Advertisement

ಸ್ವಹಿತಾಸಕ್ತಿ ಸಂಘರ್ಷ: ನ. 12ಕ್ಕೆ ದ್ರಾವಿಡ್‌ ವಿಚಾರಣೆ

12:25 PM Nov 05, 2019 | sudhir |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಅಧ್ಯಕ್ಷ ರಾಹುಲ್‌ ದ್ರಾವಿಡ್‌ ಅವರಿಗೆ ಸ್ವಹಿತಾಸಕ್ತಿ ಸಂಘರ್ಷ ಪ್ರಕರಣದಲ್ಲಿ ನ. 12ರಂದು ವಿಚಾರಣಾ ಸಮಿತಿಯೆದುರು ಹಾಜರಾಗುವಂತೆ ಸೂಚಿಸಲಾಗಿದೆ. ಬಿಸಿಸಿಐನ ನೈತಿಕ ವಿಚಾರಣಾಧಿಕಾರಿ ಈ ವಿಚಾರವನ್ನು ದ್ರಾವಿಡ್‌ ಗಮನಕ್ಕೆ ತಂದಿದ್ದಾರೆ.

Advertisement

ಸೆ. 26ಕ್ಕೆ ದ್ರಾವಿಡ್‌ ವಿಚಾರಣಾಧಿ ಕಾರಿಯೆದುರು ಹಾಜರಾಗಿ ತಮ್ಮ ಪರವಾದ ಅಂಶಗಳನ್ನು ಗಮನಕ್ಕೆ ತಂದಿದ್ದಾರೆ. ಸದ್ಯ ಈ ಪ್ರಕರಣದ ಮುಂದುವರಿದ ವಿಚಾರಗಳನ್ನು ಪರಿಶೀಲಿಸಲಾಗುತ್ತದೆ.

ದ್ರಾವಿಡ್‌ ಮೇಲೇನು ಆರೋಪ?
ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ ಆಜೀವ ಸದಸ್ಯ ಸಂಜೀವ್‌ ಗುಪ್ತ, ದ್ರಾವಿಡ್‌ಗೆ ಸ್ವಹಿತಾಸಕ್ತಿ ಸಮಸ್ಯೆಯಿದೆ ಎಂದು ಆರೋಪಿಸಿದ್ದರು. ಎನ್‌ಸಿಎ ಮುಖ್ಯಸ್ಥನಾಗಿರುವುದರ ಜತೆಗೆ, ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲಕ ಸಂಸ್ಥೆ ಇಂಡಿಯಾ ಸಿಮೆಂಟ್ಸ್‌ನ ಉಪಾಧ್ಯ ಕ್ಷರೂ ಆಗಿದ್ದಾರೆ. ಇದರಿಂದ ಸ್ವಹಿತಾಸಕ್ತಿ ಪ್ರಕರಣ ಉದ್ಭವಿಸುತ್ತದೆ ಎನ್ನುವುದು ಅವರ ವಾದ.

ಇದಕ್ಕೆ ಪ್ರತಿಕ್ರಿಯಿಸಿದ್ದ ದ್ರಾವಿಡ್‌, ತಾನು ಆ ಸಂಸ್ಥೆಯ ಹುದ್ದೆಯಲ್ಲಿದ್ದರೂ ಅನಿರ್ದಿಷ್ಟಾವಧಿ ರಜೆಯಲ್ಲಿದ್ದೇನೆ. ಸಂಬಳವನ್ನೂ ಪಡೆಯುವುದಿಲ್ಲ. ಜತೆಗೆ ಚೆನ್ನೈ ತಂಡದೊಂದಿಗೆ ತನಗೆ ಯಾವ ಸಂಬಂಧವೂ ಇಲ್ಲ. ಆದ್ದರಿಂದ ಸ್ವಹಿತಾಸಕ್ತಿ ಸಮಸ್ಯೆಯೇ ಇಲ್ಲ ಎಂದಿದ್ದಾರೆ.

ಬಿಸಿಸಿಐ ಅಧ್ಯಕ್ಷ ಗಂಗೂಲಿ ಕೂಡ ದ್ರಾವಿಡ್‌ ಅವರನ್ನು ಬೆಂಬಲಿಸಿದ್ದಾರೆ. ತಿಂಗಳ ಹಿಂದೆಯೇ ಮಾತನಾಡಿದ್ದ ಅವರು, ಭಾರತ ಕ್ರಿಕೆಟ್‌ನಲ್ಲಿ ಈಗ ಸ್ವಹಿತಾಸಕ್ತಿ ಎಂಬ ಹೊಸ ಅಲೆ ಶುರುವಾಗಿದೆ. ಈಗ ದ್ರಾವಿಡ್‌ಗೂ ಸ್ವಹಿತಾಸಕ್ತಿ ಎಂದು ಆರೋಪಿಸಲಾಗಿದೆ. ಭಾರತ ಕ್ರಿಕೆಟನ್ನು ದೇವರೇ ಕಾಪಾಡಬೇಕು ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next