Advertisement

ಮೈಸೂರಲ್ಲಿ ಕೆಳ ಸೇತುವೆ, ಮೇಲ್ಸೇತುವೆಗಳ ನಿರ್ಮಾಣ

01:23 PM Feb 11, 2023 | Team Udayavani |

ಮೈಸೂರು: ಮೈಸೂರು ನಗರದಲ್ಲಿ ಎರಡು ಕೆಳ ಸೇತುವೆ (ಅಂಡರ್‌ ಪಾಸ್‌) ಮತ್ತು ಒಂದು ಮೇಲು ಸೇತುವೆ ನಿರ್ಮಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ಇದಲ್ಲದೇ, 21 ವರ್ಷಗಳ ನಂತರ ವಿವಿಧ ಕ್ಷೇತ್ರಗಳ ಸಾಧಕರಿಗೆ 188 ನಿವೇಶನಗಳ ಹಂಚಿಕೆ, ರೈತರ ಸಹಭಾಗಿತ್ವದಲ್ಲಿ ಸಾವಿರ ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗುವುದು. 195 ಸಿಎ ನಿವೇಶನ ಹಂಚಿಕೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಯಶಸ್ವಿ ಎಸ್‌.ಸೋಮಶೇಖರ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

Advertisement

ಮೈಸೂರು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೆಳ ಸೇತುವೆ, ಮೇಲು ಸೇತುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಣಿಪಾಲ್‌ ಆಸ್ಪತ್ರೆ ಸಮೀಪದಲ್ಲಿ ದಶಪಥ ರಸ್ತೆ ಕೂಡುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲು ಸೇತುವೆ ನಿರ್ಮಿಸುತ್ತಿದೆ. ಜೆ.ಪಿ.ನಗರ ಮತ್ತು ಬೋಗಾದಿ ಜಂಕ್ಷನ್‌ನಲ್ಲಿ ಕೆಳಸೇತುವೆ, ವಿಜಯ ನಗರ 4ನೇ ಹಂತದಲ್ಲಿ ಮೇಲು ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಮೈಸೂರು ತಾಲೂಕಿನ ಬೊಮ್ಮೇನಹಳ್ಳಿ, ಕರಕನಹಳ್ಳಿಯಲ್ಲಿ 50:50ರ ಅನುಪಾತದಂತೆ ಸಾವಿರ ಎಕರೆಯಲ್ಲಿ ಬಡಾವಣೆ ನಿರ್ಮಿಸಲಾಗುವುದು. ಅನೇಕ ರೈತರು 250 ಎಕರೆ ಜಮೀನನ್ನು ಕೊಡಲು ಒಪ್ಪಿದ್ದಾರೆ. ಎಕರೆಗೆ 30/40 ಅಳತೆಯ 18 ನಿವೇಶನದಂತೆ ನಾಲ್ಕು ಸಾವಿರ ನಿವೇಶನ ಹಂಚಿಕೆ ಮಾಡಬಹುದು. ಬಡಾವಣೆ ಅಭಿವೃದ್ಧಿ ವೆಚ್ಚವನ್ನು ಪ್ರಾಧಿಕಾರ ಭರಿಸಲಿದೆ. ಎಕರೆಯಲ್ಲಿ 18 ನಿವೇಶನಗಳಾದರೆ 9 ನಿವೇಶನ ರೈತರಿಗೆ ದೊರೆಯಲಿದೆ. ಮಾರುಕಟ್ಟೆಯ ದರದಲ್ಲಿ ಮಾಲೀಕರು ಮಾರಾಟ ಮಾಡಬಹುದು ಎಂದರು.

ಸೆಪ್ಟೆಂಬರ್‌ 2021ರಲ್ಲಿ 312 ಸಿಎ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗಿತ್ತು. 220 ನಿವೇಶನಗಳಿಗೆ ಅರ್ಜಿ ಬಂದಿದೆ. ಫೆ. 28ರಂದು ನಡೆಯುವ ಮುಡಾ ಸಭೆಯಲ್ಲಿ ಒಪ್ಪಿಗೆ ಪಡೆದು ಹಂಚಿಕೆ ಮಾಡುತ್ತೇವೆ. ಉಳಿಕೆ 92 ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸು ತ್ತೇವೆ. ಮೂರು ವರ್ಷಗಳ ಆಡಿಟ್‌ ವರದಿ ಇರುವ, ಕಟ್ಟಡ ಕಟ್ಟುವ ಸಾಮರ್ಥ್ಯವಿರುವ ಸಂಘ ಸಂಸ್ಥೆಯವರು ಅರ್ಜಿ ಸಲ್ಲಿಸಬಹುದು. ಹಂಚ್ಯಾ ಸಾತಗಳ್ಳಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿ ಸುವ ಪ್ರಸ್ತಾವನೆಗೆ ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.

ದೇವನೂರು ಬಡಾವಣೆಯಲ್ಲಿ ಎಚ್‌ ಶ್ರೇಣಿಯ 188 ನಿವೇಶನ ಗುರುತಿಸಲಾಗಿದೆ. ಎಚ್‌ ಶ್ರೇಣಿಯ ನಿವೇಶನ ಕೋರಿ ಸಾಧಕರು ಅರ್ಜಿ ಸಲ್ಲಿಸಬಹುದು. ಕ್ರೀಡಾಪಟುಗಳಿಗೆ ಶೇ. 5, ಕಲೆ, ವಿಜ್ಞಾನ, ಸಾಹಿತ್ಯ, ವೈದ್ಯ, ಆಡಳಿತ, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕ್ರೀಡಾಪಟುಗಳಿಗೆ ಶೇ. 5, ಮಾಜಿ ಸೈನಿಕರು, ಸೈನಿಕ ಸಿಬ್ಬಂದಿಗೆ ಶೇ. 2, ಮುಡಾ ವ್ಯಾಪ್ತಿಯಲ್ಲಿರುವ ಸ್ವಾತಂತ್ರ್ಯ ಯೋಧರಿಗೆ ಶೇ. 2, ಕರ್ತವ್ಯ ದಲ್ಲಿದ್ದು ನಿಧನ ಹೊಂದಿದ ರಾಜ್ಯ ಸರ್ಕಾರದ ನೌಕರರ ಅವ ಲಂಬಿತರಿಗೆ ಶೇ. 1 ಮೀಸಲಿಡಲಾಗಿದೆ. ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ರುವ ಬ್ಯಾಂಕ್‌ ಆಫ್ ಬರೋಡ ಕಚೇರಿಯಲ್ಲಿ ಅರ್ಜಿ ವಿತರಿಸಲಾಗುವುದು. ಅರ್ಜಿ ಶುಲ್ಕ 500 ರೂ., ನೋಂದಣಿ ಶುಲ್ಕ ಒಂದು ಸಾವಿರ ರೂ. ಪಾವತಿಸಬೇಕು. ನಿವೇಶನದ ಮೊತ್ತ ಶೇ. 10 ಇಎಂಡಿ ಹಣ ವನ್ನು ಅರ್ಜಿಯೊಂದಿಗೆ ಸೇರಿಸಿ ಫೆ. 28ರೊಳಗೆ ಬ್ಯಾಂಕ್‌ ಆಫ್ ಬರೋಡ ಕಚೇರಿಗೆ ಸಲ್ಲಿಸಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌, ಕಾರ್ಯದರ್ಶಿ ಡಾ. ಎನ್‌ .ಸಿ.ವೆಂಕಟರಾಜು, ಸದಸ್ಯರಾದ ಎಸ್‌ಬಿಎಂ ಮಂಜು, ಲಕ್ಷ್ಮೀದೇವಿ, ನವೀನ್‌ಕುಮಾರ್‌, ಮಾದೇಶ, ಶೇಷಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next