Advertisement

ಏಕಾಗ್ರತೆ ಬದುಕಿನ ಗುರಿ ಸಾಧನೆಗೆ ದಾರಿ

01:25 PM Oct 24, 2018 | |

ನಾವು ಮಾಡುವ ಯಾವುದೇ ಕೆಲಸದಲ್ಲಿ ಏಕಾಗ್ರತೆಯೊಂದಿದ್ದರೆ ಸುಲಭವಾಗಿ ಗುರಿಸಾಧನೆ ಮಾಡಬಹುದು ಎಂಬುದು ಸಾಧಕರ ಅನುಭವದ ಮಾತು. ಏಕಾಗ್ರತೆಯನ್ನು ಕೊಡಿಸುವುದು ಬೇರೆಯವರಿಂದ ಸಾಧ್ಯವಿಲ್ಲ. ನಾವೇ ನಮ್ಮೊಳಗೆ ಅದನ್ನು ಹುಡಕಬೇಕು. ಅದಕ್ಕಾಗಿ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು. ಈ ಕುರಿತು ಮಾನಸಿಕವಾಗಿ ಮಾತ್ರವಲ್ಲ ದೈಹಿಕ ಸಿದ್ಧತೆಯನ್ನೂ ಮಾಡಿಕೊಳ್ಳಬೇಕು.

Advertisement

ಮನಸ್ಸು ಚಂಚಲವಾಗಿದ್ದರೆ ಓದು, ಬರವಣಿಗೆ ಮಾತ್ರವಲ್ಲ, ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಎಲ್ಲರಿಗೂ ಇದ್ದೇ ಇರುತ್ತದೆ. ಯಾವುದೇ ಒಂದು ಕಾರ್ಯದಲ್ಲಿ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳುವುದು ಕಷ್ಟ. ಆದರೆ ಅಸಾಧ್ಯವಾದುದು ಎನಲ್ಲ,

ಪುಸ್ತಕ ಓದಲು ಕುಳಿತರೆ ಏಕಾಗ್ರತೆಯಿಂದ ಒಂದು ಗಂಟೆ ಓದಲು ಸಾಧ್ಯವಾಗುವುದಿಲ್ಲ ಎನ್ನುವುದು ಹೆಚ್ಚಿನ ವಿದ್ಯಾರ್ಥಿಗಳ ಅಳಲಾದರೆ, ಮಕ್ಕಳಂತೂ ಎಷ್ಟೇ ಓದಿದರೂ ಉತ್ತಮ ಅಂಕಗಳಿಸುತ್ತಿಲ್ಲ ಎನ್ನುವುದು ಹೆತ್ತವರ ದೂರು. ಆದರೆ ಇದಕ್ಕೆಲ್ಲ ಮೂಲ ಕಾರಣ ಏಕಾಗ್ರತೆಯ ಸಮಸ್ಯೆಯಾದರೂ ಇದನ್ನು ಕಂಡುಕೊಳ್ಳುವಲ್ಲಿ ಹಲವು ಬಾರಿ ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತವರೂ ಎಡವುತ್ತಾರೆ.

ಹೊಸತನಕ್ಕೆ ಮಾರು ಹೋಗುತ್ತಿರುವ ಇಂದಿನ ಯುವಜನತೆ ಸಮಾಜದ ಇತರ ಸಂಗತಿಗಳ ನಡುವೆ ಒಂದೇ ವಿಚಾರದಲ್ಲಿ ಏಕಾಗ್ರತೆ ಕಂಡುಕೊಳ್ಳಲು ಸಾಧ್ಯ ವಾಗುತ್ತಿಲ್ಲ. ಹೀಗಾಗಿ ಅವರ ಬದುಕಿನ ಗುರಿಯೂ ಅಸ್ಪಷ್ಟವಾಗಿರುತ್ತದೆ. ಜತೆಗೆ ಅವರು ಯಾವ ದಾರಿಯಲ್ಲಿ ಸಾಗಬೇಕು ಎಂಬುದು ತಿಳಿಯದೆ ಗೊಂದಲಕ್ಕೊಳಗಾಗಿ ಬದುಕಿನಲ್ಲಿ ವೈಫ‌ಲ್ಯವನ್ನು ಅನುಭವಿಸುತ್ತಾರೆ.

ಬದುಕಿನ ಗುರಿ ಸಾಧನೆಗೆ ಮುಖ್ಯ
ಏಕ ಅಂದರೆ ‘ಒಂದು’ ಅಗ್ರ ಅಂದರೆ ;ತುದಿ’. ಏಕಾಗ್ರತೆ ಅಂದರೆ, ಒಂದೇ ಕಡೆಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದಾಗಿದೆ. ನಮ್ಮ ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಈ ಗುರಿ ಮುಟ್ಟಲು ಏಕಾಗ್ರತೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದರ ಕೊರತೆ ಇಂದಿನ ಸಮಾಜದಲ್ಲಿ ಕಾಣುತ್ತಿದೆ. ಮನಸ್ಸು ಹತೋಟಿಯಲ್ಲಿಡುವ ಕಾರ್ಯಕ್ಕೆ ಮುಂದಾದರೆ ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹೆತ್ತವರಿಗೆ ಮಕ್ಕಳು ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸಬೇಕು ಎಂಬ ಆಸೆ ಇರುತ್ತದೆ. ಇದೇ ಕಾರಣಕ್ಕೆ ಅವರ ಮೇಲೆ ನಿರಂತರವಾಗಿ ಒತ್ತಡವನ್ನು ಹೇರುತ್ತಲೇ ಇರುತ್ತಾರೆ. ಹೆತ್ತವರ ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ದಿನದಲ್ಲಿ 7- 8 ಗಂಟೆ ಓದುತ್ತಲೇ ಇರುತ್ತಾರೆ. ಒತ್ತಡದ ಕೆಲಸಗಳಲ್ಲಿ ಎಂದಿಗೂ ಏಕಾಗ್ರತೆ ಕಾಣಲು ಸಾಧ್ಯವಾಗುವುದಿಲ್ಲ. ಹೀಗಾಗಿ ವೈಫ‌ಲ್ಯವಂತೂ ಕಟ್ಟಿಟ್ಟ ಬುತ್ತಿ. ಪಾಠದ ಜತೆಗೆ ಆಟವೂ ಬೇಕು ಆಗ ಮಾತ್ರ ಮನಸ್ಸು ಹತೋಟಿಯಲ್ಲಿಡಲು ಸಾಧ್ಯವಾದೀತು.

Advertisement

ಧ್ಯಾನದಿಂದ ಏಕಾಗ್ರತೆ
ಏಕಾಗ್ರತೆ ಗಳಿಸಿಕೊಳ್ಳಲು ಪ್ರಮುಖ ಮಾರ್ಗವೆಂದರೆ ಅದು ಧ್ಯಾನ. ಇಂದು ಯಾವುದೇ ಯೋಗ ಪ್ರಾರಂಭಕ್ಕೂ ಮುನ್ನ ಕೆಲವು ನಿಮಿಷ ಧ್ಯಾನಸ್ಥರಾಗಿರಲು ಸಲಹೆ ನೀಡುತ್ತಾರೆ. ಇದರ ಮುಖ್ಯ ಉದ್ದೇಶವೇ ಏಕಾಗ್ರತೆಯನ್ನು ಕಂಡುಕೊಳ್ಳುವುದಾಗಿದೆ. ಹೆತ್ತವರು ತಮ್ಮ ಮಕ್ಕಳನ್ನು ಧ್ಯಾನಕ್ಕೆ ಒತ್ತಾಯಿಸಿದರೆ ಏಕಾಗ್ರತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಂದು ಬಾರಿ ನಾವು ಕೆಲಸ ಮಾಡುವಂತಹ ಪರಿಸರ ಕೂಡ ಏಕಾಗ್ರತೆ ಕಳೆದುಕೊಳ್ಳಲು ಕಾರಣವಾಗುತ್ತದೆ. ಕೆಲಸ ಮಾಡುವಂತಹ ಸಂಸ್ಥೆಗಳಲ್ಲಿ ಆರೋಗ್ಯಕರ ವಾತಾವರಣವಿಲ್ಲದಿದ್ದರೆ ಏಕಾಗ್ರತೆ ಕುಗ್ಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡಗಳು ಹೆಚ್ಚಾಗಿರುತ್ತದೆ. ಅನೇಕ ಬಾರಿ ನಮ್ಮ ಮನಸ್ಸೇ ನಮ್ಮ ಮಾತು ಕೇಳುವುದಿಲ್ಲ. ಇದಕ್ಕೆ ಕಾರಣ ಏಕಾಗ್ರತೆಯ ಕೊರತೆ. ಯಾವುದೇ ಒಂದು ಕೆಲಸವನ್ನು ಆರಿಸಿಕೊಂಡರೆ ಆ ಕೆಲಸ ಮುಗಿಯುವವರೆಗೆ ಬೇರೆ ಕೆಲಸದಲ್ಲಿ ತೊಡಗ ಬಾರದು. ಈ ಸಮಯದಲ್ಲಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಬೇರೆ ಆಲೋಚನೆಗಳನ್ನು ಮನಸ್ಸಿನೊಳಗೆ ಬರಲು ಬಿಡಬಾರದು. ಇಂದು ತಂತ್ರಜ್ಞಾನ ಕ್ಷೇತ್ರ ಮುಂದುವರಿದಿದ್ದು, ವಾಟ್ಸಪ್‌, ಫೇಸ್‌ಬುಕ್‌, ಟ್ವಿಟರ್‌ ಸಹಿತ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿದೆ. ನಮ್ಮಲ್ಲಿ ಏಕಾಗ್ರತೆ ಕಡಿಮೆಯಾಗಲು ಇದು ಕೂಡ ಕಾರಣ.

ಹೆಚ್ಚಿನವರು ಯಾವುದಾದರೊಂದು ಕೆಲಸವನ್ನು ಕೈಗೊಂಡರೆ ಅದನ್ನು ಪೂರ್ಣಗೊಳಿಸುವ ಮೊದಲು ಮತ್ತೊಂದು ಕೆಲಸಕ್ಕೆ ಅಣಿಯಾಗುತ್ತಾರೆ. ಇದು ಏಕಾಗ್ರತೆ ಕಳೆದುಕೊಂಡಿದ್ದೇವೆ ಎನ್ನುವುದರ ಸೂಚಕವಾಗಿದೆ. ವಿಳಂಬ ಪ್ರವೃತ್ತಿಯನ್ನು ಅನುಸರಿಸದೆ ಸಮಯಕ್ಕೆ ಸರಿಯಾಗಿ ಯೋಚಿಸಿದ ಕೆಲಸವನ್ನು ಮಾಡುತ್ತೇನೆ ಎಂಬ ನಿರ್ಧಾರವನ್ನು ಕೈಗೊಂಡರೆ ಏಕಾಗ್ರತೆ ಬೆಳೆಸಿಕೊಳ್ಳಲು ಸಾಧ್ಯವಿದೆ. ಯಾವುದೇ ಕೆಲಸದಲ್ಲಿ ಮಾನಸಿಕ ಶ್ರಮ ಮಾತ್ರ ಇದ್ದರೆ ಸಾಲದು, ದೈಹಿಕವಾಗಿ ಒಂದಷ್ಟು ವ್ಯಾಯಾಮಗಳನ್ನು ಮಾಡಿಕೊಂಡರೆ ಏಕಾಗ್ರತೆ ಬೆಳೆಸಿಕೊಳ್ಳಲು ಸಾಧ್ಯವಿದೆ. 

ಏಕಾಗ್ರತೆ ಬೆಳೆಸಿಕೊಳ್ಳಿ
ನಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಲು ಯೋಗದಿಂದ ಸಾಧ್ಯ. ಇದರಿಂದಾಗಿ ಮನಸ್ಸಿನ ಒತ್ತಡ ನಿವಾರಣೆಯಾಗಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದು. ಅಲ್ಲದೆ, ಮಾನಸಿಕ ಸ್ಥಿರತೆಯನ್ನು ಸಾಧಿಸಬಹುದು. 

ಕೆಲಸಗಳಿಗೆ ಸಮಯ ಮಿತಿ ನಿಗದಿಯಾಗಲಿ
ಹೆಚ್ಚಿನ ಮಂದಿಗೆ ತಾವು ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಸಮಯವನ್ನು ಸರಿಯಾಗಿ ಪಾಲನೆ ಮಾಡದಿರುವುದು ಆಗಿರಬಹುದು. ಹೀಗಾಗಿ ಯಾವುದೇ ಕೆಲಸಗಳನ್ನು ಪ್ರಾರಂಭಿಸುವ ಮುಂಚೆಯೇ ಗಡುವು  ನಿರ್ಧರಿಸಿದರೆ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. 

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next