Advertisement

ಕಾಂಗ್ರೆಸ್‌ ಬಿಡಲ್ಲ, ಬಿಜೆಪಿಗೆ ಹೋಗಲ್ಲ: ಹೆಬ್ಟಾರ

12:30 AM Jan 31, 2019 | Team Udayavani |

ಹುಬ್ಬಳ್ಳಿ: ಮೊದಲಿನಿಂದಲೂ ನಾನು ಕಾಂಗ್ರೆಸ್‌ ಪಕ್ಷದಲ್ಲಿದ್ದೇನೆ, ಮುಂದೆಯೂ ಇರುತ್ತೇನೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಟಾರ ತಿಳಿಸಿದರು.

Advertisement

ಇಲ್ಲಿನ ಗೋಕುಲ ರಸ್ತೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರರೊಂದಿಗೆ ಅವರು ಮಾತನಾಡಿದರು. ಶಿವರಾಮ ಹೆಬ್ಟಾರ ಬಿಜೆಪಿಗೆ ಹೋಗುತ್ತಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಪಕ್ಷ ತೊರೆಯುತ್ತೇನೆ ಎಂದು ನಾನೆಲ್ಲೂ ಹೇಳಿಕೊಂಡಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಜನರ ಸೇವೆ ಮಾಡಲು ಅವಕಾಶ ನೀಡುವಂತೆ ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡಿದ್ದೇನೆಯೇ ವಿನ: ಪಕ್ಷ ಹಾಗೂ ನಾಯಕರ ವಿರುದ್ಧ ಅಸಮಾಧಾನವಿಲ್ಲ. ಲೋಕಸಭೆ ಚುನಾವಣೆಯೊಳಗೆ ಅಂತಿಮ ಪಂದ್ಯ ನಡೆಯುತ್ತೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಒತ್ತು ಕೊಡುವ ಅಗತ್ಯವಿಲ್ಲ ಎಂದರು.

ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. 96ರ ಪೈಕಿ 30 ನಿಗಮಗಳಿಗೆ ಶಾಸಕರನ್ನು ಪರಿಗಣಿಸಲಾಗಿದೆ. ಉಳಿದವುಗಳನ್ನು ಕಾರ್ಯಕರ್ತರಿಗೆ ನೀಡಲಾಗಿದೆ. ಪಕ್ಷದ ಹಿರಿಯರು ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಹೊಸ ಜವಾಬ್ದಾರಿ ನೀಡಿದ್ದಾರೆ. ನಷ್ಟದಲ್ಲಿದೆ ಎನ್ನುವ ಕಾರಣಕ್ಕೆ ಹಿಂಜರಿಯುವ ಜಾಯಮಾನ ನನ್ನದಲ್ಲ. ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ನನ್ನ ಅವಧಿಯಲ್ಲಿ ಸಂಸ್ಥೆಗೆ ಹೊಸ ಆಯಾಮ ನೀಡುವ ಗುರಿ ಹೊಂದಿದ್ದೇನೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next