Advertisement

ಗುರಿ, ಉದ್ದೇಶ ದೃಢವಾಗಿದ್ದರೆ ಸ್ಪರ್ಧಾತ್ಮಕ ಸಾಧನೆ ಅತಿ ಸುಲಭ

04:48 PM Jul 22, 2019 | Suhan S |

ಮಂಡ್ಯ: ಒಳ್ಳೆಯ ಗುರಿ, ಉದ್ದೇಶ, ದೃಢ ಚಿತ್ತ, ಕಠಿಣ ಪರಿಶ್ರಮ ಮೈಗೂಡಿಸಿಕೊಂಡಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದು ಜಿಪಂ ಸಿಇಒ ಕೆ. ಯಾಲಕ್ಕಿಗೌಡ ಹೇಳಿದರು.

Advertisement

ಮಂಡ್ಯ ಕೃಷಿಕ್‌ ಸರ್ವೋದಯ ಟ್ರಸ್ಟ್‌ ವತಿಯಿಂದ ನಗರದ ಮಂಡ್ಯ ಕೃಷಿಕ್‌ ಸರ್ವೋದಯ ಭವನದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಬುನಾದಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸತತ ಸಾಧನೆಯೊಂದಿಗೆ ಗುರಿ ಮುಟ್ಟುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ. ಇತ್ತೀಚಿನ ದಿನಗಳಲ್ಲಿ ಇದು ಬದಲಾವಣೆಯತ್ತ ಸಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರೊಂದಿಗೆ ಕೃಷಿಕ್‌ ಸರ್ವೋದಯ ಟ್ರಸ್ಟ್‌ ಸಹ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವವರು ಮಾರುಕಟ್ಟೆಯಲ್ಲಿ ಹಲವು ಪುಸ್ತಕಗಳು ಲಭ್ಯವಾಗುತ್ತವೆ. ಅವುಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಎಲ್ಲಾ ಪುಸ್ತಕಗಳನ್ನು ಅಧ್ಯಯನ ಮಾಡುವುದರಿಂದ ಮಾತ್ರ ಆತ್ಮವಿಶ್ವಾಸ ಬೆಳೆಯುತ್ತದೆ. ಆಗ ಪರೀಕ್ಷೆಯನ್ನು ಎದುರಿಸಲು ಸುಲಭ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ, ಪದವಿ ಪರೀಕ್ಷೆಗಳಲ್ಲೂ ಸಹ ಬಾಲಕಿಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಬಾಲಕರ ವಿಭಾಗದಲ್ಲೂ ಹೆಚ್ಚಿನ ಫಲಿತಾಂಶ ಬರುವ ರೀತಿ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಹೆಚ್ಚು ಮಂದಿ ಬಾಲಕರು ತೇರ್ಗಡೆಯಾಗುವ ಪ್ರೌಢಶಾಲೆಗೆ ಬಹುಮಾನ ಕೊಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕನ್ನಡದಲ್ಲೇ ಐಎಎಸ್‌ ಪರೀಕ್ಷೆ ಬರೆಯಬಹುದು. ಈಗಾಗಲೇ ವಿಜಯಲಕ್ಷ್ಮಿ ಹಾಗೂ ನಂದಿನಿ ಅವರು ಕನ್ನಡದಲ್ಲೇ ಪರೀಕ್ಷೆ ಬರೆದು ದೊಡ್ಡ ಸ್ಥಾನ ಪಡೆದಿದ್ದಾರೆ. ರ್‍ಯಾಂಕ್‌ ಅಷ್ಟೇ ಮುಖ್ಯವಾಗುವುದಿಲ್ಲ. ಯಾವ ಸಮಯದಲ್ಲಿ ಎಚ್ಚೆತ್ತುಕೊಂಡು ಸಾಧನೆ ಮಾಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ಒಂದು ವಿಷಯವನ್ನೇ ಇಟ್ಟುಕೊಂಡು ಪರಿಕ್ಷೆ ಎದುರಿಸಬಹುದು. 300 ಅಂಕಗಳಿಗೆ ಪ್ರಬಂಧ ಬರೆಯಬೇಕಾಗಿರುತ್ತದೆ. ಸುಮ್ಮನೆ ತಿರುಳಿದ್ದ ವಿಚಾರ ಬರೆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಒಂದೊಂದು ಬುಲೆಟ್ ಪಾಯಿಂಟ್‌ಗಳನ್ನು ದಾಖಲಿಸುವಂತಹ ಪ್ರಯತ್ನ ಮಾಡಬೇಕು. ಆಗ ಮಾತ್ರ ಅಂಕಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

Advertisement

ವಿಷಯಾಧಾರಿತ ಉಪನ್ಯಾಸಕರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಮುಖ್ಯ. ಪ್ರಬಂದಕ್ಕೆ ಹೆಚ್ಚಿನ ಗಮನ ನೀಡುವುದು ಅಗತ್ಯ ಎಂದು ಹೇಳಿದರು. ಜನತಾ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷ ಎಚ್.ಡಿ. ಚೌಡಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಕಾರಿ ಶಿವಶಂಕರ್‌, ಮಂಡ್ಯ ಕೃಷಿಕ್‌ ಸರ್ವೋದಯ ಟ್ರಸ್ಟ್‌ ಕಾರ್ಯದರ್ಶಿ ಡಾ. ರಾಮಲಿಂಗಯ್ಯ, ಜಂಟಿ ಕಾರ್ಯದರ್ಶಿ ಎ.ಎಂ. ಅಣ್ಣಯ್ಯ, ಬುನಾದಿ ತರಬೇತಿ ಸಮಿತಿ ಅಧ್ಯಕ್ಷ ಡಾ. ಕೆ.ಬಿ. ಬೋರಯ್ಯ, ವ್ಯವಸ್ಥಾಪಕ ಲಕ್ಷ್ಮಣ್‌, ಪ್ರೊ. ಸಿ.ಆರ್‌. ರಾಜು, ಅಲ್ತಾಫ್‌ ಅಹಮದ್‌, ಲೋಕೇಶ್‌ ಸಮಾರಂಭದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next