Advertisement

ಬಾರೋ ಫಿರಂಗಿಪೇಟೆಗೆ…

12:01 PM Jul 04, 2019 | mahesh |

ಒಂದು ಕಾಲದ ಯುದ್ಧಗಳಿಂದ ಜರ್ಝರಿತವಾಗಿದ್ದರ ನೆನಪಿಗೆ ಮತ್ತು ಶಾಂತಿಯ ದ್ಯೋತಕವಾಗಿ ರಷ್ಯಾ ದೇಶದ ರಾಜಧಾನಿ ಮಾಸ್ಕೋದ ಕ್ರೆಮ್ಲಿನ್‌ ನಗರದಲ್ಲಿ ಬೃಹದಾಕೃತಿಯ ಒಂದು ಫಿರಂಗಿ ಮತ್ತು ಒಂದು ಗಂಟೆಯನ್ನು ಇಡಲಾಗಿದೆ. ಇವೆರಡೂ ಕೂಡ ತಮ್ಮ ಗಾತ್ರಗಳಿಂದ ವಿಶ್ವ ದಾಖಲೆ ಸ್ಥಾಪಿಸಿವೆ.

Advertisement

ಸಮರ ಕಾಲದಲಿ ಗುಂಡುಗಳನ್ನು ಸಿಡಿಸಲು ಬಳಸುತ್ತಿದ್ದ ಫಿರಂಗಿ ಮತ್ತು ತೂಗಾಡುವ ಕಂಚಿನ ಗಂಟೆಗಳಿಗೆ ಒಂದು ಬಗೆಯ ಅವಿನಾಭಾವ ಸಂಬಂಧ ರಷ್ಯ ದೇಶದಲ್ಲಿ ಕಂಡುಬರುವುದು. ಯುದ್ಧ ಸಂಭವಿಸಿದಾಗ ಕಂಚನ್ನು ಕರಗಿಸಿ ಫಿರಂಗಿಗಳನ್ನು ತಯಾರಿಸುವುದು, ಶಾಂತಿ ಸಮಯದಲ್ಲಿ ಅದೇ ಫಿರಂಗಿಗಳನ್ನು ಕರಗಿಸಿ ಗಂಟೆಗಳನ್ನು ಎರಕ ಹೊಯ್ಯುವುದು ಆ ದೇಶದ ಪದ್ಧತಿ. ಆ ರೀತಿ ತಯಾರಾದ ಶತಮಾನಗಳಷ್ಟು ಹಳೆಯದಾದ ಫಿರಂಗಿ ಮತ್ತು ಗಂಟೆಯನ್ನು ನೋಡಲು ವರ್ಷ ವರ್ಷವೂ ಸಹಸ್ರಾರು ಯಾತ್ರಿಕರು ಅಲ್ಲಿಗೆ ಭೇಟಿ ನೀಡುತ್ತಾರೆ.

ಗಂಟೆ ಮೇಲೆ ಕುಸುರಿ
ಜಾರ್‌ಕ್ಯಾನನ್‌ ಫಿರಂಗಿ ನಲವತ್ತು ಟನ್‌ ಭಾರವಿದೆ. 5.34 ಮೀಟರ್‌ ಉದ್ದವಾಗಿದೆ. ಗುಂಡು ಸಿಡಿಯುವ ಬ್ಯಾರಲ್‌(ಕೊಳವೆ) ಒಳಗಿನ ವ್ಯಾಸ 890 ಮಿ. ಮೀ. ಗಳಷ್ಟಿದ್ದರೆ ಬಾಹ್ಯ ವ್ಯಾಸ 1200 ಮಿ. ಮೀ. ಇದೆ. 1586ರಲ್ಲಿ ಕಂಚಿನ ಕುಶಲಕರ್ಮಿ ಆಂಡ್ರೆ ಚೆಕೊವ್‌ ಇದನ್ನು ತಯಾರಿಸಿದ. ಇದರ ಬ್ಯಾರೆಲ್‌ ಮೇಲೆ ಇವಾನೊವಿಚ್‌ ದೊರೆಯ ಕುದುರೆ ಸವಾರಿ, ಕಿರೀಟ ಮುಂತಾದ ಚಿತ್ರಗಳಿವೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ
ಫಿರಂಗಿ ತಯಾರಾದ ಬಳಿಕ ಅದು ಜಗತ್ತಿನಲ್ಲಿ ದೊಡ್ಡ ಗಾತ್ರದ್ದೆಂಬ ದಾಖಲೆಗೆ ಪಾತ್ರವಾಗಿದ್ದೇನೋ ಸರಿ. ಆದರೆ, ಅದರಿಂದ ಬೃಹದ್ಗಾತ್ರದ ಗುಂಡುಗಳನ್ನು ಹಾರಿಸುವುದೇ ಕಷ್ಟಸಾಧ್ಯವೆನಿಸಿತು. ಇಪ್ಪತ್ತನೆಯ ಶತಮಾನದಲ್ಲಿ ಒಂದು ಗುಂಡನ್ನು ಪ್ರಾಯೋಗಿಕವಾಗಿ ಹಾರಿಸಲಾಯಿತು. ಅದು ಪರಿಣಾಮಕಾರಿ ಎನಿಸಲಿಲ್ಲ. ಮಿಲಿಟರಿ ಬಳಕೆಗಿಂತ ಹೆಚ್ಚಾಗಿ ಅದು ಗಮನ ಸೆಳೆಯುವ ಪ್ರದರ್ಶನಕ್ಕೆ ಸೀಮಿತವಾಯಿತು.

ಗುಂಡುಗಳು ಹತ್ತಿರದಲ್ಲೇ ಇವೆ
ಈ ಫಿರಂಗಿ ಬಳಕೆಯಾಗದೆ ಒಂದು ಶತಮಾನಕ್ಕಿಂತ ಹೆಚ್ಚು ಕಾಲ ಬಿಸಿಲು, ಮಳೆಗಳಿಗೆ ಮೈಯೊಡ್ಡಿಕೊಂಡು ಹೊರಗೆ ಉಳಿದಿತ್ತು. ಬಳಿಕ ಕ್ರೆಮ್ಲಿನ್‌ ರೆಡ್‌ಸ್ಕ್ವೇರ್‌ನಲ್ಲಿ ಪ್ರವಾಸಿಗಳ ಆಕರ್ಷಣೆಯಾಗಿ ಮತ್ತೆ ಹಸರು ಮಾಡುತ್ತಿದೆ. ರಷ್ಯನ್‌ ಭಾಷೆಯಲ್ಲಿ ಇದಕ್ಕೆ “ಬಾಂದಾರ್ದಾ’ ಎಂಬ ಹೆಸರಿದೆ. ಫಿರಂಗಿಯಲ್ಲಿ ಹಾರಿಸಲೆಂದು ತಯಾರಾದ ಭಾರೀ ಗಾತ್ರದ ಗುಂಡುಗಳೂ ಅದರ ಬಳಿಯಲ್ಲೇ ಇಟ್ಟಿದ್ದಾರೆ.

Advertisement

ಒಡೆಯುವ ಗಂಟೆ
ಫಿರಂಗಿಯ ಸನಿಹದಲ್ಲೇ ಜಗತ್ತಿನಲ್ಲೇ ದೊಡ್ಡದಾದ ಜಾರ್‌ ಕಂಚಿನ ಗಂಟೆಯೂ ಇದೆ. ಅದ ಮೇಲ್ಮೆ„ಯಲ್ಲಿ ಕಿನ್ನರರು, ಸಂತರು, ಸಾಮ್ರಾಜ್ಞೆ ಆಯಾನ್ನಾ, ಜಾರ್‌ ಅಲೆಕ್ಸ್‌ ಮೊದಲಾದವರ ಜೀವನದ ಕತೆ ಹೇಳುವ ಚಿತ್ರಗಳಿವೆ. ಈ ಗಂಟೆ ತಯಾರಿಕೆಯ ಹಿಂದೆ ಒಂದು ರೋಚಕ ಕತೆಯೂ ಇದೆ. 18,000 ಕೆ.ಜಿ ತೂಗುವ ಈ ಗಂಟೆಯನ್ನು ಮೊದಲು ಎರಕ ಹೊಯ್ಯಲಾಯಿತು. ಆದರೆ ಬಳಸುವ ಮೊದಲೇ ಅದು ಒಡೆದುಹೋಯಿತು. ಅದನ್ನು ಸೇರಿಸಿ ಒಂದು ಲಕ್ಷ ಕಿಲೋ ಭಾರದ ಎರಡನೆಯ ಗಂಟೆಯನ್ನು ಎರಕ ಹೊಯ್ದರು. ಅದೂ ಒಡೆಯಿತು. ಆಗ ಇದರ ಎರಡು ಪಟ್ಟು ಭಾರವಿರುವ ಮೂರನೆಯ ಗಂಟೆ ತಯಾರಾಯಿತು.

ಗಂಟೆ ಆಕಾರದ ಹೊಂಡವನ್ನು ನೆಲದಲ್ಲಿ ತೆಗೆದು ಅದರಲ್ಲಿ ಕರಗಿದ ಕಂಚನ್ನು ಎರಕ ಹೊಯ್ದರು. ಈ ಸಲ 72 ಕಿಲೋ ಚಿನ್ನ, ಬೆಳ್ಳಿ ಸೇರಿಸಿಕೊಂಡರು. ಗಂಟೆ ಸರಿಯಾಗಿಯೇ ಇತ್ತು. ಆದರೆ ಕೆಲಸದವರು ಒಂದು ಎಡವಟ್ಟು ಮಾಡಿದರು. ಬಿಸಿ ಆರುವ ಮೊದಲೇ ಅದರ ಮೇಲೆ ನೀರು ಎರಚಿದರು. ಗಂಟೆಯನ್ನು ಎತ್ತರದಲ್ಲಿ ತೂಗಾಡಿಸಿದ ಕೂಡಲೇ ಅದು ಒಡೆಯಿತು. 11,500 ಕಿಲೋ ತೂಕದ ತುಂಡೊಂದು ಕೆಳಗೆ ಬಿದ್ದಿತು. ಮರಳಿ ಇನ್ನೊಂದು ಗಂಟೆ ಎರಕ ಹೊಯ್ಯುವ ಕೆಲಸ ನಡೆಯಲಿಲ್ಲ. ತುಂಡಾದ ಗಂಟೆಯನ್ನು ಕಳಚಿದ ತುಂಡಿನ ಜೊತೆಗೆ ಶತಮಾನ ಕಾಲ ಅಲ್ಲಿಯೇ ಬಿಟ್ಟರು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next