Advertisement

ಚಿತ್ರದುರ್ಗದಲ್ಲಿ ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣ

04:43 PM Oct 19, 2021 | Team Udayavani |

ಚಿತ್ರದುರ್ಗ: ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್‌ ಮಾದರಿಯಲ್ಲಿ ಚಿತ್ರದುರ್ಗಕ್ಕೂ ಕೈಗಾರಿಕಾ ಟೌನ್‌ಶಿಪ್‌ ರೂಪಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮುರುಘಾ ಮಠದ ಅನುಭವ ಮಂಟಪದಲ್ಲಿ ಸೋಮವಾರ ಸಂಜೆ ನಡೆದ ಶರಣ ಸಂಸ್ಕೃತಿ ಉತ್ಸವ ಹಾಗೂ ಡಾ| ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ಮೂರನೇ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಚಿತ್ರದುರ್ಗ ಜಿಲ್ಲೆ ಕರ್ನಾಟಕದ ಮಧ್ಯ ಭಾಗ. ಇಲ್ಲಿ ನೀರು ಹರಿಸುವ ಮೂಲಕ ಉದ್ಯೋಗ ನೀಡುವ ಯೋಜನೆಗಳನ್ನು ರೂಪಿಸಬೇಕಿದೆ. ಚಿತ್ರದುರ್ಗಕ್ಕೆ ಕೈಗಾರಿಕಾ ಟೌನ್‌ಶಿಪ್‌ ತರುವ ಯೋಜನೆಯನ್ನು ಬೆಂಗಳೂರಿಗೆ ಹೋದ ತಕ್ಷಣ ರೂಪಿಸುತ್ತೇನೆ. ಇದಕ್ಕಾಗಿ 1 ರಿಂದ 2 ಸಾವಿರ ಎಕರೆ ಭೂಮಿಯನ್ನು ಗುರುತಿಸಿ ಕಳುಹಿಸಿ ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಬಿಎಸ್‌ವೈ ಆಧುನಿಕ ಭಗೀರಥ: ಚಿತ್ರದುರ್ಗ ಜಿಲ್ಲೆಯ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗಾಗಿ ನಮ್ಮ ನಾಯಕರಾದ ಬಿ.ಎಸ್‌. ಯಡಿಯೂರಪ್ಪನವರು ಅವಿರತವಾಗಿ ಶ್ರಮಿಸಿದ್ದಾರೆ. ಟೀಕೆ ಟಿಪ್ಪಣಿಗಳಿಗೆ ಕುಗ್ಗದೆ ಯೋಜನೆ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಂಡಿದ್ದಾರೆ. ಅವರ ಅ ಧಿಕಾರಾವಧಿ ಯಲ್ಲಿ ದೆಹಲಿಗೆ ತೆರಳಿ ರಾಷ್ಟ್ರೀಯ ಯೋಜನೆ ಮಾಡುವಂತೆ ಮಾಹಿತಿ ನೀಡಿದ್ದ ಪರಿಣಾಮ ಆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣಗೊಂಡು ನೀರು ಹರಿಯಲಿದೆ. ಈ ಯೋಜನೆಯ ಭಗೀರಥ ಬಿ.ಎಸ್‌. ಯಡಿಯೂರಪ್ಪ ಅವರೇ ಆಗಿದ್ದಾರೆ ಎಂದು ಬಣ್ಣಿಸಿದರು.

ಕರಾರು ರಹಿತ ಪ್ರೀತಿಯಲ್ಲಿ ಭಕ್ತಿಯಿದೆ. ಮುರುಘಾ ಶರಣರಿಗೆ ಅರ್ಪಿಸಿದ ಪ್ರತಿ ಹೂವಿನಲ್ಲೂ ಭಕ್ತಿಯಿದೆ. ಗುರುವಿನಲ್ಲಿ ಭಕ್ತರು ಸಮರ್ಪಣೆ ಮಾಡಿಕೊಂಡು ಲೀನರಾಗುವುದು ನಿಜವಾದ ಭಕ್ತಿ. ವೈಚಾರಿಕ ಕ್ರಾಂತಿಯೇ ಶರಣ ಸಂಸ್ಕೃತಿ. ಮನುಷ್ಯನನ್ನು ಮನುಷ್ಯನಾಗಿ, ಪ್ರಾಣಿಗಳನ್ನು ದಯೆಯಿಂದ ನೋಡುವುದು ಈ ಸಂಸ್ಕೃತಿ. ಕಾಯಕವೇ ನಿಜವಾದ ಸ್ವರ್ಗವಾಗಿದ್ದು ಪೂಜೆಗಿಂತಲೂ ಮಿಗಿಲಾದುದು. ಬಸವಣ್ಣನವರದ್ದು 12ನೇ ಶತಮಾನ. ಇಂದು 21ನೇ ಶತಮಾನ. ಅಂಕಿಗಳು ಮಾತ್ರ ಉಲ್ಟಾ ಆಗಿದೆ. ಬಸವಣ್ಣ ಇಂದಿಗೂ ಪ್ರಸ್ತುತ ಎನ್ನುವುದಾದರೆ 12ನೇ ಶತಮಾನದಲ್ಲಿದ್ದ ಅಂಧಾಚರಣೆ, ಲಿಂಗ ತಾರತಮ್ಯ ಇಂದೂ ಇವೆ ಎನ್ನಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುರುಘಾ ಶರಣರು ಹೋರಾಟ ಮಾಡುತ್ತಿದ್ದಾರೆ. ಅವರೊಂದಿಗೆ ಭಕ್ತರು ಕೈಜೋಡಿಸಿದಾಗ ಈ ಕಾರ್ಯ ಪೂರ್ಣಗೊಳ್ಳುತ್ತದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ಶರಣ ಸಂಸ್ಕೃತಿ ಆಧ್ಯಾತ್ಮ, ಧರ್ಮ ಮತ್ತು ಮಾನವೀಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲ ದಾರ್ಶನಿಕರನ್ನು ಸ್ಮರಿಸಿಕೊಳ್ಳುವ ಸುಸಂದರ್ಭವಾಗಿದೆ. ಬಸವ, ಅಲ್ಲಮ, ಅಕ್ಕಮಹಾದೇವಿ ನೇತೃತ್ವದಲ್ಲಿ ಆರಂಭವಾದ ಕಾಯಕ ಸಮಾಜ, ಶಾಂತಿ, ಸರಳತೆ, ಸಮಾನತೆ ಉಪದೇಶಿಸಿ ಆಚರಿಸಿ ಸದಾ ಆದರ್ಶ. ಪರಿವರ್ತನೆಯ ಹರಿಕಾರ ಬಸವಣ್ಣ. ಅವರ ಅನುಭವ ಮಂಟಪ ಆದರ್ಶ ಸಂಸತ್ತಿನ ಮಾದರಿಯಾಗಿದೆ ಎಂದು ಹೇಳಿದರು.

Advertisement

ಜಾತಿ ತಾರತಮ್ಯ ತೊಲಗಿಸುವ ನಿಟ್ಟಿನಲ್ಲಿ ಮುರುಘಾ ಶರಣರು ಕೈಗೊಳ್ಳುತ್ತಿರುವ ಕಾರ್ಯಗಳು ಅನನ್ಯ. ಮಠದಿಂದ ನಿರ್ಮಿಸುತ್ತಿರುವ ಬಸವಣ್ಣನ ಪುತ್ಥಳಿಗೆ ಬಜೆಟ್‌ನಲ್ಲಿ 20 ಕೋಟಿ ರೂ. ಘೋಷಣೆ ಮಾಡಿದ್ದು, ಈಗಾಗಲೇ 5 ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ ಅನುದಾನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡುವ ವಿಶ್ವಾಸವಿದೆ. ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿಯನ್ನು ಅಭಿವೃದ್ಧಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಗಮನ ಸೆಳೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಖನಿಜ ನಿಗಮದ ಅಧ್ಯಕ್ಷ ಎಸ್‌. ಲಿಂಗಮೂರ್ತಿ, ಹೊಳಲ್ಕೆರೆ ಶಾಸಕ ಹಾಗೂ ಕೆಎಸ್‌ಆರ್‌ ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ವೈ.ಎ. ನಾರಾಯಣಸ್ವಾಮಿ, ದಾವಣಗೆರೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಎಸ್ಪಿ ಜಿ. ರಾಧಿಕಾ, “ಕನ್ನಡಪ್ರಭ’ ಸಂಪಾದಕ ರವಿ ಹೆಗಡೆ, ಇಂಡಿಯನ್‌ ಎಕ್ಸ್ ಪ್ರೆಸ್‌ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ, ಕೆ.ಎಸ್‌.ನವೀನ್‌, ಹನುಮಲಿ ಷಣ್ಮುಖಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಮುರುಘಾ ಶರಣರ ಬೆಳ್ಳಿ ಪುತ್ಥಳಿ ಸಮರ್ಪಣೆ ಡಾ| ಶಿವಮೂರ್ತಿ ಮುರುಘಾ ಶರಣರ 30ನೇ ಪೀಠಾರೋಹಣದ ಅಂಗವಾಗಿ ಅವರಿಂದ ದೀಕ್ಷೆ ಪಡೆದ ವಿವಿಧ ಮಠಾಧೀಶರು ಹಾಗೂ ಭಕ್ತರು ದುಂಡುಮಲ್ಲಿಗೆ, ಗುಲಾಬಿ, ತಾವರೆ, ತುಳಸಿ, ಪತ್ರೆ, ಸೇವಂತಿಗೆ, ಸುಗಂಧರಾಜ ಸೇರಿದಂತೆ 30 ಬಗೆಯ ವಿವಿಧ ಪುಷ್ಪಗಳನ್ನು ಮುರುಘಾ ಶರಣರ ಪಾದಗಳಿಗೆ ಅರ್ಪಿಸಿ ಗುರುವಂದನೆ ಸಲ್ಲಿಸಿದರು. ಇದೇ ವೇಳೆ 20 ಕೆಜಿ ತೂಕ ಹಾಗೂ 21 ಇಂಚು ಎತ್ತರದ ಮುರುಘಾ ಶರಣರ ಬೆಳ್ಳಿ ಪುತ್ಥಳಿಯನ್ನು ಸಮರ್ಪಣೆ ಮಾಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next