Advertisement

26ರಿಂದ “ಕೈ’ಜನ ಸಂಪರ್ಕ ಅಭಿಯಾನ

01:07 AM Jan 09, 2019 | |

ಬೆಂಗಳೂರು: ಲೋಕಸಭೆ ಚುನಾವಣೆಗೆ ಆಡಳಿತ ಪಕ್ಷ ಕಾಂಗ್ರೆಸ್‌ ಭರದ ಸಿದ್ಧತೆ ಆರಂಭಿಸಿದ್ದು, ಕೇಂದ್ರ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ತಿಳಿಸಲು ಜನವರಿ 26 ರಿಂದ ಫೆಬ್ರವರಿ 15ರ ವರೆಗೆ ಜನ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ಮಂಗಳವಾರ ಪಕ್ಷದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್‌ಗೆ ಮುಂಬರುವ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. 

Advertisement

ಚುನಾವಣೆಗೆ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ, ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ತೀರ್ಮಾನಿಸಲಾಗಿದ್ದು, ಜ.26 ರಿಂದ ಫೆ.15 ವರೆಗೆ ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬರ ಮನೆಗೆ ತೆರಳಿ ಜನ ಸಂಪರ್ಕ ಅಭಿಯಾನ ನಡೆಸಲಿದ್ದಾರೆ. ಜನ ಸಂಪರ್ಕ ಅಭಿಯಾನದಲ್ಲಿ ಕೇಂದ್ರ ಸರ್ಕಾರದ ಐದು ವರ್ಷಗಳ ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಅಲ್ಲದೆ, ಮತ್ತೆ ಕೇಂದ್ರದಲ್ಲಿ ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರುವ ಕುರಿತು ಪೂರಕ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಬದಲಾಗಬೇಕೆಂಬ ಒತ್ತಡ ದೇಶಾದ್ಯಂತ ಹೆಚ್ಚಾಗುತ್ತಿದೆ. ಸಿಬಿಐ ಮುಖ್ಯಸ್ಥರ ಬದಲಾವಣೆ ಬಗ್ಗೆ ಸುಪ್ರೀಂಕೋರ್ಟ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪಾಳಮೋಕ್ಷ ಮಾಡಿದೆ. ಮಧ್ಯರಾತ್ರಿಯಲ್ಲಿ ಸಿಬಿಐ ಮುಖ್ಯರಸ್ಥರನ್ನು ಬದಲಾವಣೆ ಮಾಡಲು ಕಾರಣವೇನು?. ಅವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಏಕೆ ಭಯ ಎಂದು ಪ್ರಶ್ನಿಸಿದರು.

ರಫೆಲ್‌, ಚುನಾವಣಾ ಪ್ರಮುಖ ವಿಷಯ: ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿಯೇ ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಎಚ್‌ಎಎಲ್‌ಗೆ ಒಂದು ಲಕ್ಷ 
ಕೋಟಿಯ ವ್ಯವಹಾರ ನೀಡಲಾಗಿದೆ ಎಂದು ಹೇಳಿ ಕರ್ನಾಟಕದ ಜನತೆ, ಎಚ್‌ಎಎಲ್‌ ಹಾಗೂ ಯುವ ಸಮುದಾಯಕ್ಕೆ ವಂಚಿಸಿದ್ದಾರೆಂದು ಆರೋಪಿಸಿದರು. ಈ ಬಗ್ಗೆ ಕಾಂಗ್ರೆಸ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಹಕ್ಕುಚ್ಯುತಿ ಮಂಡನೆ
ಮಾಡಿದೆ. ಕೇಂದ್ರ ಸರ್ಕಾರ ಎಚ್‌ಎಎಲ್‌ಗೆ ಕೇವಲ 26 ಸಾವಿರ ಕೋಟಿ ರೂ. ಮೊತ್ತದ ಉತ್ಪನ್ನಗಳ ತಯಾರಿಕೆಗೆ ಅನುಮತಿ ನೀಡಿದೆ. ಇದರಲ್ಲಿ ಕೂಡ ಯುಪಿಎ ಸರ್ಕಾರದ ಅವಧಿಯಲ್ಲಿ ಆಗಿರುವ ಒಪ್ಪಂದಗಳು ಸೇರಿವೆ. ಎರಡು ದಶಕದಲ್ಲಿ ಇದೇ
ಮೊದಲ ಬಾರಿಗೆ ಎಚ್‌ಎಎಲ್‌ ಒಂದು ಸಾವಿರ ಕೋಟಿ ರೂ.ಸಾಲ ಮಾಡಿದೆ ಎಂದು ಎಚ್‌ಎಎಲ್‌ ನಿರ್ದೇಶಕರು ಹೇಳಿದ್ದಾರೆ. ಕೇಂದ್ರ ಸರ್ಕಾರ ಎಚ್‌ ಎಎಲ್‌ಗೆ ನೀಡಬೇಕಾದ ಬಾಕಿ ಹಣವನ್ನೇ ನೀಡಿಲ್ಲ ಎಂದು ದೂರಿದರು.

ಜಂಟಿ ಸದನ ಸಮಿತಿಗೆ ಒತ್ತಡ: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಂದು ವಾದಿಸುತ್ತಿರುವ ಕೇಂದ್ರ ಸರ್ಕಾರ, ಇದನ್ನು ಜಂಟಿ ಸದನ ಸಮಿತಿ ತನಿಖೆಗೆ ನೀಡಲು ಏಕೆ ಹಿಂದೇಟು ಹಾಕುತ್ತಿದೆ. ಸಮಿತಿಯಲ್ಲಿ ಆಡಳಿತ ಪಕ್ಷದ ಸದಸ್ಯರೇ ಹೆಚ್ಚಿರುತ್ತಾರೆ. ಆದರೂ, ಕೇಂದ್ರ ಸರ್ಕಾರ ಏಕೆ ಭಯ ಪಡುತ್ತಿದೆ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಉಪಸ್ಥಿತರಿದ್ದರು.

ಮೇಲ್ವರ್ಗದವರಿಗೆ ಮೀಸಲಾತಿ, ರಾಜಕೀಯ
ಗಿಮಿಕ್‌: ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೂ ಶೇ.10ರಷ್ಟು ಮೀಸಲಾತಿ ನೀಡಲು ಮುಂದಾಗಿರುವುದನ್ನು ಕಾಂಗ್ರೆಸ್‌ ಸ್ವಾಗತಿಸುತ್ತದೆ. ಆದರೆ, ಐದು ವರ್ಷ ಅಧಿಕಾರದಲ್ಲಿದ್ದು ಯಾವುದೇ ತೀರ್ಮಾನ ಮಾಡದೆ ಚುನಾವಣೆ ಹತ್ತಿರ ಇದ್ದಾಗ ಈ ರೀತಿಯ ತೀರ್ಮಾನ ಮಾಡಿರುವುದು ರಾಜಕೀಯ ಗಿಮಿಕ್‌ ಎಂದು ವೇಣುಗೋಪಾಲ್‌ ಆರೋಪಿದರು. ಮೇಲ್ವರ್ಗದವರಿಗೆ ಮೀಸಲಾತಿ
ನೀಡಲು ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಅಲ್ಲದೆ, ದೇಶದ ಕನಿಷ್ಠ ಹತ್ತು ರಾಜ್ಯಗಳಾದರೂ ವಿಧಾನಸಭೆಯಲ್ಲಿ ಪಾಸ್‌ ಮಾಡಿ ಇದಕ್ಕೆ ಒಪ್ಪಿಗೆ ನೀಡಬೇಕಾಗುತ್ತದೆ. ಇನ್ನೆರಡು ತಿಂಗಳಲ್ಲಿ ಅದೆಲ್ಲವನ್ನೂ ಮಾಡಲು ಹೇಗೆ ಸಾಧ್ಯವಾಗುತ್ತದೆ. ಹೀಗಾಗಿ,
ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಈ ರೀತಿಯ ಘೋಷಣೆ ಮಾಡಿದೆ ಎಂದು ಹೇಳಿದರು. ಮೇಲ್ವರ್ಗದವರಿಗೆ ಮೀಸಲಾತಿ ನೀಡಬೇಕೆಂದು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಸಮಿತಿ ರಚಿಸಲಾಗಿತ್ತು. ಆ
ಸಮಿತಿ 2012ರಲ್ಲಿ ವರದಿ ನೀಡಿತ್ತು. ಕಾಂಗ್ರೆಸ್‌ನ 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಲಾಗಿತ್ತು ಎಂದು ತಿಳಿಸಿದರು. 

Advertisement

ಗೊಂದಲಗಳು ಬಗೆಹರಿಯಲಿವೆ: ವೇಣು
ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಆದರೆ ಎಲ್ಲವೂ ಬಗೆಹರಿಯಲಿವೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಕೆಲವು ಶಾಸಕರಿಗೆ ಅಸಮಾಧಾನವಾಗಿದೆ. ಈ ಕುರಿತು ಎಲ್ಲರೊಂದಿಗೂ ಮಾತುಕತೆ ನಡೆಲಾಗಿದೆ. ಜೆಡಿಎಸ್‌ ಜತೆಗಿನ ಸಣ್ಣಪುಟ್ಟ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗುತ್ತಿದೆ’ ಎಂದರು. ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದೆ. ಎನ್‌ಡಿಎ ಮಿತ್ರಪಕ್ಷಗಳು ಒಂದೊಂದಾಗಿ ಹೊರ ನಡೆಯುತ್ತಿವೆ. ಅಲ್ಲದೇ ಸ್ವತಃ ಬಿಜೆಪಿ
ನಾಯಕರೇ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಅಷ್ಟೊಂದು ಸಮಸ್ಯೆಗಳಿರುವಾಗ ರಾಜ್ಯದ ಸಮ್ಮಿಶ್ರ ಸರ್ಕಾರದ ಗೊಂದಲ ಯಾವುದೇ ಸಮಸ್ಯೆಯಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಗೆ ಜೆಡಿಎಸ್‌, ಕಾಂಗ್ರೆಸ್‌ ಜಂಟಿಯಾಗಿಯೇ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಸೀಟು ಹಂಚಿಕೆ ವಿಷಯ ಇದುವರೆಗೂ ಚರ್ಚೆಯಾಗಿಲ್ಲ. ಮಾಜಿ
ಪ್ರಧಾನಿ ದೇವೇಗೌಡರು ದೇಶದ ಹಿರಿಯ ನಾಯಕರು. ಅವರೊಂದಿಗೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು. 

ನಿಷ್ಕ್ರಿಯ ಪದಾಧಿಕಾರಿಗಳ ಬದಲಾವಣೆಗೆ ಸೂಚನೆ
ಪಕ್ಷದ ಪದಾಧಿಕಾರಿಗಳಾಗಿ ಜಿಲ್ಲಾ ಹಾಗೂ ಬ್ಲಾಕ್‌ಮಟ್ಟದ ಅಧ್ಯಕ್ಷರು ಸಕ್ರೀಯರಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಿದ್ದರೆ, ಅಂತವರನ್ನು ಬದಲಾಯಿಸಿ ಸಕ್ರೀಯರಾದವರನ್ನು ನೇಮಿಸಲು ಕೆ.ಸಿ.ವೇಣು ಗೋಪಾಲ್‌ ಸೂಚಿಸಿದ್ದಾರೆ. ಈಗಾಗಲೇ ಬ್ಲಾಕ್‌ ಅಧ್ಯಕ್ಷ
ರಾಗಿ ಹತ್ತು ವರ್ಷ ಪೂರೈಸಿದವರು ಹಾಗೂ ಕೇವಲ ವಿಸಿಟಿಂಗ್‌ ಕಾರ್ಡ್‌ಗಾಗಿ ಅಧ್ಯಕ್ಷರಾಗಿರುವವರನ್ನು ಯಾವುದೇ ಮುಲಾಜಿಲ್ಲದೆ ಬದಲಾಯಿಸುವಂತೆ ವೇಣು ಗೋಪಾಲ್‌ ಸೂಚಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ವ್ಯವಸ್ಥೆ ಇರುವುದರಿಂದ ಜೆಡಿಎಸ್‌ ಜತೆಗೆ ಸ್ಥಳೀಯವಾಗಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಅನಗತ್ಯವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ 
ಸೂಚಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next