Advertisement

ಭಾರತೀಯ ಸೇನೆಯಲ್ಲಿ ಕರಾವಳಿಯ ಪ್ರತಿಭೆಗಳು: ಕಾರ್ಕಳದ ಅಶ್ವಿ‌ನ್‌ಗೆ ನೌಕಾಪಡೆಯ CNS‌ ಪದಕ

01:01 AM Dec 21, 2020 | mahesh |

ಕಾರ್ಕಳ: ಇಲ್ಲಿನ ಶುಂಠಿಪಾಡಿ ಮೂಲದವರಾದ ಅಶ್ವಿ‌ನ್‌ ಎಂ. ರಾವ್‌ ಅವರು ಭಾರತೀಯ ನೌಕಾಪಡೆಯ ಸಿಎನ್‌ಎಸ್‌ (ಚೀಫ್ ಆಫ್ ನೇವಲ್‌ ಸ್ಟಾಫ್) ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

ಅಶ್ವಿ‌ನ್‌ ಅವರು ಕಾರ್ಕಳದ ಶುಂಠಿಪಾಡಿ ಮನೋಹರ ರಾವ್‌ ಮತ್ತು ಸಾವಿತ್ರಿ ಮನೋಹರ್‌ ದಂಪತಿಯ ಪುತ್ರ. ತಂದೆ ಭುವನೇಂದ್ರ ಕಾಲೇಜಿನ ಮುಖ್ಯ ಶಿಕ್ಷಕ, ತಾಯಿ ತೆಳ್ಳಾರು ಸರಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಕ ಮುಖ್ಯ ಶಿಕ್ಷಕಿ. ಅಶ್ವಿ‌ನ್‌ ಪೆರುವಾಜೆಯ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಬಾಲ್ಯದಲ್ಲಿ ಸಾಹಸ ಮನೋಭಾವವನ್ನು ಮೈಗೂಡಿಸಿಕೊಂಡಿದ್ದರು. ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ ಬಳಿಕ ನಿಟ್ಟೆಯ ವಿದ್ಯಾಸಂಸ್ಥೆಯಲ್ಲಿ ಪಿಯುಸಿಯಿಂದ ಬಿಇ ತನಕ ಶಿಕ್ಷಣ ಪಡೆದರು.

ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್‌ ವಿದ್ಯಾರ್ಥಿಯಾಗಿದ್ದರು. ಆಗ ಗೈಡ್‌ ಕ್ಯಾಪ್ಟನ್‌ ಆಗಿದ್ದ ತಾಯಿಯಿಂದ ದೇಶ ಸೇವೆಯ ಮನೋಭಾವ ಮೈಗೂಡಿಸಿಕೊಂಡರು. ಕಾಲೇಜಿನಲ್ಲಿ ಓದುತ್ತಿದ್ದಾಗ ಎನ್‌ಎಸ್‌ಎಸ್‌ ಕ್ಯಾಂಪ್‌ಗ್ಳಲ್ಲಿ ಭಾಗವಹಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ತಾಯಿಯ ಪ್ರೋತ್ಸಾಹದಿಂದ ಭಾರತೀಯ ನೌಕಾದಳದ ತರಬೇತಿಗೆ ಸೇರಬಯಸಿ ಲಿಖೀತ ಪರೀಕ್ಷೆ ಬರೆದರು. ಕರ್ನಾಟಕದಿಂದ ಪರೀಕ್ಷೆಗೆ ತೆರಳಿದ 600 ಅಭ್ಯರ್ಥಿಗಳಲ್ಲಿ ಲಿಖೀತ ಮತ್ತು ದೈಹಿಕ ಪರೀಕ್ಷೆಗಳಲ್ಲಿ ಆಯ್ಕೆಗೊಂಡದ್ದು ಇವರೊಬ್ಬರು ಮಾತ್ರ. ಮಧ್ಯಪ್ರದೇಶದ ಭೋಪಾಲ ಮತ್ತು ಗೋವಾದ ತರಬೇತಿ ಕೇಂದ್ರಗಳಲ್ಲಿ ಆರಂಭಿಕ ತರಬೇತಿ ಪಡೆದಿದ್ದರು.

2005ರಲ್ಲಿ ಕೊಚ್ಚಿಯಲ್ಲಿ ನೌಕಾ ದಳದ ಸಬ್‌ ಲೆಫ್ಟಿನೆಂಟ್‌ ಆಫೀಸರ್‌ ಆಗಿ ನೇಮಕಗೊಂಡು, 2005ರಿಂದ 2007ರ ವರೆಗೆ ಐಎನ್‌ಎಸ್‌ ತಬರ್‌, ಐಎನ್‌ಎಸ್‌ ವಲ್ಸುರಾ, ಐಎನ್‌ಎಸ್‌ ತಲ್ವಾರ್‌ ನೌಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೇ ಸಮಯದಲ್ಲಿ 2007ರಲ್ಲಿ ಏರೋನಾಟಿಕ್‌ ಎಂಜಿನಿಯರಿಂಗ್‌ನಲ್ಲಿ ಎಂಟೆಕ್‌ ಪದವಿ ಪಡೆದರು. 2008ರಿಂದ 2011ರ ವರೆಗೆ ಏರೋನಾಟಿಕ್‌ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಅನಂತರ ಕೊಚ್ಚಿಯ ಐಎಎನ್‌ಎಸ್‌ ಗರುಡದಲ್ಲಿ ಲೆಫ್ಟಿನೆಂಟ್‌ ಕಮಾಂಡರ್‌ ಆಗಿ ಪದೋನ್ನತಿ ಹೊಂದಿದರು.

Advertisement

2013ರಲ್ಲಿ ಮೂರನೆಯ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಅಶ್ವಿ‌ನ್‌ ದಿಲ್ಲಿಯಲ್ಲಿರುವ ನೌಕಾದಳದ ಪ್ರಧಾನ ಕಚೇರಿಯಲ್ಲಿ ಸಿಸ್ಟಮ್‌ ಸ್ಪೆಷಲಿಸ್ಟ್‌ ಆದರು. 2017ರಲ್ಲಿ ಪದೋನ್ನತಿ ಪಡೆದು ಕಮಾಂಡರ್‌ ಆಗಿ ಕೊಚ್ಚಿಯ ಐಎಸ್‌ಎನ್‌ ಶಾರದಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಏರೋನಾಟಿಕಲ್‌ ಟ್ರೈನಿಂಗ್‌ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಮಗ ದೇಶ ಸೇವೆ ಮಾಡುತ್ತಿರುವುದಕ್ಕೆ ಹೆಮ್ಮೆಯಿದೆ. ಪದಕ ಬಂದಿರುವುದು ಅವನ ಸೇವೆಗೆ ಲಭಿಸಿದ ಗೌರವ. ಬಾಲ್ಯದಲ್ಲೂ ಆತನಲ್ಲಿ ದೇಶಸೇವೆಯ ತುಡಿತವಿತ್ತು. ಮಗನ ಬಗ್ಗೆ ಗೌರವ ಜತೆಗೆ ಹೆಮ್ಮೆ, ಖುಷಿಯಿದೆ.
-ಸಾವಿತ್ರಿ ಮನೋಹರ್‌ ತಾಯಿ

ಬೇಳದ ಸಾವನ್‌ ಫ್ಲೈಯಿಂಗ್‌ ಆಫೀಸರ್‌
ಮಂಗಳೂರು: ಕಾಸರಗೋಡಿನ ಬೇಳದ ಯುವಕ ಸಾವನ್‌ ಡೇಮಿಯನ್‌ ಡಿ’ಸೋಜಾ(23) ಭಾರತೀಯ ನೌಕಾ ಪಡೆಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹೈದರಾಬಾದ್‌ನ ದಿಂಡಿಗಲ್‌ನ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ 1 ವರ್ಷದ ತರಬೇತಿಯನ್ನು ಪೂರ್ತಿಗೊಳಿಸಿದ ಅವರಿಗೆ ಡಿ. 19ರಂದು ನಡೆದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿದರು.

ಸಾವನ್‌ ಬೇಳ ಪೆರಿಯಡ್ಕದ ಕೃಷಿಕ ದಂಪತಿ ಡೆನಿಸ್‌ ಮತ್ತು ಅನಿತಾ ಡಿ’ಸೋಜಾ ಅವರ ಮೂವರು ಮಕ್ಕಳಲ್ಲಿ ಮೊದಲನೆಯವರು. ಅವರ ಸಹೋದರಿ ಸಹನಾ ಆ್ಯಡ್ಲಿನ್‌ ನಾಗರಿಕ ಸೇವೆಯ ಪರೀಕ್ಷೆಗೆ ಮಂಗಳೂರಿನಲ್ಲಿ ಕೋಚಿಂಗ್‌ ಪಡೆಯುತ್ತಿದ್ದಾರೆ. ಸಹೋದರ ಸುಮನ್‌ 7ನೇ ತರಗತಿಯಲ್ಲಿದ್ದಾರೆ.

ಸಾವನ್‌ ಅವರು ಬೇಳದ ಶಾಲೆಗಳಲ್ಲಿ ಶಿಕ್ಷಣ ಪಡೆದು ಮಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದರು. ಬಳಿಕ ಚೆನ್ನೈಯಲ್ಲಿ ಆಫೀಸರ್ ಟ್ರೈನಿಂಗ್‌ ಅಕಾಡೆಮಿಯಲ್ಲಿ 3 ತಿಂಗಳ ತರಬೇತಿ ಪಡೆದು ಆರ್ಮಿಗೆ ಆಯ್ಕೆಯಾಗಿದ್ದರು. ವಾಯುಪಡೆಗೆ ಸೇರಬೇಕೆಂಬ ಹಿನ್ನೆಲೆಯಲ್ಲಿ ಬಳಿಕ ಏರ್‌ಫೋರ್ಸ್‌ ಕಂಬೈನ್ಡ ಅಡ್ಮಿಶನ್‌ ಟೆಸ್ಟ್‌ ಬರೆದು ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದರು. 2019ರ ಜನವರಿಯಲ್ಲಿ ಆರಂಭವಾದ ತರಬೇತಿ ಇದೀಗ ಪೂರ್ಣ ಗೊಂಡಿದೆ. ರವಿವಾರ ಅವರು ಮುಂದಿನ ಹುದ್ದೆಯ ಸಂದರ್ಶನ ಕ್ಕಾಗಿ ಹೈದರಾಬಾದಿನಿಂದ ದಿಲ್ಲಿಗೆ ತೆರಳಿದ್ದಾರೆ.

ಸಾವನ್‌ ಅವರು ಕಾಸರಗೋಡು ಜಿಲ್ಲೆಯ ಕೊಂಕಣಿ ಕೆಥೋಲಿಕ್‌ ಸಮುದಾಯದಲ್ಲಿ ಏರ್‌ಫೋರ್ಸ್‌ ನಲ್ಲಿ ಫ್ಲೆ$çಯಿಂಗ್‌ ಆಫೀಸರ್‌ ಆಗಿ ಆಯ್ಕೆಯಾಗಿರುವ ಮೊದಲ ವ್ಯಕ್ತಿ ಆಗಿದ್ದಾರೆ.

5ನೇ ತರಗತಿಯ ಕನಸು
ಸಾವನ್‌ 5ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ತಾನು ಮುಂದೆ ಪೈಲೆಟ್‌ ಆಗುತ್ತೇನೆ ಎಂದು ಹೇಳುತ್ತಿದ್ದನು. 7ನೇ ತರಗತಿಯಲ್ಲಿದ್ದಾಗ ತನ್ನ ಮೇಜಿನ ಮೇಲೆ ಭಾರತೀಯ ವಾಯುಪಡೆಯ ಲಾಂಛನವನ್ನು ಇರಿಸಿಕೊಂಡಿದ್ದ ಹಾಗೂ ನೌಕಾ ಪಡೆಗೆ ಸೇರುವ ಕನಸು ಕಾಣುತ್ತಿದ್ದನು. ಬಿಸಿಎ ಪದವಿ ತರಗತಿ ವ್ಯಾಸಂಗದ ವೇಳೆ ಎನ್‌ಸಿಸಿಗೆ ಸೇರ್ಪಡೆಗೊಂಡಿದ್ದ. 3ನೇ ಸೆಮಿಸ್ಟರ್‌ ಸಂದರ್ಭ ರಾಜಸ್ಥಾನದಲ್ಲಿ 1 ತಿಂಗಳ ಎನ್‌ಸಿಸಿ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದರಿಂದ ಕೆಲವು ಪರೀಕ್ಷೆಗಳನ್ನು ಬರೆಯಲಾಗಿಲ್ಲ. ಆದರೆ 6ನೇ ಸೆಮಿಸ್ಟರ್‌ನಲ್ಲಿ 16 ವಿಷಯಗಳ ಪರೀಕ್ಷೆಗೆ ಹಾಜರಾಗಿ ಏಕ ಕಾಲದಲ್ಲಿ ಎಲ್ಲ ವಿಷಯಗಳಲ್ಲಿ ಉತ್ತೀರ್ಣನಾಗಿ ಶೇ. 83 ಅಂಕ ಗಳಿಸಿದ್ದನು ಎಂದು ತಂದೆ ಡೆನಿಸ್‌ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next