Advertisement

ಉದ್ಯಮಿಗಳು –ಕಾರ್ಮಿಕರಲ್ಲಿ ಗೊಂದಲ

03:25 PM Apr 28, 2020 | mahesh |

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್‌ ನಡುವೆಯೇ ರಾಜ್ಯ ಸರ್ಕಾರ ನಿರ್ಮಾಣ ಕಾಮಗಾರಿಗಳ ಪುನಾರಂಭಕ್ಕೆ ಅನುಮತಿ ನೀಡಿದೆ. ಮತ್ತೂಂದೆಡೆ ಅಲ್ಲಿ
ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಅನುಮತಿ ನೀಡಿದೆ. ಇಂತಹ ವ್ಯತಿರಿಕ್ತ ಆದೇಶಗಳು ಉದ್ದಿಮೆಗಳು ಮತ್ತು ಕಾರ್ಮಿಕರನ್ನು ಗೊಂದಲಕ್ಕೀಡು ಮಾಡಿವೆ. ಕೇಂದ್ರ ಗೃಹ ಇಲಾಖೆ ನಿರ್ದೇಶನದಂತೆ ರಾಜ್ಯ ಸರ್ಕಾರ ನಗರದ ಹೊರ ವಲಯದಲ್ಲಿರುವ ನಿರ್ಮಾಣ ಹಂತದ ಕಾಮಗಾರಿ ಆರಂಭಿಸುವಂತೆ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಆದರೆ, ಕಾರ್ಮಿಕರ ಅಗತ್ಯತೆ ಅಥವಾ ಬೇರೆ ಸ್ಥಳದಿಂದ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಲು ಅಗತ್ಯವಿರುವ ಪಾಸ್‌ ನೀಡುವ ಬಗ್ಗೆಯಾಗಲಿ ಅಥವಾ ಮುಕ್ತವಾಗಿ ಸಂಚರಿಸಲು ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ. ಪರಿಣಾಮ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಕಾಮಗಾರಿ ಆರಂಭಿಸಲು ಹಾಗೂ ಅದಕ್ಕೆ ಅಗತ್ಯವಿರುವ ಕಾರ್ಮಿಕರ ಸಂಚಾರಕ್ಕೆ ಅನುಮತಿಗಾಗಿ ಬಿಬಿಎಂಪಿ, ನಗರ ಪೊಲೀಸ್‌ ಆಯುಕ್ತರು, ಜಿಲ್ಲಾಧಿಕಾರಿ, ನಗರಾಭಿವೃದ್ಧಿ ಇಲಾಖೆಗೆ ಅಲೆದಾಡುವಂತಾಗಿದೆ.

Advertisement

ರಾಜ್ಯದಲ್ಲಿ ಮಾ.23ರಿಂದ ಲಾಕ್‌ ಮಾಡಿದ ಸಂದರ್ಭದಲ್ಲಿ ಬೆಂಗಳೂರು ಸೇರಿ ರಾಜ್ಯದ ಇತರೆ ಜಿಲ್ಲೆಗಳ ಗಡಿ, ರಾಜ್ಯದ ಗಡಿ ಭಾಗದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಅವರಿಗೆ ಸರ್ಕಾರವೇ ಊರಿಗೆ ತೆರಳಲು ಅವಕಾಶ ಕಲ್ಪಿಸಿದ್ದು ರಿಯಲ್‌ ಎಸ್ಟೇಟ್‌ ಉದ್ಯಮಿಗಳ ನಿದ್ದೆಗೆಡಿಸಿದೆ. ಕಳೆದ 1 ತಿಂಗಳಿಂದ ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಗತ್ಯ ಊಟ, ವಸತಿ, ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಸಲಕರಣೆ ನೀಡುತ್ತಿವೆ. ಈಗ ಕಾಮಗಾರಿ ಆರಂಭಿ  ಸಬೇಕು ಎನ್ನುವಷ್ಟರಲ್ಲಿ ಸರ್ಕಾರ, ಕಾರ್ಮಿಕರು ಸ್ವಂತ ಊರಿಗೆ ತೆರಳಲು ಅವಕಾಶ ನೀಡಿದೆ. ಶೇ.90 ವಲಸೆ ಕಾರ್ಮಿಕರೇ ಇರುವುದರಿಂದ ಒಮ್ಮೆ ಊರುಗಳಿಗೆ ವಾಪಸ್‌ ತೆರಳಿದರೆ, ವಾಪಸ್‌ ಬರುವುದು ಸದ್ಯದ ಸ್ಥಿತಿಯಲ್ಲಿ ಅನುಮಾನ. ಇದರಿಂದ ಮುಂದಿನ 3-4 ತಿಂಗಳು ನಗರ ಪ್ರದೇಶಗಳಲ್ಲಿ ಕಾರ್ಮಿಕರ ಕೊರತೆಯಿಂದ ನಿರ್ಮಾಣ ಕಾಮಗಾರಿ ಚುರುಕುಗೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸ್ಪಷ್ಟತೆ ಇಲ್ಲದ ಆದೇಶ: ಕಾಮಗಾರಿ ಆರಂಭಿಸಲು ಆದೇಶ ನೀಡಿರುವ ಸರ್ಕಾರ, ನಗರದ ಒಂದು ಭಾಗ  ದಿಂದ ಇನ್ನೊಂದು ಭಾಗಕ್ಕೆ ಕಾರ್ಮಿಕರು ಸಂಚರಿಸಲು ಅವಕಾಶ ನೀಡುವ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಅಲ್ಲದೆ ಕಾರ್ಮಿ ಕರ ಮೇಲುಸ್ತುವಾರಿ ನೋಡಿಕೊಳ್ಳುವ ಸೂಪರ್‌ ವೈಸರ್‌ ಸೇರಿ ಮೇಲಧಿಕಾರಿಗಳು ಸಂಚರಿಸಲು ಸ್ಪಷ್ಟ ಮಾರ್ಗಸೂಚಿ ನೀಡದಿರುವುದರಿಂದ ಸರ್ಕಾರ ಕಾಮಗಾರಿ ಆರಂಭಕ್ಕೆ ಆದೇಶಿಸಿ 4 ದಿನ ಕಳೆದರೂ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ವಾಸ್ತವವಾಗಿ ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ.

ಸರ್ಕಾರದ ಆದೇಶ ಪೊಲೀಸರಿಗಿಲ್ಲ ಸ್ಪಷ್ಟ ಸೂಚನೆ
ಸರ್ಕಾರ ಆದೇಶ ಮಾಡಿದ ನಂತರ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಮಾರ್ಗಸೂಚಿ ರೂಪಿಸದೆ ಇರುವುದರಿಂದ ಪೊಲೀಸರು, ಸಾರ್ವಜನಿಕರ ನಡುವೆ ಸಾಕಷ್ಟು ವಾಗ್ವಾದಗಳಿಗೂ ಕಾರಣವಾಗುತ್ತಿದೆ. ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಿಗೆ ಕೂಲಿ ಕೆಲಸಕ್ಕೆ ಆಗಮಿಸುವ ಕಾರ್ಮಿಕರು ಬಹುತೇಕ ಗ್ರಾಮೀಣ ಪ್ರದೇಶದಿಂದಲೇ ನಿತ್ಯ ಸಂಚರಿಸುತ್ತಾರೆ. ಅವರಿಗೆ ಯಾವುದೇ ಸಂಸ್ಥೆಯ ಅಧಿಕೃತ ಗುರುತಿನ ಚೀಟಿ ಇಲ್ಲ. ಅಂತಹ ಕಾರ್ಮಿಕರು ತಮ್ಮ ಊರಿನಿಂದ ಕಟ್ಟಡ ಅಥವಾ ಇತರ ಕಾಮಗಾರಿಗೆ ತೆರಳಿದರೆ, ಅಂತಹವರನ್ನು ತಡೆದು ಪೊಲೀಸರು ಅವರ ಬೈಕ್‌ ಅಥವಾ ಬೇರೆ ವಾಹನ ಸೀಜ್‌ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಹೀಗಾಗಿ ಸರ್ಕಾರ ಕೇವಲ ಆದೇಶ ಮಾಡಿ ಕೂರದೇ ಅದಕ್ಕೆ ಸಂಬಂಧಿಸಿದ ಸ್ಪಷ್ಟ ಮಾರ್ಗಸೂಚಿ, ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂಬ ಅಭಿಪ್ರಾಯ ಕಾರ್ಮಿಕರು- ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಂದ ವ್ಯಕ್ತವಾಗುತ್ತಿದೆ.

ಕಡ್ಡಾಯವಲ್ಲ; ಹಕ್ಕು ಕಲ್ಪಿಸಿದೆ
ಕಾರ್ಮಿಕರನ್ನು ಕಡ್ಡಾಯವಾಗಿ ಊರಿಗೆ ಹೋಗಿ ಎಂದು ಸರ್ಕಾರ ಹೇಳುತ್ತಿಲ್ಲ. ಊರಿಗೆ ಹೋಗುವುದು ಅವರ ಹಕ್ಕು. ಊರಿಗೆ ಹೋಗುತ್ತೇವೆ ಎಂದವರನ್ನು ಕಳುಹಿಸುವುದು ಸರ್ಕಾರದ ಜವಾಬ್ದಾರಿ. ನಾವು ಅದನ್ನು ಮಾಡುತ್ತಿದ್ದೇವೆ. ನಿರ್ಮಾಣ ಸಂಸ್ಥೆಗಳು ಕಾರ್ಮಿಕರನ್ನು ಉಳಿಸಿಕೊಂಡರೆ ಸರ್ಕಾರದ ಅಭ್ಯಂತರವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಟಾರ್‌ ತಿಳಿಸಿದ್ದಾರೆ.

Advertisement

ಅಗತ್ಯ ಕಾರ್ಖಾನೆಗೆ ಮಾತ್ರ ಅವಕಾಶ
ಹಸಿರು ವಲಯದ ಜಿಲ್ಲೆಗಳು ಮತ್ತು ಮಹಾ ನಗರಗಳ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳಲ್ಲಿ ಅಗತ್ಯ ಸೇವೆ ಒದಗಿಸುವ ಕಾರ್ಖಾನೆಗಳನ್ನು ಮಾತ್ರ ತೆರೆಯಲು ಅವಕಾಶ ಕೊಡಲಾಗಿದೆ. ಬಹುತೇಕ ಕಾರ್ಮಿಕರ ಓಡಾಟಕ್ಕಿಂತ ಕಾರ್ಖಾನೆ ಹತ್ತಿರವೇ ಕ್ಯಾಂಪ್‌ ಮಾಡಿ ಅಲ್ಲಿಯೇ ಊಟ ವಸತಿ ಕಲ್ಪಿಸಲು ಕಾರ್ಖಾನೆ ಮಾಲಿಕರಿಗೆ ಸೂಚಿಸಲಾಗಿದೆ ಎಂದು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಸರ್ಕಾರ ಕಟ್ಟಡ ಕಾಮಗಾರಿಗೆ ಅವಕಾಶ
ನೀಡಿ ಇನ್ನೊಂದೆಡೆ ಕಾರ್ಮಿಕರಿಗೆ ಊರಿಗೆ ತೆರಳಲು ಅವಕಾಶ ಕಲ್ಪಿಸಿದರೆ ಹೇಗೆ ಕೆಲಸ ಮಾಡುವುದು?. ಇನ್ನು ಸಂಸ್ಥೆ ಸಿಬ್ಬಂದಿ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಲು ಯಾವ ಇಲಾಖೆಯವರೂ ಅನುಮತಿ ನೀಡುತ್ತಿಲ್ಲ. ಈ ರೀತಿ ಗೊಂದಲದ ಆದೇಶ ಮಾಡಿದರೆ ಹೇಗೆ ಕೆಲಸ ಆರಂಭಿಸುವುದು?.
ರಿಯಲ್‌ ಎಸ್ಟೇಟ್‌ ಸಂಸ್ಥೆ, ಹೆಸರು ಹೇಳಲಿಚ್ಚಿಸದ ಅಧಿಕಾರಿ

ಕಟ್ಟಡ ಕೆಲಸಕ್ಕೆ ಹೋಗಬಹುದು ಅಂತ ಹೇಳಿದ್ದಾರೆ. ಆದರೆ, ಕೆಲಸಕ್ಕೆ ಹೋಗುವಾಗ ಪೊಲೀಸರು ತಡೆದು ನಮ್ಮ ಬೈಕ್‌ ಜಪ್ತಿ ಮಾಡುತ್ತಿದ್ದಾರೆ. ಹೀಗಾಗಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ.
ಅರ್ಜುನ್‌ ಕಳೆ, ಕಟ್ಟಡ ಕಾರ್ಮಿಕ

●ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next