Advertisement

25 ಸಂತ್ರಸ್ತ ಕುಟುಂಬಗಳಿಗೆ ಪರಿಹಾರ

05:16 PM Aug 02, 2018 | Team Udayavani |

ಚಿತ್ರದುರ್ಗ: ಕೆಟ್ಟ ಸಂದರ್ಭದಲ್ಲಾದ ಘಟನೆ ಬಗ್ಗೆ ಯಾರೂ ಪ್ರಸ್ತಾಪ ಮಾಡದೆ ಅನಾಥವಾಗಿರುವ ಮಕ್ಕಳಿಗೆ ಸಾಮಾಜಿಕ ನೆಲೆಗಟ್ಟಿನಲ್ಲಿ ಆಶ್ರಯ ನೀಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಹೇಳಿದರು.

Advertisement

ತಾಲೂಕಿನ ಬಗ್ಗಲರಂಗವ್ವಹಳ್ಳಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪೊಲೀಸ್‌ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಳಗಟ್ಟ ಗ್ರಾಮ ಪಂಚಾಯತ್‌ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.

ಕ್ಲುಲ್ಲಕ ಕಾರಣಕ್ಕೆ ಗ್ರಾಮದಲ್ಲಿ ಕೊಲೆ ಮಾಡಲಾಗಿತ್ತು ಎನ್ನುವುದು ಕಪ್ಪುಚುಕ್ಕೆ. ಆ ವಿಚಾರದ ಕುರಿತು ಪದೇ ಪದೇ ಪ್ರಸ್ತಾಪ ಮಾಡುವ ಮೂಲಕ ಸಂತ್ರಸ್ತರ ಮನಸ್ಸಿಗೆ ನೋವುಂಟು ಮಾಡಬೇಡಿ. ನೊಂದ ವ್ಯಕ್ತಿಗಳ ಜತೆ ಉತ್ತಮವಾಗಿ ನಡೆದುಕೊಳ್ಳಿ ಎಂದರು.

ಪತ್ನಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಧರನಿಗೆ ಜೀವಾವಧಿ ಶಿಕ್ಷೆಯಾಗಿದೆ. ಆತನ ಮಕ್ಕಳಿಗೆ ಜಿಲ್ಲಾ ಪಂಚಾಯತ್‌ ದಿಂದ ನಿವೇಶನ ಮತ್ತು ಮನೆ ಮಂಜೂರು ಮಾಡಲಾಗಿದೆ. ಮಾನವೀಯ ನೆಲೆಗಟ್ಟಿನಲ್ಲಿ
ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ. ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾಂಗ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿದೆ. ಅತ್ಯಾಚಾರ, ಜಗಳವಾದಾಗ ಕೈಕಾಲುಗಳು ಮುರಿದಾಗ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಅಂತಹವರಿಗೆ 2 ರಿಂದ 3 ಲಕ್ಷ ರೂ. ತನಕ ಪರಿಹಾರ ನೀಡಲಾಗುತ್ತದೆ. ಜಿಲ್ಲೆಯಲ್ಲಿ 25 ಜನರಿಗೆ ಈ ರೀತಿಯ ಪರಿಹಾರ ಲಭ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ್‌ ಜೋಶಿ ಮಾತನಾಡಿ, ಈ ಊರಿನ ಘಟನೆಯನ್ನು ವಿಶೇಷ ಪ್ರಕರಣ ಎಂದು ತಿಳಿದು ತೀರ್ಪು ಪ್ರಕಟಿಸಿದ ಬಳಿಕ ನಿಜವಾದ ಕೆಲಸ ಪ್ರಾರಂಭವಾಯಿತು. ಎಲ್ಲರ ಪರಿಶ್ರಮದಿಂದ ಇಂದು ಮಕ್ಕಳಿಗೆ ಒಂದು ನೆಲೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಅನಾಥ ಮಕ್ಕಳಿಗೆ ಮನೆ ನಿರ್ಮಿಸುವ ಒಳ್ಳೆಯ ಕ್ಷಣಕ್ಕೆ ನಾವಿಂದು ಸಾಕ್ಷಿಯಾಗಿದ್ದೇವೆ. ಘಟನೆ ನಡೆದ 36 ದಿನಗಳಲ್ಲಿ ಈ ಕೆಲಸ ಆಗುತ್ತಿದೆ. ಕೊರಗುವುದರಲ್ಲಿ ಅರ್ಥವಿಲ್ಲ. ಮಕ್ಕಳ ಭವಿಷ್ಯಕ್ಕೆ ನಾವೆಲ್ಲರೂ ಚಿಂತನೆ ನಡೆಸಬೇಕಿದೆ. ದುಶ್ಚಟಕ್ಕೆ ಬಲಿಯಾಗದೆ ಎಲ್ಲರೂ ಒಂದೇ ಕುಟುಂಬದಂತೆ ಬಾಳಬೇಕು ಎಂದು ತಿಳಿಸಿದರು.

ತನಿಖಾಧಿಕಾರಿ ಟಿ.ಎನ್‌. ಶಿವಕುಮಾರ್‌ ಕಷ್ಟ ಪಟ್ಟು ಎರಡು ದಿನದಲ್ಲಿ ಜಾರ್ಜ್‌ಶೀಟ್‌ ಹಾಕಿದ್ದಾರೆ. ಪ್ರಕರಣದ ಐತಿಹಾಸಿಕ ತೀರ್ಪಿನಿಂದಾಗಿ ತುರುವನೂರು ಪೊಲೀಸ್‌ ಠಾಣೆ ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಿಂದ ಕರೆಗಳು ಬಂದಿವೆ ಎಂದು ಹೇಳಿದರು.

ಜಿಪಂ ಸಿಇಒ ಪಿ.ಎನ್‌. ರವೀಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌. ಆರ್‌. ದಿಂಡಲಕೊಪ್ಪ, ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ. ವಿಶ್ವನಾಥ್‌, ಪ್ರಧಾನ ಕಾರ್ಯದರ್ಶಿ ಶಿವು ಯಾದವ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್‌. ರಾಜಾ ನಾಯ್ಕ, ಸರ್ಕಾರಿ ಅಭಿಯೋಜಕ ಬಿ.ಬಿ. ಜಯರಾಂ, ಮಲ್ಲೇಶಪ್ಪ, ಬೆಳಗಟ್ಟ ಗ್ರಾಪಂ ಅಧ್ಯಕ್ಷೆ ಜಯಮ್ಮ ಇದ್ದರು.

ಪತ್ನಿ ಹಂತಕನ ಮಕ್ಕಳಿಗೆ 2.50 ಲಕ್ಷ ರೂ. ನೆರವು ಜೀವಾವಧಿ ಶಿಕ್ಷೆಗೊಳಗಾಗಿರುವ ಶ್ರೀಧರನ ಮಕ್ಕಳನ್ನು ನೊಂದ ವ್ಯಕ್ತಿಗಳು ಎಂದು ಪರಿಗಣಿಸಿ 2.50 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಮಕ್ಕಳ ಹೆಸರಿನಲ್ಲಿ ಆ ಹಣವನ್ನು ಎಫ್‌ಡಿ ಮಾಡಿ ಅದರಿಂದ ಬಂದ ಬಡ್ಡಿಯನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬಹುದು. ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜೈಲಿಗೆ ಹೋದ ವ್ಯಕ್ತಿ ಕನಿಷ್ಠ ಒಂದು ತಿಂಗಳಿಗಿಂತ ಹೆಚ್ಚಾಗಿ ಜೈಲಿನಲ್ಲಿದ್ದರೆ ಒಬ್ಬ ಮಗುವಿಗೆ ತಿಂಗಳಿಗೆ 1000 ರೂ. ದಂತೆ ಇಬ್ಬರು ಮಕ್ಕಳಿಗೂ 2000 ರೂ.ಗಳನ್ನು ಎಸ್‌ಎಸ್‌ಎಲ್‌ಸಿ ಮುಗಿಯುವರೆಗೂ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next