Advertisement

ದಶಕದಷ್ಟು ಹಿಂದಕ್ಕೆ ಸರಿದ ಕಾಫಿನಾಡು ಕೊಡಗು

06:00 AM Aug 28, 2018 | |

ಬೆಂಗಳೂರು: ಕಾಫಿ ನಾಡು ಖ್ಯಾತಿಯ ಕೊಡಗಿನಲ್ಲಿ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ಕಡೆ ಕಾಫಿ ಬೆಳೆ ನೆಲ ಕಚ್ಚಿದ್ದು ಭೂಕುಸಿತವಾದ ಪ್ರದೇಶದಲ್ಲಿ ಮತ್ತೆ ಕಾಫಿ ಬೀಜ ಕಾಣಲು ದಶಕವೇ ಬೇಕಾಗಬಹುದು.

Advertisement

ಮಳೆಯ ಆರ್ಭಟಕ್ಕೆ ಉತ್ತರ ಕೊಡಗಿನಲ್ಲಿ ಕಾಫಿ ತೋಟಗಳಿದ್ದ ಗುಡ್ಡಗಳೇ ಕೊಚ್ಚಿ ಹೋಗಿದ್ದು, ಸದ್ಯಕ್ಕೆ ಅಲ್ಲಿ ಕಾಫಿ ಬೆಳೆಯನ್ನು ಕಲ್ಪಿಸಿಕೊಳ್ಳಲಾಗದಂತಹ ಸ್ಥಿತಿಗೆ ತಲುಪಿದೆ.

ಕಾಫಿ ಮಂಡಳಿ ಪ್ರಾಥಮಿಕ ವರದಿಯಲ್ಲಿ 5,000 ಎಕರೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆಯೆಂಬ ಮಾಹಿತಿಯಿದೆ. ದಕ್ಷಿಣ ಕೊಡಗಿನಲ್ಲಿ ಕಾಫಿ ಫ‌ಸಲು ಶೇ.60ರಿಂದ ಗರಿಷ್ಠ ಶೇ. 80ರಷ್ಟು ಹಾನಿಯಾಗಿದ್ದು, ಮತ್ತೆ ಉತ್ತಮ ಬೆಳೆ ಕಾಣಲು 2-3  ವರ್ಷ ಬೇಕಾಗಬಹುದು. ದೇಶದಲ್ಲೇ ಅತಿ ಹೆಚ್ಚು ಕಾಫಿ ಬೆಳೆಯುವ ಖ್ಯಾತಿಯ ಕೊಡಗಿನಲ್ಲಿ ಈ ಬಾರಿ ಕಾಫಿ ಫ‌ಸಲು ಭಾರೀ ಪ್ರಮಾಣದಲ್ಲಿ ಕುಸಿಯುವ ಆತಂಕ ಎದುರಾಗಿದೆ.

ದೇಶದಲ್ಲಿ ಉತ್ಪಾದನೆಯಾಗುವ ಕಾಫಿಯಲ್ಲಿ ಶೇ.70ರಷ್ಟನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಕರ್ನಾಟಕದ ಒಟ್ಟು ಉತ್ಪಾದನೆಯಲ್ಲಿ ಕೊಡಗಿನ ಪಾಲು ಶೇ.40. ನೂರಾರು ಎಕರೆ ಕಾಫಿ ಎಸ್ಟೇಟ್‌ಗಳ ಜತೆಗೆ ಅರ್ಧ ಎಕರೆಯಿಂದ 5 ಎಕರೆ ಭೂಮಿಯಿರುವ ಕಾಫಿ ಬೆಳೆಗಾರರು ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ಸುರಿದ ಭಾರೀ ಮಳೆ ಜಿಲ್ಲೆಯ ಕಾಫಿ ಬೆಳೆ, ಉದ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

15-20 ವರ್ಷ ಬೇಕು: ಉತ್ತರ ಕೊಡಗಿನ 35 ಗ್ರಾಮಗಳಲ್ಲಿ ಕಾಫಿ ತೋಟ ಅಕ್ಷರಶಃ ಕೊಚ್ಚಿ ಹೋಗಿದೆ. ಗಿಡ, ಮಣ್ಣು ಸಹ ನೀರಿನ ಪ್ರವಾಹದಲ್ಲಿ ಹರಿದು ಹೋಗಿವೆ. ಜತೆಗೆ ಭೂಕುಸಿತ ಉಂಟಾಗಿರುವುದರಿಂದ ಭೂಮಿಯ ರಚನೆಯೇ ಬದಲಾಗಿದೆ. ಹಾಗಾಗಿ ಹೊಸದಾಗಿಯೇ ಮಣ್ಣು ಹದ ಮಾಡಿ ತೋಟ ಸಿದ್ಧಪಡಿಸಿ ಕಾಫಿ ಬೆಳೆ ಆರಂಭಿಸಬೇಕಿದೆ. ಈ ಪ್ರಕ್ರಿಯೆಗಳೆಲ್ಲ ನಡೆದು ಮತ್ತೆ ಕಾಫಿ ಬೆಳೆ ಫ‌ಸಲು ಪಡೆಯಲು 10ರಿಂದ 15 ವರ್ಷ ಬೇಕು ಎನ್ನುತ್ತಾರೆ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಎಂ. ಕಾವೇರಪ್ಪ.

Advertisement

ಈ ಭಾಗದಲ್ಲಿ ಅರ್ಧ ಎಕರೆಯಿಂದ ನಾಲ್ಕೈದು ಎಕರೆ ತೋಟವಿರುವ ಕಾಫಿ ಬೆಳೆಗಾರರೇ ಶೇ.80ರಷ್ಟಿದ್ದಾರೆ. ಆದರೆ ತೋಟದ ಕುರುಹೂ ಇಲ್ಲದಂತೆ ನಾಶವಾಗಿದ್ದು, ಮತ್ತೆ ಹೊಸದಾಗಿಯೇ ಎಲ್ಲವನ್ನೂ ಸೃಷ್ಟಿಸಬೇಕಿದೆ. ಕಾಫಿ ಮಂಡಳಿ ಪ್ರಾಥಮಿಕ ವರದಿಯಂತೆ 5,000 ಎಕರೆ ತೋಟ ನಾಶವಾಗಿ, ಭೂಕುಸಿತ ಉಂಟಾಗಿದೆ ಎಂದು ಉಲ್ಲೇಖೀಸಲಾಗಿದೆ. ಆದರೆ ವಾಸ್ತವದಲ್ಲಿ 10,000 ಎಕರೆಗಿಂತ ಹೆಚ್ಚು ಪ್ರದೇಶದ ತೋಟ ಹಾಳಾಗಿದೆ ಎಂದು ಹೇಳಿದ್ದಾರೆ.

ಇನ್ನು ದಕ್ಷಿಣ ಕೊಡಗು ಭಾಗದಲ್ಲಿ ಭೂಕುಸಿತ ಉಂಟಾಗದಿದ್ದರೂ ಬೆಳೆ ನಾಶವಾಗಿದೆ. ಕಾಫಿ ಮಾತ್ರವಲ್ಲದೆ ಮೆಣಸು, ಏಲಕ್ಕಿ, ಬಾಳೆ ಬೆಳೆಯೂ ನಷ್ಟವಾಗಿದೆ. ಗುಡ್ಡಗಳೇ ನೀರಂತೆ ಹರಿದಿರುವುದರಿಂದ ನೆರಳಿನಲ್ಲೇ ಬೆಳೆಯುವ ಏಲಕ್ಕಿ ಬೆಳೆಗೆ ಹಲವೆಡೆ ಪೂರಕ ವಾತಾವರಣವೇ ಇಲ್ಲದಂತಾಗಿದೆ. ಈ ಭಾಗದಲ್ಲಿ ಮತ್ತೆ ಕಾಫಿ ಬೆಳೆ ತೆಗೆಯಲು 2-3 ವರ್ಷ ಬೇಕಾಗಬಹುದೆಂದು ನೋವಿನಿಂದ ನುಡಿದರು.

ಸಂಕಷ್ಟದಲ್ಲಿ ಕಾರ್ಮಿಕರು: ಉತ್ತರ ಕೊಡಗಿನಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮತ್ತೆ ಕೃಷಿ ಚಟುವಟಿಕೆ ಆರಂಭವಾಗಲು ಸಾಕಷ್ಟು ಸಮಯವಾಗಲಿದೆ. ಅಲ್ಲಿಯವರೆಗೆ ಲಕ್ಷಾಂತರ ಕಾರ್ಮಿಕರ ಜೀವನ ನಿರ್ವಹಣೆ ಹೇಗೆಂಬ ಆತಂಕ ಮೂಡಿದೆ.

ಉತ್ತಮ ಫ‌ಸಲಿನ ನಿರೀಕ್ಷೆ ಮಣ್ಣುಪಾಲು: ರಾಜ್ಯದಲ್ಲಿ ಮೂರು ವರ್ಷ ಬರ ಕಾಣಿಸಿಕೊಂಡಿದ್ದರಿಂದ ಉತ್ತಮ ಕಾಫಿ ಫ‌ಸಲು ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ಪೂರಕ ವಾತಾವರಣ, ಗಿಡದಲ್ಲಿ ಸಾಕಷ್ಟು ಹೂವು ಸೃಷ್ಟಿಯಾಗಿದ್ದರಿಂದ ಬೆಳೆಗಾರರು ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಕಾಫಿ ಫ‌ಸಲು ತೀವ್ರ ನಷ್ಟವಾಗಿದೆ. ಸಾಲ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಎಂ.ಎಸ್‌. ಭೋಜೇಗೌಡ ಹೇಳಿದರು.

1,5000 ಮಂದಿ ಸಣ್ಣ ಬೆಳೆಗಾರರ ಕಾಫಿ ಬೆಳೆ ನಷ್ಟವಾಗಿದ್ದು, ಮತ್ತೆ ಉತ್ತಮ ಬೆಳೆ ಪಡೆಯಲು ಎರಡೂ¾ರು ವರ್ಷ ಕಾಯಬೇಕು. ಅಲ್ಲಿಯವರೆಗೆ ಬೆಳೆಗಾರರು, ತೋಟಗಳನ್ನೇ ಅವಲಂಬಿಸಿರುವ ಕಾರ್ಮಿಕರ ಸ್ಥಿತಿ ಅಯೋಮಯವಾಗಿದೆ. ಪರಿಸರ ಸಂರಕ್ಷಣೆ ಜತೆಗೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲೇ ಉನ್ನತ ಸ್ಥಾನದಲ್ಲಿರುವ ಕೊಡಗಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ನೀಡದಿರುವುದು ದುರದೃಷ್ಟಕರ.
– ನಂದ ಸುಬ್ಬಯ್ಯ, ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ

ಕಂದಾಯ ಇಲಾಖೆ ಹಾಗೂ ಕಾಫಿ ಮಂಡಳಿ ವತಿಯಿಂದ ನಷ್ಟ ಪ್ರಮಾಣದ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ದೇಶಾದ್ಯಂತ ಇರುವ ಮಂಡಳಿ ಅಧಿಕಾರಿಗಳನ್ನು ಈ ಕಾರ್ಯಕ್ಕೆ ಬಳಸಲಾಗುತ್ತಿದೆ. ವರದಿ ಕೈ ಸೇರಿದ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸದ್ಯದಲ್ಲೆ ಬೆಳೆಗಾರರ ಪ್ರತಿನಿಧಿಗಳು, ಕಾಫಿ ಬೋರ್ಡ್‌ನ ಪದಾಧಿಕಾರಿಗಳು ಹಾಗೂ ಆ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ನಷ್ಟ, ಪರಿಹಾರ, ಪುನಶ್ಚೇತನ ಕುರಿತು ಚರ್ಚಿಸಲಾಗುವುದು.
– ಎಂ.ಎಸ್‌. ಭೋಜೇಗೌಡ, ಕಾಫಿ ಬೋರ್ಡ್‌ ಅಧ್ಯಕ್ಷ

– ಕೀರ್ತಿಪ್ರಸಾದ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next