Advertisement

ಕಾಂಗ್ರೆಸ್‌ಗೆ ಪ್ರತ್ಯಸ್ತ್ರವಾಯಿತು ಬಿಜೆಪಿ ಕಮಿಷನ್‌ ಆರೋಪ

10:56 PM May 13, 2023 | Team Udayavani |

ಬೆಂಗಳೂರು: ಅದು 2018ರ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭ. ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ “ಇದು 10 ಪರ್ಸೆಂಟ್‌ ಕಮಿಷನ್‌ ಸರ್ಕಾರ” ಎಂಬ ಗಂಭೀರ ಆರೋಪ ಮಾಡಿದ್ದರು. ಬಿಜೆಪಿಯನ್ನು ಗೆಲುವಿನ ದಡ ಸೇರಿಸುವಲ್ಲಿ ಆ ಕಳಂಕ ಕೂಡ ಪ್ರಮುಖ ಕಾರಣವಾಯಿತು. ಈಗ ಅದೇ ಅಸ್ತ್ರವನ್ನು ಕಾಂಗ್ರೆಸ್‌ ಈ ಬಾರಿ ಬಿಜೆಪಿ ವಿರುದ್ಧ ತಿರುಗುಬಾಣವಾಗಿ ಪ್ರಯೋಗಿಸಿತು. “ಇದು 40 ಪರ್ಸೆಂಟ್‌ ಸರ್ಕಾರ” ಎಂಬ ಆರೋಪದ ಜತೆಗೆ ಅದನ್ನು ಬ್ರ್ಯಾಂಡ್‌ ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಿತು. ಇದರ ಫ‌ಲವಾಗಿ ಗೆಲುವಿನ ನಗೆ ಬೀರಿತು.

Advertisement

ಆರೋಪಕ್ಕೆ ಪೂರಕವಾದ ಬೆಳವಣಿಗೆಗಳೂ ಬಿಜೆಪಿ ಆಡಳಿತದಲ್ಲಿ ನಡೆದವು. ಸ್ವತಃ ಪ್ರಧಾನಿ ಬಳಿಯೂ ಈ ಸಂಬಂಧ ದೂರು ಹೋಗಿತ್ತು. ಆದರೆ, ಇದರ ಬಗ್ಗೆ ಪ್ರಧಾನಿ ಬಳಿ ಉತ್ತರವೂ ಇರಲಿಲ್ಲ; ಪ್ರತಿ ಕ್ರಿಯಿಸಲೂ ಇಲ್ಲ. ಹಾಗಂತ, ಆಡಳಿತ ಪಕ್ಷದ ವಿರುದ್ಧ ಮಾಡಿದ 40 ಪರ್ಸೆಂಟ್‌ ಕಮಿಷನ್‌ ಒಂದೇ ಗೆಲುವಿನ ದಡ ಸೇರಿಸಿತು ಎಂದು ಅರ್ಥವಲ್ಲ. ಹಲವು ಅಂಶಗಳಲ್ಲಿ ಇದು ಕೂಡ ಒಂದಾಗಿತ್ತು.

ಕುತೂಲಹಲಕಾರಿ ಸಂಗತಿ ಎಂದರೆ ಕಾಂಗ್ರೆಸ್‌ ಗೆಲುವು ಸಂಘಟಿತ ಹೋರಾಟದ ಫ‌ಲ. ಇದರಲ್ಲಿ ಎಐಸಿಸಿ ಅಧ್ಯಕ್ಷ ಕನ್ನಡಿಗರೇ ಆದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಷ್ಠೆ ಪಣಕ್ಕಿಟ್ಟಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದಕ್ಕೆ ಹೆಗಲು ಕೊಟ್ಟರು. ಮತ್ತೂಂದೆಡೆ ಲಿಂಗಾಯತರ “ಸ್ವಾಭಿಮಾನಿ ಅಸ್ತ್ರ” ವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಯೋಗಿಸಿತು.

ಇದಕ್ಕೆ ಪೂರಕವಾಗಿ ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿ ಸೇರಿದಂತೆ ನೂರಾರು ಮುಖಂಡರನ್ನು ಕರೆತರಲಾಯಿತು. ಇದೆಲ್ಲಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಅಳಿಸಿ, ಕೆಳಗಿಸಿಳಿಸಿದ್ದನ್ನು ಅಸ್ತ್ರವಾಗಿ ಬಳಸಿಕೊಂಡಿತು. ಈ ಆರೋಪಕ್ಕೆ ಬಿಜೆಪಿ ಬಳಿ ಉತ್ತರ ಇರಲಿಲ್ಲ.

ಘೋಷಣೆಯಾದ ಗ್ಯಾರಂಟಿ: ಎಲ್ಲರಿಗಿಂತ ಮೊದಲೇ ಉಚಿತ ವಿದ್ಯುತ್‌, ಗೃಹಲಕ್ಷ್ಮೀ ಸೇರಿದಂತೆ ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಘೋಷಿಸಿ, ಅವುಗಳನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಸಹಿ ಸಮೇತ ಮನೆ-ಮನೆಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ ಎಲ್ಲ 223 ಅಭ್ಯರ್ಥಿಗಳ ಸಹಿ ಸಂಗ್ರಹಿಸಿ ಪ್ರತಿಜ್ಞೆ ತೆಗೆದುಕೊಳ್ಳುವುದ ಜತೆಗೆ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಇವುಗಳಿಗೆ ಅನುಮೋದನೆ ನೀಡುವ “ಗ್ಯಾರಂಟಿ’ಯನ್ನೂ ನೀಡಲಾಯಿತು. ಇದು ಮಧ್ಯಮ ಮತ್ತು ಕೆಳಮಧ್ಯಮ ವರ್ಗ ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸಿತು. ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಚೋದನಾತ್ಮಕ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯದ ಜನ ಈ ತೀರ್ಪಿನ ಮೂಲಕ ರವಾನಿಸಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲೂ “ಕಮಲ” ಮುದುಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅತಂತ್ರ ಸ್ಥಿತಿ ಸೃಷ್ಟಿಸುವ ಅವ್ಯವಸ್ಥೆಯಿಂದಲೂ ಜನ ಬೇಸತ್ತಿದ್ದರು ಎನ್ನುವುದನ್ನು ಇಲ್ಲಿ ಕಾಣಬಹುದು.

Advertisement

ಲಾಭ ತರದ ಮೀಸಲು ನೀತಿಯ ಘೋಷಣೆ
ಬಿಜೆಪಿ ಒಳ ಮೀಸಲಾತಿ ಘೋಷಿಸಿದರೂ ಅದರಿಂದ ಫ‌ಲ ಉಣ್ಣಬಹುದಾದ ಸಮುದಾಯಗಳಿಂದ ನಿರೀಕ್ಷಿತ ಮಟ್ಟದಲ್ಲಿ ಆ ನಿರ್ಧಾರದ ಪರ ದನಿ ಕೇಳಿಬರಲಿಲ್ಲ. ಇದಕ್ಕೆ ಪ್ರತಿಯಾಗಿ ಮೀಸಲಾತಿಯಿಂದ ತೊಂದರೆ ಆಗಬಹುದಾದ ಸಮುದಾಯಗಳಿಂದ ಹೆಚ್ಚು ಪ್ರತಿರೋಧದ ಕೂಗು ಕೇಳಿಸಿತು. ಮತ್ತೂಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರ ತನ್ನ ಆದೇಶಕ್ಕೆ ತಾನೇ ತಡೆ ನೀಡಿದ್ದರಿಂದ ಇದು ಕೈಹಿಡಿಯಲಿಲ್ಲ.

~ ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next