Advertisement

ಪಾಲಿಕೆ ವಿಭಜನೆಗೆ ಅಪಸ್ವರದ ಕೂಗು 

10:50 AM Jun 17, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತ ಹಿತದೃಷ್ಟಿಯಿಂದ ಬಿಬಿಎಂಪಿಯನ್ನು ಪುನರ್‌ ರಚಿಸುವ ಸಂಬಂಧ ತಜ್ಞರ ಸಮಿತಿ ನೇಮಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಕೆಲ ಪಾಲಿಕೆ ಮಾಜಿ ಮೇಯರ್‌ಗಳು ಮತ್ತು ಮಾಜಿ ಸದಸ್ಯರು ಪಾಲಿಕೆ ವಿಭಜನೆಗೆ ಅಪಸ್ವರ ಎತ್ತಿದ್ದಾರೆ. ಜತೆಗೆ “ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ’ ಜಾರಿಗೆ ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ನಾಡಪ್ರಭು ಕೆಂಪೇಗೌಡರು ಕಟ್ಟಿದ ಅಖಂಡ ಬೆಂಗಳೂರನ್ನು ವಿಭಜಿಸಲು ಬಿಡುವುದಿಲ್ಲ ಎಂದಿದ್ದಾರೆ.

Advertisement

ಈ ಹಿಂದೆಯೇ “ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ’ ಬಗ್ಗೆ ರಾಜಕೀಯ ವಲಯದಲ್ಲಿ ಪ್ರಸ್ತಾವಾಗಿತ್ತು. ಬಿಬಿಎಂಪಿ ವಿಭಜನೆ ಹೊರತಾದ ಸರ್ಕಾರಕ್ಕೆ ಇರುವುದು ಬೇರೆ ಆಯ್ಕೆ ಎಂದಾದರೆ ಅದು “ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ’ ಎಂದು ಕಸ್ತೂರಿ ರಂಗನ್‌ ಸಮಿತಿ ಈ ಹಿಂದೆಯೇ ಹೇಳಿತ್ತು. ಬಿಜೆಪಿ ಕೂಡ ಈ ಹಿಂದೆ ಬಿಬಿಎಂಪಿ ವಿಭಜನೆಗೆ ತೀವ್ರ ವಿರೋಧ ಮಾಡಿತ್ತು. ಮೇಯರ್‌ ಇನ್‌ ಕೌನ್ಸಿಲ್‌ಗೆ ವ್ಯವಸ್ಥೆ ಜಾರಿಗೆ ಒತ್ತಾಯ ಮಾಡಿತ್ತು. ಇದೀಗ ತಮ್ಮ ಆ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪಾಲಿಕೆ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಹೇಳುತ್ತಾರೆ.

ಬೆಂಗಳೂರಿಗೆ ತನ್ನದೇ ಆದ ಭವ್ಯ ಇತಿಹಾಸ ಪರಂಪರೆ ಇದೆ. ಇಂತಹ ಸಾಂಸ್ಕೃತಿಕ ಸಿರಿವಂತ ಪ್ರದೇಶವನ್ನು ವಿಭಜನೆ ಮಾಡುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ಸರ್ಕಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಒಡೆದಾಳಲು ಮುಂದಾದರೆ ಹೋರಾಟ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಆಡಳಿತ ಅವಧಿಯಲ್ಲಿ 192 ವಾರ್ಡ್‌ ಗಳಿದ್ದ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರ ಪಾಲಿಕೆ ವಿಭಜನೆಗೆ ಕೈ ಹಾಕದೆ ಚುನಾವಣೆ ನಡೆಸಲಿ. ನಗರಗಳ ಅಭಿವೃದ್ಧಿಯ ದೃಷ್ಟಿಯಿಂದ ಈ ಹಿಂದೆ ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ ಬಗ್ಗೆ ಕಾಂಗ್ರೆಸ್‌ ಹಿರಿಯ ವರಿಷ್ಠರು ಕೂಡ ಉತ್ಸುಕತೆ ತೋರಿದ್ದರು ಎನ್ನುತ್ತಾರೆ.

ಮುಖ್ಯಮಂತ್ರಿಗಳ ಸಭೆಯಲ್ಲಿ ಸಮಾಲೋಚನೆ: ಇತ್ತೀಚೆಗೆ ಬಿಬಿಎಂಪಿ ಚುನಾವಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಕಾಂಗ್ರೆಸ್‌ನ ಮಾಜಿ ಮೇಯರ್‌ ಮತ್ತು ಪಾಲಿಕೆ ಮಾಜಿ ಸದಸ್ಯರ ಸಭೆಯಲ್ಲಿ ಮೇಯರ್‌ ಇನ್‌ ಕೌನ್ಸಿಲ್‌ ಬಗ್ಗೆ ಚರ್ಚೆ ನಡೆದಿತ್ತು. ಮೇಯರ್‌ಗಳಿಗೆ ಉತ್ತಮ ಆಡಳಿತ ನಡೆಸಲು 5 ವರ್ಷ ಅಧಿಕಾರ ನೀಡಬೇಕು ಎಂದು ಸಲಹೆ ನೀಡಲಾಗಿತ್ತು ಎಂದು ಪಾಲಿಕೆ ಮಾಜಿ ಸದಸ್ಯರೊಬ್ಬರು ಹೇಳುತ್ತಾರೆ.

ವಿಧಾನ ಪರಿಷತ್ತಿನ ಸದಸ್ಯ ಪಿ.ಆರ್‌.ರಮೇಶ್‌ ಪ್ರತಿಕ್ರಿಯೆ ನೀಡಿ, ಆಡಳಿತಾತ್ಮಕ ದೃಷ್ಟಿಯಿಂದ ಮತ್ತು ಸಂಪನ್ಮೂಲ ಕ್ರೋಢೀಕರಣದ ದೃಷ್ಟಿಯಿಂದ ಸೂಕ್ತ ರೀತಿಯಲ್ಲಿ ಪಾಲಿಕೆ ವಿಭಜಿಸಬೇಕು. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವರಿಗೆ ಮನವಿ ಕೊಟ್ಟಿದ್ದೆ. ಪಾಲಿಕೆಯನ್ನು ಸಂಪನ್ಮೂಲ ಕ್ರೋಢೀಕರಣ ಮತ್ತು ಸುಗಮ ಆಡಳಿತದ ದೃಷ್ಟಿಯಿಂದ 10 ವಲಯಗಳನ್ನಾಗಿ ಮಾಡಿ. ಇಲ್ಲವೇ ಮೂರು ವಿಭಾಗಗಳನ್ನಾಗಿ ಮಾಡಿ ಎಂದು ಮನವಿ ಮಾಡಿದ್ದೇ ಎನ್ನುತ್ತಾರೆ.

Advertisement

ಏನಿದು ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ?: ದೊಡ್ಡ ದೊಡ್ಡ ನಗರದಲ್ಲಿ ಈಗಾಗಲೇ ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ ಇದೆ. ಮೇಯರ್‌ ಇನ್‌ ಕೌನ್ಸಿಲ್‌ ಎಂಬುವುದು ಸ್ಥಳೀಯ ಆಡಳಿತವಾಗಿರುತ್ತದೆ. ಪಾಲಿಕೆ ಸದಸ್ಯರ ಜತೆಗೆ ಮೇಯರ್‌ಗಳನ್ನು ಜನರು ನೇರವಾಗಿ ಆಯ್ಕೆ ಮಾಡುತ್ತಾರೆ. ಆಡಳಿತದಲ್ಲಿ ಸುಪ್ರೀಂ ನಿರ್ಧಾರಗಳನ್ನು ಮೇಯರ್‌ ತೆಗೆದುಕೊಳ್ಳುವ ಅಧಿಕಾರವಿದೆ. ಮೇಯರ್‌ ಮುಖ್ಯಮಂತ್ರಿ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳು ಈ ಕಮಿಟಿಯಲ್ಲಿ ಇರುತ್ತಾರೆ. ಮೇಯರ್‌ಗೆ ಐದು ವರ್ಷಗಳ ಅಧಿಕಾರವಧಿಯಿದ್ದು ದಕ್ಷತೆಯಿಂದ ಕೆಲಸ ಮಾಡಲು ಇದು ಸಹಾಯವಾಗಲಿದೆ. ಈ ವ್ಯವಸ್ಥೆ ಅಲಹಬಾದ್‌, ಬೃಹನ್‌ ಮುಂಬೈ, ಕೋಲ್ಕತಾ, ಚೆನ್ನೈ ಸೇರಿದಂತೆ ದೇಶ ಹಲವು ಮಹಾನಗರಗಳಲ್ಲಿ ಇದೆ.

800 ಚದರ ಕಿ.ಮೀ. ವ್ಯಾಪ್ತಿ ಜತೆಗೆ 110 ಹಳ್ಳಿಗಳು ಸೇರ್ಪಡೆ : 2007ರಲ್ಲಿ ಬೆಂಗಳೂರು 200 ಚದರ ಕಿಲೋಮಿಟರ್‌ ವ್ಯಾಪ್ತಿ ಹೊಂದಿತ್ತು. ಇದೀಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ ವಿಸ್ತಾರ ಪಡೆದುಕೊಂಡಿದೆ. ಸುಮಾರು 800 ಚದರ ಕಿಲೋಮೀಟರ್‌ ನಷ್ಟು ಹರಡಿಕೊಂಡಿದೆ. ಜತೆಗೆ 110 ಹಳ್ಳಿಗಳು ಕೂಡ ಬಿಬಿಎಂಪಿ ವ್ಯಾಪ್ತಿಗೆ ಸೇರಿವೆ. ಪಾಲಿಕೆ ಆಡಳಿತ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಹಿತದೃಷ್ಟಿಯಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಸೂಕ್ತವೆಂದು ಸರ್ಕಾರ ಪರಿಗಣಿಸಿದೆ. ಆ ಹಿನ್ನೆಲೆಯಲ್ಲಿ ಈ ಹಿಂದೆ ಪಾಲಿಕೆ ವಿಭಜನೆ ಸಂಬಂಧ ರಚಿಸಲಾಗಿದ್ದು ಸಮಿತಿಯನ್ನು ಪುನರ್‌ ರಚನೆ ಮಾಡಿದೆ. ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರನ್ನು ಒಳಗೊಂಡಂತೆ ಸಮಿತಿಯನ್ನು ಸರ್ಕಾರ ರಚಿಸಿದೆ.ಬಿ.ಎಸ್‌. ಪಾಟೀಲ ನೇತೃತ್ವದ ಸಮಿತಿಯಲ್ಲಿ ಮಾಜಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹಾಗೂ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್‌ ಸದಸ್ಯ ರವಿಚಂದರ್‌ ಇದ್ದಾರೆ.

ಅಖಂಡ ಬೆಂಗಳೂರು ಹಾಗೆಯೇ ಉಳಿಯಬೇಕು ಎಂಬ ಭಾವನೆ ಮಾಜಿ ಸದಸ್ಯರದ್ದಾಗಿದೆ. ಪಾಲಿಕೆ ವಿಭಜನೆ ಮಾಡದೆ ಮೇಯರ್‌ ಇನ್‌ ಕೌನ್ಸಿಲ್‌ ವ್ಯವಸ್ಥೆ ಜಾರಿಯಾಗಬೇಕು ಎಂಬುವುದು ನನ್ನ ವಯಕ್ತಿಕ ಅಭಿಪ್ರಾಯ. – ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ನ ಮಾಜಿ ಮೇಯರ್‌

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next