Advertisement

ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಹೆತ್ತವರ ಮೇಲೆ ಪ್ರಕರಣ

03:34 PM Jul 02, 2023 | |

ಮಹಾನಗರ: ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದರೆ ಅವರ ಹೆತ್ತವರು ಹಾಗೂ ವಾಹನದ ಮಾಲಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಈಗಾಗಲೇ ಇಂತಹ ಹಲವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

Advertisement

ಶನಿವಾರ ನಡೆದ ಪೊಲೀಸ್‌ ಫೋನ್‌-ಇನ್‌ನಲ್ಲಿ ಕಾಟಿಪಳ್ಳ, ಕೃಷ್ಣಾಪುರ, ಬೈಕಂಪಾಡಿ ಮೊದಲಾದೆಡೆ ಸಣ್ಣ ವಯಸ್ಸಿನವರು ಸ್ಕೂಟರ್‌, ಬೈಕ್‌ ಚಲಾಯಿಸುತ್ತಿದ್ದಾರೆ. ಹೆಲ್ಮೆಟ್‌ ಧರಿಸುವುದಿಲ್ಲ. ಹಲವಾರು ಅಪಘಾತಗಳು ಸಂಭವಿಸಿವೆ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು ಕೃಷ್ಣಾಪುರ ಪರಿಸರದಲ್ಲಿಯೂ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದ್ದು, ಈ ರೀತಿ ಅಪ್ರಾಪ್ತರು ಬೈಕ್‌ ಚಲಾಯಿಸುವುದು ಸಹಿತ ವಾಹನ ಸಂಚಾರ ನಿಯಮ ಉಲ್ಲಂಘನೆಯ ಮೇಲೆ ನಿಗಾ ವಹಿಸಲಾಗಿದೆ. ಅಪ್ರಾಪ್ತರು ವಾಹನ ಚಲಾಯಿಸುವ, ಅಪಘಾತಕ್ಕೀಡಾಗುವ ಪ್ರಕರಣ ಗಳಲ್ಲಿ ಆರ್‌ಸಿ ಮಾಲಕರು, ಮಕ್ಕಳ ಹೆತ್ತವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಹೆತ್ತವರಿಗೆ ಕೌನ್ಸೆಲಿಂಗ್‌ ಮಾಡಿಸಿ ತಿಳಿವಳಿಕೆ ನೀಡುವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಪದವಿನಂಗಡಿ ಬಳಿ ನಡೆದ ಸ್ಕೂಟರ್‌ ಅಪಘಾತದಲ್ಲಿ ಇಬ್ಬರು ಅಪ್ರಾಪ್ತರು ಮೃತಪಟ್ಟ ಘಟನೆಯಲ್ಲಿ ಹೆತ್ತವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದರು.

ಸಂಚಾರ ನಿಯಮ ಉಲ್ಲಂಘನೆ: ಹಲವು ದೂರು
ಕರ್ಕಶ ಹಾರನ್‌, ಪ್ರಕಾಶಮಾನವಾದ ಬೆಳಕು, ಕರ್ಕಶ ಸದ್ದು ಉಂಟು ಮಾಡುವ ಸೈಲೆನ್ಸರ್‌, ಟಿಂಟೆಡ್‌ ಗ್ಲಾಸ್‌ ಅಳವಡಿಕೆ, ಅಪಾ ಯ ಕಾರಿ ರೀತಿಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಟ ಮೊದಲಾದವುಗಳ ಬಗ್ಗೆ ಸಾರ್ವಜನಿಕರು ದೂರಿದರು. ಈ ಬಗ್ಗೆ ಈಗಾ ಗಲೇ ಪೊಲೀಸರು ಕಾರ್ಯಾಚರಣೆ ನಡೆಸು ತ್ತಿದ್ದಾರೆ. ಅಪಾಯಕಾರಿಯಾಗಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು. ಪ್ರತಿಯೋರ್ವರಲ್ಲಿ ಸ್ವಯಂ ಶಿಸ್ತು ಕೂಡ ಇದ್ದಾಗ ಮಾತ್ರ ಸುಗಮ, ಸುರಕ್ಷಿತ ಸಂಚಾರ ಸಾಧ್ಯ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಬಸ್‌ ಮಾಲಕರಿಗೆ ಸೂಚನೆ
ಕರ್ಕಶ ಹಾರನ್‌ ಬಳಕೆ ಸಹಿತ ಸಂಚಾರ ನಿಯಮ ಉಲ್ಲಂಘನೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಬಸ್‌ ಮಾಲಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು. ಬಸ್‌ಗಳ ಫ‌ುಟ್‌ಬೋರ್ಡ್‌ಗೆ ಬಾಗಿಲು ಅಳವಡಿಸಬೇಕು ಎಂದು ಓರ್ವರು ಸಲಹೆ ನೀಡಿದರು. ಬಲ್ಮಠ ಕಲೆಕ್ಟರ್ ಗೇಟ್‌, ಬಿಜೈ ಬಟ್ಟಗುಡ್ಡೆ ಮೊದಲಾದೆಡೆ ಬಸ್‌ಗಳ ನಿಲುಗಡೆಯಿಂದ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದರು. ಬಾವುಟಗುಡ್ಡೆಯಲ್ಲಿ ಬಸ್‌ಬೇ ಇಲ್ಲದೆ ರಸ್ತೆಯಲ್ಲೇ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಕೇಳಿಬಂತು.

ಪೊಲೀಸ್‌ ನಿಯೋಜನೆಗೆ ಮನವಿ
ನಗರದ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು. ಕಾನೂನು ಉಲ್ಲಂ ಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಓರ್ವರು ಮನವಿ ಮಾಡಿದರು. ಕಾವೂರು ಜಂಕ್ಷನ್‌ನಲ್ಲಿ ವಾಹನ ಸಂಚಾರ, ಪಾದಚಾರಿಗಳ ಸಂಚಾರಕ್ಕೆ ತೊಡಕಾಗಿದ್ದು ಇಲ್ಲಿ ಬೆಳಗ್ಗಿನ ವೇಳೆ ಕೂಡ ಸಂಚಾರ ಪೊಲೀಸರನ್ನು ನಿಯೋಜಿಸಬೇಕು ಎಂದು ಮಹಿಳೆಯೋರ್ವರು ಮನವಿ ಮಾಡಿದರು.

Advertisement

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಬಿ.ಪಿ., ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.

ಸಿಗ್ನಲ್‌ ಬದಲಾವಣೆ ಇಲ್ಲ
ಕೆಪಿಟಿ ಜಂಕ್ಷನ್‌ನಲ್ಲಿ ಸಿಗ್ನಲ್‌ ಲೈಟ್‌ನ ಅವಧಿ ಬದಲಾವಣೆ ಮಾಡುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದಾಗ, ಪರಿಶೀಲನೆ ನಡೆಸಿದ ಅನಂತರವೇ ಸಿಗ್ನಲ್‌ ಸಮಯ ನಿಗದಿಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು. ಹಂಪನಕಟ್ಟೆ ಸಿಗ್ನಲ್‌ ಬಳಿ ಕೂಡ ಅಧ್ಯಯನ ನಡೆಸಿಯೇ ಸಂಚಾರ ಮಾರ್ಪಾಟು ಮಾಡಲಾಗಿದ್ದು, ಇತರ ಕ್ರಮಗಳಿಗಿಂತ ಇದು ಉತ್ತಮವಾಗಿದ್ದು, ಇದನ್ನೇ ಮುಂದುವರಿಸಲಾಗುವುದು. ಕ್ಲಾಕ್‌ಟವರ್‌-ಎ.ಬಿ. ಶೆಟ್ಟಿ ವೃತ್ತ-ಹ್ಯಾಮಿಲ್ಟನ್‌ ವೃತ್ತ ಕಡೆಗೆ ಏಕಮುಖ ಸಂಚಾರದಲ್ಲಿಯೂ ಸದ್ಯ ಯಾವುದೇ ಬದಲಾವಣೆ ಮಾಡಲಾಗದು. ಮುಂದಿನ ದಿನಗಳಲ್ಲಿ ಸಂಚಾರ ವ್ಯವಸ್ಥೆಗೆ ಪೂರಕ ಮೂಲ ಸೌಕರ್ಯಗಳು ಅಭಿವೃದ್ಧಿಯಾದ ಅನಂತರವಷ್ಟೇ ಪರಿಶೀಲಿಸಬಹುದಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಬಾರ್‌ಗಳ ವಿರುದ್ಧ ಕ್ರಮ
ಬಾರ್‌ಗಳನ್ನು ಬೆಳಗ್ಗೆ ನಿಗದಿತ ಸಮಯಕ್ಕಿಂತ ಬೇಗನೆ ತೆರೆದು ರಾತ್ರಿ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ತೆರೆದಿಡಲಾಗುತ್ತಿದೆ ಎಂದು ಸಾರ್ವಜನಿಕರೋರ್ವರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಪ್ರತೀ ವಾರ ಕೂಡ ಸಿಸಿ ಕೆಮರಾಗಳ ಮೂಲಕ ಬಾರ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ನಿಯಮ ಉಲ್ಲಂ ಸಿದ ಮೂರು ಬಾರ್‌ಗಳಿಗೆ ಇತ್ತೀಚೆಗೆ ಅಬಕಾರಿ ಇಲಾಖೆಯ ಮೂಲಕ ದಂಡ ವಿಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಸಾರ್ವಜನಿಕರ ಇತರ ದೂರು-ಸಲಹೆಗಳು
-ಬಿಜೈ ಲೇಡಿಸ್‌ ಹಾಸ್ಟೆಲ್‌ ಪಕ್ಕದ ರಸ್ತೆ ಬದಿ ಅಂಗಡಿ ಎದುರು ಸಿಗರೇಟ್‌ ಸೇದಲು ನಿಲ್ಲುವ ಯುವಕರಿಂದ ವಾಹನ, ಜನಸಂಚಾರಕ್ಕೆ ತೊಂದರೆ. ಗಾಂಜಾ ಸೇವನೆಯ ಸಂದೇಹ.
-ರೊಜಾರಿಯೋ-ಸೈಂಟ್‌ ಆ್ಯನ್ಸ್‌ ರಸ್ತೆಯಲ್ಲಿ ಲಾರಿ ಮತ್ತಿತರ ವಾಹನಗಳ ನಿಲುಗಡೆಯಿಂದ ಸಮಸ್ಯೆ.
-ಆನ್‌ಲೈನ್‌ ವಂಚನೆ ಬಗ್ಗೆ ಮೈಕ್‌ ಅನೌನ್ಸ್‌ಮೆಂಟ್‌ ಮೂಲಕ ಜಾಗೃತಿ ಮೂಡಿಸಬೇಕು.
-ಮನೆ ಮನೆಗೆ ವಸ್ತುಗಳ ಮಾರಾಟಕ್ಕೆ ಬರುವವರ ಪೂರ್ವಾಪರ ವಿಚಾರಿಸಿ ನಿಗಾ ವಹಿಸಿ.
-ಮಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಿ.

ವಾಹನಗಳ ತೆರವಿಗೆ ಕ್ರಮ
ಬರ್ಕೆ ಪೊಲೀಸ್‌ ಠಾಣೆಯ ಬಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಲೇವಾರಿಗೆ ಬಾಕಿ ಇರುವ ವಾಹನಗಳನ್ನು ನಿಲ್ಲಿಸಿರುವುದರಿಂದ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ದೂರಿದಾಗ ಹಲವು ಠಾಣೆಗಳಲ್ಲಿ ಇಂತಹ ವಾಹನಗಳಿದ್ದು ಇವುಗಳ ವಿಲೇವಾರಿ ಬಗ್ಗೆ ನ್ಯಾಯಾಲಯದ ಒಪ್ಪಿಗೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಒಪ್ಪಿಗೆ ದೊರೆಯುವವರೆಗೆ ಸಂಚಾರಕ್ಕೆ ಅಡ್ಡಿಯಾಗದಂತೆ ಅಂತಹ ವಾಹನಗಳನ್ನು ಸುವ್ಯವಸ್ಥಿತವಾಗಿ ನಿಲ್ಲಿಸಲಾಗುವುದು. ಮಳೆಗಾಲದಲ್ಲಿ ಸೊಳ್ಳೆ ಉತ್ಪತ್ತಿಗೆ ಅವಕಾಶ ಸಿಗದಂತೆ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗುವುದು, ಕ್ರಿಮಿನಾಶಕ ಸಿಂಪಡಿಸಲಾಗುವುದು ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next