Advertisement

ಕೋವಿಡ್ ನಿಂದ ನೊಂದವರ ಸಹಾಯಕ್ಕಾಗಿ ಮುಂದೆ ಬನ್ನಿ

11:44 PM Apr 25, 2021 | Team Udayavani |

ದೇಶದಲ್ಲಿ ಕೊರೊನಾ 2ನೇ ಅಲೆ ಈ ಪರಿಯಾಗಿ ಬಾಧಿಸುತ್ತದೆ ಎಂಬುದು ಯಾರಿಗೂ ತಿಳಿದಿರಲಿಕ್ಕಿಲ್ಲ. ವಿಜ್ಞಾನಿಗಳು, ವೈದ್ಯರ ನಿರೀಕ್ಷೆಗೂ ಮೀರಿ ಕೊರೊನಾದ 2ನೇ ಅಲೆ ಬಾಧಿಸುತ್ತಿದೆ. ಅದರಲ್ಲೂ ದಿಲ್ಲಿ, ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್‌ ಸಹಿತ ಹಲವಾರು ರಾಜ್ಯಗಳು ಕೊರೊನಾದ ಅಬ್ಬರಕ್ಕೆ ಅಕ್ಷರಶಃ ನಲುಗಿವೆ.

Advertisement

ದಿಲ್ಲಿಯಲ್ಲಿ ಪ್ರತೀ ಗಂಟೆಗೆ 12 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ವರದಿಯಾಗುತ್ತಿದೆ. ಬೆಂಗಳೂರಿನಲ್ಲೂ ಪ್ರತೀ ಗಂಟೆಗೆ ನೂರಾರು ಮಂದಿ ಸೋಂಕಿತರಾಗುತ್ತಿದ್ದಾರೆ. ಈ ಸಂಗತಿಗಳನ್ನು ನೋಡಿದರೆ, ಕೊರೊನಾದ ಪರಿಣಾಮಗಳು ಏನಾಗಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಜತೆಗೆ ಇಡೀ ದೇಶದಲ್ಲಿ ಇತ್ತೀಚಿನ ನಾಲ್ಕೈದು ದಿನಗಳಿಂದ ಹತ್ತಿರ ಹತ್ತಿರ ಮೂರೂವರೆ ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಇವರಲ್ಲಿ ಕಡೇ ಪಕ್ಷ ದಿನಕ್ಕೆ 50 ಸಾವಿರ ಮಂದಿಗೆ ಆಸ್ಪತ್ರೆ ವ್ಯವಸ್ಥೆ ಮಾಡುವುದೂ ದೊಡ್ಡ ಸವಾಲಿನ ಕೆಲಸವೇ ಸರಿ.

ಇಂಥ ಪರಿಸ್ಥಿತಿಯಲ್ಲಿ ಸರಕಾರಗಳ ಜತೆಗೆ ಸಾರ್ವಜನಿಕರೂ ಜನರ ನೋವಿನಲ್ಲಿ ಭಾಗಿಯಾಗಬೇಕಾದ ಅಗತ್ಯವಿದೆ. ಏಕೆಂದರೆ ಇದು ಅನಿರೀಕ್ಷಿತವಾಗಿ ಬಂದಿರುವಂಥ ದೊಡ್ಡ ಸಾಂಕ್ರಾಮಿಕ ರೋಗ. ಸರಕಾರದ ಕಡೆಯಿಂದ ಆಸ್ಪತ್ರೆಗಳು, ಕೊರೊನಾ ಕೇರ್‌ ಸೆಂಟರ್‌ ಗಳು, ಲಸಿಕೆಯ ವ್ಯವಸ್ಥೆ ಮಾಡಿಕೊಂಡಿದ್ದರೂ ಇದರಲ್ಲಿ ಜನರ ಸಹಕಾರ ಸಿಗದ ಹೊರತು ಅಧಿಕಾರಿಗಳಾಗಲಿ ಅಥವಾ ಸರಕಾರದ ಪ್ರತಿನಿಧಿಗಳಾಗಲಿ ಏನೂ ಮಾಡಲು ಸಾಧ್ಯವಿಲ್ಲ.

ಹೀಗಾಗಿ ಕೊರೊನಾವನ್ನು ಸಂಕಷ್ಟದ ಕಾಲವೆಂದು ಪರಿಗಣಿಸಿ ಜನರೂ ಇದರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು. ಈಗಾಗಲೇ ಸರಕಾರದ ಕಡೆಯಿಂದಲೇ ಸ್ವಯಂಸೇವಕರಾಗಲು ಮುಂದೆ ಬನ್ನಿ ಎಂದು ಜನರಿಗೆ ಆಹ್ವಾನ ಕೊಟ್ಟಿದೆ. ಇದರಲ್ಲಿ ಸೇರಿ ಒಂದಷ್ಟು ಸಣ್ಣ ಪುಟ್ಟ ಸೇವೆಗಳನ್ನಾದರೂ ನೀಡಬಹುದು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರು ಮೊದಲು ಮಾಡಬಹುದಾದ ಬಹುಮುಖ್ಯ ಕೆಲಸ, ನಿಮ್ಮ ಸುತ್ತಮುತ್ತಲಿನಲ್ಲಿ ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಉತ್ತೇಜಿಸುವುದು. ಪರೀಕ್ಷೆ ಮಾಡಿಸಿಕೊಂಡ ಮಾತ್ರಕ್ಕೆ ಅಥವಾ ಕೊರೊನಾ ಪಾಸಿಟಿವ್‌ ಬಂದಿದೆ ಎಂಬ ಕಾರಣಕ್ಕೆ ನಿಮ್ಮನ್ನು ಬೇರೆ ರೀತಿ ಕಾಣುವುದಿಲ್ಲ ಎಂದು ಅವರಿಗೆ ಮನದಟ್ಟು ಮಾಡಿಸಿ ಅವರ ಜತೆ ನಿಲ್ಲುವ ಕೆಲಸ ಮಾಡಬೇಕು. ಜತೆಗೆ ಅವರಿಗೆ ಧೈರ್ಯವನ್ನೂ ತುಂಬಬೇಕು.
ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ಸಲುವಾಗಿ ಜನ ಬೇಕಾಗುತ್ತಾರೆ, ಕೊರೊನಾ ಕೇರ್‌ ಸೆಂಟರ್‌ಗಳಲ್ಲಿ ಉಸ್ತುವಾರಿಗಾಗಿ ಜನರ ಅಗತ್ಯವಿದೆ. ಇಂಥದ್ದದ್ದರಲ್ಲಿ ಸ್ವಯಂ ಸೇವಕರಾಗಿ ಜನರೇ ಭಾಗಿಯಾಗಬಹುದು. ಇನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಆಕ್ಸಿಜನ್‌ ಸಿಲಿಂಡರ್‌ ಗಳ ವ್ಯವಸ್ಥೆ ಮಾಡಿಸುವುದು, ಸುತ್ತಮುತ್ತಲಿನ ಜನರಿಗೆ ಆಸ್ಪತ್ರೆ ಅಥವಾ ಬೇಕಾದ ಔಷಧದ ವ್ಯವಸ್ಥೆ ಮಾಡುವುದು, ಕೊರೊನಾ ಸೋಂಕಿತರಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವಂಥವರಿಗೆ ಅಗತ್ಯ ವಸ್ತುಗಳ ವ್ಯವಸ್ಥೆಯನ್ನೂ ಮಾಡಿಸಬಹುದು. ಇದರ ಜತೆಗೆ ಲಸಿಕಾ ಕೇಂದ್ರಗಳಿಗೆ ಅರ್ಹ ಫ‌ಲಾನುಭವಿಗಳನ್ನು ಕರೆತಂದು ಅವರಿಗೆ ಲಸಿಕೆ ಕೊಡಿಸುವ ಕೆಲಸವನ್ನೂ ಜನರು ಮಾಡಬಹುದು. ವ್ಯವಸ್ಥೆಯನ್ನು ಬಯ್ಯುತ್ತಾ ಕುಳಿತುಕೊಳ್ಳುವುದರ ಬದಲು, ಕೊರೊನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದರೆ ಒಂದಷ್ಟಾದರೂ ಯಶಸ್ಸು ಸಾಧಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next