Advertisement

ಪ್ರತಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣದಲ್ಲೇ ಮುಳುಗಿಹೋಗಿವೆ : ಅಶ್ವತ್ಥನಾರಾಯಣ

08:03 PM Apr 28, 2022 | Team Udayavani |

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಇಳಿಸಿ, ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ನೀಡಿದ ರಾಷ್ಟ್ರಹಿತದ ಕರೆಗೆ ಬಿಜೆಪಿಯೇತರ ರಾಜ್ಯ ಸರಕಾರಗಳು ಸ್ಪಂದಿಸುವ ಅವಕಾಶವನ್ನು ಕ್ಷುಲ್ಲಕ ರಾಜಕಾರಣಕ್ಕಾಗಿ ಕೈಚೆಲ್ಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

Advertisement

ಗುರುವಾರ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಪ್ರತಿಪಕ್ಷಗಳು ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಗಂಭೀರವಾಗಿಲ್ಲ. ಬದಲಿಗೆ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯದಲ್ಲಿ ಅವು ಮುಳುಗಿವೆ. ಕೋವಿಡ್ ಸಂಕಷ್ಟದ ನಡುವೆಯೂ ಮೋದಿಯವರು ಅಭಿವೃದ್ಧಿಪರ ರಾಜಕಾರಣಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ’ ಎಂದರು.

ಹಿಂದೊಮ್ಮೆ ಕೇಂದ್ರ ಸರಕಾರ ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಸಿತ್ತು. ಆಗ ಕರ್ನಾಟಕ ಸರಕಾರ ಕೂಡ ಅದಕ್ಕೆ ಪೂರಕವಾಗಿ ಸ್ಪಂದಿಸಿ, ತನ್ನ ಜನಪರತೆಯನ್ನು ತೋರಿಸಿತ್ತು. ದೇಶವು ಕಳೆದ ಎಂಟು ವರ್ಷಗಳಲ್ಲಿ ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, 10 ಟ್ರಿಲಿಯನ್ ಮೊತ್ತದ ಆರ್ಥಿಕತೆಯನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದೆ. ಇದು ಕೆಲವೇ ವರ್ಷಗಳಲ್ಲಿ ಸಾಕಾರಗೊಳ್ಳಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ತುಂಗಾ ಕಾಲೇಜಿನ ಅಮೋಘ ಸಾಧನೆ : ಎಂ.ಕಾಂ ವಿಭಾಗದಲ್ಲಿ 4 ರ‍್ಯಾಂಕ್ ಪಡೆದ ಕಾಲೇಜು

ಬಿಜೆಪಿ ನೇತೃತ್ವದಲ್ಲಿ ದೇಶವು ರಕ್ಷಣಾ ವ್ಯವಸ್ಥೆ, ಸೌರಶಕ್ತಿ, ಪರಿಸರಸ್ನೇಹಿ ಇಂಧನ, ಸೆಮಿ ಕಂಡಕ್ಟರ್, ಮೂಲಸೌಕರ್ಯ ಇತ್ಯಾದಿ ಕ್ಷೇತ್ರಗಳಲ್ಲಿ ದಾಪುಗಾಲಿಡುತ್ತಿದೆ. ಈ ಮೂಲಕ ಆತ್ಮನಿರ್ಭರ ಭಾರತದ ನಿರ್ಮಾಣದ ಹೊಂಗನಸನ್ನು ನನಸು ಮಾಡುವತ್ತ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಕಲ್ಪನೆಯೂ ಇರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

Advertisement

ಕೋವಿಡ್ ಸಂದರ್ಭದ ಎರಡು ವರ್ಷಗಳಲ್ಲಿ ಅನೇಕ ದೇಶಗಳು ತತ್ತರಿಸಿ ಹೋಗಿವೆ. ಆದರೆ ಮೋದಿಯವರ ನೇತೃತ್ವದಲ್ಲಿ ದೇಶವು ಶೇ.7.8ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಹಣದ ಸದ್ವಿನಿಯೋಗ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿರುವುದೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಇದನ್ನು ಕಂಡು ಪ್ರತಿಪಕ್ಷಗಳು ದಿಕ್ಕೆಟ್ಟು ಹೋಗಿದ್ದು, ಹತಾಶ ರಾಜಕಾರಣದ ದಿವಾಳಿತನವನ್ನು ಪ್ರದರ್ಶಿಸುತ್ತಿವೆ ಎಂದು ಅಶ್ವತ್ಥನಾರಾಯಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next