Advertisement

ಮೈತ್ರಿಗೆ ಪೂರಕ ವಾತಾವರಣ, ಗೆಲುವು ನಮ್ಮದೇ

10:49 AM Apr 21, 2019 | Team Udayavani |

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಪಕ್ಷದ ಮೈತ್ರಿಗೆ ಉತ್ತಮ ವಾತಾವರಣವಿದ್ದು, ತಮ್ಮ ಗೆಲುವು ನಿಶ್ಚಿತ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಾಗಿದೆ.

ಜೊತೆಗೆ ಪಿರಿಯಾಪಟ್ಟಣ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ನನಗೆ ಹೆಚ್ಚು ಮತಗಳು ಲಭ್ಯವಾಗಿದೆ. ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷಕ್ಕೆ ಪೂರಕವಾದ ವಾತಾವರಣವಿದ್ದು, ಈ ಚುನಾವಣೆಯಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಮತದಾರರು ಸೂಕ್ಷ್ಮಮತಿಗಳು: ನಾನು ಈವರೆಗೆ 6 ಲೋಕಸಭಾ ಚುನಾವಣೆ ಸೇರಿದಂತೆ ಒಟ್ಟು 9 ಚುನಾವಣೆ ಎದುರಿಸಿದ್ದು, ಮತದಾರರ ನಾಡಿಮಿಡಿತ ಅರ್ಥಮಾಡಿಕೊಂಡಿದ್ದೇನೆ, ಅದರ ಆಧಾರದ ಮೇಲೆ ಹೇಳುವುದಾದರೆ, ಮೈಸೂರು-ಕೊಡಗು ಮತದಾರರು ಸೂಕ್ಷ್ಮ ಮತಿಗಳಾಗಿದ್ದು, ಅವರು ಎಲ್ಲವನ್ನು ಆವಲೋಕಿಸುತ್ತಾರೆ.

ಶಿಸ್ತುಬದ್ಧ, ಯೋಗ್ಯ ಹಾಗೂ ಪ್ರಾಮಾಣಿಕ ಅಭ್ಯರ್ಥಿಯನ್ನು ಅವರು ಆಯ್ಕೆ ಮಾಡಿರುತ್ತಾರೆ ಎಂಬ ದೃಢ ನಂಬಿಕೆ ಇದೆ. ಜೊತೆಗೆ ನಮ್ಮ ಲೋಕಸಭಾ ಕ್ಷೇತ್ರದ ಎಲ್ಲಾ ಮತದಾರರಲ್ಲೂ ಪ್ರಜ್ಞಾವಂತಿಕೆ ಕಾಣಬಹುದಾಗಿದ್ದು, ಸಾರ್ವಜನಿಕ ಜೀವನದಲ್ಲಿ ಯಾರು ಬದ್ಧತೆಯಿಂದ ಹಾಗೂ ಆದರ್ಶರಾಗಿದ್ದಾರೊ ಅಂತಹವರನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕೃತಜ್ಞತೆ: ಚುನಾವಣೆ ಪ್ರಚಾರದಿಂದ ಮತದಾನದವರೆಗೂ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ನನಗೆ ಕೈಜೋಡಿಸಿದ್ದಾರೆ. ಜೊತೆಗೆ ಚುನಾವಣೆ ಯಶಸ್ಸಿಗೆ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಚುನಾವಣಾ ಆಯೋಗದ ಪಾತ್ರ ಮಹತ್ವದ್ದು. ಈ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಆರೋಪ ಸಲ್ಲದು: ಚುನಾವಣೆಯಲ್ಲಿ ಮತದಾರರ ಕೈ ಬೆರಳಿಗೆ ಹಚ್ಚುವ ಅಳಿಸಲಾಗದ ಶಾಯಿ ಮೈಸೂರಿನಲ್ಲಿ ತಯಾರಿಸುವುದು ನಮ್ಮ ಹೆಮ್ಮೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ದೂರದೃಷ್ಟಿಯ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಎಂದಿಗೂ ನಷ್ಟ ಅನುಭವಿಸಿಲ್ಲ.

ದೇಶ- ವಿದೇಶಗಳಿಗೆ ಅಳಿಸಲಾಗದ ಶಾಯಿಯನ್ನು ರಫ್ತು ಮಾಡುತ್ತಿದ್ದು, ಗುಣಮಟ್ಟದಲ್ಲಿ ಎಂದಿಗೂ ರಾಜಿಮಾಡಿಕೊಂಡಿಲ್ಲ. ಅಂತಹ ಕಾರ್ಖಾನೆ ಬಗ್ಗೆ ಆರೋಪ ಸಲ್ಲದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಚ್‌.ಎ.ವೆಂಕಟೇಶ್‌, ಪಾಲಿಕೆ ಮಾಜಿ ಮೇಯರ್‌ ನರಸಿಂಹ ಅಯ್ಯಂಗಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next