Advertisement

ಪೈಗಂಬರ್‌ ವಿರುದ್ಧ ಅವಮಾನಕರ ಹೇಳಿಕೆಗೆ ಖಂಡನೆ

10:19 AM Jun 12, 2022 | Team Udayavani |

ಕಲಬುರಗಿ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ವಿರುದ್ಧ ಬಿಜೆಪಿ ನಾಯಕರು ಅವಹೇಳಕಾರಿಯಾಗಿ ಮಾತನಾಡಿ ಅವಮಾನ ಮಾಡಿದ್ದನ್ನು ಖಂಡಿಸಿ ನಗರದ ನ್ಯಾಷನಲ್‌ ಚೌಕ್‌ನಲ್ಲಿ ರಝಾ ಅಕಾಡೆಮಿ ಹಾಗೂ ಇತರೆ ಮುಸ್ಲಿಂ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದವು.

Advertisement

ಬಿಜೆಪಿ ನಾಯಕಿ ನೂಪುರ ಶರ್ಮಾ, ನವೀನ್‌ ಜಿಂದಾಲ್‌ ಮತ್ತು ಶಾಸಕ ರಾಜಸಿಂಗ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನೂರಾರು ಜನ ಎರಡು ಗಂಟೆಗಳಿಗೂ ಹೆಚ್ಚು ಕಾಲ ವೃತ್ತದಲ್ಲಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ರಝಾ ಅಕಾಡೆಮಿಯ ಅಧ್ಯಕ್ಷ ಮಹಮ್ಮದ್‌ ರಯೀಸ್‌, ಬಿಜೆಪಿಯ ಉನ್ನತ ಸ್ಥಾನದಲ್ಲಿರುವ ಮುಖಂಡರು, ಶಾಸಕರು ಮತ್ತು ಸಂಸದರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಾದುದ್ದಲ್ಲ. ನಿರ್ದಿಷ್ಟವಾಗಿ ಮಾತನಾಡುವಾಗ ಒಂದು ಕೋಮಿನ ಜನರನ್ನು ಗುರಿಯಾಗಿಸಬಾರದು. ಅದೂ ಅಲ್ಲದೇ, ಶಾಸಕ ರಾಜಾ ಸಿಂಗ್‌ ಸೂಫಿ ಸಂತ ಹಜರತ್‌ ಖಾಜಾ ಗರೀಬ್‌ ನವಾಜ್‌ ಕುರಿತು ಮಾತನಾಡಿರುವುದು ಖಂಡನೀಯ. ಒಬ್ಬ ಶಾಸಕರಾಗಿದ್ದು ಆಧಾರಗಳು ಇಲ್ಲದೇ ಮಾತನಾಡುವುದು ಶೋಭೆಯಲ್ಲ. ಕೂಡಲೇ ಇವರೆಲ್ಲರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಮ್ಮದ್‌ ಖಯೂಮ್‌, ಮಹಮ್ಮದ್‌ ಜಾಫರ್‌, ಮೌಸುಮ್‌ ಅಲಿ, ಇಸ್ಮಾಯಿಲ್‌ ಆಲಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next