Advertisement

ಕಾಂಗ್ರೆಸ್‌, ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ: ಎಚ್‌ಡಿಕೆ

12:37 PM Feb 27, 2017 | Team Udayavani |

ಪಿರಿಯಾಪಟ್ಟಣ: ರಾಜ್ಯದಲ್ಲಿ ಬಿಜೆಪಿ ಅಧಿಕಾರ ದಲ್ಲಿದ್ದಾಗ ಲೂಟಿ ಮಾಡಿ ಸರ್ಕಾರ ನಡೆಸಲು ತೆರಿಗೆಯನ್ನು ಹೆಚ್ಚು ಮಾಡಿ ಈಗ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಿ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ಕೇಂದ್ರ ಸರ್ಕಾರದವರು ಸಾಲ ಮನ್ನಾ ಮಾಡಲಿ ಎನ್ನುತ್ತಿದ್ದಾರೆ. ಬರದಿಂದ ಜನರು ನರಳುತ್ತಿರು ವಾಗ ರೈತರ ನೆರವಿಗೆ ಬರದೆ ಒಬ್ಬರ ಮೇಲೊಬ್ಬರು ಹೇಳುತ್ತಾ ಕಾಲ ತಳ್ಳುತ್ತಿರುವ ಇವರಿಗೆ ಮನುಷ್ಯತ್ವ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ತಾಲೂಕು ಜೆಡಿಎಸ್‌ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬೃಹತ್‌ ಕಾರ್ಯಕರ್ತರ ಬಹಿರಂಗ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮುಂದಿನ ಸಲ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದನ್ನು ವಿರೋಧ ಪಕ್ಷಗಳು ಟೀಕೆ ಮಾಡಿದವು. ಸರ್ಕಾರಕ್ಕೆ ಸಾಲ ಮನ್ನಾ ಮಡಬೇಕು ಎಂಬ ಒತ್ತಾಯವಿದೆಯೇ ಹೊರತು ತಮಗೆ ಯಾವ ರೈತರೂ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿಲ್ಲ.

ಆದರೆ ಬೀದರ್‌ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡಿದಾಗ ಆತ್ಮಹತ್ಯೆಗೆ ಕಾರಣ ಯೋಚಿಸಿದಾಗ ಸಾಲಬಾಧೆಯ ತೀವ್ರತೆ ಅರ್ಥವಾಯಿತು. ಹಾಗಾಗಿ ಸಾಲಮನ್ನಾ ಮಾಡಬೇಕು ಎಂದು ನಿರ್ಧರಿಸಿ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದೇನೆ. ತಾವೂ ಒಬ್ಬ ರೈತರ ಮಗನಾಗಿದ್ದಕ್ಕೆ ರೈತರ ನೋವು ಅರ್ಥವಾಗಿದ್ದರಿಂದ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು. 

ಸಮ್ಮಿಶ್ರ ಸರ್ಕಾರವಿಲ್ಲ: ಮುಂದಿನ ಬಾರಿ ಜೆಡಿಎಸ್‌ಗೆ ಜನರು ಆಶೀರ್ವಾದ ಮಾಡಲಿದ್ದಾರೆ. ಒಂದು ವೇಳೆ ಬಹುಮತ ಬರದಿದ್ದರೆ ಯಾವುದೇ ಪಕ್ಷಗಳ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿ ಹಾಕಿಕೊಂಡಿರುವುದನ್ನು ಪ್ರತಿನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಪ್ರತಿದಿನ ರೈತರು ಸಾಯುತ್ತಿದ್ದಾರೆ. ಇದರ ಬಗ್ಗೆ ಯೋಚಿಸದ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಗೆ ಮನುಷ್ಯತ್ವವಿಲ್ಲ. ಸಾಲ ಮನ್ನಾ ಮಾಡಿ ರೈತರ ನೆರವಿಗೆ ಬರದೆ ಒಬ್ಬರ ಮೇಲೊಬ್ಬರು ಹೇಳಿಕೊಂಡು ತಿರುಗುತ್ತಿದ್ದಾರೆ. ತಮ್ಮ 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಂದು ರೂಪಾಯಿ ಸಾಲ ಮಾಡದೆ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next