Advertisement

ಕೋಚ್‌ ರವಿಶಾಸ್ತ್ರಿ  ಟೀಮ್‌ ರೆಡಿ

09:10 AM Jul 19, 2017 | Team Udayavani |

ಮುಂಬಯಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ರವಿಶಾಸ್ತ್ರಿ  ಬೇಡಿಕೆಗಳಿಗೆ ಬಿಸಿಸಿಐ ಪೂರ್ಣ ಬಾಗಿದೆ. ಶಾಸ್ತ್ರಿ ಬೇಡಿಕೆಯಂತೆ ಗೆಳೆಯ ಭರತ್‌ ಅರುಣ್‌ ಅವರನ್ನೇ ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ. ಕ್ಷೇತ್ರ ರಕ್ಷಣೆ ಕೋಚ್‌ ಆಗಿ ಆರ್‌. ಶ್ರೀಧರ್‌ ಅವರನ್ನು ನೇಮಕ ಮಾಡಲಾಗಿದೆ. 

Advertisement

ಈ ಬೆಳವಣಿಗೆಯೊಂದಿಗೆ ಮೊನ್ನೆಯಷ್ಟೇ ಬೌಲಿಂಗ್‌ ಸಲಹೆಗಾರ ಎಂದು ಬಿಸಿಸಿಐನಿಂದಲೇ ನೇಮಿಸಲ್ಪಟ್ಟಿದ್ದ ಜಹೀರ್‌ ಖಾನ್‌, ಬ್ಯಾಟಿಂಗ್‌ ಸಲಹೆಗಾರ ರಾಹುಲ್‌ ದ್ರಾವಿಡ್‌  ಪಾತ್ರವೇನು ಎಂಬ ಬಗ್ಗೆ ಗೊಂದಲಗಳು ಶುರುವಾಗಿವೆ. ಮತ್ತೂಂದು ವಿವಾದಕ್ಕೆ ನಾಂದಿಯಾಗಿದೆ.

ಇದು ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಿರುವ ಉನ್ನತ ಸಲಹಾ ಸಮಿತಿಗೆ ಬಿಸಿಸಿಐ ಮಾಡಿದ ಅವಮಾನ ಎಂದು ವಿಶ್ಲೇಷಿಸಲಾಗಿದೆ. ಈ ಸದಸ್ಯರು ಜು. 11ರಂದು ರವಿಶಾಸ್ತ್ರಿಯನ್ನು ಮುಖ್ಯ ಕೋಚ್‌ ಆಗಿ ನೇಮಿಸಿದ್ದರು. ಆ ವೇಳೆ ಜಹೀರ್‌ ಅವರನ್ನು ಬೌಲಿಂಗ್‌ ಸಲಹೆಗಾರರನ್ನಾಗಿ, ದ್ರಾವಿಡ್‌ ಅವರನ್ನು ಬ್ಯಾಟಿಂಗ್‌ ಸಲಹೆಗಾರರನ್ನಾಗಿ ಘೋಷಿ ಸಲಾಗಿತ್ತು. ಈ ಹೊಸ ಘೋಷಣೆ ಮೂಲಕ ಬಿಸಿಸಿಐ ಹಲವು ವಿವಾದಗಳು, ಗೊಂದಲಗಳಿಗೆ ಕಾರಣವಾಗಿದೆ. ಇಂತಹ ಗೊಂದಲಗಳಿಗೆ ಆಸ್ಪದ ನೀಡಿದ ಬಿಸಿಸಿಐ ಬಗ್ಗೆ ಆಕ್ರೋಶ ಶುರುವಾಗಿದೆ.

ಇನ್ನಿತರ ನೇಮಕಗಳು
ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ, ರವಿಶಾಸಿŒ ಬಯಸಿದ ವ್ಯಕ್ತಿಗಳನ್ನೇ ಆಯಾ ಸ್ಥಾನಕ್ಕೆ ನೇಮಿಸಿದ್ದಾರೆ. ಪ್ಯಾಟ್ರಿಕ್‌ ಫ‌ರ್ಹಾದ್‌ ದೈಹಿಕ ತರಬೇತುದಾರ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಇದುವರೆಗೆ ಬ್ಯಾಟಿಂಗ್‌ ಕೋಚ್‌ ಆಗಿದ್ದ ಸಂಜಯ್‌ ಬಂಗಾರ್‌ ಸಹಾಯಕ ಕೋಚ್‌ ಆಗಿ ಭಡ್ತಿ ಪಡೆ ದಿದ್ದಾರೆ. ಇವರೆಲ್ಲರರೂ 2019ರ ಏಕದಿನ ವಿಶ್ವ ಕಪ್‌ ವರೆಗೆ ಹುದ್ದೆಯಲ್ಲಿರುತ್ತಾರೆ.

ಬೌಲಿಂಗ್‌ ಕೋಚ್‌ ಆಗಿರುವುದರಿಂದ ಭರತ್‌ ಅರುಣ್‌, ಆರ್‌ಸಿಬಿ ತಂಡದ ಸಹಾಯಕ ಕೋಚ್‌ ಸ್ಥಾನಕ್ಕೆ ವಿದಾಯ ಹೇಳಬೇಕಾಗುತ್ತದೆ. ರಾಷ್ಟ್ರೀಯ ತಂಡದ ಸೇವೆಯಲ್ಲಿರುವವರು ಅನ್ಯ ತಂಡದ ಜವಾಬ್ದಾರಿ ಹೊಂದುವುದು ಸ್ವಹಿತಾಸಕ್ತಿ ಎಂದು ಹೇಳಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ರವಿಶಾಸ್ತ್ರಿ, ಇದು ತಮ್ಮ ತಂಡ ಎಂದು ಹೇಳಿಕೊಂಡರು. ಆದರೆ ದ್ರಾವಿಡ್‌, ಜಹೀರ್‌ ಖಾನ್‌ ಪಾತ್ರದ ಬಗ್ಗೆ ಖಚಿತವಾಗಿ ಏನೂ ನುಡಿಯಲಿಲ್ಲ. ಬಿಸಿಸಿಐ ಯಾವಾಗ ಬಯಸು ತ್ತದೋ ಆಗ ಅವರು ನಮ್ಮ ಜೊತೆಗಿರುತ್ತಾರೆ ಎಂದಷ್ಟೇ ಹೇಳಿದ್ದಾರೆ.

Advertisement

ಆದರೆ ಅಚ್ಚರಿ ಮೂಡಿಸಿದ್ದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿಕೆ. ಅವರ ಪ್ರಕಾರ ಯಾವುದೇ ಗೊಂದಲಗಳು ನಡೆದೇ ಇಲ್ಲವಂತೆ. “ಬಿಸಿಸಿಐಗೆ ಈ ಬಗ್ಗೆ ಎಲ್ಲವೂ ಸ್ಪಷ್ಟವಿತ್ತು. ರವಿಶಾಸ್ತ್ರಿ ತಮ್ಮದೇ ತಂಡವನ್ನು ಬಯಸಿರುವುದು ಮೊದಲೇ ಗೊತ್ತಿತ್ತು. ದ್ರಾವಿಡ್‌, ಜಹೀರ್‌ ಖಾನ್‌ ಅವರು ಸಲಹೆಗಾರರಷ್ಟೇ’ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ತಾಳಕ್ಕೆ ಕುಣಿದ ಬಿಸಿಸಿಐ?
ರವಿಶಾಸ್ತ್ರಿಯನ್ನು ಕೋಚ್‌ ಎಂದು ನೇಮಿಸಿದ್ದಾಗಲೇ ಜಹೀರ್‌ ಖಾನ್‌ ಅವರನ್ನು ಬೌಲಿಂಗ್‌ ಸಲಹೆಗಾರ ಎಂದೂ, ದ್ರಾವಿಡ್‌ ಸಲಹೆಗಾರ ಎಂದೂ ಪ್ರಕಟಿಸಲಾಗಿತ್ತು. ಈ ಪ್ರಕಟನೆ ಬೆನ್ನಲ್ಲೇ ವಿವಾದಗಳೂ ಹುಟ್ಟಿ ಕೊಂಡಿದ್ದವು. ಸಚಿನ್‌, ಸೌರವ್‌, ಲಕ್ಷ್ಮಣ್‌ ನೇತೃತ್ವದ ಕೋಚ್‌ ಆಯ್ಕೆ ಸಮಿತಿ ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿ ಈ ನೇಮಕಾತಿ ಮಾಡಿದೆ ಎಂದು ಸುಪ್ರೀಂ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳು ಹೇಳಿಕೆ ನೀಡಿದ್ದರು. ಇದಕ್ಕೆ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿ, ನಾವು ರವಿಶಾಸ್ತ್ರಿಯನ್ನು ಕೇಳಿಯೇ ಈ ಆಯ್ಕೆ ಮಾಡಿದ್ದೇವೆ, ಈ ಬೆಳವಣಿಗೆಯಿಂದ ನಮಗೆ ಬೇಸರವಾಗಿದೆ ಎಂದು ತಿಳಿಸಿದ್ದರು.

ಆಡಳಿತಾಧಿಕಾರಿಗಳ ಹೇಳಿಕೆ ನಂತರ ಪರಿಸ್ಥಿತಿ ಪೂರ್ಣ ಬದಲಾಯಿತು. ಜಹೀರ್‌, ದ್ರಾವಿಡ್‌ ಹೆಸರು ನೇಪಥ್ಯಕ್ಕೆ ಸರಿಯಲಾರಂಭಿಸಿತು. ಬದಲಿಗೆ ಶಾಸ್ತ್ರಿ ಬಹುಕಾಲದ ಗೆಳೆಯ ಭರತ್‌ ಅರುಣ್‌ ಹೆಸರು ಮತ್ತೆ ಮುಂಚೂಣಿಗೆ ಬಂತು. ಶಾಸ್ತ್ರಿ ಬಿಸಿಸಿಐ ಆಡಳಿತಾಧಿಕಾರಿಗಳ ಭೇಟಿ ಮಾಡಿ ತಮಗೆ ಬೇಕಾದ ಸಿಬಂದಿ ನೇಮಿಸಿ ಎಂದು ಕೋರಿದ್ದಾರೆ ಎಂಬ ಮಾಹಿತಿಗಳೂ ಹೊರಬಿದ್ದವು. 

ಮಂಗಳವಾರ ಭರತ್‌ ಅರುಣ್‌ ಅವರನ್ನೇ ಬೌಲಿಂಗ್‌ ಕೋಚ್‌ ಆಗಿ ಪ್ರಕಟಿಸಲಾಯಿತು. ಈ ಬೆಳವಣಿಗೆಗಳನ್ನು ಗಮನಿಸಿದಾಗ ರವಿ ಶಾಸ್ತ್ರಿಗೆ ಬಿಸಿಸಿಐ ಪೂರ್ಣ ತಲೆಬಾಗಿದೆ ಎಂದೇ ವಿಶ್ಲೇಷಿಸಲಾಗಿದೆ.

ರವಿಶಾಸ್ತ್ರಿ  ನೇಮಕದ ವೇಳೆಯೂ ಗೊಂದಲ
ಸಹಾಯಕ ಕೋಚ್‌ಗಳ ಆಯ್ಕೆ ವೇಳೆ ನಡೆದಿರುವುದು ಹೊಸ ನಾಟಕ. ಆದರೆ ಜು. 11ರಂದು ರವಿಶಾಸ್ತ್ರಿ ಅವನ್ನು ಕೋಚ್‌ ಎಂದು ನೇಮಿಸುವ ಮುನ್ನ ಇಡೀ ಬಿಸಿಸಿಐ ಗೊಂದಲದ ಗೂಡಾಗಿತ್ತು. ಜು. 10ರಂದು ಕೋಚ್‌ ಹೆಸರನ್ನು ಘೋಷಿಸಲಾಗುತ್ತದೆಂದು ಆರಂಭದಲ್ಲಿ ಹೇಳಲಾಗಿತ್ತು. ಆ ದಿನ ಕೊಹ್ಲಿಯೊಂದಿಗೆ ಮಾತನಾಡಬೇಕೆಂದು ಹೇಳಿ ಮುಂದೂಡಲಾಯಿತು. ಜು.11ರಂದು ಘೋಷಣೆ ಖಚಿತ ಎನ್ನಲಾಯಿತು. ಮಧ್ಯಾಹ್ನದಷ್ಟೊತ್ತಿಗೆ ರವಿಶಾಸ್ತ್ರಿಯೇ ಕೋಚ್‌ ಎಂದು ಪ್ರಕಟಿಸಲಾಯಿತು. ಸಂಜೆ ವೇಳೆ ಯಾವುದೇ ನೇಮಕಾತಿಯಾಗಿಲ್ಲ, ಮಾಧ್ಯಮದಲ್ಲಿ ಬರುತ್ತಿರುವುದು ಸುಳ್ಳು ಎಂದು ಬಿಸಿಸಿಐ ಹೇಳಿತು. ರಾತ್ರಿ ಹತ್ತು ಗಂಟೆಗೆ ನಡೆದಿದ್ದೇ ಬೇರೆ. ದಿಢೀರನೆ ರವಿಶಾಸ್ತ್ರಿ ಕೋಚ್‌ ಎಂದು ಬಿಸಿಸಿಐ ಪ್ರಕಟಿಸಿತು. ಈ ನೇಮಕಕ್ಕೂ ಕೆಲವು ತಿಂಗಳ ಮುಂಚಿನಿಂದಲೇ ಭಾರೀ ವಿವಾದಗಳು ನಡೆಯುತ್ತಿದ್ದವು. ಅದು ಮಂಗಳವಾರದ ನೂತನ ಘೋಷಣೆ ಅನಂತರವೂ ಮುಕ್ತಾಯವಾಗಿಲ್ಲವೆನ್ನುವುದು ವಿಪರ್ಯಾಸ.

ಇದು ನನ್ನ ತಂಡ: ಶಾಸ್ತ್ರಿ
ನನ್ನ ಸಹಾಯಕ ಸಿಬಂದಿ ಯಾರು ಎಂಬ ಬಗ್ಗೆ ನನಗೆ ಖಚಿತವಿತ್ತು. ಈಗ ನೀವು ಯಾವ ಹೆಸರನ್ನು ಕೇಳಿದ್ದೀರೋ ಅದು ನನ್ನ ತಂಡ. ರಾಹುಲ್‌ ದ್ರಾವಿಡ್‌ ಮತ್ತು ಜಹೀರ್‌ ಖಾನ್‌ ಅದ್ಭುತ ಕ್ರಿಕೆಟಿಗರು. ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರ ಸಲಹೆ ನಮಗೆ ಅಮೂಲ್ಯವಾಗಿದೆ. ಬಿಸಿಸಿಐ ಯಾವಾಗ ಬಯಸುತ್ತದೋ ಆಗ ಅವರು ನಮ್ಮ ಜತೆಗಿರುತ್ತಾರೆ ಎಂದು ರವಿಶಾಸ್ತ್ರಿ  ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next