Advertisement

ಕಚೇರಿಗಾಗಿ ಬಿಜೆಪಿ ಕಾರ್ಯಕರ್ತರಲ್ಲೇ ಕಿತ್ತಾಟ!

01:24 PM Apr 13, 2018 | Team Udayavani |

ನಾಯಕನಹಟ್ಟಿ: ಬಿಜೆಪಿ ಕಚೇರಿ ಉದ್ಘಾಟನೆ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಎಸ್‌.ತಿಪ್ಪೇಸ್ವಾಮಿ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ, ದಾಂಧಲೆ ನಡೆದ ಘಟನೆ ಗುರುವಾರ ನಡೆದಿದೆ. ಈಗಾಗಲೇ ಬಿಜೆಪಿ ಕಚೇರಿ ಇದ್ದು, ಇಲ್ಲಿಯೇ ಮತ್ತೆ ಪಕ್ಷದ ಕಚೇರಿ ಹಾಗೂ ಕಾಲ್‌ ಸೆಂಟರ್‌ ಅನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಬಿ. ಶ್ರೀರಾಮುಲು ಶುಕ್ರವಾರ ಉದ್ಘಾಟಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಕಾರ್ಯಕ್ರಮದ ಸಿದ್ಧತೆ ನಡೆಸಿದ್ದರು. ಕಚೇರಿಗೆ ತಳಿರು ತೋರಣ, ಕುರ್ಚಿ ವ್ಯವಸ್ಥೆ ಮಾಡುವಲ್ಲಿ ನಿರತರಾಗಿದ್ದರು. 

Advertisement

ಈ ವಿಷಯ ತಿಳಿದ ಟಿಕೆಟ್‌ ವಂಚಿತ ಶಾಸಕ ಎಸ್‌. ತಿಪ್ಪೇಸ್ವಾಮಿ ಬೆಂಬಲಿಗರು ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಶಾಸಕ ಎಸ್‌. ತಿಪ್ಪೇಸ್ವಾಮಿ ಈ ಕಚೇರಿ ಆರಂಭಿಸಿದ್ದಾರೆ. ಹೀಗಿರುವಾಗ ಶ್ರೀರಾಮುಲು ಅವರಿಂದ ಕಚೇರಿ ಉದ್ಘಾಟನೆ ಮಾಡಿಸುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಪಕ್ಷದ ಕಚೇರಿಯಾಗಿದೆ. ಪಕ್ಷ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಹೀಗಾಗಿ ಪಕ್ಷದ ಕಚೇರಿಯಲ್ಲಿ ಅಧಿಕೃತ ಕಾರ್ಯಕ್ರಮ ಜರುಗಲಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಲ ಅಧ್ಯಕ್ಷರು ಇದಕ್ಕೆ ಅಗತ್ಯ ದಾಖಲೆ ಪ್ರದರ್ಶಿಸಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರ ಬೆಂಬಲಿಗರು, ನಾಳೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಅಲ್ಲದೆ ಕಚೇರಿ ಷಟರ್‌ ಎಳೆದು ಕೂಗಾಡಿದರು. ಪಕ್ಷದ ಮಂಡಲಾಧ್ಯಕ್ಷ ಹಾಗೂ ಕಾರ್ಯದರ್ಶಿ ಜತೆ ವಾಗ್ವಾದ ನಡೆಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಎರಡು ಬಣಗಳ ನೂರಾರು ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತ ತಲುಪಿದ್ದರು.

ಶುಕ್ರವಾರ ಶ್ರೀರಾಮುಲು ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಪಕ್ಷದ ಪ್ರಚಾರ ಕಚೇರಿ ಹಾಗೂ ಕಾಲ್‌ ಸೆಂಟರ್‌ ಉದ್ಘಾಟಿಸುವ ಕಾರ್ಯಕ್ರಮವಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದಾಗಿ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next