Advertisement

ಸ್ಥಳೀಯ ಜಾಲಗಳ ಹತ್ತಿಕ್ಕಿ

06:00 AM Oct 17, 2018 | |

ಬಾಂಗ್ಲಾದೇಶಿ ಅಕ್ರಮ ವಲಸಿಗರ ಸಮಸ್ಯೆಯನ್ನು ತಡೆಯಲು ರಾಷ್ಟ್ರೀಯ ನಾಗರಿಕ ನೋಂದಣಿ(ಎನ್‌ಆರ್‌ಸಿ) ಅನುಷ್ಠಾನಕ್ಕೆ ಬಂದು, ಅದಕ್ಕೆ ದೇಶಾದ್ಯಂತ ಪರ ವಿರೋಧ ವ್ಯಕ್ತವಾಗಿ ಹೆಚ್ಚು ದಿನಗಳೇನೂ ಆಗಿಲ್ಲ. ಅಷ್ಟರಲ್ಲೇ, ಭಾರತದಲ್ಲಿ ಅಕ್ರಮ ವಲಸಿಗರ ಸಮಸ್ಯೆ ನಿಜಕ್ಕೂ ಗಂಭೀರವಾಗಿದೆ ಎನ್ನುವುದಕ್ಕೆ ಪುಷ್ಟಿಯಾಗಿ ನಿಲ್ಲುತ್ತಿದೆ, ಗುವಾಹಟಿಯಲ್ಲಿ 31 ಬಾಂಗ್ಲಾದೇಶಿ ಪ್ರಜೆಗಳ ಬಂಧನ. ಇವರೆಲ್ಲ ಕಳೆದ 3 ವರ್ಷಗಳಿಂದ ಬೆಂಗಳೂರಲ್ಲಿ ವಾಸವಿದ್ದರು ಎನ್ನುವುದು ಬ್ರೇಕಿಂಗ್‌ ನ್ಯೂಸ್‌ ಆಗಿ ಬಿತ್ತರವಾದರೂ, ಇದೇನೂ ಅಚ್ಚರಿ- ಆಘಾತ ಹುಟ್ಟಿಸುವಂಥ ಸುದ್ದಿಯಾಗಿ ಉಳಿದಿಲ್ಲ ಎನ್ನುವುದೇ ದುರಂತ. 

Advertisement

ಅಕ್ರಮ ವಲಸಿಗರಿಂದುಟಾಗುವ ಸಮಸ್ಯೆಯ ತೀವ್ರತೆಯನ್ನು ಈಶಾನ್ಯ ರಾಜ್ಯಗಳು ದಶಕಗಳಿಂದಲೂ ಅನುಭವಿಸುತ್ತಲೇ ಬಂದಿವೆ. ಹೀಗಾಗಿ ಬಾಂಗ್ಲಾ ನುಸುಳುಕೋರರ ವಿಚಾರದಲ್ಲಿ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ತ್ರಿಪುರಾ, ನಾಗಾಲ್ಯಾಂಡ್‌ನ‌ಲ್ಲಿ ನಡೆಯುವಷ್ಟು ಚರ್ಚೆ, ಉಂಟಾಗಿರುವ ಜಾಗೃತಿ ದೇಶದ ಉಳಿದ ರಾಜ್ಯಗಳಲ್ಲಿ ಆಗುತ್ತಲೇ ಇಲ್ಲ. ಸಮಸ್ಯೆಯೆಂದರೆ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ರಾಜ್ಯ ಸರ್ಕಾರಗಳಿಗೆ ಇದು ಗಮನಹರಿಸಬೇಕಾದ ಸಂಗತಿಯೆಂದೇ ಅನಿಸಿಲ್ಲ. 

ಈಗ ಅಸ್ಸಾಂನಲ್ಲಿ ಬಂಧಿತವಾದ 31 ಜನರು ಬೆಂಗಳೂರಲ್ಲಿ ಕಳೆದ 3 ವರ್ಷದಿಂದ ವಾಸವಾಗಿದ್ದರಂñ. ಸಿಕ್ಕವರು ಕೇವಲ ಬೆರಳೆಣಿಕೆಯಷ್ಟು ಜನ, ಸಿಗದವರ ಸಂಖ್ಯೆ ನಮ್ಮ ರಾಜ್ಯದಲ್ಲಿ ಎಷ್ಟಿರಬಹುದು? ಹಾಗೆಂದು ಅಕ್ರಮ ವಲಸಿಗರೆಲ್ಲ ದುಷ್ಟರು, ಭಾರತ ವಿರೋಧಿಗಳು ಎಂದೇನೂ ಅಲ್ಲ. ಬಹುತೇಕರು ಹೊಟ್ಟೆಪಾಡಿಗಾಗಿಯೇ ಬಂದಿರುತ್ತಾರೆ. ಆದರೆ ಇಲ್ಲಿ ಪ್ರಶ್ನೆ ಏಳುವುದೆಂದರೆ,ಯಾವುದೇ ಬಲಿಷ್ಠ ಸಂಘಟನೆಗಳ ಬೆಂಬಲವಿಲ್ಲದ, ದಿಕ್ಕುದೆಸೆಯಿಲ್ಲದ ಇಂಥ ಜನರು ದೇಶದೊಳಕ್ಕೆ ಆರಾಮಾಗಿ ನುಸುಳುತ್ತಾರೆಂದರೆ, ಬಲಿಷ್ಟ ನೆಟÌರ್ಕ್‌ ಹೊಂದಿರುವ “ದುರುದ್ದೇಶ ಪೂರಿತ’ ನುಸುಳುಕೋರರು ಎಷ್ಟು ಆರಾಮಾಗಿ ದೇಶದೊಳಕ್ಕೆ ನುಸುಳುತ್ತಿದ್ದಾರೆ ಎನ್ನುವುದು. 

ಬೆಂಗಳೂರಿನ ವಿಷಯಕ್ಕೇ ಬರುವುದಾದರೆ, ಕಳೆದ ಕೆಲವು ವರ್ಷಗಳಲ್ಲಿ ಅಪರಾಧಿಕ ಹಿನ್ನೆಲೆಯುಳ್ಳ  ಅನೇಕ ಬಾಂಗ್ಲಾದೇಶಿಯರನ್ನು ಬಂಧಿಸಲಾಗಿದೆ. 

ಕಳೆದ ತಿಂಗಳಷ್ಟೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಮೂವರು ಅಕ್ರಮ ವಲಸಿಗರನ್ನು ಬಂಧಿಸಿದ್ದರು. ಇದರಲ್ಲಿದ್ದ ಒಬ್ಬ ವ್ಯಕ್ತಿ ಕಳೆದ 14 ವರ್ಷಗಳಿಂದ ದೇಶದಲ್ಲಿ ಆರಾಮಾಗಿ ಓಡಾಡಿಕೊಂಡಿದ್ದ. ನಕಲಿ ಆಧಾರ್‌, ಮತಪತ್ರ, ರೇಷನ್‌ ಕಾರ್ಡನ್ನೂ ಪಡೆದುಕೊಂಡಿದ್ದ ಇವರು, ಈ ನಕಲಿ ದಾಖಲೆಗಳ ಆಧಾರದಲ್ಲಿ ಭಾರತೀಯ ಪಾಸ್‌ಪೋರ್ಟ್‌ ಕೂಡ ಹೊಂದಿದ್ದರು.

Advertisement

ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ ಬೆಳಂದೂರು ಪೊಲೀಸರು, ಯುಐಡಿಎಐ ಅಧಿಕಾರಿಗಳ ಸಹಾಯದಿಂದ ಬಂಧಿಸಿದ್ದ 7 ಜನರಲ್ಲಿ ಆರು ಜನ ಬಾಂಗ್ಲಾದೇಶಿಯರಾಗಿದ್ದರು. ಇವರೆಲ್ಲ ಸ್ಥಳೀಯ “ಶಕ್ತಿ’ಗಳ ಸಹಾಯದಿಂದ 500 ರೂಪಾಯಿಗೆ ಆಧಾರ್‌ ಕಾರ್ಡ್‌ ಪಡೆದು ವೈಟ್‌ಫೀಲ್ಡ್‌ ಪ್ರದೇಶದಲ್ಲಿನ ಐಟಿ ಕಂಪೆನಿಗಳಲ್ಲಿ ಹೌಸ್‌ ಕೀಪಿಂಗ್‌ ಸೇರಿದಂತೆ,  ಹಲವು ಕೆಳಸ್ತರದ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಅಕ್ರಮ ವಲಸಿಗರನ್ನು ಸಕ್ರಮಗೊಳಿಸುವ ಬೃಹತ್‌ ಜಾಲವೇ ಬೆಂಗಳೂರಲ್ಲಿ ನಿರ್ಮಾಣವಾಗಿದೆ ಎಂದೇ ಇದರರ್ಥವಲ್ಲವೇ? 

ಈಗ ಗುವಾಹಟಿಯಲ್ಲಿ ಸಿಕ್ಕಿಬಿದ್ದಿರುವ ಅಕ್ರಮ ವಲಸಿಗನೊಬ್ಬ “ಬೆಂಗಳೂ ರಲ್ಲಿ ಅನೇಕ ಬಾಂಗ್ಲಾದೇಶಿ ಕುಟುಂಬಗಳಿವೆ. ಎಲ್ಲವೂ ಹೊಟ್ಟೆಪಾಡಿಗಾಗಿ ಚಿಕ್ಕಪುಟ್ಟ ಕೆಲಸ ಮಾಡುತ್ತಿವೆ’ ಎಂದು ಆಂಗ್ಲವಾಹಿನಿಯೊಂದಕ್ಕೆ ಹೇಳಿದ್ದಾನೆ.

ಸಮಸ್ಯೆಯಿರುವುದು ಇಂಥವರಿಂದಲ್ಲ, ಬದಲಾಗಿ, ಭಾರತದೊಳಕ್ಕೆ ಹೊಟ್ಟೆಪಾಡಿಗೆಂದು ನುಸುಳದೇ, ಅನ್ಯ ಉದ್ದೇಶದಿಂದ ಬಂದವರಿಂದಲೇ ಅಪಾಯವಿರುವುದು. ಅಸ್ಸಾಂ, ಮಿಜೋರಾಂ, ಮಣಿಪುರದಲ್ಲಿ ಈಗಾಗಲೇ ಬಾಂಗ್ಲಾ-ಚೀನಾ-ಪಾಕ್‌ ಬೆಂಬಲಿತ 17ಕ್ಕೂ ಹೆಚ್ಚು ಉಗ್ರ ಸಂಘಟನೆಗಳು ಅಸ್ತಿತ್ವದಲ್ಲಿವೆ. ಸೆಪ್ಟೆಂಬರ್‌ 13ರಿಂದ ಸೆಪ್ಟೆಂಬರ್‌ 23 ನಡುವೆ, ಅಂದರೆ ಕೇವಲ 11 ದಿನದಲ್ಲಿ ಭಾರತೀಯ ಭದ್ರತಾಪಡೆಗಳು ಈಶಾನ್ಯ ರಾಜ್ಯಗಳಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ಗೆ ಸೇರಿದ 9 ಉಗ್ರರನ್ನು ಬಂಧಿಸಿವೆ. ಈ ಉಗ್ರ ಸಂಘಟನೆಯ ಮುಖ್ಯವಾಗಿ ಸೆಳೆದುಕೊಳ್ಳುತ್ತಿರುವುದು ಈಶಾನ್ಯ ರಾಜ್ಯಗಳಲ್ಲಿನ ಬಾಂಗ್ಲಾದೇಶಿ ಅಕ್ರಮ ವಲಸಿಗ ಯುವಕರನ್ನು ಎನ್ನುತ್ತವೆ ಗುಪ್ತಚರ ವರದಿಗಳು. ಇಂಥ ದೇಶವಿರೋಧಿ ಶಕ್ತಿಗಳಿಗೆ ಬೇರೆ ರಾಜ್ಯಗಳಿಗೆ ನುಸುಳುವುದಕ್ಕೆ ಕಷ್ಟವೇನೂ ಆಗದಲ್ಲವೇ? 
ಏನೇ ಇದ್ದರೂ ಈಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಅಕ್ರಮ ವಲಸಿಗರನ್ನು ಗುರುತಿಸಲು ಕಟ್ಟುನಿಟ್ಟಿನ ಆಜ್ಞೆ ಜಾರಿಮಾಡಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಹೊರದೇಶದಿಂದ ಬಂದವರಿಗೆ ನೆಲೆ ಒದಗಿಸಲು ಪ್ರಯತ್ನಿಸುತ್ತಿರುವ ಸ್ಥಳೀಯ ಜಾಲವನ್ನು ಹತ್ತಿಕ್ಕುವುದು ಆದ್ಯತೆಯಾಗಬೇಕು. 

Advertisement

Udayavani is now on Telegram. Click here to join our channel and stay updated with the latest news.

Next