Advertisement

ರಾಜನೀತಿ –ಕಾಂಗ್ರೆಸ್‌: ಗಾಂಧಿ ಕುಟುಂಬದ ವಿರುದ್ಧ ‘ಯುದ್ಧ’

02:28 AM Aug 29, 2020 | Hari Prasad |

ಎರಡು ದಶಕಗಳ ಅನಂತರ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ವಿರುದ್ಧ ಹಿರಿತಲೆಗಳೇ ‘ಅಖಾಡ’ಕ್ಕಿಳಿದು ಆಮೂಲಾಗ್ರ ಬದಲಾವಣೆ ಹಾಗೂ ಪೂರ್ಣ ಪ್ರಮಾಣದ ನಾಯಕತ್ವಕ್ಕೆ ಪಟ್ಟು ಹಿಡಿದಿರುವುದು ಮುಂದಿನ ದಿನಗಳಲ್ಲಿ “ಯುದ್ಧ’ದ ಮುನ್ಸೂಚನೆ.

Advertisement

ಆದರೆ ಪಕ್ಷದ ಉಳಿವು ಹಾಗೂ ಭವಿಷ್ಯದ ದೃಷ್ಟಿಯಿಂದ ಹಿರಿಯ ನಾಯಕರು ಪತ್ರದ ಮೂಲಕ ಮಾಡಿದ ಮನವಿಗೆ ‘ವಿವಾದ’ದ ಸ್ವರೂಪ ನೀಡಿ ಬಾಯಿ ಮುಚ್ಚಿಸಿ ಸೋನಿಯಾ ಗಾಂಧಿ ತಮ್ಮ ಕುಟುಂಬದ ವಿರುದ್ಧ ತಿರುಗಿಬಿದ್ದವರ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ವಿದ್ಯಮಾನಗಳು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು ಹಿರಿ ತಲೆಗಳ ಆಕ್ರೋಶ ಯಾವ ಸಂದರ್ಭದಲ್ಲಾದರೂ ‘ಸ್ಫೋಟ’ ಆಗಬಹುದು.

ಪೂರ್ಣಪ್ರಮಾಣದ ಸಕ್ರಿಯ ನಾಯಕತ್ವ ಬೇಕು. ಆಮೂ ಲಾಗ್ರ ಬದಲಾವಣೆಯಾಗಬೇಕು ಎಂಬ ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ‌ರ ಮನವಿ ರೂಪದ ಬೇಡಿಕೆ ನಿರ್ಲಕ್ಷ್ಯ ಮಾಡುವಂಥದ್ದಾಗಿರಲಿಲ್ಲ. ಕಾರ್ಯಕಾರಿ ಸಮಿತಿ ಚುನಾವಣೆ ಸೇರಿ ಆಂತರಿಕ ಚುನಾವಣೆ ಪಾರದರ್ಶಕ, ಮುಕ್ತ ಮತ್ತು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಬೇಕು ಎಂದು ಹಿರಿಯ ನಾಯಕರು ಪತ್ರದ ಮೂಲಕ ಎತ್ತಿದ ವಿಚಾರಗಳು ನಿಜಕ್ಕೂ ಗಂಭೀರವಾದವು.

ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಸಕಾಲಿಕವೂ ಆಗಿತ್ತು. ಏಕೆಂದರೆ ಬಿಜೆಪಿಯ ಬೆಳವಣಿಗೆ ತಡೆದು ಪ್ರಧಾನಿ ನರೇಂದ್ರ  ಮೋದಿಗೆ ಸವಾಲೊಡ್ಡುವ ನಾಯಕತ್ವ ಕಾಂಗ್ರೆಸ್‌ ಅಗತ್ಯವಾಗಿ ಬೇಕಾಗಿದೆ ಎಂಬುದು ಪತ್ರಕ್ಕೆ ಸಹಿ ಮಾಡಿದ್ದವರ ಪ್ರತಿಪಾದನೆ. ಆ ಬಗ್ಗೆ ಗಂಭೀರ ಚರ್ಚೆಯಾದರೂ ಆಗಬೇಕಿತ್ತು.

ಆದರೆ ಅದ್ಯಾವುದಕ್ಕೂ ಅವಕಾಶವೇ ಇಲ್ಲದಂತೆ ಸಭೆಯ ಪ್ರಾರಂಭದಲ್ಲೇ ರಾಹುಲ್‌ ಗಾಂಧಿ ಆ್ಯಂಡ್‌ ಟೀಂ, ಪತ್ರ ಬರೆದವರ ಮೇಲೆ ಮುಗಿಬಿದ್ದು ನಿಮ್ಮ ಹೇಳಿಕೆ ಬಿಜೆಪಿಗೆ ಲಾಭ ತಂದು ಕೊಡುವ ಉದ್ದೇಶದಂತಿದೆ, ಬಿಜೆಪಿ ಜತೆ ನಂಟು ಹೊಂದಿದ್ದೀರಿ ಎಂಬರ್ಥದ ಮಾತುಗಳನ್ನಾಡುವ ಮೂಲಕ ಧ್ವನಿ ಎತ್ತಿದವರು ಬೇರೇನೂ ಮಾತನಾಡದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.

Advertisement

ಇಷ್ಟೇ ಅಲ್ಲದೆ ಈ ನಾಯಕರನ್ನು ದೂರವಿರಿಸಿ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವುದು, ಪ್ರಮುಖ ವಿಚಾರಗಳ ಬಗ್ಗೆ ಯಾವ ರೀತಿ ಹೇಳಿಕೆ ಕೊಡಬೇಕು ಎಂಬುದನ್ನು ತೀರ್ಮಾನಿಸಲು ಸಮಿತಿ ರಚಿಸಿ ಅದರಲ್ಲೂ ಪತ್ರ ಬರೆದವರನ್ನು ಅವಗಣಿಸಿರುವುದಕ್ಕೆ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗಿ ಬರಬಹುದು.

ಸೋನಿಯಾ ಗಾಂಧಿ ಪ್ರಶ್ನಾತೀತ ನಾಯಕಿ ಎಂದು ಒಪ್ಪಿಕೊಂಡರೂ ವಯಸ್ಸು ಹಾಗೂ ಆರೋಗ್ಯ ದೃಷ್ಟಿಯಿಂದ ಬೇರೊಬ್ಬರು ಕಾಂಗ್ರೆಸ್‌ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಪ್ರತಿ ಪಾದಿಸುತ್ತಿರುವವರಿಗೆ ರಾಹುಲ್‌ ನಾಯಕತ್ವ ಇಷ್ಟವಿಲ್ಲ ಎಂಬುದನ್ನು 23 ಮುಖಂಡರ ಪತ್ರ  ಸಾಬೀತುಪಡಿಸಿದೆ.

ರಾಹುಲ್‌ ಗಾಂಧಿಗೆ ದೇಶದ ನಾಯಕತ್ವ ವಹಿಸುವ ಚರಿಷ್ಮಾ ಇಲ್ಲ, ಸ್ಥಾನಕ್ಕೆ ತಕ್ಕ ಗಾಂಭೀರ್ಯತೆಯೂ ಇಲ್ಲ, ಹಿರಿಯರು ಹಾಗೂ ಅವರ ಅನುಭವಕ್ಕೆ ಆತ ಕಿಮ್ಮತ್ತು ನೀಡುವುದೂ ಇಲ್ಲ ಎಂಬುದು ಕಾಂಗ್ರೆಸ್‌ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು. ಹೀಗಾಗಿ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ರುವಾಗಲೇ ಅವರ ಕುಟುಂಬ ಹೊರತುಪಡಿಸಿ ಬೇರೊಬ್ಬರಿಗೆ ಪಕ್ಷದ ನಾಯಕತ್ವ ಸಿಗಲಿ.

ಇಲ್ಲದಿದ್ದರೆ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಆನಂತರ ಸೋನಿಯಾ ಗಾಂಧಿ ಅವರ ನಾಯಕತ್ವ ಒಪ್ಪಿ ಕೊಂಡ ನಾವು, ನಮ್ಮ ಮಕ್ಕಳ ವಯಸ್ಸಿನವರಾದ ರಾಹುಲ್‌, ಪ್ರಿಯಾಂಕಾ ನಾಯಕತ್ವ ಒಪ್ಪಿಕೊಂಡು ಅವರ ಮುಂದೆ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಹಿರಿಯ ಮುಖಂಡರಿಗೆ. ಆದರೆ ಪತ್ರದ  ಅನಂತರದ ಪ್ರತೀಕಾರದ ಕ್ರಮ ನೋಡಿದರೆ ಗಾಂಧಿ ಕುಟುಂಬ ಒಪ್ಪಿಕೊಂಡವರಿಗೆ ಹುದ್ದೆಯ ಭಕ್ಷೀಸು, ವಿರೋಧಿಸಿ ದವರಿಗೆ ನಿರ್ಲಕ್ಷ್ಯದ ಶಿಕ್ಷೆ ಎಂಬ ಸಂದೇಶ ರವಾನೆಯಾಗಿದೆ.

ಹಾಗಾದರೆ ಅಸೋನಿಯಾ ಗಾಂಧಿಲ ಭಾರತ ಕಾಂಗ್ರೆಸ್‌ ನಾಯಕತ್ವ ವಹಿಸಿ ಕೊಳ್ಳುವ ಸಾಮರ್ಥ್ಯ ಗಾಂಧಿ ಕುಟುಂಬದವರಿಗೆ ಹೊರತುಪ ಡಿಸಿ ಬೇರೆ ಯಾರಿಗೂ ಇಲ್ಲವೇ? ಇದ್ದರೂ ಸೋನಿಯಾ – ರಾಹುಲ್‌- ಪ್ರಿಯಾಂಕ  ಗಾಂಧಿಗೆ ಬೇರೊಬ್ಬರಿಗೆ ಪಟ್ಟ ಕಟ್ಟಲು ಇಷ್ಟ ವಿಲ್ಲವೇ ಅಥವಾ ಅವರ ಸುತ್ತ ಸುತ್ತುವರಿದಿರುವವರು  ಇದಕ್ಕೆ ಅವಕಾಶ ಕೊಡುತ್ತಿಲ್ಲವೇ? ಮುಖಂಡರ ಪತ್ರ ಲೀಕ್‌ ಮಾಡಿದ್ದು ಯಾರು? ಹಿರಿಯರು ಬರೆದ ಪತ್ರದ  ಉದ್ದೇಶ ಏನು ಹಾಗೂ ಅವರ ವಿರುದ್ಧ ಪ್ರಾರಂಭವಾ ಗಿರುವ ಪ್ರತೀಕಾರ ಎಲ್ಲಿಗೆ ಹೋಗಿ ನಿಲ್ಲಬಹುದು ಎಂಬ ಪ್ರಶ್ನೆಗಳು ಮೂಡುತ್ತವೆ.

ಏನೂ ಆಗಲ್ಲ ಎಂದಿದ್ದ ವಿಶ್ವನಾಥ್‌
ರಾಹುಲ್‌ ಗಾಂಧಿ, ಹಿರಿಯ ನಾಯಕರ ಸಲಹೆ ಮತ್ತು ಅಭಿಪ್ರಾಯ ಹೇಗೆ ಪರಿಗಣಿಸುತ್ತಾರೆ ಎಂಬುದಕ್ಕೆ 1978ರಲ್ಲೇ ಕಾಂಗ್ರೆಸ್‌ನಿಂದ ಶಾಸಕರಾಗಿ ದೇವರಾಜ ಅರಸು ಅವರ ಗರಡಿಯಲ್ಲಿ ಪಳಗಿ ಕೆಲವೊಂದು ಕಾರಣಗಳಿಗೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಎಚ್‌. ವಿಶ್ವನಾಥ್‌ ಒಂದು ಪ್ರಸಂಗ ಹೇಳು ತ್ತಾರೆ. 2012ರಲ್ಲಿ ವಿಶ್ವನಾಥ್‌ ಅವರು ಕಾಂಗ್ರೆಸ್‌ ಸಂಸದರಾಗಿದ್ದಾಗ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ರಾಹುಲ್‌ ಗಾಂಧಿ ನಾಯ ಕತ್ವದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಏನಿದೆ? ಸಂಸತ್‌ನ ಸೆಂಟ್ರಲ್‌ ಹಾಲ್‌ನಲ್ಲಿ ರಾಹುಲ್‌ ಬಗ್ಗೆ ಏನೆಲ್ಲ ಗುಸುಗುಸು ನಡೆಯುತ್ತದೆ, ಪಕ್ಷ ಬಲ ವರ್ಧನೆಗೆ ಏನು ಮಾಡಬೇಕು? ಎಂಬ ಅಭಿಪ್ರಾಯ ಪಡೆಯಲು ದೇಶದ 40 ನಾಯಕರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ವಿಶ್ವನಾಥ್‌ ಒಬ್ಬರು.

ಬೆಳಗ್ಗೆ 8.30ಕ್ಕೆ ವಿಶ್ವನಾಥ್‌, ಇದೊಂದು ಚಿಂತನ-ಮಂಥನ ಸಭೆ ಇರಬಹುದು ಎಂದು ಹಾಜರಾಗುತ್ತಾರೆ. ರಾಹುಲ್‌, ‘ಎಸ್‌ ಮಿಸ್ಟರ್‌ ವಿಶ್ವನಾಥ್‌’ ಎಂದಾಗ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ನೇರ ಹಾಗೂ ಖಡಕ್‌ ಆಗಿ ವಿಶ್ವನಾಥ್‌ ಹೇಳಿದರಂತೆ.

‘ಮೊದಲನೆಯದಾಗಿ ನೀವು ಮದುವೆಯಾಗಿ. ನಿಮಗೆ 40 ವರ್ಷ ಆಗಿದೆ. ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಹೆಚ್ಚು ಮಹತ್ವವಿದೆ. ನಿರಂತರವಾಗಿ ಪಕ್ಷದ ಸಂಸದರು ಹಾಗೂ ನಾಯಕರ ಜತೆ ಸಂಪರ್ಕ ವಹಿಸಿ ಸಮಾಲೋಚನೆ ನಡೆಸಿ ಹಿರಿಯರ ಅನುಭವ ಹಾಗೂ ಮಾರ್ಗದರ್ಶನ ದೊಂದಿಗೆ ಕಿರಿಯರ ಜತೆಗೂಡಿಸಿಕೊಂಡು ಪಕ್ಷ ಕಟ್ಟಿ, ಮೊದಲಿಗೆ ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿಕೊಳ್ಳಿ. ನಿಮ್ಮ ಖಾಸಗಿ ಬದುಕು ಹಾಗೂ ವರ್ತನೆಗಳ ಬಗ್ಗೆ ಎಚ್ಚರಿಕೆ ವಹಿಸಿ’ ಎಂದು ಸಲಹೆ ನೀಡಿದರಂತೆ.

ಆಗ ಎದ್ದು ನಿಂತ ರಾಹುಲ್‌ ಗಾಂಧಿ, ಜುಬ್ಟಾದ ಎರಡೂ ಜೇಬುಗಳಿಗೆ ಕೈ ಹಾಕಿ ಆಡಿಸುತ್ತಾ ಓಕೆ ಥ್ಯಾಂಕ್ಸ್‌ ಎಂದು ಸೀಟಿ ಹೊಡೆಯುತ್ತಾ ನಿಂತ ರಂತೆ. ಸಾಕಷ್ಟು ಭರವಸೆ ಹಾಗೂ ನಿರೀಕ್ಷೆಯೊಂದಿಗೆ ಹೋಗಿದ್ದ ನಾನು ಭ್ರಮನಿರಸನದಿಂದ ಎದ್ದು ಬಂದೆ. ಆಗಲೇ ಈ ಮನುಷ್ಯ ಬದಲಾಗದಿದ್ದರೆ ಏನೂ ಆಗಲ್ಲ ಎಂದು ಹೇಳಿದ್ದೆ. ಯಾವ ವಿಚಾರದ ಬಗ್ಗೆಯೂ ಗಂಭೀರತೆ ಇಲ್ಲದ ಚೈಲ್ಡಿಷ್‌ನೆಸ್‌ ರಾಹುಲ್‌ ಗಾಂಧಿ ಯಲ್ಲಿ ಕಂಡೆ ಎಂದು ವಿಶ್ವನಾಥ್‌ ಹೇಳುತ್ತಾರೆ.

ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ಜನಾರ್ದನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ದಿನೇಶ್‌ ಗುಂಡೂರಾವ್‌, ಎಸ್‌.ಆರ್‌. ಪಾಟೀಲ್‌ ಸಹಿತ ಎಲ್ಲ ನಾಯಕರು ಸೋನಿಯಾ ಗಾಂಧಿ, ಇಲ್ಲ ವೇ ರಾಹುಲ್‌ ಗಾಂಧಿಗೆ ಜೈ ಜೈ. ಪ್ರಿಯಾಂಕ ಗಾಂಧಿ ಆದರೂ ಸೈ ಎಂಬಂತೆ ತಲೆ ಅಲ್ಲಾ ಡಿಸಿ ಬಹುಪರಾಕ್‌ ಹೇಳಿದ್ದಾರೆ. ಪತ್ರವನ್ನೂ ಬರೆದು ಗಾಂಧಿ ಕುಟುಂಬಕ್ಕೆ ನಿಷ್ಠೆ    ಪ್ರದರ್ಶಿಸಿದ್ದಾರೆ. ಇಲ್ಲೂ ರಾಜ್ಯದ ನಾಯ ಕರಿಗೆ ತಮ್ಮ ಅಸ್ವಿತ್ವ ಕಾಪಾಡಿಕೊಳ್ಳುವ ತವಕ.ಜತೆಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅನಿವಾರ್ಯತೆ.

ರಾಜ್ಯದಲ್ಲೂ ಗುಂಪುಗಾರಿಕೆ
ಎಐಸಿಸಿಯಷ್ಟೇ ಅಲ್ಲ ರಾಜ್ಯ ಕಾಂಗ್ರೆಸ್‌ನಲ್ಲೂ ಗುಂಪುಗಾರಿಕೆ ಲಕ್ಷಣಗಳು ಒಂದೊಂದಾಗಿಯೇ ಬಹಿರಂಗಗೊಳ್ಳುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಶಾಸ ಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು “ಎರಡು ಪವರ್‌’ ಸೆಂಟರ್‌ಗಳಾಗಿದ್ದು ತಮ್ಮ ತಮ್ಮ ಬೆಂಬಲಿಗರ ಹಿತಾಸಕ್ತಿ ಕಾಪಾಡುವುದೇ ಒನ್‌ ಪಾಯಿಂಟ್‌ ಅಜೆಂಡಾ ಎಂಬಂತಾಗಿದೆ.

ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರದು ಮತ್ತೂಂದು ಟೀಂ, ಎರಡು ಪವರ್‌ ಸೆಂಟರ್‌ಗಳ ನಡುವೆ ಯಾವ ಕಡೆ ವಾಲುವುದು ಎಂಬುದು ಗೊತ್ತಾಗದೆ ಆ ಟೀಂ ಒದ್ದಾಡುತ್ತಿದೆ. ರಾಷ್ಟ್ರಮಟ್ಟದಲ್ಲಿ ಆಮೂಲಾಗ್ರ ಬದಲಾವಣೆ ಧ್ವನಿ ಎತ್ತಿದ ಹಿರಿಯ ನಾಯಕರ ಕಟ್ಟಾ ಬೆಂಬಲಿಗರೂ ರಾಜ್ಯದಲ್ಲಿ ಇದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಸಿದ್ದರಾಮಯ್ಯ ಅವರ ಜತೆ ಗುರುತಿಸಿಕೊಂಡ ವರಿಗೆ ಮನ್ನಣೆ ಸಿಗುತ್ತಿಲ್ಲ. ಪಕ್ಷದ ಕಾರ್ಯ ಕ್ರಮಗಳಲ್ಲಿ, ಪ್ರಮುಖ ತೀರ್ಮಾನ ಗಳಲ್ಲಿ ಪರಿಗಣಿಸುತ್ತಿಲ್ಲ ಎಂಬ ಅಸಮಾಧಾನ ಹೊಗೆ ಯಾಡುತ್ತಿದೆ. ಇದರ ಲಾಭ ಪಡೆಯಲು ಜೆಡಿಎಸ್‌ ಪೂರ್ವತ ಯಾರಿ ಮಾಡಿಕೊ ಳ್ಳುತ್ತಿದ್ದಂತೆ ಕಾಣುತ್ತಿದೆ. ಬಿಜೆಪಿಯೂ ಇದೇ ನಮಗೂ ಬೇಕಾಗಿದ್ದು ಎಂದು ಒಳಗೊಳಗೇ ಖುಷಿ ಪಡುತ್ತಿದೆ.

– ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next