Advertisement

Mangaluru ಯಶಸ್ವಿನಿ ಯಶಸ್ಸಿಗೆ ಕರಾವಳಿಯ ಕುಟುಂಬ ವ್ಯವಸ್ಥೆ ತೊಡಕು!

01:12 AM Sep 14, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಮರು ಜಾರಿಗೊಂಡಿರುವ ಯಶಸ್ವಿ ನಿಯೋಜನೆಯ ಯಶಸ್ಸಿಗೆ ಕರಾವಳಿ ಭಾಗದ ಕುಟುಂಬ ವ್ಯವಸ್ಥೆ ತೊಡಕಾಗಿದ್ದು ಹಲವಾರು ಮಂದಿ ಸೌಲಭ್ಯ ದಿಂದ ವಂಚಿತರಾಗುತ್ತಿದ್ದಾರೆ.

Advertisement

ಯಶಸ್ವಿನಿ ಯೋಜನೆಯ ಮಾರ್ಗ ಸೂಚಿ ಯಲ್ಲಿರುವ “ಕುಟುಂಬ’ ವ್ಯಾಖ್ಯಾನಕ್ಕೂ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಇರುವ ಅಳಿಯ ಕಟ್ಟು/ಮಗಳ ಕಟ್ಟು ಹಾಗೂ ಅವಿಭಕ್ತ ಕುಟುಂಬ ವ್ಯವಸ್ಥೆಗೂ ತಾಳೆಯಾಗದೆ ಗೊಂದಲ ಸೃಷ್ಟಿಯಾಗಿದೆ. ಇದರಿಂದಾಗಿ ಯಶಸ್ವಿನಿ ಕಾರ್ಡ್‌ ಹೊಂದಿದ್ದರೂ ಯೋಜನೆಯಡಿ ಆಸ್ಪತ್ರೆಯಲ್ಲಿ ನಗದುರಹಿತವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅನೇಕ ಮಂದಿ ತೊಂದರೆಗೀಡಾಗಿದ್ದಾರೆ.

ಕುಟಂಬದ ಅರ್ಥ ವ್ಯತ್ಯಾಸ
“ಯಶಸ್ವಿನಿ’ ಮಾರ್ಗಸೂಚಿ ಪ್ರಕಾರ “ಕುಟುಂಬ’ವೆಂದರೆ ಪ್ರಧಾನಅರ್ಜಿದಾರರ (ಪ್ರಿನ್ಸಿಪಾಲ್‌ ಮೆಂಬರ್‌) ತಂದೆ, ತಾಯಿ, ಗಂಡ/ಹೆಂಡತಿ, ಗಂಡುಮಕ್ಕಳು, ಮದುವೆ ಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಮಾತ್ರ. ಒಂದು ವೇಳೆ ವಿವಾಹಿತೆ ಪ್ರಧಾನ ಅರ್ಜಿದಾರಳಾಗಿದ್ದರೆ ಆಕೆಯ ಪತಿ, ಮಕ್ಕಳು, ಅತ್ತೆ, ಮಾವ ಯೋಜನೆಗೆ ಒಳಪಡುತ್ತಾರೆ. ಆಕೆಯ ತಂದೆ, ತಾಯಿ, ಕುಟುಂಬದ ಇತರ ಸದಸ್ಯರು ಯೋಜನೆಗೆ ಒಳಪಡುವುದಿಲ್ಲ. ಅದೇ ರೀತಿ ವಿವಾಹಿತ ಪ್ರಧಾನ ಅರ್ಜಿದಾರನಾಗಿ ದ್ದರೆ ಆತನ ಅಣ್ಣ, ತಮ್ಮ, ಅಕ್ಕ, ತಂಗಿ ಒಳಗೊಳ್ಳುವುದಿಲ್ಲ. ಇದೇ ರೀತಿ ಹಲವಾರು ರೀತಿಯ ಗೊಂದಲಗಳು ಇದ್ದು ನೂರಾರು ಮಂದಿ ಸೌಲಭ್ಯ ದಿಂದ ವಂಚಿತರಾಗುತ್ತಿದ್ದಾರೆ. 2016 -17ನೇ ಸಾಲಿನಲ್ಲಿ ಈ ಯೋಜನೆ ಜಾರಿಯಲ್ಲಿದ್ದಾಗ ಕುಟುಂಬದ ವ್ಯಾಖ್ಯಾನ ಇರಲಿಲ್ಲ. ಹಾಗಾಗಿ ಗೊಂದಲ ಇರಲಿಲ್ಲ.

ಪಡಿತರ ಚೀಟಿಗೆ ಸಂಬಂಧವಿಲ್ಲ
ಪಡಿತರ ಚೀಟಿಯಲ್ಲಿ ಹೆಸರು ಇರುವ ಸದಸ್ಯರನ್ನು ಒಂದು ಕುಟಂಬವೆಂದು ಪರಿಗಣಿಸಿ ಸಹಕಾರ ಸಂಘಗಳಲ್ಲಿ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಆದರೆ ಅಂತಹ ಕುಟುಂಬ ಅವಿಭಕ್ತ ಕುಟುಂಬವಾಗಿದ್ದರೆ ಅದರಲ್ಲಿ ಕೆಲವು ಮಂದಿಗೆ ಸೌಲಭ್ಯ ದೊರೆಯುತ್ತಿಲ್ಲ. ಪಡಿತರ ಚೀಟಿಗೂ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ಪಡೆಯುವವರಿಗೂ ಸಂಬಂಧವಿಲ್ಲ. ಸಹಕಾರ ಸಂಘಗಳ ಷೇರುದಾರರು/ಸದಸ್ಯರಾಗಿರುವವರ ಮೂಲಕ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ನೋಂದಣಿ ಸಂದರ್ಭದಲ್ಲಿ ಪ್ರಧಾನ ಅರ್ಜಿದಾರರನ್ನು ಪರಿಗಣಿಸುವಾಗ ಮಾಡಿರುವ ಲೋಪಗಳಿಂದ ಗೊಂದಲ ವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಹಕಾರ ಸಂಘಗಳ ಎಡವಟ್ಟು?
ನೋಂದಣಿ ಮಾಡುವಾಗಲೇ ಮಾರ್ಗಸೂಚಿಯಲ್ಲಿ ಇರುವ ಕುಟುಂಬ ವ್ಯಾಖ್ಯಾನ ಗಮನಿಸಿಯೇ ಅರ್ಜಿ ಸ್ವೀಕರಿಸುವಂತೆ ಸಹಕಾರ ಸಂಘಗಳಿಗೆ ಸೂಚಿಸಲಾಗಿತ್ತು. ಆದರೆ ಕೆಲವು ಸಂಘಗಳಲ್ಲಿ ಲೋಪವಾಗಿ ಈ ಗೊಂದಲ ಉಂಟಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸಹಕಾರ ಇಲಾಖೆಯ ಅಧಿಕಾರಿಗಳು.

Advertisement

ತಿದ್ದುಪಡಿ ಪರಿಹಾರ
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಇಂತಹ ಗೊಂದಲ, ಸಮಸ್ಯೆ ಉಂಟಾಗಿಲ್ಲ. ಯಶಸ್ವಿನಿ ಯೋಜನೆ ಯಲ್ಲಿ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಲಾಗಿದೆ. ಕರಾವಳಿ ಭಾಗದ ಗೊಂದಲ ನಿವಾರಣೆಯಾಗಬೇಕಾದರೆ ಈ ಭಾಗಕ್ಕೆ ಅನ್ವಯವಾಗುವಂತೆ ಮಾರ್ಗ ಸೂಚಿ ತಿದ್ದುಪಡಿ ಮಾಡಬೇಕಾಗಿದೆ.

1.67 ಲಕ್ಷ ಮಂದಿ ನೋಂದಣಿ
ಉಡುಪಿ ಜಿಲ್ಲೆಯಲ್ಲಿ 77,000ಕ್ಕೂ ಅಧಿಕ ಹಾಗೂ ದ.ಕ. ಜಿಲ್ಲೆಯಲ್ಲಿ 90 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.ಸೌಲಭ್ಯ ಪಡೆಯಲು ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಈಗಾಗಲೇ ಹಲವರು ದೂರಿಕೊಂಡಿದ್ದು ಇದೇ ರೀತಿ ಸಾವಿರಾರು ಮಂದಿಗೆ ತೊಡಕಾ ಗಿರುವ ಸಾಧ್ಯತೆ ಇದೆ.

ಯಶಸ್ವಿನಿ ಉತ್ತಮ ಯೋಜನೆಯಾಗಿದ್ದು ಇದು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ರಾಜ್ಯಾದ್ಯಂತ 45.80 ಲಕ್ಷ ಮಂದಿ ನೋಂದಾಯಿಸಿದ್ದಾರೆ. ಯೋಜನೆಯಲ್ಲಿ ಕುಟುಂಬವೆಂದರೆ ಏನೆಂಬುದನ್ನು ಸರಕಾರ ವ್ಯಾಖ್ಯಾನಿಸಿದೆ. ಅದರಂತೆ ಸೌಲಭ್ಯಗಳು ದೊರೆಯುತ್ತಿವೆ. ಯೋಜನೆ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಕರಾವಳಿ ಭಾಗದಲ್ಲಿ ಕೆಲವರಿಗೆ ಸಮಸ್ಯೆಯಾಗುತ್ತಿದ್ದರೆ ಅದನ್ನು ಸಹಕಾರ ಸಚಿವರ ಗಮನಕ್ಕೆ ತಂದು ಪರಿಹರಿಸಲಾಗುವುದು.
– ಡಾ| ಕೃಷ್ಣಪ್ರಸಾದ್‌, ಟ್ರಸ್ಟಿ, ಯಶಸ್ವಿನಿ ಸ.ಸ.ಆ. ಟ್ರಸ್ಟ್‌

ಕರಾವಳಿ ಭಾಗದ ಕುಟುಂಬ ವ್ಯವಸ್ಥೆಯಿಂದ ಯಶಸ್ವಿನಿ ಸೌಲಭ್ಯಕ್ಕೆ ತೊಡಕಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಯಾರೂ ಲಿಖಿತ ಮನವಿ ಸಲ್ಲಿಸಿಲ್ಲ. ನಿರ್ದಿಷ್ಟವಾಗಿ ಸಮಸ್ಯೆಯ ಮಾಹಿತಿ ನೀಡುತ್ತಿಲ್ಲ. ಯಾವುದೇ ಸಂಘ – ಸಂಸ್ಥೆಯವರು ಅಥವಾ ಸಂಬಂಧಿಸಿದ ಸಮುದಾಯದವರು ಅಧಿಕೃತವಾಗಿ ಲಿಖೀತ ಮನವಿ ಸಲ್ಲಿಸಿದರೆ ಕೂಡಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ವೆಂಕಟಸ್ವಾಮಿ, ಸಿಇಒ, ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌, ಬೆಂಗಳೂರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next