Advertisement

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

04:14 PM Jun 19, 2024 | Team Udayavani |

ಕಡಬ: ನೆಲ್ಯಾಡಿ ಗ್ರಾಮದ ವ್ಯಕ್ತಿಯೋರ್ವರ ಪಹಣಿಯಲ್ಲಿ ಇಲಾಖೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಹೆಚ್ಚುವರಿಯಾಗಿ ಸ್ಟಾರ್ ಸಿಂಬಲ್ ಬಂದಿದ್ದು, ಅದರಿಂದ ಜಾಗದ ಮಾಲಕ ಜಾನ್ ರವರಿಗೆ ಜಾಗವನ್ನು ಮಾರಾಟ ಮಾಡಲು ಹಾಗೂ ಇನ್ನಿತರ ಯಾವುದೇ ಕೆಲಸಗಳಿಗೆ ತೊಂದರೆ ಉಂಟಾಗಿತ್ತು, ಈ ಹಿನ್ನಲೆಯಲ್ಲಿ ಅವರು ತಿದ್ದುಪಡಿಗಾಗಿ ಕಡಬ ಸರ್ವೆ ಇಲಾಖೆಗೆ ಅರ್ಜಿ ನೀಡಿದ್ದು. ತಿದ್ದುಪಡಿಗೆ ಕೊಟ್ಟು ಮೂರು ತಿಂಗಳಾದರೂ ಸತಾಯಿಸುತ್ತಿರುವ ಸರ್ವೆ ಇಲಾಖೆಯ ಅಧಿಕಾರಿಗಳನ್ನು ಕಾಂಗ್ರೆಸ್ ಮುಖಂಡರೋರ್ವರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ (ಜೂ.19ರಂದು) ನಡೆದಿದೆ.

Advertisement

ಕಡಬ ಸರ್ವೆ ಇಲಾಖೆಯಲ್ಲಿ  ಮೂರು ತಿಂಗಳಿನಿಂದ ಕೆಲಸ ಮಾಡಿ ಕೊಡದೆ ಸತಾಯಿಸುತ್ತಿದ್ದು ಈ ಬಗ್ಗೆ ಜಾನ್ ಅವರು ಕಡಬದ ಕಾಂಗ್ರೆಸ್ ಮುಖಂಡ ರಾಯ್ ಅಬ್ರಹಾಂ ಪದವು ಅವರಲ್ಲಿ ವಿಷಯ ತಿಳಿಸಿದ್ದಾರೆ.

ಜೂ.19ರಂದು ಸರ್ವೆ ಇಲಾಖೆ ಕಚೇರಿಗೆ ಆಗಮಿಸಿದ ರಾಯ್ ಅಬ್ರಹಾಂ ಹಾಗೂ ಜೆಡಿಎಸ್ ಮುಖಂಡ ಸೈಯದ್ ಮೀರಾ ಸಾಹೇಬ್ ಅವರು ಎಡಿಎಲ್ಆರ್ ಶ್ರೀನಿವಾಸ ಮೂರ್ತಿ  ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸೂಪರ್ವೈಸರ್ ಚಂದ್ರಶೇಖರ ಮೂರ್ತಿ  ಅವರನ್ನು ಕರೆಯುವಂತೆ ಹೇಳಿದರು. ಸೂಪರ್ ವೈಸರ್ ಸೇರಿದಂತೆ ತಮ್ಮ ಕೆಳಗಿನ ಅಧಿಕಾರಿ, ಸಿಬ್ಬಂದಿಯ ವರನ್ನು ತನ್ನ ಚೆಂಬರ್‌ ಗೆ ಕರೆಯಲು ಶ್ರೀನಿವಾಸ್ ಮೂರ್ತಿ ಹಿಂಜರಿದಾಗ  ಮತ್ತೆ ತರಾಟೆಗೆ ತೆಗೆದುಕೊಂಡ ರಾಯ್ ಅಬ್ರಹಾಂ ಅವರು ಏನು ನಿಮ್ಮ ಕಛೇರಿಯ ಅಧಿಕಾರಿಗಳು ನಿಮ್ಮ ಕಂಟ್ರೋಲ್ ನಲ್ಲಿ  ಇಲ್ವ, ಇಲ್ಲಿ ಎಲ್ಲ ಕೆಲಸಕ್ಕೂ ದುಡ್ಡು ಕೊಡಬೇಕಲ್ವ, ರೆಕಾರ್ಡ್  ಪಡೆಯುವುದಕ್ಕೆ ಮತ್ತು ಸರ್ವೆ ಕೆಲಸಗಳಿಗೆ ಎಷ್ಟು ದುಡ್ಡು ಪಡೆಯುತ್ತಿದ್ದೀರಿ, 50 ಸೆಂಟ್ಸ್ ಜಾಗಕ್ಕೆ 50 ಸಾವಿರ, 75 ಸೆಂಟ್ಸ್ಗೆ 75 ಸಾವಿರ, 1 ಎಕ್ರೆಗೆ 1 ಲಕ್ಷದಂತೆ ತಗೊಳ್ತ ಇದ್ದೀರಲ್ವಾ. ಏನು ನಿಮಗೆ ಸ್ವಲ್ಪನೂ ಮಾನ ಮರ್ಯಾದಿ ಇಲ್ವ, ಬಡವರಿಂದ ಈ ರೀತಿಯಾಗಿ ಹಣ ಪಡೆದು ಅವರನ್ನು ಸತಾಯಿಸುತ್ತಿದ್ದಿರಲ್ವ, ಹಣ ಕೊಡದಿದ್ದರೆ ಅರಣ್ಯ ಎಂದು ಸುಲಭದಲ್ಲಿ ಬರೆದು ಹಾಕ್ತೀರಿ, ದುಡ್ಡು ಕೊಟ್ಟವರಿಗೆ ಅರಣ್ಯನೂ ಇಲ್ಲ, ಸಾರ್ವಜನಿಕ ಕೆರೆಯೂ ಆಗ್ತದೆ, ಏನು ನೀವು ಇಲ್ಲಿ ಜಾಗ ಮಾರಾಟ ಮಾಡಲು ಕೂತಿದ್ದೀರಾ ಅಥವ ಜನರ ಸೇವೆ ಮಾಡಲು ಇದ್ದಿರಾ.  ಸ್ವಲ್ಪ ಯೋಚನೆ ಮಾಡಿ ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ರೋಯಿ ಅಬ್ರಹಾಂ ಅವರು ಜಾನ್ ಅವರ ಸಮಸ್ಯೆಯನ್ನು ಈಗಲೇ ಸರಿ ಮಾಡಿಕೊಡುವಂತೆ ಪಟ್ಟು ಹಿಡಿದರು, ಬಳಿಕ ಈ ಬಗ್ಗೆ ದಾಖಲಾತಿಗಳ ಪ್ರಕ್ರಿಯೆ ಪ್ರಾರಂಭ ಮಾಡಿದ ಸೂಪರ್ವೈಸರ್ ಅವರು ಕೂಡಲೇ ಮಾಡಿ ಕೊಡುತ್ತೇನೆ ಎಂದು ಒಪ್ಪಿಕೊಂಡರು.

ಈ ವೇಳೆ ಕಚೇರಿಗೆ ಬಂದಿದ್ದ ಹಲವಾರು ಸಾರ್ವಜನಿಕರು ನಮ್ಮನ್ನು ಹಲವು ತಿಂಗಳುಗಳಿಂದ ಸತಾಯಿಸುತ್ತಿದ್ದಾರೆ ಇವರಿಗೆ ದೇವರೇ ಶಿಕ್ಷೆ ಕೊಡಬೇಕಷ್ಟೆ ಎಂದು ಹೇಳಿಕೊಳ್ಳುತ್ತಿದ್ದರು.

ಕಡಬ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯನ್ನು ಕೇಳುವವರು ಯಾರು?:

Advertisement

ಇದೇ ಸಂದರ್ಭದಲ್ಲಿ ಅಲ್ಲಿದ್ದ ಹಲವಾರು ಅರ್ಜಿದಾರರು ಪ್ರತಿಕ್ರಿಯೆ ನೀಡಿ, ಇಲ್ಲಿ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯಲ್ಲಿ ಹಣ ಕೊಡದೆ ಒಂದು ಕಡತ ಮುಂದಕ್ಕೆ ಹೋಗುವುದಿಲ್ಲ, ಇವರನ್ನು ಕೇಳುವವರು ಯಾರು.  ಇಲ್ಲಿ ಜನಪ್ರತಿನಿಧಿಗಳೇ ಬ್ರೋಕರ್ ಗಳ ಹಾಗೆ ಕೆಲಸ ಮಾಡುತ್ತಿದ್ದಾರೆ, ಅದೇ ಈ ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆಯಾಗಿದೆ. ಈ ಮಧ್ಯೆ ಬಡವರು ತಮ್ಮ ಕೆಲಸಕ್ಕೆ ಪ್ರತಿದಿನ ಬರುವುದನ್ನು ತಪ್ಪಿಸಲು ದುಡ್ಡು ಕೊಟ್ಟು ಹೇಗಾದರೂ ಮಾಡಿಸುತ್ತಿದ್ದಾರೆ. ಇದು ಕಡಬದ ಪರಿಸ್ಥಿತಿ, ದೊಡ್ಡ ಅಧಿಕಾರಿಗಳು ದುಡ್ಡು ಕೇಳಿಯೇ ಪಡೆಯುತ್ತಿದ್ದಾರೆ, ಮತ್ತೆ ಅವರ ಕೆಳಗಿನ ಅಧಿಕಾರಿಗಳಿಗೆ ಯಾವ ಭಯವೂ ಇಲ್ಲದೆ ರಾಜಾರೋಷವಾಗಿ ಲಂಚ ಪಡೆಯುತ್ತಿದ್ದಾರೆ ಎಂದು  ಅಲ್ಲಿದ್ದ ಜನರು ಹೇಳುತ್ತಿದ್ದುದು ಕೇಳಿಬಂತು.

Advertisement

Udayavani is now on Telegram. Click here to join our channel and stay updated with the latest news.

Next