Advertisement

ಕಾಂಗ್ರೆಸ್‌ ಶಾಸಕರಿಂದಸಂಪತ್ತು ಲೂಟಿ: ಸಂಗಣ್ಣ

04:43 PM Aug 29, 2017 | |

ಬಳಗಾನೂರು: ರಾಜ್ಯದಲ್ಲಿ ಇರುವ ಸಂಪತ್ತನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಸಂಪೂರ್ಣ ವಿಫಲವಾಗಿದೆ. ಕೇವಲ ಕಾಂಗ್ರೆಸ್‌ ಶಾಸಕರಿಗೆ ಮಾತ್ರ ಅಕ್ರಮ ಮರಳು ದಂಧೆಗೆ ಅವಕಾಶ ಕಲ್ಪಿಸುವ ಮೂಲಕ ರಾಜ್ಯದ ಸಂಪತ್ತು ಲೂಟಿ ಮಾಡುತ್ತಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಆರೋಪಿಸಿದರು. ಪಟ್ಟಣದ ಶ್ರೀ ಬಸವೇಶ್ವರ ಎಚ್‌.ಪಿ. ಗ್ಯಾಸ್‌ ಗ್ರಾಮೀಣ ವಿತರಣೆ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್‌ ಕಿಟ್‌ ವಿತರಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಕೊಂಡು ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ. ದ್ವೇಷದ ರಾಜಕಾರಣ, ನೀಚ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್‌ ಸರಕಾರಕ್ಕೆ 2018ರ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಕೇಂದ್ರ ಸರಕಾರ ಜನಧನ, ಸ್ವತ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ, ಸುಖನ್ಯಾ ಸಮೃದ್ಧಿ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ರಾಜ್ಯ ಸರಕಾರ ಈ ಎಲ್ಲ ಯೋಜನೆಗಳನ್ನು ಮುಚ್ಚಿಟ್ಟಿದೆ ಎಂದು ಆರೋಪಿಸಿದರು. ಕೇಂದ್ರ ಸರಕಾರದ ಪ್ರಧಾನಮಂತ್ರಿ ಉಜ್ಜಲ ಯೋಜನೆಯಡಿ ಬಳಗಾನೂರು ಪಟ್ಟಣದಲ್ಲಿ ಸುಮಾರು 800 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಸುಮಾರು 400 ಫಲಾನುಭವಿಗಳಿಗೆ ಗ್ಯಾಸ್‌ ಕಿಟ್‌ ವಿತರಿಸಲಾಗಿದೆ. ಇನ್ನುಳಿದ 400 ಫಲಾನುಭವಿಗಳಿಗೆ ಶೀಘ್ರದಲ್ಲಿ ಗ್ಯಾಸ್‌ ಕಿಟ್‌ ವಿತರಸಲಾಗುತ್ತದೆ ಎಂದರು. ರೈಲ್ವೆ ಮಾರ್ಗ ಚಿಕ್ಕಬೆಣಕಲ್‌ ವರೆಗೆ ಪೂರ್ಣಗೊಂಡು ರೈಲು ಸಂಚಾರ ಆರಂಭವಾಗಿದೆ. ಶೀಘ್ರದಲ್ಲಿ ಗಂಗಾವತಿ ನಗರದವರೆಗೆ ರೈಲು ಸಂಚಾರ ಆರಂಭವಾಗಲಿದೆ. ತಮ್ಮ ಅಧಿಕಾರ ಅವಧಿಯೊಳಗೆ ಸಿಂಧನೂರುವರೆಗೆ ರೈಲು ಸಂಚಾರ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು. ಸ್ವತ್ಛ ಭಾರತ ಅಭಿಯಾನ ಆರಂಭಿಸುವ ಮೂಲಕ ಸ್ವತ್ಛತೆ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುಲು ದೇಶಾದ್ಯಂತ ಜಾಗೃತಿ ಮೂಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀ ಜಿ ಅವರು ಕಂಡ ಕನಸು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ರಡ್ಡಿ ಅಮೀನಗಡ, ಬಿಜೆಪಿ ಹಿರಿಯ ಮುಖಂಡರಾದ. ಮಹಾದೇವಪ್ಪಗೌಡ, ಆರ್‌. ಬಸನಗೌಡ ತುರ್ವಿಹಾಳ, ತಿಮ್ಮನಗೌಡ ಗುಡದೂರು
ಮಾತನಾಡಿದರು. ಶ್ರೀ ಬಸವೇಶ್ವರ ಎಚ್‌.ಪಿ. ಗ್ಯಾಸ ಗ್ರಾಮೀಣ ವಿತರಣ ಕೇಂದ್ರದ ನಟರಾಜ ಕೊಂಡ, ಮುಖಂಡರಾದ ಸಿಂಧನೂರು ರಾಜಶೇಖರ ಪಾಟೀಲ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಬಸನಗೌಡ, ಸಿದ್ದನಗೌಡ ಮಾಟೂರು, ಬಸನಗೌಡ ಮುದೇಗೌಡರ, ಆರ್‌. ಮಲ್ಲಣ್ಣ ಹಾಲಾಪುರ, ದೊಡ್ಡನಗೌಡ ಜಂಗಮರಳ್ಳಿ, ಬಸಣ್ಣ ತಂತನಾಳ, ಶಂಕರಗೌಡ ಕನ್ನಾಳ, ಅಯ್ಯಣ್ಣ ನಾಗರಬೆಂಚಿ,
ಕೃಷ್ಣಾ ಚಿಗರಿ, ವಿಶ್ವನಾಥ ರಡ್ಡಿ, ಶಕ್ತಿ ಕೇಂದ್ರದ ಅಧ್ಯಕ್ಷ ರಾಜಶೇಖರ, ಪಪಂ ಸದಸ್ಯೆ ನೂರಜಹಾನ ಬೇಗಂ, ವೀರನಗೌಡ ಗದ್ದಿ, ಮಂಜುನಾಥ, ಮುದುಕಪ್ಪ, ಇಸ್ಮಾಯಿಲ್‌ಸಾಬ್‌ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next