Advertisement

ಮತ್ತೆ ಬಂದ ಟೆನ್ನಿಸ್‌: ಹೊಸಬರ ಸಿನಿಮಾಗೆ ಆ್ಯಕ್ಷನ್‌ ಕಟ್‌

04:03 PM Jun 22, 2017 | Team Udayavani |

ಹಾಸ್ಯ ಕಲಾವಿದ ಟೆನ್ನಿಸ್‌ ಕೃಷ್ಣ ಈಗ ನಿರ್ದೇಶಕರಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಈಗ ಅವರ ನಿರ್ದೇಶನದ “ಮತ್ತೆ ಮತ್ತೆ’ ಚಿತ್ರದ ಬಗ್ಗೆ ಪತ್ರಕರ್ತರ ಮುಂದೆ ಹಾಜರಾಗಿ ಒಂದಷ್ಟು ವಿವರ ಕೊಟ್ಟಿದ್ದಾರೆ. ಇದು ಟೆನ್ನಿಸ್‌ ಕೃಷ್ಣ ಅವರ ಮೊದಲ ಸಿನಿಮಾ. ನೈರುತ್ಯ ಆರ್ಟ್‌ ಮೀಡಿಯಾ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಚಿತ್ರ. ಈ ಚಿತ್ರಕ್ಕೆ ಡಾ.ಅರುಣ್‌ ಅವರು ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅವರ ಕಥೆಗೆ ಟೆನ್ನಿಸ್‌ ಕೃಷ್ಣ ಚಿತ್ರಕಥೆ ಮಾಡಿಕೊಂಡು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Advertisement

ಈ ಬಗ್ಗೆ ಹೇಳಿಕೊಳ್ಳುವ ಟೆನ್ನಿಸ್‌ ಕೃಷ್ಣ, “ವೃತ್ತಿ ಜೀವನದದಲ್ಲಿ ಇದುವರೆಗೆ 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾನು ಈ ಬಣ್ಣದ ಲೋಕಕ್ಕೆ ಬಂದಿದ್ದೇ ನಿರ್ದೇಶಕ ಆಗಬೇಕು ಅಂತ. ಆದರೆ, ನನಗೆ ನಟಿಸೋ ಅವಕಾಶ ಸಿಕ್ಕಿತು. ಆ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡೆ. ಅದರಲ್ಲೇ ಸುದ್ದಿಯಾದೆ. ನನಗೆ ನಿರ್ದೇಶನ ಎಂಬುದು ಬಹಳ ವರ್ಷಗಳ ಕನಸು. ಮೊದಲು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಆರ್‌.ಎನ್‌ ಜಯಗೋಪಾಲ್‌ ನಿರ್ದೇಶನದ “ಹೃದಯ ಪಲ್ಲವಿ’ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ವೇಮಗಲ್‌ ಜಗನ್ನಾಥ್‌ ನಿರ್ದೇಶನದ “ತುಳಸಿದಳ’ ಹಾಗೂ ಸುನೀಲ್‌ಕುಮಾರ್‌
ದೇಸಾಯಿ ಅವರ “ತರ್ಕ’ ಚಿತ್ರದಲ್ಲೂ ಸಹ ನಿರ್ದೇಶಕರಾಗಿ ದುಡಿದಿದ್ದೆ. ಆಗಿನಿಂದಲೂ ನನಗೆ ನಿರ್ದೇಶನ ಮಾಡಬೇಕು ಎಂಬ ಆಸೆ ಇತ್ತು. ಆದರೆ, ಸಮಯ ಕೂಡಿ ಬಂದಿರಲಿಲ್ಲ. ಆಗ ನಾನು ಚಿತ್ರೀಕರಣ ವೇಳೆ ಸೆಟ್‌ನಲ್ಲಿ ಮಾಡುತ್ತಿದ್ದ ಹಾಸ್ಯ ಎಲ್ಲರಿಗೂ ಇಷ್ಟವಾಗುತ್ತಿತ್ತು. ನಿರ್ದೇಶಕರು ಒಂದೊಂದು ಪಾತ್ರ ಕೊಟ್ಟು ಮಾಡಿಸುತ್ತಿದ್ದರಿಂದ ನಟನೆಯೇ ಆಸರೆಯಾಯಿತು. ಈಗ ನಿರ್ದೇಶನ ಮಾಡುವ ಅವಕಾಶ ಸಿಕ್ಕಿದೆ’ ಎಂದು ಹೇಳಿಕೊಳ್ಳುತ್ತಾರೆ ಟೆನ್ನಿಸ್‌ ಕೃಷ್ಣ.

ಈ ಚಿತ್ರದಲ್ಲಿ ನಾನು ಬಹುತೇಕ ಹೊಸ ಪ್ರತಿಭೆಗಳಿಗೆ ಇಲ್ಲಿ ಅವಕಾಶ ಕೊಡುತ್ತಿದ್ದೇನೆ. ಅಷ್ಟೇ ಅಲ್ಲ, ನನ್ನ ಸಮಕಾಲೀನದ ಕಲಾವಿದರು ಯಾರ್ಯಾರು ಈಗ ಕಷ್ಟದಲ್ಲಿದ್ದಾರೋ, ಅವರನ್ನು ಗುರುತಿಸಿ, ಈ ಚಿತ್ರದಿಂದ ಬರುವಂತಹ ಲಾಭದ ಶೇ.20 ರಷ್ಟು ಸಹಾಯ ಮಾಡುವ ಉದ್ದೇಶವೂ ನನಗಿದೆ. ಅನೇಕ ಹಿರಿಯ ಕಲಾವಿದರಿಗೂ ಇಲ್ಲಿ ಅವಕಾಶ ಕೊಡಲಿದ್ದೇನೆ. ಇನ್ನು, ಈ ಚಿತ್ರವನ್ನು ಬೆಂಗಳೂರು, ತೀರ್ಥಹಳ್ಳಿ ಸೇರಿದಂತೆ ಬಹುತೇಕ ಮಲೆನಾಡ ಸುತ್ತಮುತ್ತಲಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದೇನೆ. ಇಮಿ¤ಯಾಜ್‌ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ಮುಂಬೈನ ಕ್ಯಾಮೆರಾಮೆನ್‌ ಇಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. “ಮತ್ತೆ ಮತ್ತೆ’ ಚಿತ್ರ ಸಸ್ಪೆನ್ಸ್‌ ಕಾಮಿಡಿಯಾಗಿದ್ದು, ಶ್ರಾವಣದಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎನ್ನುತ್ತಾರೆ ಅವರು

Advertisement

Udayavani is now on Telegram. Click here to join our channel and stay updated with the latest news.

Next