Advertisement

ವೃತ್ತಿಪರ ಕಾಲೇಜು ಶುಲ್ಕ ನಿಯಂತ್ರಣಕ್ಕೆ ಸಮಿತಿ

09:58 AM Feb 03, 2020 | sudhir |

ಬೆಂಗಳೂರು: ವೃತ್ತಿಪರ ಕೋರ್ಸ್‌ ವಿದ್ಯಾರ್ಥಿಗಳಿಂದ ಕಾಲೇಜುಗಳು ವಸೂಲಿ ಮಾಡುವ ಹೆಚ್ಚುವರಿ ಶುಲ್ಕದ ಮೇಲೆ ನಿಗಾ ಇರಿಸಲು ಹಿಂದೆ ರಚಿಸಲಾಗಿದ್ದ ಶುಲ್ಕ ನಿಯಂತ್ರಣ ಸಮಿತಿಯ ಅವಧಿ ಮುಗಿದಿರುವುದರಿಂದ ಹೊಸದಾಗಿ ರಚನೆಗೆ ಸರಕಾರ ಮುಂದಾಗಿದೆ.

Advertisement

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಿಇಟಿ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ. ಶುಲ್ಕವೂ ಸರಕಾರದಿಂದ ನಿಗದಿಯಾಗುತ್ತದೆ. ಸರಕಾರಿ ಮತ್ತು ಖಾಸಗಿ ಕೋಟಾ ಸೀಟುಗಳಿಗೆ ಎಷ್ಟು ಶುಲ್ಕ ಪಡೆಯಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿರುತ್ತದೆ.

ಆದರೂ ಕೆಲವು ಕಾಲೇಜುಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತವೆ. ಈ ಬಗ್ಗೆ ಶುಲ್ಕ ನಿಯಂತ್ರಣ ಸಮಿತಿಗೆ ದೂರು ಸಲ್ಲಿಸಲು ಅವಕಾಶ ಇದೆ. ಸಮಿತಿ ತನಗೆ ಬಂದಿರುವ ದೂರುಗಳನ್ನು ಪರಿಶೀಲಿಸಿ, ಕಾನೂನು ಉಲ್ಲಂಘನೆಯಾಗಿದ್ದಲ್ಲಿ ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸಮಿತಿಯ ಶಿಫಾರಸಿನಂತೆ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ.

ನಿವೃತ್ತ ನ್ಯಾ|ಮೂ| ಡಿ.ವಿ. ಶೈಲೇಂದ್ರ ಕುಮಾರ್‌ ಅಧ್ಯಕ್ಷತೆಯ ಈ ಹಿಂದಿನ ಸಮಿತಿಯ ಅವಧಿ 2019ರ ಸಿಇಟಿಗೂ ಮುನ್ನ ಮುಗಿದಿತ್ತು. ಅನಂತರ ಸಮ್ಮಿಶ್ರ ಸರ ಕಾರ ಹೊಸ ಸಮಿತಿ ರಚಿಸಿಲ್ಲ. 2019ರಲ್ಲಿ ಸಮಿತಿ ಇಲ್ಲದೇ ಸೀಟು ಹಂಚಿಕೆ ಸಹಿತ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದವು.

ಈಗ 2020ನೇ ಸಾಲಿನ ಸಿಇಟಿ ವೇಳಾಪಟ್ಟಿ ಪ್ರಕಟಿಸ ಲಾಗಿದೆ. ಸಿಇಟಿ ಆರಂಭಕ್ಕೂ ಮೊದಲೇ ಸಮಿತಿ ರಚನೆಗೆ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಮಿತಿಯ ಮೂಲಕ ವಿದ್ಯಾರ್ಥಿಗಳಿಗೆ ಆಗಬಹುದಾದ ಅನ್ಯಾಯ ತಡೆಯಲು ಸರಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಶುಲ್ಕ ನಿಯಂತ್ರಣ ಸಮಿತಿಗೆ ನಿವೃತ್ತ ನ್ಯಾಯಮೂರ್ತಿಗಳನ್ನು ಸೂಚಿಸಲಾಗುತ್ತದೆ. ಈ ಸಂಬಂಧ ಸರಕಾರದಿಂದ ರಾಜ್ಯ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪ್ರಸ್ತಾವನೆಯನ್ನು ಪತ್ರ ಮೂಲಕ ಸಲ್ಲಿಸಲಾಗುತ್ತದೆ. ಹೈಕೋರ್ಟ್‌ ನಿರ್ದೇಶನ ಬಂದ ಅನಂತರ ನೇಮಕಾತಿ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸರಕಾರದಿಂದ ಪತ್ರ
ಶುಲ್ಕ ನಿಯಂತ್ರಣ ಸಮಿತಿಗೆ ನಿವೃತ್ತ ನ್ಯಾಯಮೂರ್ತಿಯೋರ್ವರನ್ನು ನೇಮಿಸುವ ಸಂಬಂಧ ಸರಕಾರದಿಂದ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೈಕೋರ್ಟ್‌ ನಿರ್ದೇಶನದ ಆಧಾರದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ವಿದ್ಯಾರ್ಥಿಗಳ ಪ್ರವೇಶಾತಿ ಮೇಲ್ವಿ ಚಾರಣೆಗೆ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ಸಮಿತಿಯು ಕಾರ್ಯನಿರ್ವಹಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

ಸಮಿತಿ ರಚನೆಯಾದರೆ ಶುಲ್ಕ ಏರಿಕೆ ಕಷ್ಟ
2018ರಲ್ಲಿ ಶುಲ್ಕ ನಿಯಂತ್ರಣ ಸಮಿತಿ ಅಸ್ತಿತ್ವದಲ್ಲಿ ಇದ್ದುದರಿಂದ ಕೇವಲ ಶೇ.8ರಷ್ಟು ಶುಲ್ಕ ಏರಿಕೆಗೆ ಅವಕಾಶ ನೀಡಿತ್ತು. ಕಾಲೇಜು ಆಡಳಿತ ಮಂಡಳಿಗಳಿಂದ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ 2019ರಲ್ಲಿ ಸಮಿತಿ ಇಲ್ಲದೆ ಶೇ.10ರಷ್ಟು ಶುಲ್ಕ ಹೆಚ್ಚಳಕ್ಕೆ ಅಂದಿನ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಒಪ್ಪಿಗೆ ಸೂಚಿಸಿದ್ದರು.

ಶುಲ್ಕ ನಿಯಂತ್ರಣ ಸಮಿತಿ ಸಿಇಟಿಗೂ ಮೊದಲೇ ರಚನೆಯಾದರೆ ಕಾಲೇಜು ಆಡಳಿತ ಮಂಡಳಿಗಳು ತಮ್ಮ ಲೆಕ್ಕಪರಿಶೋಧನ ವರದಿಯನ್ನು ಸಮಿತಿಗೆ ಸಲ್ಲಿಸಬೇಕಾಗುತ್ತದೆ. ಅದರ ಆಧಾರದಲ್ಲಿ ಸಮಿತಿ ಶುಲ್ಕ ಹೆಚ್ಚಳಕ್ಕೆ ಅನುಮತಿ ಕಲ್ಪಿಸುತ್ತದೆ. ಆಗ ಸರಕಾರ ನೇರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶುಲ್ಕ ನಿಯಂತ್ರಣ ಸಮಿತಿ ರಚನೆಯಾದರೆ ಶುಲ್ಕ ಏರಿಕೆಗೆ ಕಡಿವಾಣ ಬೀಳಲಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next