Advertisement

‘ಸಮ್ಮೇಳನಗಳಿಗೆ ನಿರ್ದಿಷ್ಟ ಉದ್ದೇಶ ಅಗತ್ಯ’ 

10:31 AM Sep 16, 2018 | |

ದೇರಳಕಟ್ಟೆ: ತಾಲೂಕು ಮಟ್ಟದಲ್ಲಿ ನಡೆಯುವ ಇಂತಹ ಸಾಹಿತ್ಯ ಸಮ್ಮೇಳನಗಳು ಸ್ಥಳೀಯ ವಿಚಾರಗಳು, ಈಗ ಎದುರಿಸುತ್ತಿರುವ ಸಮಸ್ಯೆಗಳ ಉದ್ದೇಶವನ್ನಿಟ್ಟುಕೊಂಡು ನಡೆಸಿದರೆ ಸೂಕ್ತ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ| ಬಿ. ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ಸಾಹಿತ್ಯ ಪರಿಷ ತ್‌ ಮಂಗಳೂರು ತಾಲೂಕು ಘಟಕದ ಆಶ್ರಯದಲ್ಲಿ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಏಕೀಕರಣ ಸೇರಿದಂತೆ ವಿವಿಧ ಕನ್ನಡ ಪರ ವಿಚಾರಗಳ ಉದ್ದೇಶವನ್ನಿಟ್ಟುಕೊಂಡು ಹಿಂದೆ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು ಕಾರ್ಯಕ್ರಮಕ್ಕೆ ಸೀಮಿತವಾಗುತ್ತಿರುವುದು ಖೇದಕರ ಎಂದರು.

ಆಧುನಿಕ ಸಾಹಿತ್ಯದಲ್ಲಿ ಕಾದಂಬರಿ, ಕಥೆ ಸೇರಿದಂತೆ ಕನ್ನಡದ ಪ್ರಥಮ ಕೃತಿಗಳು ಕರಾವಳಿಯ ಲೇಖಕರೇ ಬರೆದಿದ್ದಾರೆ. ಕನ್ನಡದ ಪ್ರಥಮ ಪತ್ರಿಕೆ ಪ್ರಾರಂಭಗೊಂಡಿದ್ದು ಕರಾವಳಿಯಲ್ಲೇ ಎಂದರು.

ಸಾಹಿತ್ಯದ ಬಗ್ಗೆ ಒಲವು ಕಡಿಮೆ
ಆಧುನಿಕ ಕಾಲದಲ್ಲಿ ಸಾಹಿತ್ಯದ ಬಗ್ಗೆ ಒಲವು ಕಡಿಮೆಯಾಗುತ್ತಿದ್ದು, ಧರ್ಮಾಧಾರಿತ, ಜಾತಿ ಆಧಾರಿತ ಕಾರ್ಯಕ್ರಮ, ವಿಚಾರಗಳು ಮೇಳೈಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಗಳು ಒಂದು ವಿಚಾರವನ್ನು ವಸ್ತುವನ್ನಾಗಿಸಿ ಕಾರ್ಯಕ್ರಮಗಳು ನಡೆಯಬೇಕು. ಇದು ಕೇವಲ ಮಂಗಳೂರು ತಾಲೂಕಿಗೆ ಸೀಮಿತವಾಗದೆ ಭೌಗೋಳಿಕ, ಆಡಳಿತಾತ್ಮಕ ಗಡಿಗಳನ್ನು ದಾಟಿ ಎಲ್ಲರೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಆಶಯ ಭಾಷಣ ಮಾಡಿದರು.

ಕೃತಿ ಬಿಡುಗಡೆ
ಪತ್ರಕರ್ತ ಹಾಗೂ ಸಾಹಿತಿ ಕುಡುಮಲ್ಲಿಗೆ ಕೃಷ್ಣ ಶೆಟ್ಟಿ ಅವರ ಯಕ್ಷಗಾನ ಕೃತಿ ಮತ್ತು ಪ್ರಫುಲ್ಲಚಂದ್ರ ತಿಂಗಳಾಯ ಬರೆದ ‘ನಾಟಕಕಾರ ಮಾಧವ ತಿಂಗಳಾಯ’ ಅವರ ಕುರಿತಾದ ಕೃತಿಯನ್ನು ರತ್ನ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಬಿಡುಗಡೆ ಮಾಡಿದರು.

Advertisement

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ತಾ. ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಮಲಾರ್‌, ಜಿ.ಪಂ. ಸದಸ್ಯರಾದ ಧನಲಕ್ಷ್ಮಿ ಗಟ್ಟಿ, ರಶೀದಾ ಬಾನು, ಬೆಳ್ಮ ಗ್ರಾ.ಪಂ. ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ರತ್ನ ಎಜುಕೇಶನ್‌ ಟ್ರಸ್ಟ್‌ನ ಕಾರ್ಯದರ್ಶಿ ಸೌಮ್ಯಾ ಆರ್‌. ಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ| ಎಂ.ಪಿ. ಶ್ರೀನಾಥ್‌ ಉಜಿರೆ, ಬಿ. ತಮ್ಮಯ್ಯ, ಗೌರವ ಕೋಶಾಧ್ಯಕ್ಷ ಪೂರ್ಣಿಮಾ ರಾವ್‌ ಪೇಜಾವರ, ಬಂಟ್ವಾಳ ಘಟಕದ ಅಧ್ಯಕ್ಷ ಕೆ. ಮೋಹನ್‌ ರಾವ್‌ ಉಪಸ್ಥಿತರಿದ್ದರು.

ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ವಿಜಯ ಲಕ್ಷ್ಮೀ ಬಿ. ಶೆಟ್ಟಿ ಸ್ವಾಗತಿಸಿದರು. ಚೇತನ್‌ ಕದ್ರಿ ಅಧ್ಯಕ್ಷರ ಮಾಹಿತಿ ನೀಡಿದರು. ಕಸಾಪ ಮಂಗಳೂರು ತಾಲೂಕು ಘಟಕದ ಕೋಶಾಧಿಕಾರಿ ಪ್ರೊ| ಬಿ. ಕೃಷ್ಣ ಮೂರ್ತಿ ಪುಸ್ತಕದ ಮತ್ತು ಲೇಖಕರ ಪರಿಚಯ ನೀಡಿದರು. ಕಾರ್ಯದರ್ಶಿ ದೇವಕಿ ಅಚ್ಯುತ ವಂದಿಸಿದರು. ಕಾರ್ಯದರ್ಶಿ ಡಾ| ಪದ್ಮನಾಭ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.

ಕನ್ನಡ ಓದು, ಬರೆಯುವವರು ಕಡಿಮೆಯಾಗಿಲ್ಲ
ಹಿರಿಯ ಲೇಖಕಿ, ಸಂಶೋಧಕಿ, ಸಂಘಟಕಿ ಬಿ.ಎಂ. ರೋಹಿಣಿ ಸಮ್ಮೇಳ ನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದಲ್ಲಿ ಬರೆಯುವವರ ಸಂಖ್ಯೆ ಮತ್ತು ಓದುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಪ್ರಕಾಶಕರೊಬ್ಬರ ಮಾಹಿತಿಯಂತೆ ಅವರ ಪ್ರಕಾಶನದಲ್ಲಿ ಮುದ್ರಣಗೊಂಡ ಪುಸ್ತಕಗಳು ಒಂದು ವರ್ಷದೊಳಗೆ ಮರುಮುದ್ರಣವಾಗುತ್ತಿರುವುದು ಒಂದು ಉದಾಹರಣೆ.

ಪ್ರತೀ ವಾರವೂ ಪತ್ರಿಕೆಯ ಸಾದರ ಸ್ವೀಕಾರದಲ್ಲಿ ಪ್ರಕಟವಾಗುವ ಪುಸ್ತಕಗಳ ಮಾಹಿತಿಗೆ ಕಡಿಮೆಯಾಗಿಲ್ಲ. ಕನ್ನಡ ಅವಸಾನ ಆಯಿತು ಎನ್ನುವುದು ಬೇಡ ಯುವ ಪೀಳಿಗೆಯೂ ಕನ್ನಡ ಅಭಿಮಾನವನ್ನು ಉಳಿಸಿಕೊಂಡಿದ್ದಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next