Advertisement

ಸಂಕುಚಿತ ಮನೋಭಾವ ಸರಿಯಲ್ಲ: ಆಸನ ವಿವಾದ

11:46 AM Jan 27, 2018 | |

ಈ ವರ್ಷದ ಗಣರಾಜ್ಯೋತ್ಸವ ಅವಿಸ್ಮರಣೀಯವಾಗಿತ್ತು. ಆಸಿಯಾನ್‌ ಒಕ್ಕೂಟದ ಹತ್ತು ಸದಸ್ಯ ರಾಷ್ಟ್ರಗಳ ಪ್ರಮುಖರು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದು ಒಂದೆಡೆಯಾದರೆ , ಗಡಿ ಭದ್ರತಾ ಪಡೆಯ ಮಹಿಳಾ ಸಿಬಂದಿಗಳ ರೋಮಾಂಚಕ ಕಸರತ್ತು ಸೇರಿದಂತೆ ದೇಶದ ಸೇನಾ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ ಹಿರಿಮೆ ಇನ್ನೊಂದೆಡೆ. ಎಲ್ಲ ಒಳ್ಳೆಯ ಕೆಲಸಗಳಲ್ಲೂ ಏನಾದರೊಂದು ಚಿಕ್ಕ ಕೊರತೆ ಇರುತ್ತದೆ ಎನ್ನುವಂತೆ ಈ ಸಂಭ್ರಮದ ನಡುವೆಯೇ ಗಣರಾಜ್ಯೋತ್ಸವ ವಿವಾದಕ್ಕೆಡೆಯಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ನೀಡಿದ ಆಸನ ವ್ಯವಸ್ಥೆ ಅವರ ಸ್ಥಾನಮಾನಕ್ಕೆ ತಕ್ಕುದಾಗಿರಲಿಲ್ಲ ಎಂಬ ಆಕ್ಷೇಪ ಆ ಪಕ್ಷದಿಂದ ಕೇಳಿ ಬಂದಿದೆ.

Advertisement

ನಿನ್ನೆ ರಾಹುಲ್‌ಗೆ ನಾಲ್ಕನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಿದಾಗಲೇ ಕಾಂಗ್ರೆಸ್‌ ನಾಯಕರು ಟೀಕೆಗಳ ಸುರಿಮಳೆಗೈದಿದ್ದರು. ಆದರೆ ಗಾಯದ ಮೇಲೆ ಉಪ್ಪು ಸವರಿದಂತೆ ಇಂದು ರಾಹುಲ್‌ ಆಸನ ಆರನೇ ಸಾಲಿಗೆ ಸ್ಥಳಾಂತರವಾಗಿತ್ತು. ಕಾಂಗ್ರೆಸ್‌ ನಾಯಕರಿಗೆ ಇದು ಉದ್ದೇಶಪೂರ್ವಕವಾಗಿ ಎಸಗಿದ ಅವಮಾನದಂತೆ ಕಾಣಿಸಿದೆ. ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಜತೆ ಕುಳಿತು ರಾಹುಲ್‌ ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದಾರೆ. ಪ್ರತಿ ವರ್ಷ ರಾಹುಲ್‌ಗೆ ಆಹ್ವಾನ ಹೋಗುತ್ತಿದ್ದರೂ ಅವರು ಗಣರಾಜ್ಯೋತ್ಸವಕ್ಕೆ ಬಂದಿರುವುದು ಬಹಳ ವರ್ಷಗಳ ಬಳಿಕ ಇದೇ ಮೊದಲು. ಕಳೆದ ಡಿಸೆಂಬರ್‌ನಲ್ಲಿ ಅಧ್ಯಕ್ಷ ಹುದ್ದೆಗೇರಿರುವ ರಾಹುಲ್‌ಗೆ ಮೊದಲ ಸಾಲಿನ ಆಸನ ನೀಡಬೇಕಾಗಿತ್ತು ಎನ್ನುವುದು ಕಾಂಗ್ರೆಸ್‌ ವಾದ. ಗಣರಾಜ್ಯೋತ್ಸವ ಆಸನ ವ್ಯವಸ್ಥೆ ಮಾಡಲು ಒಂದು ಶಿಷ್ಟಾಚಾರವಿದೆ. ಗೃಹ ಇಲಾಖೆ ಈ ಆದ್ಯತೆಯ ಶಿಷ್ಟಾಚಾರದ ಪ್ರಕಾರ ಆಸನಗಳನ್ನು ನೀಡುತ್ತದೆ. ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಅತಿ ದೊಡ್ಡ ವಿಪಕ್ಷದ ಅಧ್ಯಕ್ಷರಷ್ಟೆ. ಅವರ ಪಕ್ಷಕ್ಕೆ ಅಧಿಕೃತ ವಿಪಕ್ಷದ ಸ್ಥಾನಮಾನ ಇಲ್ಲ.ಲೋಕಸಭೆಯ ಮಟ್ಟಿಗೆ ಅವರು ಬರೀ ಸಂಸದರಷ್ಟೆ. ಈ ಪ್ರಕಾರ ಅವರಿಗೆ ನೀಡಿದ ಆಸನ ಸೂಕ್ತವಾಗಿದೆ ಎನ್ನುವುದು ಸರಕಾರದ ಸಮರ್ಥನೆ. ಆದರೆ ರಾಹುಲ್‌ ಗಾಂಧಿಯಲ್ಲಿ ತಮ್ಮ ಉದ್ಧಾರಕನನ್ನು ಕಾಣುತ್ತಿರುವ ಕಾಂಗ್ರೆಸ್‌ ಮಂದಿಗೆ ಸರಕಾರ ಈ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು ಸರಿಕಂಡಿಲ್ಲ. ಹೀಗಾಗಿ ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾರಿಂದ ಹಿಡಿದು ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ತನಕ ಎಲ್ಲರೂ ಇದು ಸರಕಾರದ ಕೀಳುಮಟ್ಟದ ರಾಜಕಾರಣ ಎಂದು ಟೀಕಾಪ್ರಹಾರಗಳನ್ನು ಮಾಡುತ್ತಿದ್ದಾರೆ. ಇಷ್ಟರತನಕ ಕಾಂಗ್ರೆಸ್‌ ಅಧಿಕಾರದಲ್ಲಿರಲಿ ಅಥವ ವಿಪಕ್ಷ ಸ್ಥಾನದಲ್ಲಿರಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷರಿಗೆ ಮುಂದಿನ ಸಾಲಿನ ಆಸನವನ್ನು ನೀಡಲಾಗುತ್ತಿತ್ತು. ಈ ಸಂಪ್ರದಾಯ ಈ ವರ್ಷ ಬದಲಾಗಿರು ವುದನ್ನು ಪಕ್ಷಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಗೆಂದು ಗಣ ರಾಜ್ಯೋತ್ಸವ ವಿದಾವಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ. 2015 ರಲ್ಲಿ ಅರವಿಂದ ಕೇಜ್ರಿವಾಲ್‌ರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿಯೇ ಇರಲಿಲ್ಲ.

ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್‌ ಬೇಡಿ ವಿಐಪಿಗಳ ಸಾಲಿನಲ್ಲಿದ್ದರು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಬಿಜೆಪಿ ಅಧ್ಯಕ್ಷ ಶಾ ಮುಂದಿನ ಸಾಲಿನಲ್ಲಿಯೇ ಆಸೀನರಾ ಗುತ್ತಿ ದ್ದಾರೆ. ಒಂದರ್ಥದಲ್ಲಿ ಕಾಂಗ್ರೆಸ್‌ ನಾಯಕರು ಹೇಳುವುದು ಕೂಡ ಸರಿ ಎಂದೆನಿಸುತ್ತದೆ. ಏಕೆಂದರೆ ಕಳೆದ ವರ್ಷ ಸೋನಿಯಾ ಗಾಂಧಿಗೆ ಮೊದಲ ಸಾಲಿನಲ್ಲಿ ಆಸನ ನೀಡಲಾಗಿತ್ತು. ಸೋನಿಯಾ ಕೂಡ ಬರೀ ಕಾಂಗ್ರೆಸ್‌ ಅಧ್ಯಕ್ಷೆ ಮತ್ತು ಸಂಸದರಷ್ಟೇ ಆಗಿದ್ದರು. ತಾಯಿಗೆ ನೀಡಿದ ಸ್ಥಾನ ಮಾನ ಮಗನಿಗಾಗುವಾಗ ಏಕೆ ಬದಲಾಯಿತು ಎನ್ನುವ ಪ್ರಶ್ನೆಗೆ ಸರಕಾರ ಉತ್ತರಿಸಬೇಕು. ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ಯುಪಿಎ ಸರಕಾರ ಕೂಡ ಘನವಾಗಿ ನಡೆದುಕೊಳ್ಳುತ್ತಿತ್ತು. ರಾಷ್ಟ್ರೀಯ ಕಾರ್ಯ ಕ್ರಮಗಳಲ್ಲಿ ಆದು ಬಿಜೆಪಿ ಅಥವ ಇತರ ವಿಪಕ್ಷ ನಾಯಕರ ಸ್ಥಾನಮಾನಕ್ಕೆ ಕುಂದುಂಟು ಮಾಡಿದ ಉದಾಹರಣೆಗಳಿಲ್ಲ. 2012ರಲ್ಲಿ ರಾಷ್ಟ್ರಪತಿ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡದಿದ್ದರೆ ಸಮಾರಂಭವನ್ನೇ ಬಹಿಷ್ಕರಿಸುತ್ತೇವೆ ಎಂದು ಬಿಜೆಪಿ ನಾಯಕರು ಬೆದರಿಕೆ ಹಾಕಿರುವುದನ್ನು ಹಾಲಿ ಸರಕಾರ ಮರೆತಿರುವಂತೆ ಕಾಣಿಸುತ್ತಿದೆ. ಏನೇ ಆದರೂ ರಾಹುಲ್‌ ಗಾಂಧಿ ಸದ್ಯ ವಿಪಕ್ಷಗಳಲ್ಲೇ ಅತಿ ದೊಡ್ಡ ಪಕ್ಷದ ಅಧ್ಯಕ್ಷ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪೈಪೋಟಿ ನೀಡಬಲ್ಲೆನೆಂದು ತನ್ನನ್ನು ಬಿಂಬಿಸಿಕೊಳ್ಳುತ್ತಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯೂ ಮೋದಿ V/S ರಾಹುಲ್‌ ಆಗಲಿದೆ. ಹೀಗಿರುವಾಗ ಸೈದ್ಧಾಂತಿಕವಾದ ಮತ್ತು ರಾಜಕೀಯವಾದ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಔದಾರ್ಯ ತೋರಿಸಿದ್ದರೆ ಸರಕಾರ ಕಳೆದುಕೊಳ್ಳುವಂತದ್ದೇನೂ ಇರಲಿಲ್ಲ. ಇಂತಹ ವಿಚಾರಗಳಲ್ಲಿ ತೀರಾ ಸಂಕುಚಿತ ಮನೋಭಾವ ಸರಿಯಲ್ಲ.

Advertisement

Udayavani is now on Telegram. Click here to join our channel and stay updated with the latest news.

Next