ಹೊಸದಿಲ್ಲಿ: ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ, ಹಾಲಿ ಸಂಸದ ಶಶಿ ತರೂರ್ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ.
“ಕಾಂಗ್ರೆಸ್ ಪಕ್ಷವು ನನ್ನ ಸ್ಥಾನವನ್ನು ಉಳಿಸಿಕೊಳ್ಳಲು ನನಗೆ ಅವಕಾಶ ನೀಡಿರುವುದು ನನಗೆ ನೀಡಿದ ಗೌರವವಾಗಿದ್ದು ನಾನು ವಿನಮ್ರವಾಗಿದ್ದೇನೆ. ನಾನು ನ್ಯಾಯಯುತ ಮತ್ತು ಪರಿಣಾಮಕಾರಿ ಸ್ಪರ್ಧೆಯನ್ನು ಎದುರು ನೋಡುತ್ತಿದ್ದೇನೆ. 15 ವರ್ಷಗಳ ರಾಜಕೀಯದಲ್ಲಿ, ನಾನು ಎಂದಿಗೂ ನಕಾರಾತ್ಮಕ ಪ್ರಚಾರದ ದಿನವನ್ನು ಕಳೆಯಬೇಕಾದ ಸಂದರ್ಭ ಬಂದಿಲ್ಲ” ಎಂದು ಹೇಳಿದ್ದಾರೆ.
”ಈ ಬಾರಿ 303 ಸಂಖ್ಯೆ ಪುನರಾವರ್ತಿಸಲು ಬಿಜೆಪಿಗೆ ತುಂಬಾ ಕಠಿಣವಾಗಿದೆ. ಬಿಜೆಪಿ ಸರ್ಕಾರವನ್ನು ಕಳೆದುಕೊಳ್ಳಲಿದೆ ಎಂದು ನನಗೆ ಮನವರಿಕೆಯಾಗಿದೆ. ಕೆಲವರು ಬಿಜೆಪಿಯನ್ನೂ ತೊರೆದು ಬೇರೆ ಕಡೆ ಹೊರಟಿದ್ದಾರೆ. ನಿಸ್ಸಂಶಯವಾಗಿ, ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿರುವ ನಾವು ಜನರ ಸೇವೆ ಮಾಡುವ ಅವಕಾಶಗಳನ್ನು ಕಂಡಿದ್ದೇವೆ ಮತ್ತು ಅದಕ್ಕಾಗಿಯೇ ನಾವು ರಾಜಕೀಯದಲ್ಲಿದ್ದೇವೆ. ನಾನು ತಿರುವನಂತಪುರದಲ್ಲಿ ಮಾಡುತ್ತಿರುವುದು ಅದನ್ನೇ. ನನ್ನ ಕ್ಷೇತ್ರದ ಜನರ ಸೇವೆ ಮಾಡಲು ಬಂದಿದ್ದೇನೆ” ಎಂದು ಹೇಳಿದ್ದಾರೆ.
ತಿರುವನಂತಪುರಂ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಅವರು ಕಣಕ್ಕಿಳಿದಿದ್ದು ಈ ಬಾರಿ ತುರುಸಿನ ಸ್ಪರ್ಧೆ ಅಂದಾಜಿಸಲಾಗಿದೆ. ಸಿಪಿಐ ಕೂಡ ಮಾಜಿ ಸಂಸದ ಪನ್ನಿಯನ್ ರವೀಂದ್ರನ್ ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದ್ದು, ಹೈವೋಲ್ಟೇಜ್ ಕ್ಷೇತ್ರವಾಗಿ ಕಂಡು ಬಂದಿದೆ.
2019 ರಲ್ಲಿ ತರೂರ್ ಅವರು 416,131 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಕಮ್ಮಮ್ ರಾಜಶೇಖರನ್ ವಿರುದ್ಧ ಜಯಶಾಲಿಯಾಗಿದ್ದರು. ರಾಜಶೇಖರನ್ ಅವರು 3,16,142 ಮತಗಳನ್ನು ಪಡೆದು ಪ್ರಬಲ ಸ್ಪರ್ಧೆ ನೀಡಿದ್ದರು. ಸಿಪಿಐ ಅಭ್ಯರ್ಥಿ ದಿವಾಕರನ್ 2,58,556 ಮತಗಳನ್ನು ಪಡೆದಿದ್ದರು.
2014 ರಲ್ಲಿ ತರೂರ್ ಅವರು ಬಿಜೆಪಿ ನಾಯಕ ಓ.ರಾಜಗೋಪಾಲ್ ವಿರುದ್ಧ 15,470 ಮತಗಳ ಅಂತರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.