Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಸೋತಿದ್ದಕ್ಕೆ ನೋವಿದೆ: ಸಿದ್ದರಾಮಯ್ಯ

06:10 AM Jun 08, 2018 | Team Udayavani |

ಬಾಗಲಕೋಟೆ: “ರಾಜ್ಯದಲ್ಲಿ ಕಾಂಗ್ರೆಸ್‌ ಸೋತಿದ್ದಕ್ಕೆ ನನಗೆ ನೋವಿದೆ. ಆದರೆ, ಜನರು ಕೊಟ್ಟ ತೀರ್ಪು ಪಾಲಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.

Advertisement

ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಗುರುವಾರ ಬಾದಾಮಿಗೆ ಆಗಮಿಸಿದ ಅವರು ಬನಶಂಕರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಹುಲಸಗೇರಿ ಮತ್ತು ಕಟಗೇರಿಯಲ್ಲಿ ನಡೆದ ಮತದಾರರಿಗೆ ಕೃತಜ್ಞತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಈವರೆಗೆ ಯಾವುದೇ ಮುಖ್ಯಮಂತ್ರಿಗಳು ಕೊಡದಂತಹ ಅತ್ಯುತ್ತಮ ಯೋಜನೆಗಳನ್ನು ನೀಡಿದ ತೃಪ್ತಿ ನನಗಿದೆ. ರಾಜ್ಯದಲ್ಲಿ ಜನರು ಕಾಂಗ್ರೆಸ್‌ಗೆ ಕಡಿಮೆ ಸ್ಥಾನ ನೀಡಿದ್ದಾರೆ.

ನನಗೆ ಯಡಿಯೂರಪ್ಪ ಅಥವಾ ಬಿಜೆಪಿ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಆದರೆ, ರಾಜ್ಯದಲ್ಲಿ ಕೋಮುವಾದ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ
ನಡೆಸುತ್ತಿದ್ದೇವೆ ಎಂದರು.

ಸೋಲಿಸಲು ದೊಡ್ಡ ಷಡ್ಯಂತ್ರ: ನಾನು ಈವರೆಗೆ 8 ಬಾರಿ ಆಯ್ಕೆಯಾಗಿದ್ದೇನೆ. ಏಳು ಬಾರಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಿಂದ ಗೆದ್ದಿದ್ದೇನೆ. 8ನೇ ಬಾರಿಗೆ ಚಾಮುಂಡೇಶ್ವರಿಯಲ್ಲಿ ನನ್ನ ಸೋಲಿಸಲು ಎಲ್ಲಾ ದುಷ್ಟ ಶಕ್ತಿಗಳು ದೊಡ್ಡ ಷಡ್ಯಂತ್ರ ನಡೆಸಿದವು. ಬಾದಾಮಿಯಲ್ಲೂ ನನ್ನ ಸೋಲಿಸಲು ಷಡ್ಯಂತ್ರ ನಡೆಸಲಾಯಿತು.

Advertisement

ಚಾಮುಂಡೇಶ್ವರಿಯಲ್ಲಿ ಷಡ್ಯಂತ್ರಕ್ಕೆ ಅಲ್ಲಿನ ಜನ ಬಲಿಯಾದರು. ಆದರೆ, ಬಾದಾಮಿ ಜನರು, ನಾನು ದೂರದಿಂದ ಬಂದು ಸ್ಪರ್ಧಿಸಿದರೂ ಮನೆಯ ಮಗನಂತೆ ಪ್ರೀತಿ ತೋರಿ ಗೆಲ್ಲಿಸಿದರು.ನಾನು ಐದು ವರ್ಷ ಇಲ್ಲೇ ಇರುತ್ತೇನೆ. ಬಾದಾಮಿ ಸಮಗ್ರ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದರು.

ನಾನು ಸೈಡ್‌ಲೈನ್‌ ಆಗಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್‌ ಕಡಿಮೆ ಸ್ಥಾನ ಪಡೆದ ಬಳಿಕ ನನ್ನನ್ನು ಸೈಡ್‌ಲೈನ್‌ ಮಾಡಲಾಗಿದೆ ಎಂಬ ಟೀಕೆ ತಪ್ಪು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ನಾನೇ ಆಗಿದ್ದೇನೆ. ಅಲ್ಲದೇ ಕಾಂಗ್ರೆಸ್‌
ಶಾಸಕಾಂಗ ಪಕ್ಷದ ನಾಯಕನೂ ನಾನೇ ಇದ್ದೇನೆ. ಹೀಗಾಗಿ, ನಾನು ಹೇಗೆ ಪಕ್ಷದಲ್ಲಿ ನಿರ್ಲಕ್ಷ್ಯ ಗೊಳ್ಳುತ್ತೇನೆ ಎಂದು ಪ್ರಶ್ನಿಸಿದರು.

ಸಂಪುಟ ರಚನೆ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸದ್ಯ 27 ಜನರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಇನ್ನೂ 6 ಸ್ಥಾನ ಖಾಲಿ ಇವೆ. ಸೂಕ್ತರಿಗೆ ಸ್ಥಾನಮಾನ ದೊರೆಯಲಿದೆ ಎಂದರು. ಜಿಲ್ಲಾವಾರು ಪ್ರಾತಿನಿಧ್ಯ ವಿಷಯದಲ್ಲಿ ಹಲವು ಜಿಲ್ಲೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟದಲ್ಲಿ
ಕಾಂಗ್ರೆಸ್‌ ಪಕ್ಷದ 6 ಹಾಗೂ ಜೆಡಿಎಸ್‌ನ 1 ಸ್ಥಾನ ಕಾಯ್ದಿರಿಸಲಾಗಿದೆ. ಇನ್ನೊಮ್ಮೆ ಸಂಪುಟ ವಿಸ್ತರಣೆ
ಮಾಡಲಾಗುತ್ತದೆ. ಆಗ ಇನ್ನುಳಿದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುವುದು. ಸಮಗ್ರ ಕರ್ನಾಟಕ ದೃಷ್ಟಿ ಇಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡಲಾಗಿದೆ. ಹೀಗಾಗಿ ಕೆಲವು ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ ಎಂದು ಹೇಳಿದರು.

ಲೋಕಸಭೆಗೆ ಸ್ಪರ್ಧೆ ಯಾರು ಹೇಳಿದ್ದು: ಸಿದ್ದರಾಮಯ್ಯ ಕೊಪ್ಪಳ ಅಥವಾ ಮೈಸೂರು ಲೋಕಸಭೆ ಚುನಾವಣೆ ಸ್ಪರ್ಧಿಸುತ್ತಾರೆಂಬ ವದಂತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆಂದು ನಿಮಗೆ
ಹೇಳಿದವರಾರು ಎಂದು ಮರು ಪ್ರಶ್ನಿಸಿದರು.

ಸಿದ್ದು ಸ್ವಾಗತಕ್ಕಿಲ್ಲ ಮುಖಂಡರ ದಂಡು 
ಹುಬ್ಬಳ್ಳಿ:
ಇಲ್ಲಿನ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಸ್ವಾಗತ
ಕೋರಲು ಪಕ್ಷದ ಯಾವ ಮುಖಂಡರೂ ಆಗಮಿಸಿದೇ ಇರುವುದು ತೀವ್ರ ಚರ್ಚೆಗೆ ಗ್ರಾಸವಾಯಿತು.ಬೆಂಗಳೂರಿನಿಂದ
ವಿಶೇಷ ವಿಮಾನ ಮೂಲಕ ಸುಮಾರು 11:50 ಗಂಟೆಗೆ ಆಗಮಿಸಿದ ಅವರು ಸುಮಾರು 20 ನಿಮಿಷಗಳ ಕಾಲ ವಿಶ್ರಾಂತಿ ಪಡೆದು, 12.10ಕ್ಕೆ ಹೆಲಿಕಾಪ್ಟರ್‌ ಮೂಲಕ ಬಾದಾಮಿಗೆ ಪ್ರಯಾಣ ಬೆಳೆಸಿದರು. ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಹಾಜರಿದ್ದರು. ಯಾವ ನಾಯಕರಿಲ್ಲದ ಕಾರಣ, ಡಂಗನವರ ಕೂಡ ನಿಲ್ದಾಣದೊಳಗೆ ಹೋಗದೆ ಹೊರಗಡೆ ಕಾದು ನಿಂತಿದ್ದರು. ನಂತರ ಹೊರಡುವ ಸಂದರ್ಭದಲ್ಲಿ ಶುಭ ಕೋರಿದರು. ಡೀಸಿ ಡಾ|ಎಸ್‌.ಬಿ. ಬೊಮ್ಮನಹಳ್ಳಿ, ಪೊಲೀಸ್‌ ಆಯುಕ್ತ ಎಂ.ಎನ್‌.ನಾಗರಾಜ, ತಹಶೀಲ್ದಾರ್‌ ಕಿಶನ್‌ ಕಲಾಲ ಸೇರಿದಂತೆ ಇತರ ಅಧಿಕಾರಿಗಳು ಅನೌಪಚಾರಿಕವಾಗಿ ಹೂಗುತ್ಛ ನೀಡಿ ಸ್ವಾಗತ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next