Advertisement

ಹೋಂ ಕ್ವಾರಂಟೈನ್‌ನಿಂದ ಹೊರಬಂದರೆ ಪ್ರಕರಣ ದಾಖಲು: ಜಿಲ್ಲಾಧಿಕಾರಿ

11:51 PM Jun 18, 2020 | Sriram |

ಉಡುಪಿ: ಹೊರರಾಜ್ಯ ಗಳಿಂದ ಬಂದವವರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರಲು ಅವಕಾಶ ಕಲ್ಪಿಸಲಾಗಿದ್ದು, ಅಂತಹ ಮನೆಗಳನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಹೋಂ ಕ್ವಾರಂಟೈನ್‌ನಲ್ಲಿರುವವರು ಮನೆಯಿಂದ ಹೊರಗೆ ಬಂದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗು ವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಜಿಲ್ಲಾಡಳಿತ, ನಗರಸಭೆ ವತಿಯಿಂದ ಗುರುವಾರ ಮಾಸ್ಕ್ ಡೇ ಪ್ರಯುಕ್ತ ನಗರಸಭೆ ಆವರಣದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ನಡೆದ ಜಾಗೃತಿ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು.

ಹೊರರಾಜ್ಯಗಳಿಂದ ಬಂದವರಿಂದ ಸಾರ್ವಜನಿಕರು ಆದಷ್ಟು ಅಂತರ ಕಾಯ್ದುಕೊಳ್ಳಬೇಕು. ಹೊರರಾಜ್ಯ ಗಳಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿ ಉಳಿದುಕೊಂಡ ಮನೆಯವರು ಮನೆಯಿಂದ ಹೊರಗೆ ಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಪ್ರಕರಣ ದಾಖಲಿಸಲಾಗುತ್ತದೆ ಎಂದವರು ತಿಳಿಸಿದರು.

130 ಮಂದಿ ಆಸ್ಪತ್ರೆಯಲ್ಲಿ
130 ಮಂದಿ ಮಾತ್ರ ಈಗ ಆಸ್ಪತ್ರೆಯಲ್ಲಿ ಇದ್ದಾರೆ. ಸೋಂಕು ಕುರಿತು ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಮನೆ ಯಿಂದ ಹೊರ ಬರುವಾಗ ಮಾಸ್ಕ್ ಧರಿಸ ಬೇಕು. ಸ್ಯಾನಿಟೈಸರ್‌ನ ಪ್ರತಿ ಬಾರಿ ಬಳಕೆ ಕಷ್ಟ. ನೀರಿನಲ್ಲಿ ಕೈ ತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು. ವ್ಯಾಪಾರಸ್ಥರು ಕೈತೊಳೆಯಲು ಅನುಕೂಲವಾಗುವಂತೆ ನೀರಿನ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದವರು ತಿಳಿಸಿದರು.

ಶಾಸಕ ಕೆ. ರಘುಪತಿ ಭಟ್‌ ಮಾತ ನಾಡಿ, ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದ್ದರೂ ಅವರು ಅಷ್ಟೇ ವೇಗವಾಗಿ ಗುಣಮುಖರಾಗುತ್ತಿದ್ದಾರೆ. ಇಲ್ಲಿನ ವಾತಾವರಣ, ಆಹಾರ ಪದ್ಧತಿ ಎಲ್ಲವೂ ಇದಕ್ಕೆ ಕಾರಣಗಳಾಗಿರಬಹುದು ಎಂದರು.

Advertisement

ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ್‌ ಪ್ರಭು, ಉಡುಪಿ ಪೊಲೀಸ್‌ ಉಪಅಧೀಕ್ಷ ಕರಾದ ಜೈಶಂಕರ್‌, ಪೌರಾ ಯುಕ್ತರಾದ ಆನಂದ್‌ ಸಿ. ಕಲ್ಲೋಲಿಕರ್‌, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್‌ರಾಜ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡ, ಕೋವಿಡ್‌ ನೊಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಡಿವೈಎಸ್ಪಿ ರವಿಶಂಕರ್‌, ನಗರ ಠಾಣಾಧಿಕಾರಿ ಶಕ್ತಿವೇಲು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರು, ಸಿಬಂದಿ ಉಪಸ್ಥಿತರಿದ್ದರು.

ಜಾಥಾದಲ್ಲಿ ಬಣ್ಣದ ಕೊಡೆ
ಜಾಥಾವು ನಗರದ ರಸ್ತೆಗಳಲ್ಲಿ ಸಂಚರಿಸಿತು. ಇದರಲ್ಲಿ ಪಾಲ್ಗೊಂಡವರಿಗೆ ಬಣ್ಣದ ಕೊಡೆಗಳನ್ನು ನೀಡಲಾಗಿತ್ತು. ಕೊಡೆಯ ಮೂಲಕ 1 ಮೀ. ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ಸಂದೇಶವನ್ನು ಸಾರಲಾಯಿತು.

ದೀರ್ಘ‌ ಹೋರಾಟ ಅಗತ್ಯ
ಕೋವಿಡ್‌-19 ನಿರ್ಮೂಲನೆ ವಿರುದ್ಧ ದೀರ್ಘ‌ ಹೋರಾಟ ಅಗತ್ಯ. ಇದು ಇಂದು ನಾಳೆಗೆ ಮುಗಿಯುವಂಥ‌ದ್ದಲ್ಲ. ಒಂದೋ ಅದು ಸಂಪೂರ್ಣ ನಿವಾರಣೆಯಾಗಬೇಕು ಅಥವಾ ಸೋಂಕಿಗೆ ಔಷಧ ಸಿಗಬೇಕು; ಅಲ್ಲಿಯವರೆಗೆ ಸೋಂಕು ತಡೆಗೆ ಅಗತ್ಯ ಕ್ರಮಗಳನ್ನು ಸ್ವತಃ ನಾವೇ ಅನುಸರಿಸಿಕೊಳ್ಳಬೇಕಿದೆ. ಸೋಂಕು ಹರಡದಂತೆ ಸೂಚಿಸುವ ಎಲ್ಲ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next