Advertisement

Constitution Awareness Jatha: 26ಕ್ಕೆ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ

12:38 PM Jan 23, 2024 | Team Udayavani |

ಚಿಕ್ಕಬಳ್ಳಾಪುರ: ಸಂವಿಧಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ಸಮಾವೇಶವನ್ನು ಅಭಿಯಾನದ ರೂಪದಲ್ಲಿ ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿ ಜಿಲ್ಲಾದ್ಯಂತ ಸರ್ಕಾರದ ನಿರ್ದೇಶನಗಳಂತೆ ಜ.26ರಿಂದ ಫೆ.25ರವರೆಗೆ ಹಮ್ಮಿಕೊಳ್ಳಲಾಗುವುದೆಂದು ಡೀಸಿ ಪಿ.ಎನ್‌.ರವೀಂದ್ರ ತಿಳಿಸಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಿವಿಧ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಪೂರ್ವ ಭಾವಿ ಸಿದ್ಧತೆಗಳ ಸಲಹೆ ಆಲಿಸಿ ನಂತರ ಮಾತನಾಡಿದರು.

ಜಿಲ್ಲೆಯ 157ಗ್ರಾಪಂ ಮತ್ತು 6 ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಸರ್ಕಾರೇತರ ಸಂಸ್ಥೆಗಳು, ವಿವಿಧ ಸಂಘಟನೆಗಳು ಪೂರ್ಣ ಸಹಕಾರ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದ ಜಿಲ್ಲಾಧಿಕಾರಿ, ಜಿಲ್ಲಾ, ತಾಲೂಕು, ಗ್ರಾಪಂ ಮಟ್ಟ ಸೇರಿದಂತೆ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಭಾರತದ ಸಂವಿಧಾನ ದಿನಾಚರಣೆ ಮತ್ತು ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಂವಿಧಾನ ಜಾಗೃತಿ ಜಾಥಾ ಸಮಾವೇಶ ಆಚರಿಸುವ ಸಂಬಂಧ ಸರ್ಕಾರ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.

ಅದರಂತೆ ಜಿಲ್ಲಾ ಕೇಂದ್ರದಲ್ಲಿ ಜ.26ರ ಗಣರಾಜೋತ್ಸವದ ದಿನದಂದು ನಗರದ ಜಿಲ್ಲಾ ಸರ್‌.ಎಂ.ವಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಕಾರ್ಯಕ್ರಮದ ಜಾಗೃತಿ ಜಾಥಾಗೆ ಚಾಲನೆ ನೀಡಲಿದ್ದಾರೆ. ನಂತರ ಈ ಜಾಥಾ ಕಾರ್ಯಕ್ರಮವು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ನಗರಾಡಳಿತ ಪ್ರದೇಶ ಗಳಲ್ಲಿ ಮುಂದಿನ ಫೆ.25 ವರೆಗೆ ಜರುಗಲಿದೆ ಎಂದರು.

ಸಂವಿಧಾನ ಪೀಠಿಕೆಯ ಪ್ರತಿ ವಿತರಣೆ: ಜ.26 ರಂದು ಚಾಲನೆಗೊಳ್ಳಲಿರುವ ಈ ಜಾಗೃತಿ ಜಾಥಾದ ಮೆರವಣಿಗೆಯು ಮುಂದಿನ ಫೆ.25 ರಂದು ಬೆಂಗಳೂರಿಗೆ ತಲುಪಿ ಅರಮನೆ ಮೈದಾನದಲ್ಲಿ ನಡೆಯವ ಸಂವಿಧಾನ ಜಾಗೃತಿ ಜಾಥಾದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಆಗಲಿದೆ. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಭಾರತದ ಸಂವಿಧಾನ ಪೀಠಿಕೆಯ ಪ್ರತಿಗಳನ್ನು ಮೆರವಣಿಗೆಯ ಉದ್ದಕ್ಕೂ ವಿತರಿಸಲು ನಿರ್ಧರಿಸಲಾಗಿದೆ. ಮೆರವಣಿಗೆಯ ರೂಪು ರೇಷೆ ಮತ್ತು ಸಂಯೋಜನೆ, ಮೆರವಣಿಗೆ ಸಾಗುವ ಮಾರ್ಗ ನಕ್ಷೆಯು ಈಗಾಗಲೇ ಸಿದ್ದವಾಗುತ್ತಿದೆ. ಮೆರವಣಿಗೆಯಲ್ಲಿ ಭಾಗವಹಿಸುವವರ ತಂಗುವಿಕೆ ಮತ್ತು ವಸತಿ, ವಿಶ್ರಾಂತಿ, ಸುರಕ್ಷತೆಗೆ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರಿಗೆ ಕಾರ್ಯಭಾರ ಹಂಚಿಕೆ ಮಾಡಿ ತಿಳಿಸಲಾಗಿದೆ. ಕಾರ್ಯಕ್ರಮ ಸ್ಥಳಗಳಲ್ಲಿ ಸಂವಿಧಾನದ ಮಹತ್ವ ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಮತ್ತಿತರ ವಿಷಯಗಳ ಕುರಿತು ಭಾಷಣ ವ್ಯವಸ್ಥೆ ಮಾಡಲಾಗುವುದು.

Advertisement

ಜಿಲ್ಲೆಗೆ ಮೊದಲ ಸ್ಥಾನ ಸಿಗಬೇಕು: ಈ ಕಾರ್ಯಕ್ರಮದ ಮೌಲ್ಯಮಾಪನವನ್ನು ಭವ್ಯತೆ, ನಾವೀನ್ಯತೆ, ಭಾಗವಹಿಸುವಿಕೆ, ಪರಿಣಾಮಕಾರಿತ್ವ ಮತ್ತು ಮಾಧ್ಯಮ, ನಾಗರಿಕ ಸಮಾಜದ ಪ್ರತಿಕ್ರಿಯೆಗಳ ಅಂಶಗಳ ಮೇಲೆ ರಾಜ್ಯ ಮಟ್ಟದಲ್ಲಿ ಪರಿಶೀಲನೆ ನಡೆಸಿ, ಮೊದಲ ಮೂರು ಜಿಲ್ಲೆಗಳಿಗೆ ಫೆಬ್ರವರಿ 25ರ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದರಿಂದ ಮೊದಲ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಭಾಜನವಾಗುವ ನಿಟ್ಟಿನಲ್ಲಿ ತಮ್ಮ ಸಹಭಾಗಿತ್ವ ಹಾಗೂ ಸಹಕಾರ ಅಗತ್ಯವಾಗಿರುತ್ತದೆ. ಆದ್ದರಿಂದ ಎಲ್ಲಾ ಸಂಘಟಣೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸ ಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್‌ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎನ್‌.ನಾಗೇಶ್‌, ಅಪರ ಜಿಲ್ಲಾಧಿಕಾರಿ ಡಾ.ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಡಿ.ಎಚ್‌. ಅಶ್ವಿ‌ನ್‌, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಡಾ.ಎನ್‌. ಭಾಸ್ಕರ್‌, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಹೆಚ್ಚು ಗ್ರಾಮಗಳಿಗೆ ಜಾಥಾ: ಮೆರವಣಿಗೆಯು ಸಾಧ್ಯವಾದಷ್ಟು ಹೆಚ್ಚು ಗ್ರಾಮಗಳ ಮೂಲಕ ಹಾದು ಹೋಗಲಿದ್ದು, ತಾಲೂಕಿನ ಗಡಿಯಲ್ಲಿ ಅದನ್ನು ಸಂಬಂಧಪಟ್ಟ ಕ್ಷೇತ್ರದ ಶಾಸಕರು ಮತ್ತಿತರ ಚುನಾಯಿತ ಪ್ರತಿನಿಧಿಗಳು ಸ್ವಾಗತಿಸಲಿದ್ದಾರೆ. ಸಮಾವೇಶ ಜರುಗುವ ಸ್ಥಳಗಳಲ್ಲಿ ಸಂವಿಧಾನ ಮತ್ತು ಸಂಬಂಧಿತ ಇತರ ವಿಷಯಗಳ ಕುರಿತಂತೆ ಚರ್ಚಾ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳು ಆಯೋಜಿಸಲಾಗುವುದು ಡೀಸಿ ಪಿ.ಎನ್‌. ರವೀಂದ್ರ ತಿಳಿಸಿದರು.

ಭಾರತದ ಸಂವಿಧಾನದ ಪಿಠಿಕೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಡಾ.ಬಿ.ಆರ್‌. ಅಂಬೇಡ್ಕರ್‌ ರವರ ಪರಿಕಲ್ಪನೆಗಳು, ಬಸವಣ್ಣನವರ ವಚನಗಳು, ಮತ್ತು ಭಾರತದ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆಯನ್ನು ಜಾಥಾವು ಬಿಂಬಿಸಲಿದೆ. -ಪಿ.ಎನ್‌.ರವೀಂದ್ರ, ಜಿಲ್ಲಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next