Advertisement

ವಿಜಯ ಬ್ಯಾಂಕ್‌ ವಿಲೀನಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ

05:59 AM Jan 07, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಬ್ಯಾಂಕ್‌ಗಳಲ್ಲೊಂದಾಗಿರುವ ವಿಜಯ ಬ್ಯಾಂಕನ್ನು ಬ್ಯಾಂಕ್‌ ಆಫ್‌ ಬರೋಡಾದ ಜತೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ಜ.8ರಂದು ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಜ.9ರಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ನೇತೃತ್ವದಲ್ಲಿ ಮಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐವನ್‌ ಡಿ’ಸೋಜಾ, ಜಿಲ್ಲೆಯಲ್ಲಿ ಹುಟ್ಟಿ ಬೆಳೆದು, ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ದಕ್ಷ ನಿರ್ವಹಣೆಯ ಮೂಲಕ ಅತ್ಯುತ್ತಮ ಸಾಧನೆ ಮಾಡುತ್ತಿರುವ ಜನಸ್ನೇಹಿ ಹಾಗೂ ರೈತರು, ಗ್ರಾಮೀಣ ಭಾಗದ ಜನರ ಪರವಾಗಿರುವ ವಿಜಯ ಬ್ಯಾಂಕ್‌ನ್ನು ನಷ್ಟದಲ್ಲಿ ನಡೆಯುತ್ತಿರುವ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನ ಮಾಡುತ್ತಿರುವುದು ಕೇಂದ್ರ ಸರಕಾರ ಜಿಲ್ಲೆಗೆ, ಜನರಿಗೆ ಮಾಡುತ್ತಿರುವ ಅನ್ಯಾಯ. ಇದರ ವಿರುದ್ಧ ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಧ್ವನಿಯೆತ್ತಿಲ್ಲ. ಬಿಜೆಪಿ ಶಾಸಕರು ಮಾತನಾಡುತ್ತಿಲ್ಲ. ಈ ಧೋರಣೆಗಳನ್ನು ಪ್ರತಿಭಟಿಸಿ ಜ.8ರಂದು ಪುರಭವನದ ಬಳಿಯ ಮಹಾತ್ಮಾ ಗಾಂಧೀಜಿ ಪ್ರತಿಮೆಯ ಬಳಿ ಉಪವಾಸ ಸತ್ಯಾಗ್ರಹ ನಡೆಸಲಿದ್ದೇನೆ ಎಂದರು.

ಉಪವಾಸ ಸತ್ಯಾಗ್ರಹ ಬೆಳಗ್ಗೆ 10ಕ್ಕೆ ಪ್ರಾರಂಭವಾಗಿ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ. ಜಿಲ್ಲೆಯ ಕಾಂಗ್ರೆಸ್‌ ನಾಯಕರು ಭಾಗವಹಿಸುವರು. ಜ.10ರಂದು ಜಿಲ್ಲೆಯಲ್ಲಿರುವ ವಿಜಯ ಬ್ಯಾಂಕ್‌ನ ಎಲ್ಲ 79 ಶಾಖೆಗಳ ಮುಂದೆ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಲಿದೆ. ಜ್ಯೋತಿ ಟಾಕೀಸ್‌ ಬಳಿ ಇರುವ ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇನೆ ಎಂದರು.

ಜ.9: ಮಂಗಳೂರು ಬಂದ್‌
ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಮಿಥುನ್‌ ರೈ, ಲಾಭದಲ್ಲಿ ಮುನ್ನಡೆಯುತ್ತಿರುವ ವಿಜಯ ಬ್ಯಾಂಕನ್ನು 2017-18ನೇ ಸಾಲಿನ ಮೊದಲ ತ್ತೈಮಾಸಿಕದಲ್ಲಿ 3,102 ಕೋ.ರೂ. ನಷ್ಟ ಅನುಭವಿಸಿರುವ ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನ ಮಾಡುವ ಮೋದಿ ಸರಕಾರದ ನಿರ್ಧಾರ ಜಿಲ್ಲೆಗೆ ಮಾಡಿರುವ ಅನ್ಯಾಯ. ಇದು ದೇಶದ ಆರ್ಥಿಕ ವ್ಯವಸ್ಥೆಗೆ ವಿಜಯ ಬ್ಯಾಂಕ್‌ ನೀಡಿರುವ ಕೊಡುಗೆಯನ್ನು ಅಳಿಸಿ ಹಾಕುವ ಹುನ್ನಾರ. ಇದರ ವಿರುದ್ಧ ಪಕ್ಷಭೇದ‌ ಮರೆತು ಧ್ವನಿ ಎತ್ತುವ ಮೂಲಕ ಬ್ಯಾಂಕಿನ ಅಸ್ತಿತ್ವ ಮತ್ತು ಹೆಸರನ್ನು ಉಳಿಸಲು ಹೋರಾಟ ಮಾಡ ಬೇಕಿದೆ. ಅದಕ್ಕಾಗಿ ಜ.9ರಂದು ನಗರದಲ್ಲಿ ಹರತಾಳಕ್ಕೆ ಯುವ ಕಾಂಗ್ರೆಸ್‌ ಕರೆ ನೀಡುತ್ತಿದೆ ಎಂದರು.
ಅನೇಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬ್ಯಾಂಕಿನ ಎಲ್ಲ ಗ್ರಾಹಕರು, ಸಿಬಂದಿ ವರ್ಗ ಬೆಂಬಲ ನೀಡಬೇಕು. ಸಂಸದರು ಹಾಗೂ ಬಿಜೆಪಿ ಶಾಸಕರು ಇದರಲ್ಲಿ ಭಾಗವಹಿಸಬೇಕು ಯುವ ಕಾಂಗ್ರೆಸ್‌ ಆಹ್ವಾನ ನೀಡುತ್ತಿದೆ ಎಂದವರು ಹೇಳಿದರು. 

ಸಂಸದ ನಳಿನ್‌ ಈ ವಿಲಯನ ಪ್ರಕ್ರಿಯೆಯ ವಿರುದ್ಧ ಧ್ವನಿ ಎತ್ತದೆ ಮೌನ ವಹಿಸಿರುವುದರ ಮರ್ಮ ಏನು, ಲಾಭದಲ್ಲಿರುವ ವಿಜಯ ಬ್ಯಾಂಕ್‌ನ  ಹೆಸರನ್ನು ಅಳಿಸಿ ತೀವ್ರ ನಷ್ಟದಲ್ಲಿರುವ ಬ್ಯಾಂಕ್‌ ಬರೋಡಾದ ಹೆಸರನ್ನು ಉಳಿಸುವ ಉದ್ದೇಶ ಏನು ಎಂದವರು ಪ್ರಶ್ನಿಸಿದರು. ಸಂತೋಷ್‌ ಶೆಟ್ಟಿ, ವಕ್ತಾರ ಹಾಗೂ ಕಾರ್ಪೊರೇಟರ್‌ ಎ.ಸಿ. ವಿನಯರಾಜ್‌, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಮುಖಂಡರಾದ ನಜೀರ್‌  ಬಜಾಲ್‌, ರಮಾನಾಥ ಪೂಜಾರಿ, ಸುರೇಂದ್ರ ಕಂಬಳಿ, ನೀರಜ್‌ಪಾಲ್‌, ನಾಗೇಂದ್ರ ಕುಮಾರ್‌, ಸುಹೈಲ್‌ ಕಂದಕ್‌, ಭಾಸ್ಕರ ರಾವ್‌, ಮನೋರಾಜ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next