕ ತ್ಯಜಿಸಿದರು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next