Advertisement

ಮೂಡುಬಿದಿರೆ ಪುರಸಭೆ : ವಾಣಿಜ್ಯ ತೆರಿಗೆ, ನೀರಿನ ಬಿಲ್‌ ವಸೂಲಿಗೆ ಕ್ರಮ ಕೈಗೊಳ್ಳಲು ಆಗ್ರಹ

03:45 PM Mar 16, 2022 | Team Udayavani |

ಮೂಡುಬದಿರೆ : ಪುರಸಭೆಯ ವ್ಯಾಪ್ತಿಯಲ್ಲಿ ವಾಣಿಜ್ಯ ತೆರಿಗೆ ವಸೂಲಾತಿಯಲ್ಲಿ ಬಹಳ ನಿಧಾನಗತಿ ತೋರುತ್ತ ಇದೆ. ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ಸದಸ್ಯ ಸುರೇಶ್‌ ಪ್ರಭು ಆಗ್ರಹಿಸಿದರು.

Advertisement

ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನೀರಿನ ಬಿಲ್‌ ಬಾಕಿ ಇರುವವರಿಂದ ಕೂಡಲೇ ಮೊತ್ತ ವಸೂಲಿಗೆ ಕ್ರಮ ಜರಗಿಸಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು.

ಡಾಟಾ ಡಿಲೀಟ್‌?: ನೀರಿನ ಬಿಲ್‌ ವಸೂಲಿ ಗುತ್ತಿಗೆದಾರರ ಅವಧಿ ಮುಗಿದರೂ ಅವರು ತಮ್ಮ ಕೆಲಸ ಮುಂದುವರಿಸುತ್ತಿರುವುದು ಸರಿಯಲ್ಲ. ಅವರಿಗೆ ನೀವು ಹೇಗೆ ಪೇಮೆಂಟ್‌ ಮಾಡುತ್ತೀರಿ? ಅವರ ಡಾಟಾ ಎಲ್ಲ ಡಿಲೀಟ್‌ ಆಗಿದೆಯಂತೆ. ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕಾಂಗ್ರೆಸ್‌ನ ಕೊರಗಪ್ಪ ಆಗ್ರಹಿಸಿದರು. ಇಂಥ ಘಟನೆಗಳನ್ನು ನಿವಾರಿಸಲು ಎಲ್ಲ ದಾಖಲೆಗಳನ್ನು ಹಾರ್ಡ್‌ಡಿಸ್ಕ್ ನಲ್ಲಿ ಹಾಕಿಸಿಡಬೇಕು ಎಂದು ಪಿ.ಕೆ. ಥೋಮಸ್‌ ಸಲಹೆ ನೀಡಿದರು.

ಅನಧಿಕೃತ ನಳ್ಳಿ ನೀರು ಬಳಕೆ: ಅನಧಿಕೃತವಾಗಿ ನಳ್ಳಿ ನೀರನ್ನು ಸೆಳೆಯುತ್ತಿರುವಲ್ಲಿಗೆ ಹೋಗಿ ನೀರಿನ ಸಂಪರ್ಕವನ್ನು ತುಂಡರಿಸಲಾಗುವುದು; ಅನಧಿಕೃತ ವಾಗಿರುವುದರಿಂದ ನೋಟಿಸ್‌ ಅಗತ್ಯವಿಲ್ಲ ಎಂದು ಕಂದಾಯ ನಿರೀಕ್ಷಕ ಅಶೋಕ ಸಭೆಗೆ ತಿಳಿಸಿದರು.

ಚರಂಡಿ ಹೂಳು: ಚರಂಡಿ ಹೂಳೆತ್ತಿ ಅಲ್ಲೇ ಬದಿ ಯಲ್ಲಿ ರಾಶಿ ಹಾಕಿದರೆ ಅದು ಮತ್ತೆ ಎರಡು ಮಳೆಗೆ ಚರಂಡಿ ಪಾಲಾಗುವುದು ಸಹಜ. ಹೂಳೆತ್ತುವ ಜತೆಗೆ ಅದನ್ನು ದೂರ ಒಯ್ದು ಅಗತ್ಯವಿದ್ದಲ್ಲಿ ರಾಶಿ ಹಾಕುವುದಾಗಬೇಕು. ಇಲ್ಲವಾದಲ್ಲಿ ಅದನ್ನು ಯಾರು ತೆಗೆಯುವುದು ಎಂದು ಎಲ್ಲರೂ ಹೊಣೆ ಜಾರಿಸಿಕೊಳ್ಳುತ್ತಾರೆ ಎಂದು ಸ್ವಾತಿ ಪ್ರಭು ಸಹಿತ ಸದಸ್ಯರು ಹೇಳಿದರು. ಈ ಕಾರ್ಯಕ್ಕೆ ಹೈಡ್ರಾಲಿಕ್‌ ಟಿಪ್ಪರ್‌ ಬೇಕಾದೀತು ಎಂದರು ಸುರೇಶ್‌ ಪ್ರಭು. ಇದನ್ನೆಲ್ಲ ಸಮರ್ಪಕವಾಗಿ ನಡೆಸಲು ಈಗ ವಾರ್ಡ್‌ವಾರು ಕೊಡಲಾಗುತ್ತಿರುವ ಮೊತ್ತವನ್ನು ಒಂದು ಲಕ್ಷದಿಂದ ಒಂದೂವರೆ ಲಕ್ಷಕ್ಕೇರಿಸಬೇಕಾಗಿದೆ ಎಂದು ಪಿ.ಕೆ. ಥೋಮಸ್‌, ಸುರೇಶ್‌ ಕೋಟ್ಯಾನ್‌, ಜೆಸ್ಸಿ ಮಿನೇಜಸ್‌ ಮೊದಲಾದವರು ಅಭಿಪ್ರಾಯಪಟ್ಟರು. ಈ ಬಗ್ಗೆ ಸದಸ್ಯರು ಸಹಮತ ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ : ಕೊಡಿಯಾಲಬೈಲ್‌ : ನವಸ್ಪರ್ಶ ಪಡೆದ ರಾಷ್ಟ್ರಕವಿಯ ವೃತ್ತ

ಮೀನು ಮಾರಾಟ ಮಳಿಗೆ: ಪುರಸಭೆಯ ವ್ಯಾಪ್ತಿ ಯಲ್ಲಿ ಅಲ್ಲಲ್ಲಿ ಮೀನು ಮಾರಾಟ ಮಾಡುವುದು ತಪ್ಪು ಎಂದು ಅವರಿಗೆಲ್ಲ ನಿರ್ಬಂಧ ಹೇರಲಾಗುತ್ತಿದೆ. ಆದರೆ, ಮೀನುಗಾರಿಕೆ ಇಲಾಖೆಯಿಂದ ಪತ್ರ ತಂದ ವರಿಗೆಲ್ಲ ಮಳಿಗೆ ಸ್ಥಾಪನೆಗೆ ಜಾಗ ಒದಗಿಸುತ್ತಿದೆ, ಇದು ಸಲ್ಲದು ಎಂದು ವಿಪಕ್ಷೀಯ ಸದಸ್ಯರೆಲ್ಲ ಆಕ್ಷೇಪ ವ್ಯಕ್ತಡಿಸಿದರು.

ಮುಂಡ್ಲಿ ಮೂಡುಬಿದಿರೆಯಲ್ಲಿದೆಯೇ: ಚರ್ಚಿ ಸುವ ವಿಷಯ ನಂಬ್ರ 30ರಲ್ಲಿ ಪುರಸಭೆ ವ್ಯಾಪ್ತಿ ಯಲ್ಲಿ ಮುಖ್ಯ ನೀರು ಸರಬರಾಜು ಯೋಜನೆಯ “ಮುಂಡ್ಲಿ’ ರೇಚಕ ಸ್ಥಾವರ ಹಾಗೂ ಜ್ಯೋತಿನಗರ ನೀರು ಶುದ್ಧೀಕರಣ ಘಟಕಕ್ಕೆ. ಎಂಬ ವಾಕ್ಯವನ್ನು ಓದಿದ ವಿಪಕ್ಷದವರು “ಸ್ವಾಮೀ, ಮುಂಡ್ಲಿ ಇರುವುದು ಕಾರ್ಕಳದಲ್ಲಿ ಇಲ್ಲಿರುವುದು ಪುಚ್ಚಮೊಗರು’ ಎಂದಾಗ ಸಭೆಯಲ್ಲಿ ನಗುವಿನಲೆ ಎದ್ದಿತು.

1991-92ರಲ್ಲಿ ನಿರ್ಣಯವಾಗಿದ್ದಂತೆ ಕಲ್ಲಬೆಟ್ಟು ಬಂಗಾಲಪದವಿನಲ್ಲಿ ಶ್ಮಶಾನ ನಿರ್ಮಿಸಬೇಕು ಎಂದು ಉಪಾಧ್ಯಕ್ಷೆ ಸುಜಾತಾ ಶಶಿಕಿರಣ ಒತ್ತಾಯಿಸಿದರೆ, ಜೆಸ್ಸಿ ಮಿನೇಜಸ್‌, ಸುರೇಶ ಕೋಟ್ಯಾನ್‌, ಕೊರಗಪ್ಪ ಮಾತನಾಡಿ, ಈ ಭಾಗದಲ್ಲಿ ಈಗ ಬಹಳಷ್ಟು ಮನೆಗಳಾಗಿರುವುದರಿಂದ ಇದನ್ನು ಪುನರ್‌ ವಿಮರ್ಶಿಸಬೇಕಾಗಿದೆ ಎಂದರು. ಉಪಾಧ್ಯಕ್ಷರು ತಮ್ಮ ಪಟ್ಟು ಬಿಡಲಿಲ್ಲ. ಸಭೆಯಲ್ಲಿ ಆಗಿರುವ ನಿರ್ಣಯಗಳ ಪ್ರತಿ ಹತ್ತು ದಿನಗಳ ಒಳಗಾಗಿ ಸಿದ್ಧವಾಗಬೇಕು,ವಾರಗಟ್ಟಲೆ ಕಾಯುವಂತೆ ಮಾಡಬಾರದು ಎಂದು ಪಿ.ಕೆ. ಥೋಮಸ್‌ ಕೋರಿದರು. ಸೌಮ್ಯಾ ಶೆಟ್ಟಿ, ಶ್ವೇತಾ ಪ್ರವೀಣ್‌, ದಿವ್ಯಾ ಜಗದೀಶ, ಪುರಂದರ ದೇವಾಡಿಗ, ನವೀನ ಶೆಟ್ಟಿ ಮೊದಲಾದವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ. ಸಮುದಾಯ ಅಧಿಕಾರಿ ಗೋಪಾಲ ನಾೖಕ್‌, ಪರಿಸರ ಅಭಿಯಂತರೆ ಶಿಲ್ಪಾ ಎಸ್‌. ಮೊದಲಾದವರಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ
ಕದ್ದುಮುಚ್ಚಿ ಕಸ, ತ್ಯಾಜ್ಯ ಎತ್ತಿ ಬಿಸಾಡುವ ಬಗ್ಗೆ ಕಠಿನ ಕ್ರಮ ಜರಗಿಸಬೇಕು ಎಂದು ರಾಜೇಶ್‌ ನಾೖಕ್‌ , ಈಗಿರುವ ಸಿಸಿ ಕೆಮರಾಗಳ ಕಾರ್ಯ ಕ್ಷಮತೆ ಸಾಲದು; ಪ್ರಭಾವಶಾಲಿ ಸಿಸಿ ಕೆಮರಾ ಅಳವಡಿಸಬೇಕು, ತಪ್ಪಿತಸ್ಥರ ಮೇಲೆ ಕೇಸು ಜಡಿದು ಪತ್ರಿಕೆಗಳಲ್ಲಿ ಪ್ರಚಾರ ಮಾಡಬೇಕು ಎಂದು ಪಿ.ಕೆ. ಥೋಮಸ್‌ ಆಗ್ರಹಿಸಿದರು.

ಅಧಿಕಾರಿಗಳನ್ನೂ ಆಹ್ವಾನಿಸಿ
ಮುಂದಿನ ಸಭೆಗೆ, ಮೆಸ್ಕಾಂ, ಅರಣ್ಯ, ಆರೋಗ್ಯ, ಕಂದಾಯ, ಪೊಲೀಸ್‌ ಮೊದಲಾದ ಅಧಿಕಾರಿಗಳನ್ನೂ ಬರಮಾಡಿಕೊಳ್ಳಬೇಕು ಎಂದು ಇಕ್ಬಾಲ್‌ ಕರೀಂ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next