Advertisement

ಲಿಂಗಸುಗೂರು ಕ್ಷೇತ್ರ ಅಭಿವೃದ್ಧಿಗೆ ಸಹಕಾರ: ಬಯ್ನಾಪುರ

12:11 PM Jun 18, 2018 | |

ಲಿಂಗಸುಗೂರು: ನಾನು ಲಿಂಗಸುಗೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇಲ್ಲಿನ ಜನತೆಯ ಋಣ ನನ್ನ ಮೇಲಿದೆ. ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ಶಾಸಕ ಡಿ.ಎಸ್‌.ಹೂಲಗೇರಿ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪುರ ಹೇಳಿದರು.

Advertisement

ಪಟ್ಟಣದ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ರವಿವಾರ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 1994ರ ಚುನಾವಣೆಗೂ 2018ರ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಜನರ ಭಾವನೆ ಬದಲಾವಣೆಯಾಗಿದೆ. ಚುನಾವಣೆ ಪೂರ್ವ ಪಕ್ಷ, ಚುನಾವಣೆಯಲ್ಲಿ ಗೆದ್ದ ನಂತರ ಅಭ್ಯರ್ಥಿ ಇಡೀ ಕ್ಷೇತ್ರದ ಶಾಸಕರಾಗುತ್ತಾರೆ. ಯಾರೊಂದಿಗೆ ಹಗೆತನ ಸಾಧಿಸಬಾರದು ಎಂದರು.

ಲಿಂಗಸುಗೂರು ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ವೇಳೆಯಲ್ಲಿ ನಾರಾಯಣಪುರ ಬಲದಂಡೆ ನಾಲೆ, ರಾಂಪುರ ಏತ ನೀರಾವರಿ ಹಾಗೂ ಮಸ್ಕಿ ನಾಲಾ ಯೋಜನೆಗಳ ಜಾರಿಗೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡರು ನೀಡಿದ ಸಹಕಾರ ಮರೆಯುವಂತಿಲ್ಲ ಎಂದರು.

ಶಾಸಕ ಡಿ.ಎಸ್‌.ಹೂಲಗೇರಿ ಅವರಿಗೆ ಲಿಂಗಸುಗೂರು ತಾಲೂಕು ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ.
ಪಟ್ಟಣಕ್ಕೆ ಒಳಚರಂಡಿ ಯೋಜನೆಗೆ 85 ಕೋಟಿ ರೂ.ವೆಚ್ಚಕ್ಕೆ ಅಂದಾಜು ವೆಚ್ಚ ಸಿದ್ಧಪಡಿಸಲಾಗಿದೆ. ಆದರೆ ಮಂಜೂರಾತಿ ದೊರೆಯಲಿಲ್ಲ. ಮಂಜೂರಾತಿಗೆ ಮತ್ತೂಮ್ಮೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ| ಎನ್‌.ಎಲ್‌.ನಡುವಿನಮನಿ ಮಾತನಾಡಿ, ಜನಪ್ರತಿನಿಧಿಗಳು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದರೆ ಅವರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ ಎನ್ನುವುದಕ್ಕೆ ಅಮರೇಗೌಡ ಬಯ್ನಾಪುರ ಅವರೇ ಸಾಕ್ಷಿಯಾಗಿದ್ದಾರೆ.

Advertisement

 ದಿನದ 24 ಗಂಟೆಯೂ ನಿರಂತರ ಜನ ಸೇವೆಯೇ ಅವರ ಮೂಲ ಉದ್ದೇಶವಾಗಿದೆ. ಪಟ್ಟಣದ ಕರಡಕಲ್‌ ಕೆರೆಗೆ ಬಿಲ್ಲಮರಾಯನ ಕೆರೆ ಎಂದು ನಾಮಕರಣ ಮಾಡಿ ಅದನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ಒಳಚರಂಡಿ ಯೋಜನೆ ಜಾರಿಗೆ ಲಿಂಗಸುಗೂರು ಶಾಸಕರಿಗೆ ಸಹಕಾರ ನೀಡಬೇಕು ಎಂದು ಕೋರಿದರು.

ಸಂತೆಕೆಲ್ಲೂರು ಶ್ರೀ ಗುರುಬಸವ ಸ್ವಾಮೀಜಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪ ಮೇಟಿ, ಅಮರಗುಂಡಪ್ಪ ಮೇಟಿ, ಭೂಪನಗೌಡ ಕರಡಕಲ್‌, ಪುರಸಭೆ ಅಧ್ಯಕ್ಷ ಖಾದರ ಪಾಷಾ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಡಾ| ಶರಣಗೌಡ, ಮಲ್ಲಿಕಾರ್ಜುನ ವಾರದ, ವೀರೇಶ ಐದನಾಳ, ಮಳೆಪ್ಪ ಉಮ್ಮಗೋಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next