Advertisement

ಸರ್ಕಾರದ ಸುಪರ್ದಿಗೆ ಕೊಂಚೂರು ದೇವಸ್ಥಾನ

04:53 PM Jul 13, 2021 | Team Udayavani |

ವಾಡಿ: ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸುಪ್ರಸಿದ್ಧ ಹನುಮಾನ ದೇವಸ್ಥಾನ ಆಡಳಿತ ಜವಾಬ್ದಾರಿ ಈಗ ಸರ್ಕಾರದ ಹಿಡಿತಕ್ಕೆ ಜಾರುವ ಪ್ರಸಂಗ ಎದುರಾಗಿದೆ. ದೇವರ ಪೂಜೆಗೆ ಸಂಬಂಧಿಸಿದಂತೆ ಕೊಂಚೂರು ಗ್ರಾಮದ ಪೂಜಾರಿ ಸಮುದಾಯದ ಕುಟುಂಬಗಳ ಮಧ್ಯೆ ಉಂಟಾಗಿರುವ ಆಂತರಿಕ ಜಗಳ ಬೀದಿಗೆ ಬಿದ್ದಿದ್ದು, ನೂರಾರು ವರ್ಷಗಳಿಂದ ಕಣ್ಮರೆಯಾಗಿದ್ದ ದೇವಸ್ಥಾನಕ್ಕೆ ಸೇರಿದ 127 ಎಕರೆ ಜಮೀನು ಅರ್ಚಕರ ಪರಸ್ಪರ ಸಂಘರ್ಷದಿಂದ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ.

Advertisement

ಈ ಕುರಿತು ಸೋಮವಾರ ಕೊಂಚೂರು ದೇವಸ್ಥಾನ ಸಭಾಂಗಣದಲ್ಲಿ ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ದೇವಸ್ಥಾನದ ಹೆಸರಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಇರುವುದು ಗೊತ್ತಾಗಿದೆ. ಅದು ನಿಜಾಮ ಸರ್ಕಾರದ ಆಡಳಿತಾವಧಿ ಯಿಂದ ಹಾಗೂ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಯಾದಾಗಿನಿಂದ ದೇವಸ್ಥಾನದ ಅರ್ಚಕ ಕುಟುಂಬಗಳ ಹೆಸರಿಗೆ ವರ್ಗಾವಣೆಯಾಗಿರುವುದು ದಾಖಲಾತಿ ಪರಿಶೀಲನೆಯಿಂದ ಸ್ಪಷ್ಟವಾಯಿತು.

ಇದನ್ನು ಸಭೆಯಲ್ಲಿ ಅರ್ಚಕ (ಪೂಜಾರಿ) ಕುಟುಂಬಸ್ಥರೂ ಒಪ್ಪಿಕೊಂಡು ಅಚ್ಚರಿ ಮೂಡಿಸಿದರು. ಕೊಂಚೂರು ಹನುಮಾನ ದೇವಸ್ಥಾನಕ್ಕೆ ಸೇರಿದ ಒಟ್ಟು ಜಮೀನಿನ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅರ್ಚಕರು ಹಾಗೂ ಗ್ರಾಮದ ಮುಖಂಡರು ಗುಪ್ತಗಾಮಿನಿಯಾಗಿದ್ದ ಆಸ್ತಿಯ ವಿವರವನ್ನು ಬಹಿರಂಗಪಡಿಸಿದರು. ಚಾಮನೂರು ಗ್ರಾಮದಲ್ಲಿ 9.37 ಎಕರೆ, ಅಳ್ಳೊಳ್ಳಿಯಲ್ಲಿ 9 ಎಕರೆ, ದಂಡಗುಂಡದಲ್ಲಿ 6 ಎಕರೆ, ರಾವೂರಿನಲ್ಲಿ 24 ಎಕರೆ, ಮಾಲಗತ್ತಿಯಲ್ಲಿ 11.24 ಎಕರೆ, ಕುಲಕುಂದಾ 8.16 ಎಕರೆ, ನರಿಬೋಳಿಯಲ್ಲಿ 9 ಎಕರೆ ಸೇರಿದಂತೆ ವಿವಿಧೆಡೆಯಲ್ಲಿ ಒಟ್ಟು 127 ಎಕರೆ ಭೂಮಿ ಇದೆ ಎಂದು ಅಧಿ ಕಾರಿಗಳಿಗೆ ಮಾಹಿತಿ ನೀಡಿದರು. ಇದರಲ್ಲಿ ಕೆಲ ಗ್ರಾಮಗಳಲ್ಲಿನ ದೇವಸ್ಥಾನದ ಜಮೀನುಗಳನ್ನು ಅರ್ಚಕರು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬುದು ಒಂದು ಗುಂಪಿನ ಆರೋಪವಾದರೆ, ದೇವಸ್ಥಾನದ ಟ್ರಸ್ಟ್‌ನವರು ಐದಾರು ಎಕರೆ ಭೂಮಿ ಮಾರಿಕೊಂಡು ಹಣ ಲಪಟಾಯಿಸಿದ್ದಲ್ಲದೆ ಕಳೆದ ಆರು ವರ್ಷಗಳಿಂದ ಲೆಕ್ಕಪತ್ರ ನೀಡಿಲ್ಲ ಎಂದು ಇನ್ನೊಂದು ಗುಂಪಿನ ಮುಖಂಡರು ಆರೋಪಿಸಿದರು.

ಒಟ್ಟಾರೆ ದೇವಸ್ಥಾನದ ಹಳೆಯ ಟ್ರಸ್ಟ್‌ ಮತ್ತು ಹೊಸ ಟ್ರಸ್ಟ್‌ ಸದಸ್ಯರ ಮಧ್ಯೆ ಉಂಟಾಗಿರುವ ಮನಸ್ತಾಪವು ಅರ್ಚಕರ ಕುಟುಂಬಗಳ ಕಾಳಗವಾಗಿ ಬದಲಾಗುವ ಮೂಲಕ ದೇವರಿಗೆ ಸೇರಿದ ಅಪಾರ ಆಸ್ತಿಯನ್ನು ಬಯಲಿಗೆ ತಂದಿಟ್ಟಿತು. 15 ದಿನಗಳ ಗಡುವು: ಈ ಹಿಂದೆ ಕೇವಲ ಎರಡು ಪೂಜಾರಿ ಕುಟುಂಬಗಳು ದೇವರ ಪೂಜೆ ಮಾಡುತ್ತಿದ್ದರು. ಈಗ ಕುಟುಂಬಗಳು ಬೆಳೆದಿವೆ. ಬೇಡಿಕೆ ಹೆಚ್ಚಿದೆ. ಯಾರಾರು ಎಷ್ಟು ವರ್ಷ ಪೂಜೆ ಮಾಡಬೇಕು ಎಂಬುದನ್ನು ಟ್ರಸ್ಟ್‌ ಪದಾಧಿ  ಕಾರಿಗಳು, ಮುಖಂಡರು ಮತ್ತು ಅರ್ಚಕರು ಮಾತಾಡಿಕೊಂಡು ಸಹಮತದ ನಿರ್ಣಯಕ್ಕೆ ಬನ್ನಿ. 15 ದಿನದ ಒಳಗಾಗಿ ಒಪ್ಪಂದ ಏರ್ಪಟ್ಟರೆ ಉತ್ತಮ.

ಇಲ್ಲವಾದರೆ ಕೊಂಚೂರು ಹನುಮಾನ ದೇವಸ್ಥಾನವನ್ನು ತಾಲೂಕು ಆಡಳಿತ ತನ್ನ ವಶಕ್ಕೆ ಪಡೆಯುತ್ತದೆ. ದೇವಸ್ಥಾನದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದನ್ನು ಮರಳಿಸಬೇಕು ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಎಚ್ಚರಿಸಿದರು. ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿ ಕಾರಿ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ, ದೇವೇಂದ್ರ ರೆಡ್ಡಿ, ಕಂದಾಯ ನಿರೀಕ್ಷಕ ಪ್ರಶಾಂತ ರಾಠೊಡ, ತಲಾಟಿ ಸಂಗಮೇಶ ಹಾಗರಗಿ, ಮುಖಂಡರಾದ ಅರುಣಕುಮಾರ ಲೋಯಾ, ವಿಜಯಕುಮಾರ ಕುಲಕರ್ಣಿ, ಜುಮ್ಮಣ್ಣ ಪೂಜಾರಿ, ಮಹಾದೇವಿ ಕೊಂಚೂರ, ಸುರೇಶಗೌಡ, ರುದ್ರುಮುನಿ ಮಠಪತಿ, ದ್ಯಾವಣ್ಣ ಪೂಜಾರಿ, ಅಶೋಕ ಪೂಜಾರಿ, ಚಂದ್ರಶೇಖರ ಪೂಜಾರಿ, ರವೀಂದ್ರ ಪೂಜಾರಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು. ಸಭೆಗೆ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು

Advertisement

 

Advertisement

Udayavani is now on Telegram. Click here to join our channel and stay updated with the latest news.

Next