Advertisement

ದೇಶದಲ್ಲಿ ತ್ರಿಭಾಷಾ ನೀತಿ ಒಪ್ಪಿದವರು ಕಾಂಗ್ರೆಸ್ ಪಕ್ಷದವರೇ: ಸಚಿವ ಸಿ.ಟಿ ರವಿ

04:48 PM Sep 14, 2020 | keerthan |

ಮಂಡ್ಯ: ದೇಶದಲ್ಲಿ ತ್ರಿಭಾಷಾ ನೀತಿ ಒಪ್ಪಿಕೊಂಡಿದ್ದೇ ಕಾಂಗ್ರೆಸ್ ಪಕ್ಷವಾಗಿದ್ದು, ಈಗ ಗೋಸುಂಬೆತನದ ಮನೋಭಾವದವರು ಎಂಬುದನ್ನು ಒಪ್ಪಿ ಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿಭಾಷಾ ನೀತಿಗೆ ಬಿಜೆಪಿ ಮುಂದಾಗಿದೆ ಎಂಬ ಕಾಂಗ್ರೆಸ್ ಶಾಸಕ ದಿನೇಶ್‌ ಗುಂಡೂರಾವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ದೇಶದ ಸಂವಿಧಾನ ಬರೆದವರು ಅಂಬೇಡ್ಕರ್ ಅವರು. ಆಗ ಬಿಜೆಪಿ, ಜನಸಂಘ ಪರಿವಾರ ಪ್ರಬಲವಾಗಿರಲಿಲ್ಲ. ಇದ್ದದ್ದು ಕಾಂಗ್ರೆಸ್ ಮಾತ್ರ. ಅದನ್ನು ಒಪ್ಪಿಕೊಂಡಿದ್ದವರು ಕಾಂಗ್ರೆಸ್‌ನವರು. ಈಗ ತಾವು ನಾಟಕಕಾರರು, ಗೋಸುಂಬೆತನದ ಮನೋಭಾವದವರು ಎನ್ನುವುದು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಂದಿ ಹೇರಿಕೆ ಇಲ್ಲ: ಕೇಂದ್ರದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಹಾಗೂ ರಾಜ್ಯ ಭಾಷೆಯಲ್ಲಿ ಆಗಬೇಕು ಎಂಬುದಕ್ಕೆ ಒತ್ತು ನೀಡಿದೆ. ಯಾವ ಭಾಷೆಯನ್ನಾದರೂ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. 22 ಭಾಷೆಗಳಲ್ಲಿ ಯಾವ ಭಾಷೆಯಲ್ಲಾದರೂ ಕಲಿಯಬಹುದು ಎಂಬ ಆಯ್ಕೆ ನೀಡಿದೆ. ಹೇರಿಕೆಗೆ ಬಿಜೆಪಿ ಎಂದಿಗೂ ಬೆಂಬಲಿಸಿಲ್ಲ. ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆ. ತ್ರಿಭಾಷಾ ಸೂತ್ರದಲ್ಲಿ ಹೇರಿಕೆ ಇಲ್ಲ. ಇದೊಂದು ರೀತಿಯ ಫ್ಯಾಷನ್ ಆಗಿದೆ ಎಂದರು.

ಕನ್ನಡದ ಪರವಾದ ಹೋರಾಟ ಒಪ್ಪುವಂಥದ್ದು. ಆದರೆ ಹಿಂದಿ ಭಾಷೆಯ ನೆಪದಲ್ಲಿ ಕೇಂದ್ರ ರಾಜ್ಯದ ನಡುವೆ ಸಂಘರ್ಷ ತಂದಿಡುವ ಷಡ್ಯಂತ್ರ ನಡೆಯುತ್ತಿದೆ. ನಾನೂ ಕನ್ನಡಿಗ, ನನಗೂ ಕನ್ನಡ ಭಾಷೆ ಬೇಕು. ಆದರೆ ರಾಜ್ಯದಲ್ಲಿ ಹಿಂದಿ ಹೇರಿಕೆ ವಿಚಾರದಲ್ಲಿ ಕನ್ನಡ ಶಾಲೆ ಮುಚ್ಚಿರುವ ಒಂದು ಉದಾಹರಣೆ ತೋರಿಸಲಿ. ಆದರೆ ಇಂಗ್ಲೀಷ್ ಭಾಷೆ ವಿಚಾರದಲ್ಲಿ ಸಾವಿರಾರು ಶಾಲೆಗಳನ್ನು ಮುಚ್ಚಲಾಗಿದೆ. ಇಂಥ ಆಷಾಢಭೂತಿ ಮನೋಭಾವ ಏಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:  14 ದಿನಗಳ ಕಾಲ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರಕ್ಕೆ ನಟಿ ರಾಗಿಣಿ

Advertisement

ಭಾಷೆಯಾಗಿ ಇಂಗ್ಲೀಷ್ ಅನ್ನು ಚೆನ್ನಾಗಿ ಕಲಿಯಬೇಕು. ಆದರೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಆಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ತ್ರಿಭಾಷಾ ಸೂತ್ರ ಇದೆ. ಆದರೆ ಹೇರಿಕೆ ಇಲ್ಲ. ಆಯ್ಕೆ ಹಾಗೂ ಹೇರಿಕೆ ವಿಚಾರದಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂದರು.

ನಟಿ ರಾಗಿಣಿ, ಸಂಜನಾ ಕಿಂಗ್‌ಪಿನ್‌ಗಳಲ್ಲ: ಡ್ರಗ್ಸ್ ದಂಧೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಹಿಂದೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಪ್ರಕರಣದಲ್ಲೂ ಡ್ರಗ್ಸ್ ಇತ್ತು ಎಂಬುದು ತಿಳಿದಿದೆ. ಆದರೆ ಆಗ ಇಷ್ಟೊಂದು ಗಂಭೀರ ತನಿಖೆ ನಡೆದಿಲ್ಲ. ಆದರೆ ಬಿಜೆಪಿ ಸರ್ಕಾರ ಇದೇ ಮೊದಲ ಬಾರಿಗೆ ಗಂಭೀರ ತನಿಖೆ ನಡೆಯುತ್ತಿದೆ. ನಟಿ ರಾಗಿಣಿ, ಸಂಜನಾ ಕಿಂಗ್‌ಪಿನ್‌ಗಳು ಅನಿಸುತ್ತಿಲ್ಲ. ಕಿಂಗ್‌ಪಿನ್‌ಗಳು ಬೇರೆಯವರಿದ್ದಾರೆ. ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ಅವರ ಮುಖಭಾವ ನೋಡಿದರೆ ನಮ್ಮ ಸಂಬಂಧ ಈಗಿನದ್ದಲ್ಲ. ಜನ್ಮ ಜನ್ಮಾಂತರದ್ದು ಎಂಬ ಭಾವನೆ ತೋರಿಸುತ್ತಿದೆ. ಇದಕ್ಕೆ ಅವರೇ ಉತ್ತರ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಜಮೀರ್ ಪರ ಮಾತನಾಡಿ ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ: ಶೆಟ್ಟರ್

ಕೊಲಂಬೋಗೆ ಎಷ್ಟು ಸಲ ಹೋಗಿದ್ದೀರಾ?: ಜಮೀರ್ ಅಹಮದ್ ಖಾನ್ ಅವರು ಕೊಲಂಬೋ ಹೋಗುವುದು ತಪ್ಪಲ್ಲ. ಆದರೆ ಅತಿವೃಷ್ಟಿಗೆ ನಿಧಿ ಸಂಗ್ರಹಕ್ಕೆ ಹೋಗಿದ್ದರಾ ಎಂಬುದನ್ನು ಸ್ಪಷ್ಟಪಡಿಸಬೇಕು. ಸಾರ್ವಜನಿಕ ಜೀವನದಲ್ಲಿರುವವರು ಜನರಿಗೆ ತಿಳಿಸಬೇಕು. ಕೊಲಂಬೋದಲ್ಲಿ ಅವರ ವ್ಯವಹಾರ ಇದೆಯೇ? ಸಂಬಣಧಿಕರು ಇದ್ದಾರೆಯೇ?, ವರ್ಷಕ್ಕೆ ಎಷ್ಟು ಸಲ ಹೋಗುತ್ತೀರಾ?, ಯಾವ ಉದ್ದೇಶಕ್ಕೆ ಹೋಗಿದ್ದೀರಾ ಎಂಬುದನ್ನು ಬಹಿರಂಗಪಡಿಸಬೇಕು. ಸಂಶಯ ಪರಿಹರಿಸಬೇಕು. ಉತ್ತರದಾಯಿತ್ವ ಕೇವಲ ಕುಟುಂಬಕ್ಕೆ, ಪಕ್ಷಕ್ಕೆ ಮಾತ್ರವಲ್ಲ. ಅದು ಸಾರ್ವಜನಿಕವಾಗಿದೆ ಎಂದರು.

ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಇವರನ್ನು ಅವರು ಕೆಡಿಸಿದ್ದಾರೋ, ಇವರೇ ಅವರನ್ನು ಕೆಡಿಸಿದ್ದಾರೋ ಗೊತ್ತಿಲ್ಲ. ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next