Advertisement

ಪೈರೋಲಿಸಿಸ್‌ ತಂತ್ರಜ್ಞಾನದ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ

09:00 PM Aug 02, 2019 | Sriram |

ಕಾಸರಗೋಡು: ಸದಾ ಕಾಡುತ್ತಿರುವ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾಸರಗೋಡಿನಲ್ಲಿ ಅತ್ಯಾಧುನಿಕ ರೀತಿಯ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತೆ ಚಿಂತನೆ ನಡೆಸಿದೆ.

Advertisement

ಜಿಲ್ಲೆ ಅನೇಕ ವರ್ಷಗಳಿಂದ ಅನುಭವಿಸುತ್ತಿರುವ ತ್ಯಾಜ್ಯ ರಾಶಿ ಬೀಳುತ್ತಿರುವ ಸಮಸ್ಯೆ ಪರಿಹಾರಕ್ಕೆ ಅತ್ಯಾಧುನಿಕ ವೈಜ್ಞಾನಿಕ ಸೌಲಭ್ಯ ಸಹಿತದ ಪರಿಷ್ಕರಣೆ ಘಟಕ ಸ್ಥಾಪಿಸುವ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಮಾತುಕತೆ ಪ್ರಗತಿ ಕಾಣುತ್ತಿದೆ.

ಘಟಕ ಸ್ಥಾಪನೆಯ ಪ್ರಾರಂಭದ ಹಂತದ ಕುರಿತು ಜಿಲ್ಲಾ ಶುಚಿತ್ವ ಮಿಷನ್‌ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಜರಗಿತು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ.ಬಶೀರ್‌ ಅಧ್ಯಕ್ಷತೆ ವಹಿಸಿದ್ದರು.

ತ್ಯಾಜ್ಯದ ಅವಶೇಷಗಳನ್ನು, ವಿಷಾನಿಲವನ್ನು ಹೊರಗೆಡಹದೆ ಪೈರಾಲಿಸಿಸ್‌ ತಂತ್ರಜ್ಞಾನದ ಮೂಲಕ ಪರಿಷ್ಕರಿಸುವ ನೂತನ ತಂತ್ರಜ್ಞಾನ ಮೂಲಕ ಘಟಕ ಸ್ಥಾಪನೆ ಜಿಲ್ಲೆಯ ಸಮಸ್ಯೆಗೆ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಸ್ಥಳೀಯಾ ಡಳಿತ ಸಂಸ್ಥೆಗಳ ಅಧ್ಯಕ್ಷರು, ಕಾರ್ಯ ದರ್ಶಿಗಳು ಮೊದಲಾದವರನ್ನು ಕರೆಸಿ ನಡೆಸಿದ್ದ ಡಿ.ಪಿ.ಸಿ. ಸಭೆಯಲ್ಲಿ ಬೆಂಬಲ ವ್ಯಕ್ತವಾಗಿರುವುದಾಗಿಯೂ ಶೀಘ್ರದಲ್ಲೇ ಈ ಯೋಜನೆ ಜಾರಿಗೊಳಿಸಲು ಯತ್ನಿಸುವುದಾಗಿಯೂ ಅವರು ಹೇಳಿದರು.

ಪೈರೋಲಿಸಿಸ್‌ ತಂತ್ರಜ್ಞಾನ ಸಹಿತದ ತ್ಯಾಜ್ಯ ಪರಿಷ್ಕರಣೆ ಸುಲಭ ಸಾಧ್ಯ ಎಂದು ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅಭಿಮತ ವ್ಯಕ್ತಪಡಿಸಿದರು.

Advertisement

ದಿನನಿತ್ಯ 50 ಟನ್‌ ತ್ಯಾಜ್ಯ ಈ ರೀತಿಯ ಪರಿಷ್ಕರಣೆಗೆ ಅಗತ್ಯವಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಕಂಪೆನಿಯೊಂದನ್ನು ರಚಿಸಿ ಕುಟುಂಬಶ್ರೀ, ಹರಿತ ಕ್ರಿಯ ಸೇನೆ ಇತ್ಯಾದಿಗಳ ಸಹಕಾರದೊಂದಿಗೆ ತ್ಯಾಜ್ಯ ಸಂಗ್ರಹ ನಡೆಸಲು ಉದ್ದೇಶವಿದೆ ಎಂದವರು ನುಡಿದರು.

ಯೋಜನೆಯ ಕುರಿತು ಸಾರ್ವಜನಿಕರು ಅರ್ಥಮಾಡಿಕೊಳ್ಳುವಂತೆ ಸಮಗ್ರ ಮಾಹಿತಿಯನ್ನು ಒದಗಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಪರಿಸರವಾದಿಗಳ ಜೊತೆಗೂ ಮಾತುಕತೆ ನಡೆಸುವಂತೆ ಅವರು ಆಗ್ರಹಿಸಿದರು.

ಸಮಾಜದ ಎಲ್ಲ ಜನತೆಯೊಂದಿಗೆ ಮಾತುಕತೆ ನಡೆಸಿ ಅವರ ಒಪ್ಪಿಗೆಯ ಮೇರೆಗಷ್ಟೇ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಭರವಸೆ ನೀಡಿದರು.

ಎಂ.ಎಸ್‌.ಬಿ.ಎಸ್‌. ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಪ್ರತಿನಿ ಧಿಗಳು ಪೈರೋಲಿಸಿಸ್‌ ತಂತ್ರಜ್ಞಾನದೊಂದಿಗೆ ತ್ಯಾಜ್ಯ ಪರಿಷ್ಕರಿಸುವ ಘಟಕ ಕುರಿತು ಮಾಹಿತಿ ನೀಡಿದರು.

ಶುಚಿತ್ವ ಮಿಷನ್‌ ಜಿಲ್ಲಾ ಸಂಚಾಲಕ ಪಿ.ವಿ. ಜಬೀರ್‌, ಎ.ಡಿ.ಸಿ ಜನರಲ್‌ ಬೆವಿನ್‌ ಜಾನ್‌ ವರ್ಗೀಸ್‌, ಹರಿತ ಕೇರಳ ಮಿಷನ್‌ನ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್‌, ಜಿಲ್ಲಾ ಪಂಚಾಯತ್‌ ಕಾರ್ಯದರ್ಶಿ ಪಿ. ನಂದಕುಮಾರ್‌, ಜಿಲ್ಲಾ ಪಂಚಾಯತ್‌ ಡೆಪ್ಯೂಟಿ ಡೈರೆಕ್ಟರ್‌ ಟಿ.ಜೆ. ತರುಣ್‌, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ಸ್ಪೆಷಲ್‌ ಆಫೀಸರ್‌ ಇ.ಪಿ. ರಾಜ್‌ ಮೋಹನ್‌, ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಕುಂಞಂಬು ನಾಯರ್‌, ಕುರಿಯಾಕೋಸ್‌ ಪ್ಲಾಪರಂಬಿಲ್‌, ಪಿ.ಪಿ. ರಾಜ, ವಿ. ಸುರೇಶ್‌ ಬಾಬು, ನ್ಯಾಯವಾದಿ ಕೆ. ಶ್ರೀಕಾಂತ್‌, ಎ.ಅಬ್ದುಲ್‌ ರಹಮಾನ್‌, ದಾಮೋದರನ್‌ ಬೆಳ್ಳಿಗೆ ಮೊದಲಾದವರು ಉಪಸ್ಥಿತರಿದ್ದರು.

ಏನಿದು “ಪೈರೋಲಿಸಿಸ್‌’
ಅತ್ಯುಷ್ಣ ಆಮ್ಲಜನಕ ಹಾಯಿಸಿ ತ್ಯಾಜ್ಯ ವಸ್ತುಗಳನ್ನು ಬಿಸಿ ಮಾಡಿ ವಿಭಜಿಸುವ ಒಂದು ಪ್ರಕ್ರಿಯೆಯಾಗಿದೆ ಪೈರೋಲಿಸಿಸ್‌ ತಂತ್ರಜ್ಞಾನ. ಇದರಿಂದ ಅನಿಲ ಮತ್ತು ತೈಲವು ಲಭಿಸಲಿದೆ. ಹೀಗೆ ಲಭಿಸುವ ಅನಿಲ ಬಳಸಿ ವಿದ್ಯುತ್‌ ಉತ್ಪಾದಿಸಬಹುದು. ತೈಲವನ್ನು ಉದ್ದಿಮೆಗಳ ಅಗತ್ಯಗಳಿಗಾಗಿ ಬಳಸಬಹುದು. ಪೈರೋ (pyro)ಅಂದರೆ ಬೆಂಕಿ ಎಂಬ ಅರ್ಥವೂ ಲೈಸಿಸ್‌ (Lysis) ಅಂದರೆ ವಿಭಜಿಸುವಿಕೆ ಎಂಬ ಅರ್ಥವೂ ಹೊಂದಿದೆ. ಇದು ಗ್ರೀಕ್‌ ಭಾಷೆಯ ಪದಗಳಾಗಿದ್ದು ಅದರಿಂದಾಗಿ ಇದಕ್ಕೆ ಪೈರೋಲಿಸಿಸ್‌ ಎಂಬ ಹೆಸರು ಬಂದಿದೆ.

ರಾತ್ರಿ ಮಾತ್ರ ತ್ಯಾಜ್ಯ ಸಾಗಾಟ
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವಿನ ಅವ ಧಿಯಲ್ಲಿ ಲಾರಿಗಳಲ್ಲಿ ತ್ಯಾಜ್ಯ ಹೇರಿಕೊಂಡು ಘಟಕಕ್ಕೆ ತ್ಯಾಜ್ಯ ರವಾನಿಸಬೇಕು. ಘಟಕ ನಿರ್ಮಾಣಕ್ಕೆ 5 ಎಕ್ರೆ ಜಾಗದ ಅಗತ್ಯವಿದೆ. ಕೇರಳ ತೋಟಗಾರಿಕೆ ನಿಗಮ ವ್ಯಾಪ್ತಿಯಲ್ಲಿ ಯಾ ಬೇರೆ ಕಡೆಯಲ್ಲಿ ಜಾಗವನ್ನು ಜಿಲ್ಲಾಡಳಿತ ಪತ್ತೆಮಾಡಲಿದೆ. ಘಟಕದಿಂದ ವಿಷಾನಿಲ, ತ್ಯಾಜ್ಯದ ಅವಶೇಷ, ದುರ್ಗಂಧ ಹೊರಗೆಡಹದೇ ಇರುವ ಹಿನ್ನೆಲೆಯಲ್ಲಿ ಘಟಕ ನಿರ್ಮಾಣದ ಪ್ರದೇಶದ ನಿವಾಸಿಗಳಿಗೆ ಯಾವುದೇ ಸಮಸ್ಯೆಗಳಿರುವುದಿಲ್ಲ ಎಂದು ಜಿಲ್ಲಾಧಿಕಾರಿ ನುಡಿದರು.

ಖಾಸಗಿ ಸಂಸ್ಥೆಯಿಂದ
ಬಂಡವಾಳ ಹೂಡಿಕೆ
ಈ ಘಟಕಕ್ಕಾಗಿ ಖಾಸಗಿ ಸಂಸ್ಥೆ ಯೊಂದು 250 ಕೊಟಿ ರೂ. ಬಂಡವಾಳ ಹೂಡಲಿದೆ. ಘಟಕದಲ್ಲಿ ಪರಿಷ್ಕರಿಸಲಾ ಗುವ ತ್ಯಾಜ್ಯದಿಂದ ವಿದ್ಯುತ್‌, ಡೀಸೆಲ್‌, ಕೃಷಿ ಗೊಬ್ಬರ ಇತ್ಯಾದಿಗಳನ್ನು ಈ ಖಾಸಗಿ ಸಂಸ್ಥೆ ವ್ಯವಹಾರ ನಡೆಸಲಿದೆ. ತಾಂತ್ರಿಕ ವಿದ್ಯೆ ಸಹಿತ ಪರಿಶೀಲಿಸಿರುವ ಸ್ವಿಸ್‌ ಚಾಲೆಂಜ್‌ ವಿಧಾನದಲ್ಲಿ ಖಾಸಗಿ ಸಂಸ್ಥೆಗಳ ಟೆಂಡರ್‌ ಕೋರಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next