Advertisement

ಕಾಮನ್‌ವೆಲ್ತ್‌ ಸಾಧನೆ ಕ್ರೀಡಾ ಕ್ಷಿತಿಜದಲ್ಲಿ ಹೊಸ ಬೆಳಕು

09:36 AM Apr 17, 2018 | Team Udayavani |

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತ 66 ಪದಕಗಳಿಂದ ಸಿಂಗಾರಗೊಂಡಿದೆ. ಒಟ್ಟಾರೆಯಾಗಿ 71 ದೇಶಗಳ ಪೈಕಿ ಭಾರತ 3ನೇ ಸ್ಥಾನದಲ್ಲಿ ವಿರಾಜಮಾನವಾಗಿರುವುದು ಅದ್ಭುತ ಸಾಧನೆಯೇ. 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ನಮ್ಮ ಕ್ರೀಡಾಪಟುಗಳ ಸಾಧನೆ. ಕಾಮನ್‌ವೆಲ್ತ್‌ ಇತಿಹಾಸದಲ್ಲೂ ಇದು ಭಾರತದ ಮೂರನೇ ಶ್ರೇಷ್ಠ ಸಾಧನೆ ಹಾಗೂ ವಿದೇಶಗಳಲ್ಲಿ ಇದುವೇ ಅತ್ಯುತ್ತಮ ಎನ್ನಲಡ್ಡಿಯಿಲ್ಲ. ಹಿಂದಿನ ಕಾಮನ್‌ವೆಲ್ತ್‌ನಲ್ಲಿ ಬರೀ 15 ಚಿನ್ನದ ಪದಕ ದೊಂದಿಗೆ ಕಳಪೆ ನಿರ್ವಹಣೆ ನೀಡಿದ್ದ ಭಾರತ ನಾಲ್ಕೇ ವರ್ಷದಲ್ಲಿ ಮೈಕೊಡವಿ ಎದ್ದುನಿಂತಿರುವುದು ಗಮನಾರ್ಹ. 

Advertisement

ಈ ಸಲ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಹೋಗಿದ್ದ ತಂಡ ಹಿರಿಯರು ಮತ್ತು ಕಿರಿಯರನ್ನೊಳಗೊಂಡು ಸಂತುಲಿತವಾಗಿತ್ತು. ಅಂತೆಯೇ ಸಾಧನೆಯಲ್ಲೂ ಹಿರಿಯರು ಮತ್ತು ಕಿರಿಯರು ಸಾಕಷ್ಟು ಕೊಡುಗೆ ನೀಡಿದರು. ಹೊಸ ಪ್ರತಿಭೆಗಳು ಕ್ರೀಡಾ ಕ್ಷಿತಿಜದಲ್ಲಿ ಮೂಡಿಬಂದಿರುವುದು ಆಶಾದಾಯಕ ವಿಚಾರ. ಇನ್ನೂ ಶಾಲೆ ಕಲಿಯುತ್ತಿರುವ 15ರ ಹರೆಯದ ಶೂಟರ್‌ ಅನೀಶ್‌ ಭನ್ವಾಲ ಚಿನ್ನಕ್ಕೆ ಗುರಿಯಿಟ್ಟು ಭೇಷ್‌ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದೇಶದ ಅತ್ಯಂತ ಕಿರಿಯ ಕ್ರೀಡಾಪಟು ಇವರು. ಈ ಸಂದರ್ಭದಲ್ಲಿ 1998ರಲ್ಲಿ ಕ್ರೀಡಾಕೂಟವನ್ನು ನೆನಪಿಸಿಕೊಳ್ಳ ಬಹುದು. ಅಭಿನವ್‌ ಬಿಂದ್ರಾ ಅತಿ ಕಿರಿಯ ಕ್ರೀಡಾಪಟು ಎಂದು ಆಗ ಮಿಂಚಿದ್ದರು. ಬಿಂದ್ರಾರಿಗೂ ಆಗ 15ರ ಹರೆಯ. ಆದರೆ ಬಿಂದ್ರಾಗೆ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಳಿಕ ಒಲಿಂಪಿಕ್ಸ್‌ನಲ್ಲಿ ಅವರು ಈ ಕೊರತೆ ಯನ್ನು ನೀಗಿಕೊಂಡರು. 

ಆದರೆ ಭನ್ವಾಲ ಮೊದಲ ಅಂತರಾಷ್ಟ್ರೀಯ ಕೂಟದಲ್ಲೇ ಚಿನ್ನ ಗೆಲ್ಲುವ ಮೂಲಕ ಶೂಟಿಂಗ್‌ ವಿಭಾಗದಲ್ಲಿ ತನಗೊಂದು ಸ್ಥಾನವನ್ನು ಸ್ಥಿರಪಡಿಸಿಕೊಂಡಿದ್ದಾರೆ. ಅಂತೆಯೇ ಮೂರು ಮಕ್ಕಳ ತಾಯಿ ಯಾಗಿರುವ ಮೇರಿ ಕೋಮ್‌ ಮತ್ತು 37ರ ಹರೆಯದ ತೇಜಸ್ವಿನಿ ಸಾವಂತ್‌ ಅವರ ಚಿನ್ನದ ಬೇಟೆಯೂ ಉಲ್ಲೇಖಾರ್ಹ.

ಶೂಟಿಂಗ್‌ ವಿಭಾಗದಲ್ಲಿ ಭಾರತೀಯರು ಪಾರಮ್ಯ ಸಾಧಿಸುತ್ತಿದ್ದಾರೆ. 7 ಚಿನ್ನದ ಪದಕಗಳನ್ನು ಶೂಟರ್‌ಗಳೇ ತಂದುಕೊಟ್ಟಿದ್ದಾರೆ. ದೇಶದ ಪಾರಂಪ ರಿಕ ಕ್ರೀಡೆಯಾಗಿರುವ ಕುಸ್ತಿಯಲ್ಲಿ 5 ಚಿನ್ನ ಸೇರಿ 12 ಪದಕಗಳು ಬಂದಿವೆ. ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ತೃಪ್ತಿಕರ ನಿರ್ವಹಣೆ ದಾಖಲಿ  ಸಿದ್ದೇವೆ. ಅದರಲ್ಲೂ ಬಾಕ್ಸಿಂಗ್‌ ವಿಭಾಗದಲ್ಲಿ ಕಡೇ ತನಕ ಗೊಂದಲದ ಸ್ಥಿತಿ ಇತ್ತು. ಇದನ್ನು ಮೆಟ್ಟಿ ನಿಂತು ಬಾಕ್ಸರ್‌ಗಳು 3 ಚಿನ್ನ ಸೇರಿ ಒಟ್ಟು 9 ಪದಕಗಳನ್ನು ಬಾಚಿದ್ದಾರೆ. ಆದರೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಸಾಧಿಸಬೇಕಾದದ್ದು ಇನ್ನೂ ಇದೆ. ಈ ವಿಭಾಗದಲ್ಲಿ ಬಂದಿ ರು ವುದು ಬರೀ ಒಂದು ಚಿನ್ನ ಮಾತ್ರ. ಜಿಮ್ನಾಸ್ಟಿಕ್‌, ಸೈಕ್ಲಿಂಗ್‌, ಲಾನ್‌ಬೌಲ್‌ ಸೇರಿ ಕೆಲವು ವಿಭಾಗಗಳಲ್ಲಿ ಪದಕದ ಖಾತೆಯನ್ನೇ ತೆರೆಯಲು ಸಾಧ್ಯವಾಗಿಲ್ಲ. ಈ ವಿಭಾಗಗಳಿಗೆ ತುರ್ತಾಗಿ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಅಂತೆಯೇ ಕ್ರೀಡಾ ಮಂಡಳಿಗಳು ಮತ್ತು ಕ್ರೀಡಾಪಟುಗಳ ನಡುವಿನ ಒಳಜಗಳ, ಭಿನ್ನಾಭಿಪ್ರಾಯದಂತಹ ಆಂತರಿಕ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು. ಒಳಜಗಳ ಅಲ್ಲದಿದ್ದರೆ ಬಾಕ್ಸಿಂಗ್‌ನಲ್ಲಿ ಇನ್ನೊಂದೆರಡು ಪದಕಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆಗಳಿದ್ದವು. 

ಮೊದಲೆರಡು ಸ್ಥಾನಗಳಲ್ಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮತ್ತು ಭಾರತದ ಪದಕ ಗಳಿಕೆ ನಡುವೆ ಭಾರೀ ಅಂತರವಿದೆ ಎನ್ನುವುದು ನಿಜ. ಆದರೆ ಆ ದೇಶಗಳಲ್ಲಿರುವ ಕ್ರೀಡಾ ಸಂಸ್ಕೃತಿಗೂ ಭಾರತದ ಪರಿಸ್ಥಿತಿಗೂ ಅಜಗಜಾಂತರವಿದೆ. ಹಿಂದೆ ಭಾರತದಲ್ಲಿ ಕ್ರೀಡೆಗೆ ಮೂಲಸೌಕರ್ಯ ಒದಗಿಸಿಕೊಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಕ್ರಮೇಣ ಪರಿಸ್ಥಿತಿ ಬದಲಾಯಿಸುತ್ತಿದೆ. ಇದಕ್ಕೆ ತೇಜಸ್ವಿನಿ ಮಾತುಗಳೇ ಸಾಕ್ಷಿ. ಆಗ ಕ್ರೀಡಾಪಟುಗಳು ಮೈದಾನದಲ್ಲಿ ಸೆಣಸುವುದಕ್ಕಿಂತಲೂ ಮೊದಲು ವ್ಯವಸ್ಥೆಯ ಜತೆಗೆ ಸೆಣಸಬೇಕಿತ್ತು. ಪ್ರತಿಯೊಂದನ್ನೂ ಹೋರಾಡಿ ಪಡೆಯುವ ಸ್ಥಿತಿಯಿತ್ತು. ಆದರೆ ಈಗ ಕ್ರೀಡೆಗೆ ಸಾಕಷ್ಟು ಮೂಲಸೌಲಭ್ಯ ಮತ್ತು ಪ್ರೋತ್ಸಾಹ ಸಿಗುತ್ತಿದೆ ಎನ್ನುತ್ತಾರೆ ತೇಜಸ್ವಿನಿ.

Advertisement

ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌, ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ಕೂಟಗಳಲ್ಲಿ ಲೆಕ್ಕ ಭರ್ತಿಗೆ ಭಾಗವಹಿಸುತ್ತಿದ್ದ ನಾವೀಗ ಪದಕ ಗೆಲ್ಲುವ ಛಲವನ್ನು ರೂಢಿಸಿಕೊಂಡಿದ್ದೇವೆ. ಹಿಂದೆ ಅರ್ಹತಾ ಸುತ್ತಿಗೇರಲು ಕಷ್ಟಪಡುತ್ತಿದ್ದ ಕ್ರೀಡೆಗಳಲ್ಲಿ ಈಗ ಪ್ರಬಲ ಸ್ಪರ್ಧೆಯೊಡ್ಡುವ ಮಟ್ಟಕ್ಕೇರಿದ್ದೇವೆ. ಕ್ರೀಡೆಗೊಂದು ಹೊಸ ದಿಶೆ ತೋರಿಸುವಲ್ಲಿ ಸಫ‌ಲರಾಗಿದ್ದೇವೆ. 

ಇನ್ನು ಈ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಏನೇ ಆದರೂ ಒಲಿಂಪಿಕ್ಸ್‌ನ ನೀರಸ ನಿರ್ವಹಣೆಯ ಕಹಿಯನ್ನು ಗೋಲ್ಡ್‌ಕೋಸ್ಟ್‌ನ ಚಿನ್ನದ ಮಳೆ ಮರೆಸಿದೆ. ಕ್ರೀಡಾಕ್ಷೇತ್ರದಲ್ಲೊಂದು ಹೊಸ ಭರವಸೆಯ ಬೆಳಕು ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next