Advertisement

ಇಂದೇ ಖಾತೆ ಹಂಚಿಕೆ ಫೈನಲ್‌ ?; ಮುಂದುವರಿದ ಮನವೊಲಿಕೆ ಕಸರತ್ತು 

11:35 AM Dec 26, 2018 | |

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನ ಕೆಲ ಶಾಸಕರ ಬಂಡಾಯದಿಂದ ಕಂಗೆಟ್ಟಿರುವ ಕಾಂಗ್ರೆಸ್‌, ಮನವೊಲಿಕೆ ಕಸರತ್ತು ಮುಂದುವರಿಸಿದೆ. ಇನ್ನೊಂದೆಡೆ ಖಾಸಗಿ ಹೊಟೇಲ್‌ನಲ್ಲಿ ಮಹತ್ವದ ಸಭೆ ನಡೆಸಿರುವ ಕಾಂಗ್ರೆಸ್‌ ನಾಯಕರು ನೂತನ ಸಚಿವರಿಗೆ ಖಾತೆ ಹಂಚಿಕೆಯನ್ನು ಬುಧವಾರ ಸಂಜೆಯೊಳಗೆ ಅಂತಿಮಗೊಳಿಸಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.

Advertisement

ಬೆಂಗಳೂರಿನಲ್ಲಿ ಪ್ರತಿಭಟನೆ,ಮನವೊಲಿಕೆ 
ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದರು. ಮೇಯರ್‌ ಗಂಗಾಂಬಿಕೆ, ಮಾಜಿ ಮೇಯರ್‌ ಪದ್ಮಾವತಿ, ಮಂಜುನಾಥ್‌ ರೆಡ್ಡಿ ಮತ್ತು ಕಾಂಗ್ರೆಸ್‌ ಕಾರ್ಪೋರೇಟರ್‌ಗಳು ಪ್ರತಿಭಟನೆಯಲ್ಲಿ ಭಾಗಿಯಾದರು. 

ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಅವರು ರಾಮಲಿಂಗಾ ರೆಡ್ಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದು, ಲೋಕಸಭಾ ಚುನಾವಣೆಯ ವರೆಗೆ ತಾಳ್ಮೆಯಿಂದಿರುವಂತೆ ಮನವಿ ಮಾಡಿದ್ದಾರೆ.

ರಮೇಶ್‌ ಜಾರಕಿಹೊಳಿ ಮನವೊಲಿಕೆಗೆ ಕಸರತ್ತು
ಈಗಾಗಲೇ ರಾಜೀನಾಮೆ ಬೆದರಿಕೆ ಹಾಕಿ ಬೆಂಬಲಿಗರೊಂದಿಗೆ ಚರ್ಚೆಯಲ್ಲಿ ನಿರತರಾಗುವ ಮೂಲಕ ಪಕ್ಷಕ್ಕೆ  ಭಾರಿ ಶಾಕ್‌ ನೀಡಿರುವ ರಮೇಶ್‌ ಜಾರಕಿ ಹೊಳಿ ಅವರನ್ನು ತಣ್ಣಗಾಗಿಸಲು ಸಹೋದರ, ಸಚಿವ ಸತೀಶ್‌ ಜಾರಕಿಹೊಳಿ ಅವರ ಮೂಲಕ ಕಾಂಗ್ರೆಸ್‌ ನಾಯಕರು ಕಸರತ್ತು ಆರಂಭಿಸಿದ್ದಾರೆ. ಲಖನ್‌ ಜಾರಕಿಹೊಳಿ ಅವರನ್ನೂ ಸಂಪರ್ಕಿಸಿರುವುದಾಗಿ ವರದಿಯಾಗಿದೆ.

ಖಾತೆಗಳಿಗೆ ಪಟ್ಟು, ಕಗ್ಗಂಟು
ಸಚಿವ ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ ಅವರು ಕೆಲ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದು ಕಾಂಗ್ರೆಸ್‌ ನಾಯಕರಿಗೆ ಕಗ್ಗಂಟಾಗಿದೆ ಎಂದು ಹೇಳಲಾಗಿದೆ. ಇಂದು ಸಂಜೆಯ ಒಳಗೆ ಖಾತೆಗಳನ್ನು ಹಂಚಿಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next