Advertisement

ಕಾಂಗ್ರೆಸ್‌ ಸಂಸ್ಕೃತಿ ನಾಶವಾಗಲಿ:ಮೋದಿ

06:00 AM Jan 22, 2018 | Harsha Rao |

ಹೊಸದಿಲ್ಲಿ: ಕಾಂಗ್ರೆಸ್‌ ಮುಕ್ತ ಭಾರತವೆಂದರೆ, ಆ ಪಕ್ಷದ ಸಂಪೂರ್ಣ ನಾಶವಲ್ಲ, ಅದರ ಓಲೈಕೆ ಸಂಸ್ಕೃತಿಯ ನಾಶ -ಹೀಗೆಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ.

Advertisement

ಕಾಂಗ್ರೆಸ್‌ನ ಈ ಸಂಸ್ಕೃತಿಯನ್ನು ಬೇರೆ ಯಾರೋ ಬಂದು ನಾಶ ಮಾಡಬೇಕಾಗಿಲ್ಲ, ಆ ಪಕ್ಷವೇ ಸ್ವಯಂ ತನ್ನ ಜಾತೀಯತೆ, ವಂಶಪಾರಂಪರ್ಯ, ಭ್ರಷ್ಟಾಚಾರ, ದ್ರೋಹ ಮತ್ತು ಒಂದೇ ಕಡೆ ಅಧಿಕಾರ ಕೇಂದ್ರೀಕರಣ ಮಾಡಿಕೊಳ್ಳುವ ಮೂಲಕ ನಾಶ ಹೊಂದುತ್ತಿದೆ ಎಂದು ಅಭಿಪ್ರಾಯಪಟ್ಟರು.

ಖಾಸಗಿ ಆಂಗ್ಲ ವಾಹಿನಿ ಟೈಮ್ಸ್‌ ನೌಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್‌ ಮುಕ್ತ ಭಾರತ ಹೇಳಿಕೆಯ ಅರ್ಥ ವಿವರಿಸಿದರು. ಕಾಂಗ್ರೆಸ್‌ ಮುಕ್ತವೆಂದರೆ ಅದು ಚುನಾವಣಾ ಫ‌ಲಿತಾಂಶಕ್ಕೆ ಸಂಬಂಧಿಸಿದ ವಿಚಾರವಲ್ಲ, ಸ್ವಾತಂತ್ರ್ಯ ಪೂರ್ವದ ಸ್ಥಿತಿಗತಿ ಎಂದು ವಿವರಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್‌ಗೆ ಒಂದು ಸಂಸ್ಕೃತಿ ಇತ್ತು. ಅದು ಸ್ವಾತಂತ್ರ್ಯಕ್ಕಾಗಿ ಅಂದಿನ ಯುವಕರಲ್ಲಿ ಹೋರಾಟ, ತ್ಯಾಗ ಮತ್ತು ಬಲಿದಾನಕ್ಕೂ ಸಿದ್ಧವಾಗುವುದನ್ನು ಕಲಿಸಿಕೊಟ್ಟಿತ್ತು. ಆದರೆ ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್‌ ತನ್ನ ಆ ಸಂಸ್ಕೃತಿ ಬಿಟ್ಟು, ಇತರ ಪಕ್ಷಗಳ ಓಲೈಕೆ ಸಂಸ್ಕೃತಿಯ ಮೊರೆ ಹೋಯಿತು. ಹೀಗಾಗಿ ನನ್ನ ಮಾತಿನ ಒಳಾರ್ಥ, ಈ ಓಲೈಕೆಯ ಸಂಸ್ಕೃತಿ ಹೋಗಬೇಕು ಎಂಬುದೇ ಹೊರತು ರಾಜಕೀಯವಾಗಿ ನಾಶವಾಗಲಿ ಎಂದಲ್ಲ ಎಂದು ವಿವರಿಸಿ ದರು. ಜತೆಗೆ ಕಾಂಗ್ರೆಸ್‌ ಹರಡಿದ ಈ ಸಂಸ್ಕೃತಿ ಬರಬರುತ್ತಾ ಎಲ್ಲ ಪಕ್ಷಗಳಿಗೂ ಹಬ್ಬಿತು. ಇಂದು ಈ ಸಂಸ್ಕೃತಿಯೇ ಮಿತಿ ಮೀರಿ ಹೋಗುತ್ತಿದೆ ಎಂದರು.

ಜನಪ್ರಿಯ ಬಜೆಟ್‌ ಅಲ್ಲ: ಫೆಬ್ರವರಿ 1ರಂದು ಮಂಡನೆಯಾಗಲಿರುವ ಸಾಮಾನ್ಯ ಬಜೆಟ್‌ ಜನಪ್ರಿಯ ವಾಗಿರುವುದಿಲ್ಲ. ಈ ಬಗ್ಗೆ ಸ್ವತಃ ನರೇಂದ್ರ ಮೋದಿ ಅವರೇ ಸುಳಿವು ನೀಡಿದ್ದಾರೆ. 

Advertisement

“ಬಜೆಟ್‌ ಮಂಡನೆ ಮಾಡುವುದು ಹಾಗೂ ಸಿದ್ಧ ಮಾಡುವುದು ವಿತ್ತ ಸಚಿವರ ಹೊಣೆಯಷ್ಟೇ. ಇದರಲ್ಲಿ ನಾನು ಮಧ್ಯ ಪ್ರವೇಶ ಮಾಡಲ್ಲ. ಆದರೂ ಬಜೆಟ್‌ನಲ್ಲಿ ಉಚಿತ ಮತ್ತು ಕೊಡುಗೆ ಎಂಬುದು ಒಂದು ಸುಳ್ಳಷ್ಟೇ. ಒಬ್ಬ ಶ್ರೀಸಾಮಾನ್ಯ ಪ್ರಾಮಾಣಿಕ ಆಡಳಿತ ನಿರೀಕ್ಷೆ ಮಾಡುತ್ತಾನೆ ಎಂದಾದರೆ ಆತ ಈ ಉಚಿತ ಮತ್ತು ಕೊಡುಗೆಗಳಿಗೆ ಕೈಚಾಚಲ್ಲ’ ವೆಂದು ಹೇಳಿದ್ದಾರೆ.

ದಾವೋಸ್‌ ಸಮ್ಮೇಳನದ ಬಗ್ಗೆ: ಹಲವಾರು ವರ್ಷಗಳ ಬಳಿಕ ಭಾರತದ ಮುಖ್ಯಸ್ಥನಾಗಿ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇಡೀ ಜಗತ್ತು ಇಂದು ಭಾರತದತ್ತ ಕಣ್ಣು ಬಿಟ್ಟು ನೋಡುತ್ತಿದೆ. ಹೀಗಾಗಿ ಭಾರತ ಇಂಥ ವೇದಿಕೆಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಲೇಬೇಕಿದೆ. ಹಾಗೆಯೇ ಜಗತ್ತು ಕೂಡ ಭಾರತವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಹೀಗಾಗಿಯೇ ನಾನೇ ಸಮ್ಮೇಳನಕ್ಕೆ ಹೋಗಿ ಭಾರತದ ಬಲ ಪ್ರದರ್ಶನ ಮಾಡಲಿದ್ದೇನೆ ಎಂದು ತಿಳಿಸಿದರು.

ನೋಟು ಅಪಮೌಲ್ಯ ಒಳ್ಳೇ ನಿರ್ಧಾರ: ನೋಟು ಅಪಮೌಲ್ಯಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ತರಾಟೆಗೆ ತೆಗೆದುಕೊಂಡ ನರೇಂದ್ರ ಮೋದಿ ಅವರು, “ವಿರೋಧಿಗಳು ಬೆಂಕಿ ಹಚ್ಚಿದರು, ಹಿಂಸೆಗೆ ಉತ್ತೇಜನ ನೀಡಿದರು, ಸುಪ್ರೀಂಕೋರ್ಟ್‌ ಕದ ಬಡಿದರು. ಇದನ್ನೆಲ್ಲ ಮಾಡಲು ಕಾರಣ ಅವರು ಬಚ್ಚಿಟ್ಟಿದ್ದ ಕಪ್ಪುಹಣವನ್ನು ಉಳಿಸಿಕೊಳ್ಳಬೇಕಾಗಿತ್ತು, ಭ್ರಷ್ಟರನ್ನು, ಅಪ್ರಾಮಾಣಿಕರನ್ನು ಉಳಿಸಿಕೊಳ್ಳ ಬೇಕಿತ್ತು’ ಎಂದರು. ಆದರೆ, ನಮ್ಮ ಸರಕಾರ ಶೇ.86ರಷ್ಟು ಕರೆನ್ಸಿಯನ್ನು ಅಪಮೌಲ್ಯ ಮಾಡುವ ಮೂಲಕ ಭ್ರಷ್ಟರನ್ನು ಹೆಡೆಮುರಿ ಕಟ್ಟಿತು. ಇದು ನಿಜವಾಗಿಯೂ ಯಶಸ್ವಿಗಾಥೆ ಎಂದರು.

ಜಿಎಸ್‌ಟಿ ದೋಷ ನಿವಾರಣೆಗೆ ಸಿದ್ಧ: ಜಿಎಸ್‌ಟಿ ಜಾರಿಯಾಗಿ ಆಗಲೇ ಆರು ತಿಂಗಳು ಕಳೆದಿದ್ದು, ಹಲವಾರು ಬದಲಾವಣೆಗಳನ್ನೂ ಮಾಡಲಾಗಿದೆ. ಇದರಲ್ಲಿನ ದೋಷಗಳನ್ನು ಗುರುತಿಸಿ ಅವುಗಳನ್ನು ನಿವಾರಿಸಿಕೊಳ್ಳುವುದೂ ಒಂದು ಪ್ರಕ್ರಿಯೆ. ಆದರೆ, ಜಿಎಸ್‌ಟಿಯನ್ನು ವಿರೋಧಿಸುತ್ತಿರುವವರು ಸಂಸತ್‌ಗೆ ಅವಮಾನ ಮಾಡುತ್ತಿದ್ದೇವೆ ಎಂಬ ಬಗ್ಗೆ ಅರಿವನ್ನು ಹೊಂದಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ನೇರವಾಗಿಯೇ ದಾಳಿ ನಡೆಸಿದರು. ಜಿಎಸ್‌ಟಿಯ ಯಶಸ್ಸು ಯಾವುದೋ ಒಂದು ಪಕ್ಷಕ್ಕೆ ಸಿಗುವ ಯಶಸ್ಸಲ್ಲ ಅಥವಾ ಇದು ವಿಫ‌ಲವಾದಲ್ಲಿ ಅದಕ್ಕೆ ನಮ್ಮ ಸರಕಾರವೊಂದೇ ಕಾರಣವೂ ಅಲ್ಲ ಎಂದರು.

ಮೋದಿ ಹೇಳಿದ್ದು
1. 
ರಾಜಕೀಯವಾಗಿ ನರೇಂದ್ರ ಮೋದಿಯನ್ನು ನಾಶ ಮಾಡಲು ವಿಪಕ್ಷಗಳು ಪ್ರಯ ತ್ನಿಸುತ್ತಲೇ ಇವೆ. ಅವರಿಗೆ ನಾನು ಆಲ್‌ ದಿ ಬೆಸ್ಟ್‌ ಎಂದು ಹೇಳಲು ಇಚ್ಛಿಸುತ್ತೇನೆ. ಅವರ ಈ ನಡೆಯೇ ನಾನು ಇಂದು ಇಲ್ಲಿಗೆ ಬಂದು ನಿಲ್ಲಲು ಕಾರಣ.

2. ತ್ರಿವಳಿ ತಲಾಖ್‌ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡಿದ್ದು ಸರಿಯಲ್ಲ. ಶಾ ಬಾನೋ ಪ್ರಕರಣದಲ್ಲಿ ರಾಜೀವ್‌ ಗಾಂಧಿ ಮಾಡಿದ್ದ ಪ್ರಮಾದವನ್ನು ಈಗಲಾದರೂ ಸರಿಪಡಿಸಿಕೊಳ್ಳಬಹುದಾಗಿತ್ತು. ಆದರೆ ಓಲೈಕೆಯ ರಾಜಕಾರಣದಲ್ಲಿ ಈ ಅಂಶವನ್ನೇ ಅದು ಮರೆತಿದೆ.

3. ನ್ಯಾಯಾಂಗದಲ್ಲಿ  ಸದ್ಯ ಎದ್ದಿರುವ ಸಮಸ್ಯೆಯ ಒಳಗೆ ಯಾವ ರಾಜಕೀಯ ಪಕ್ಷಗಳೂ ಮೂಗು ತೂರಿಸಬಾರದು. ಅವರೇ ಅದನ್ನು ಬಗೆಹರಿಸಿ ಕೊಳ್ಳಲು ಬಿಟ್ಟುಬಿಡಬೇಕು. ಏಕೆಂದರೆ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಭವ್ಯ ಇತಿಹಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next