Advertisement

ಕರಾವಳಿ ಎಂದಿಗೂ ಹಿಂದುತ್ವದ ಕೋಟೆ: ಬಿ.ವೈ. ವಿಜಯೇಂದ್ರ

01:16 AM Apr 21, 2024 | Team Udayavani |

ಉಡುಪಿ: ಕರಾವಳಿ ಹಿಂದುತ್ವದ ಭದ್ರಕೋಟೆ. ಯುವ ಜನಾಂಗದ ಕಣಕಣದಲ್ಲೂ ಹಿಂದುತ್ವವಿದೆ. ಕಾರ್ಯಕರ್ತರು ಪಕ್ಷಕ್ಕಾಗಿ ಹಗಲು ರಾತ್ರಿ ಶ್ರಮಪಡುತ್ತಿದ್ದು, ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲಾ ಬಿಜೆಪಿ ಯುವಮೋರ್ಚಾದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಯುವ ಭಾರತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ ತರಾಗಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿ ಸಿದಂತೆ ರಾಮಮಂದಿರ ನಿರ್ಮಾ ಣವಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 370 ವಿಧಿ ರದ್ದು ಮಾಡಲಾಗಿದೆ ಎಂದರು.

ಹಣ ಬಲ, ತೋಳ್ಬಲ, ಹೆಂಡದ ಬಲ ಹಾಗೂ ಅಧಿಕಾರದ ಬಲದಿಂದ ಏನು ಮಾಡಿದರೂ ನಡೆಯುತ್ತದೆ ಎಂಬ ಮಾನಸಿಕತೆಯಲ್ಲಿ ಕಾಂಗ್ರೆಸ್‌ ಇದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕನಿಷ್ಠ 3-4 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸುವರು ಎಂದರು.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇದು ದೇಶದ ಚುನಾವಣೆ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

ಶಾಸಕ ಸುನಿಲ್‌ ಕುಮಾರ್‌ ಮಾತನಾಡಿ, ಹಿಂದೂಗಳಿಗೆ ಏನಾದರೂ ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ರಾಜ್ಯ ಸರಕಾರ ವರ್ತಿಸುತ್ತಿದೆ. ಹಿಂದೂ ಹುಡುಗಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದು ವೈಯಕ್ತಿಕ ಕಾರಣಕ್ಕೆ ಎಂದು ತನಿಖೆಗೂ ಮೊದಲೇ ಮುಖ್ಯಮಂತ್ರಿ, ಗೃಹಸಚಿವರು ಹೇಳಿಕೆ ನೀಡುತ್ತಾರೆ. ಇದರ ವಿರುದ್ಧ ಚುನಾವಣೆ ಮೂಲಕ ಜನರು ಉತ್ತರಿಸಬೇಕು ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಹಾಗೂ ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಮೋದಿ ಸರಕಾರ ಯುವಜನತೆಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ. ಯುವ ಜನಾಂಗದ ಹಿತ ಕಾಪಾಡುವುದು ಬಿಜೆಪಿ ಮಾತ್ರ ಎಂದರು.ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮಾತನಾಡಿ, ಸುರಕ್ಷಿತ, ಸಾಂಸ್ಕೃತಿಕ, ವಿಕಾಸಿತ ಭಾರತಕ್ಕಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ, ಗುರ್ಮೆ ಸುರೇಶ್‌ ಶೆಟ್ಟಿ, ಹರೀಶ್‌ ಪೂಂಜಾ, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌.ಮೆಂಡನ್‌ಮತ್ತಿತರರು ಭಾಗವಹಿಸಿದ್ದರು.

ಮೆರವಣಿಗೆ
ಜಿಲ್ಲಾ ಬಿಜೆಪಿ ಕಚೇರಿಯಿಂದ ಸಮಾವೇಶ ಸ್ಥಳ ಶಾರದಾ ಕಲ್ಯಾಣ ಮಂಟಪದವರೆಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಒಳಗೊಂಡಂತೆ ಪ್ರಮುಖರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದರು. ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಜತೆಯಾದರು.

ಜನರಿಗೆ ರಕ್ಷಣೆ, ಸುರಕ್ಷತೆ ನೀಡಲಾಗದ ಸರಕಾರ: ವಿಜಯೇಂದ್ರ
ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಕೊಲೆಯನ್ನು ಕಾಂಗ್ರೆಸ್‌ ಸರಕಾರ ಹಗುರವಾಗಿ ತೆಗೆದುಕೊಂಡಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದ ಗೆಟ್ಟಿದ್ದು, ಇಂಥ ದರಿದ್ರ ಸರಕಾರ ನಮಗೆ ಬೇಕೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ಅಭಿವೃದ್ಧಿ ಪರ ಸರಕಾರವಿದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರಕಾರವಿದೆ. ಕಾಂಗ್ರೆಸ್‌ ಅಲ್ಪಸಂಖ್ಯಾಕರ ತುಷ್ಟೀಕರ ಣದಲ್ಲಿ ತೊಡಗಿದೆ. ಹಿಂದೂಗಳ ಕೊಲೆಯನ್ನು ಖಂಡಿಸಿ ಬಿಜೆಪಿಯು ಶೀಘ್ರವೇ ಹೋರಾಟ ನಡೆಸಲಿದೆ ಎಂದರು.

ನೇಹಾ ಕೊಲೆ ಪ್ರಕರಣ ಪ್ರತಿ ಮಹಿಳೆಯು ಚಿಂತಿಸಬೇಕಾದ ವಿಷಯ. ಮನೆಯಿಂದ ಹೊರಗೆ ಹೋದ ಹೆಣ್ಣುಮಕ್ಕಳು ಸುರಕ್ಷಿತವಾಗಿ ಮನೆಗೆ ವಾಪಸ್‌ ಆಗುತ್ತಾರೆ ಎನ್ನುವ ಗ್ಯಾರಂಟಿಯಿಲ್ಲ. ಕೊಲೆಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆ ಗಮನಿಸಿದರೆ ಅಲ್ಪಸಂಖ್ಯಾಕರ ತುಷ್ಟೀ ಕರಣ ಸ್ಪಷ್ಟವಾಗುತ್ತದೆ. ರಾಜ್ಯದ ಜನರ ರಕ್ಷಣೆ, ಸುರಕ್ಷತೆ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವಿಸಿದೆ. ಇಷ್ಟಾದರೂ ರಾಜ್ಯ ಸರಕಾರಕ್ಕೆ ಬುದ್ದಿ ಬಂದಿಲ್ಲ ಎಂದು ಕಿಡಿ ಕಾರಿದರು.

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ನಾಯಕತ್ವದ ಮುಂದೆ ಕಾಂಗ್ರೆಸ್‌ ದಿನೇದಿನೆ ಕುಸಿಯುತ್ತಿದೆ. ಗ್ಯಾರಂಟಿಯೂ ದುರ್ಬಲವಾಗಿದೆ. ಕಾಂಗ್ರೆಸ್‌ನ ಅಪಪ್ರಚಾರವು ರಾಜ್ಯದ ಪ್ರಜ್ಞಾವಂತ ಮತದಾರರ ಮೇಲೆ ಯಾವುದೇ ಪ್ರಭಾವ ಬೀರದು ಎಂದರಲ್ಲದೇ, ಲೋಕಸಭೆ ಚುನಾವಣೆ ಬಳಿಕ ಬಿಜೆಪಿ-ಜೆಡಿಎಸ್‌ ಮೈತ್ರಿ ಏನಾಗುತ್ತದೆ ಎನ್ನುವ ಮೊದಲು ತಮ್ಮ ಸ್ಥಿತಿ ಏನಾಗಬಹುದು ಎಂದು ಕಾಂಗ್ರೆಸ್‌ ಆಲೋಚಿಸಲಿ ಎಂದರು.

ಏನೂ ಪರಿಣಾಮ ಆಗದು
ಈಶ್ವರಪ್ಪ ಅವರ ಬಗ್ಗೆ ರಾಷ್ಟ್ರೀಯ ನಾಯಕರು ಸೂಕ್ತ ನಿರ್ಧಾರ ತೆಗೆದು ಕೊಳ್ಳಲಿದ್ದಾರೆ ಎಂದ ಅವರು, ಶಿವಮೊಗ್ಗ ಕ್ಷೇತ್ರ ದಲ್ಲಿ ಅವರ ಸ್ಪರ್ಧೆ ಯಾವುದೇ ಪರಿಣಾಮ ಬೀರದು. ಬಿಜೆಪಿ ಅಭ್ಯರ್ಥಿ ರಾಘ ವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಸಾಧಿಸುವರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next