Advertisement

Terrorism: ಉಗ್ರರ ಆಸ್ತಿ ಜಪ್ತಿ: ಭಾರತದಿಂದ ವಿಶ್ವರಾಷ್ಟ್ರಗಳಿಗೆ ಎಚ್ಚರಿಕೆಯ ಕರೆಗಂಟೆ

12:02 AM Sep 25, 2023 | Team Udayavani |

ಕೆನಡಾದಲ್ಲಿ ನಡೆದಿದ್ದ ಖಲಿಸ್ಥಾನಿ ಉಗ್ರ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಏಜೆಂಟರ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಅವರ ಹೇಳಿಕೆ ಉಭಯ ದೇಶಗಳ ನಡುವಣ ಸಂಬಂಧವನ್ನು ಹದಗೆಡುವಂತೆ ಮಾಡಿದೆ. ಈ ವಿಷಯವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ವಿಶ್ವದ ಬಲಾಡ್ಯ ರಾಷ್ಟ್ರಗಳ ನಾಯಕರನ್ನೇ ತಲೆಕೆಡಿಸಿಕೊಳ್ಳುವಂತೆ ಮಾಡಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಭಾರತ ಸರಕಾರ ಖಲಿಸ್ಥಾನಿ ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಮೂಲಕ ಭಾರತ ಸರಕಾರ, ದೇಶದಲ್ಲಿ ವಿವಿಧ ಅಪರಾಧ ಕೃತ್ಯಗಳನ್ನು ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎಲ್ಲ ಉಗ್ರರಿಗೆ ಮಾತ್ರವಲ್ಲದೆ ಈ ಉಗ್ರರ ಬೆಂಬಲಕ್ಕೆ ನಿಂತಿರುವ ಅಲ್ಲಿನ ಸರಕಾರ, ಸಂಘಟನೆಗಳು, ನಾಯಕರಿಗೆ ಕೂಡ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

Advertisement

ದೇಶದಲ್ಲಿ ವಿವಿಧ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ದೇಶದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗಿ ದೇಶದಿಂದ ಪರಾರಿಯಾಗಿ ವಿದೇಶಗಳಲ್ಲಿ ನೆಲೆಯಾಗಿರುವ ಖಲಿಸ್ಥಾನಿ ಉಗ್ರರ ಹೆಸರುಗಳನ್ನು ಪಟ್ಟಿ ಮಾಡಿ ಇವರೆಲ್ಲರ ಆಸ್ತಿ, ಜಮೀನುಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಗೆ ರವಿವಾರ ಚಾಲನೆ ನೀಡಲಾಗಿದೆ.

ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಸಿಕ್ಖ್ ಪ್ರತ್ಯೇಕತಾವಾದಿ ನಾಯಕರು ಕಳೆದೊಂದು ವರ್ಷದಿಂದೀಚೆಗೆ ಒಂದಿಷ್ಟು ಸಕ್ರಿಯ ರಾಗತೊಡಗಿದ್ದು ಅಲ್ಲಿನ ದೇವಾಲಯಗಳು, ಗುರುದ್ವಾರಗಳು, ರಾಜತಾಂತ್ರಿಕ ಕಚೇರಿ, ಭಾರತೀಯ ಸಮುದಾಯದವರ ಮೇಲೆ ದಾಳಿ, ಬೆದರಿಕೆ ಒಡ್ಡುವಂತಹ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಭಾರತದಲ್ಲಿಯೂ ಸಿಕ್ಖ್ ಪ್ರತ್ಯೇಕತಾವಾದಿ ಹೋರಾಟ ಮತ್ತೆ ಚಿಗುರೊಡೆಯುವಂತೆ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದರು. ಇವೆಲ್ಲದರ ಬಗೆಗೆ ಮಾಹಿತಿಗಳನ್ನು ಕಲೆಹಾಕುತ್ತಲೇ ಬಂದಿರುವ ದೇಶದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಈ ಬಗ್ಗೆ ಸರಕಾರಕ್ಕೆ ಮಾಹಿತಿಯನ್ನು ನೀಡಿದ್ದವು. ಅದರಂತೆ ಸರಕಾರ ಕೂಡ ಈ ಉಗ್ರರು ಆಶ್ರಯ ಪಡೆದಿರುವ ದೇಶಗಳಲ್ಲಿನ ಸರಕಾರಕ್ಕೆ ಸೂಕ್ತ ಸಾಕ್ಷ್ಯಾ ಧಾರಗಳನ್ನು ಸಲ್ಲಿಸಿ ಅವರ ಗಡೀಪಾರಿಗೆ ಮನವಿ ಸಲ್ಲಿಸುತ್ತಲೇ ಬಂದಿತ್ತು.

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ನೀಡಿದ ವಿವಾದಾತ್ಮಕ ಹೇಳಿಕೆಯ ಬಳಿಕ ಈ ವಿಷಯ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಇಂಥ ಸಂದರ್ಭದಲ್ಲಿಯೇ ಭಾರತ ಸರಕಾರ ಬ್ರಿಟನ್‌, ಪಾಕಿಸ್ಥಾನ, ಆಸ್ಟ್ರೇ ಲಿಯಾ, ಕೆನಡಾ, ಅಮೆರಿಕ, ಯುರೋಪ್‌, ದುಬಾೖ ಸಹಿತ ವಿವಿಧ ದೇಶಗಳಲ್ಲಿ ತಲೆಮರೆಸಿಕೊಂಡಿರುವ 19 ಖಲಿಸ್ಥಾನಿ ಉಗ್ರರ ಪಟ್ಟಿಯನ್ನು ಬಿಡುಗಡೆಗೊಳಿಸಿ ಇವರೆಲ್ಲರ ಆಸ್ತಿಯನ್ನು ಜಪ್ತಿ ಮಾಡುವುದಾಗಿ ಘೋಷಿಸಿದೆ. ಭಾರತ ಸರಕಾರದ ಈ ನಡೆ ಉಗ್ರರಿಗೆ ಆಶ್ರಯ ನೀಡುತ್ತ ಬಂದಿರುವ ವಿದೇಶಗಳಿಗೂ ಕೂಡ ಇಕ್ಕಟ್ಟಿನ ಸನ್ನಿವೇಶವನ್ನು ಸೃಷ್ಟಿಸಿದೆ. ಉಗ್ರರ ಆಸ್ತಿಪಾಸ್ತಿ ಜಪ್ತಿ ಹೊಸ ಬೆಳವಣಿಗೆಯಲ್ಲವಾದರೂ ಖಲಿಸ್ಥಾನಿ ಉಗ್ರರ ಕುರಿತಂತೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರು ವಾಗಲೇ ಭಾರತ ಸರಕಾರ ಈ ಪ್ರಕ್ರಿಯೆಯನ್ನು ಚುರುಕು ಗೊಳಿಸಿರುವುದು ರಾಜತಾಂತ್ರಿಕ ನೆಲೆಯಲ್ಲಿ ಅತ್ಯಂತ ಸಕಾಲಿಕ ಮತ್ತು ಸಮಂಜಸವಾದ ನಡೆಯೇ ಸರಿ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next