Advertisement

ದಲಿತ ಸಿಎಂ ವಿಚಾರ ಮುಗಿದ ಅಧ್ಯಾಯ: ಮೊಯ್ಲಿ

05:04 PM Dec 24, 2017 | Team Udayavani |

ಮೈಸೂರು: ದಲಿತ ಮುಖ್ಯಮಂತ್ರಿ ವಿಚಾರ ಮುಗಿದ ಅಧ್ಯಾಯ. ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿರುವುದ ರಿಂದ ಪಕ್ಷ ಅಧಿಕಾರಕ್ಕೆ ಬಂದರೆ ಸಹಜವಾಗಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ನೀವೇ ಊಹಿಸಿಕೊಳ್ಳಿ ಎನ್ನುವ ಮೂಲಕ ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಎಂ.ವೀರಪ್ಪಮೊಯ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಹುಲ್‌ ಗಾಂಧಿಗೆ ಈ ಚುನಾವಣೆ ಸವಾಲಲ್ಲ. ಪ್ರಧಾನಿ ಮೋದಿ ಅವರಿಗೆ ಈ ಚುನಾವಣೆ ನಿಜಕ್ಕೂ ಸವಾಲು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ತರುವ ಮೂಲಕ ಎಐಸಿಸಿ ನೂತನ ಅಧ್ಯಕ್ಷರಿಗೆ ಕೊಡುಗೆ ಕೊಡುತ್ತೇವೆಂದರು. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ರಾಜ್ಯದಲ್ಲಿ ಸತತ 3 ವರ್ಷ ಬರ ಇದ್ದರೂ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಕೇಂದ್ರ ದಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರವಿದ್ದಾಗ 72 ಸಾವಿರ ಕೋಟಿ ಸಾಲಮನ್ನಾ ಮಾಡಿತ್ತು. ಇದರಿಂದ ದೇಶದ 13 ಕೋಟಿ ರೈತರಿಗೆ ಅನುಕೂಲವಾಗಿತ್ತು ಎಂದರು.

ಗುಜರಾತ್‌ ಚುನಾವಣೆ ನಂತರ ಪ್ರಧಾನಿ ಮೋದಿ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದ್ದಾರೆ. ಪ್ರಶ್ನೋತ್ತರ ಕಲಾಪ ಬಿಟ್ಟರೆ ಸಂಸತ್‌ಗೆ ಬರುವುದೇ ಇಲ್ಲ ಎಂದರು. ಕೇಂದ್ರ ಪಿಎಂಜಿಎಸ್‌ವೈ, ಮಾಧ್ಯಮಿಕ ಶಿಕ್ಷಣಕ್ಕೆ ನಯಾಪೈಸೆ ನೀಡಿಲ್ಲ. ನರೇಗಾದಡಿ ಕಳೆದ 6 ತಿಂಗಳಿಂದ ಮೆಟೀರಿಯಲ್‌ ಕಾಂಪೋನೆಂಟ್‌ ಹಣ ಕೊಟ್ಟಿಲ್ಲ. ಒಖೀ ಚಂಡಮಾರುತ ಹಾನಿಗೆ ತಮಿಳುನಾಡಿಗೆ 200 ಕೋಟಿ ಪರಿಹಾರ ಬಿಟ್ಟರೆ ಬೇರೆ ರಾಜ್ಯಗಳಿಗೆ ನಯಾಪೈಸೆ ನೀಡಿಲ್ಲ.

ಈ ಬಗ್ಗೆ ಮಾತನಾಡುವ ಯಡಿಯೂರಪ್ಪ ಅವರಿಗೆ ಖಾಸಗಿಯಾಗಿ ಹಣ ಕೊಟ್ಟಿರಬಹುದು. ಸರ್ಕಾರದ ಖಜಾನೆಗೆ ಬಂದಿಲ್ಲ ಎಂದರು. ಕಪ್ಪು ಹಣ 15 ಲಕ್ಷ ಜಮೆ ಆಗಿಲ್ಲ. ಉದ್ಯೋಗ ವರ್ಷಕ್ಕೆ 5 ರಿಂದ 6 ಲಕ್ಷ ಉದ್ಯೋಗ ಕಡಿತವಾಗುತ್ತಿದೆ ಎಂದರು. ರಾಜ್ಯದ ಕಾಂಗ್ರೆಸ್‌ ಸರ್ಕಾರ ಸ್ವತ್ಛ ಭಾರತ್‌, ಹೂಡಿಕೆ ಮೊದಲಾದ ಕ್ಷೇತ್ರದಲ್ಲಿ ನಂ. 1 ಸ್ಥಾನದಲ್ಲಿದ್ದರೆ, ಗುಜರಾತ್‌ 2ನೇ ಸ್ಥಾನದಲ್ಲಿದೆ ಎಂದರು

“ಪ್ರಧಾನಿಯಿಂದ ಭಾವನಾತ್ಮಕ ಬ್ಲಾಕ್‌ವೆುಲ್‌

Advertisement

ಮೈಸೂರು: ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಅವರಿಗೆ ಚುನಾವಣೆ ಪ್ರಣಾಳಿಕೆ ಬೇಕಿಲ್ಲ. ಜನರನ್ನು ಭಾವನಾತ್ಮಕವಾಗಿ ಬ್ಲಾಕ್‌ ಮೇಲ್‌ ಮಾಡಿ  ಮಮಾರ್ಗದಿಂದ ಚುನಾವಣೆಗಳನ್ನು ಗೆಲ್ಲುತ್ತಾ, ಅಧಿಕಾರ ಕಸಿದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಸಂಸದ ಡಾ.ಎಂ.ವೀರಪ್ಪಮೊಯ್ಲಿ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ನಡೆದ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ಅಂಶಗಳನ್ನು ಜನರಿಗೆ ಹೇಳಲೇ ಇಲ್ಲ. ಬದಲಿಗೆ ವಿಕಾಸ ಎನ್ನುತ್ತಾ ಹೋದವರು, ಕಡೇಗೆ ಸ್ವತಃ ಪ್ರಧಾನಿ ತನ್ನ ಹತ್ಯೆಗೆ ಕಾಂಗ್ರೆಸ್‌ ಪಾಕಿಸ್ತಾನದೊಂದಿಗೆ ಸಂಚು ನಡೆಸಿದೆ ಎಂದು ಆರೋಪಿಸಿದರು. ಅವರು ಹೇಳುವ ವಿಕಾಸ ಆಗದೇ ಇದ್ದರಿಂದ ಗುಜರಾತ್‌ನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಜತೆಗೆ 16 ಕ್ಷೇತ್ರಗಳಲ್ಲಿ ಕೇವಲ 200 ರಿಂದ 500 ಮತಗಳ ಅಂತರದಲ್ಲಿ ಸೋತಿದ್ದೇವೆಂದರು.

ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಅಧಿಕಾರ ಕಳೆದುಕೊಂಡಿರಬಹುದು, ಆದರೆ ಕರ್ನಾಟಕದಲ್ಲಿ ಆಡಳಿತ ವಿರೋಧಿ ಪ್ರಶ್ನೆಯೇ ಉದ್ಭವಿಸುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ರಾಜ್ಯದಲ್ಲಿರುವುದು ಅಹಿಂದ ಸರ್ಕಾರವು ಹೌದು, ಎಲ್ಲ ವರ್ಗದವರ ಸರ್ಕಾರವು ಹೌದು. ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ತನಗೆ ಮುಸ್ಲಿಮರ ವೋಟು ಬೇಡ ಎನ್ನುವಂತೆ ನಾವು ಮಾತನಾಡುವುದಿಲ್ಲ. 82ರಲ್ಲಿ ಲೋಕಸಭೆಯಲ್ಲಿ ಬಿಜೆಪಿಯ ಇಬ್ಬರೇ ಸಂಸದರಿದ್ದರು. ಹಾಗೆಂದ ಮಾತ್ರಕ್ಕೆ ಭಾರತ ಬಿಜೆಪಿ ಮುಕ್ತ ಎನ್ನುವುದು ಅರ್ಥವೇ ಎಂದು ಪ್ರಶ್ನಿಸಿದರು.

ಅನುಷ್ಠಾನ ಯೋಗ್ಯ: ಈ ಹಿಂದಿನ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ 170 ಭರವಸೆಗಳ ಪೈಕಿ ಈಗಾಗಲೇ 159 ಭರವಸೆಯನ್ನು ರಾಜ್ಯಸರ್ಕಾರ ಈಡೇರಿಸಿದೆ. 2018ರ ಜ.15ರೊಳಗೆ 2 ಪಾಲಿಸಿ ವಿಚಾರ ಬಿಟ್ಟು, ಉಳಿದೆಲ್ಲಾ ಭರವಸೆ ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆಂದರು.

ಒಟ್ಟಿಗೆ ಪ್ರಚಾರ: ಬಿಜೆಪಿಗೆ ಸರ್ಕಾರ ಮತ್ತು ಪಕ್ಷದ ವ್ಯತ್ಯಾಸ ಗೊತ್ತಿಲ್ಲ. ಹೀಗಾಗಿ ಎಲ್ಲವನ್ನೂ ಅಮಿತ್‌ ಶಾ ಮಾಡುತ್ತಾರೆ. ಆದರೆ, ಮುಖ್ಯಮಂತ್ರಿ ಕೈಗೊಂಡಿರುವ ಸಾಧನಾ ಸಮಾವೇಶ ಸರ್ಕಾರಿ ಕಾರ್ಯಕ್ರಮ ಆಗಿರು ವುದರಿಂದ ಕೆಪಿಸಿಸಿ ಅಧ್ಯಕ್ಷರು ಹೋಗುತ್ತಿಲ್ಲ ಎಂದು ಸಮಜಾಯಿಷಿ ನೀಡಿದರು. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ವಿಷ್ಣುನಾಥನ್‌, ಪ್ರಣಾಳಿಕೆ ಸಮಿತಿ ಸದಸ್ಯರಾದ ಕೆ.ಸಿ.ಕೊಂಡಯ್ಯ, ಪ್ರೋ.ಐ.ಜಿ.ಸನದಿ, ಡಾ. ಪುಷ್ಪಾ ಅಮರನಾಥ್‌, ಜಿ.ಎ.ಭಾವಾ, ಶಾಸಕ ವಾಸು, ಜಿಲ್ಲಾ  ಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಕಾಂಗ್ರೆಸ್‌  ಧ್ಯಕ್ಷ ಆರ್‌.ಮೂರ್ತಿ ಮತ್ತಿತರರಿದ್ದರು. 

ಜಿಲ್ಲೆಗೆ ಒಂದರಂತೆ 30 ಪ್ರೊಫೈಲ್‌ ಸಿದ್ಧ ಮುಂಬರುವ ಚುನಾವಣೆ ದೃಷ್ಟಿಯಿಂದ ನವಕರ್ನಾಟಕ ವಿಷನ್‌ 2025 ರೂಪಿಸುವ ಚರ್ಚೆ ನಡೆದಿದೆ. ಪ್ರಣಾಳಿಕೆಯಲ್ಲಿ 5 ಪಾರದರ್ಶಕ ಅಂಶಗಳನ್ನು ಸೇರಿಸಲಾಗುವುದು. ಭಾಗ್ಯಗಳ ಸರಣಿಯನ್ನು ಜನತೆಗೆ ತಿಳಿಸುವ ಜತೆಗೆ ಸರ್ಕಾರದ ವಿಷನ್‌ ಡಾಕ್ಯುಮೆಂಟ್‌ ಅನ್ನು ಪ್ರಣಾಳಿಕೆಯಲ್ಲೂ ಸೇರಿಸುತ್ತೇವೆ. ಪ್ರತಿ ಜಿಲ್ಲೆಗೆ ಒಂದರಂತೆ 30 ಪ್ರೊಫೈಲ್‌ ಸಿದ್ಧಪಡಿಸಿದ್ದೇವೆ. 

ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳ ಪ್ರಗತಿ ವರದಿಯನ್ನು ಜ.15ರೊಳಗೆ ರಾಜ್ಯದ ವಿಧಾನಸಭಾ ಕ್ಷೇತ್ರವಾರು ಅಭಿವೃದ್ಧಿ ಕಾರ್ಯದ ಅಂಕಿಅಂಶಗಳನ್ನು ಒಳಗೊಂಡ ಸಮಗ್ರ ಚಿತ್ರಣವನ್ನು ವೆಬ್‌ಸೈಟ್‌ನಲ್ಲಿ ಹಾಕಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next